|| Tukaram ||
Tukaram is very dear to me.- Mahatma Gandhi
ಸಂತ ತುಕಾರಾಮರು ಮತ್ತು ಕರ್ನಾಟಕ
ಗವಾರ ಶೇಟ ವಾಣೀ ಇವರು ಸಂತ ತುಕಾರಾಮರ ತಾಳದವರಲ್ಲಿ ಒಬ್ಬರಾಗಿದ್ದು ಅವರು ಕನ್ನಡಿಗರಾಗಿದ್ದರು.ಬೆಂಗಳೂರಿನಲ್ಲಿ ತುಕಾರಾಮ ಬಿದಿಗೆಯನ್ನು (ಬೀಜ) ಇ.ಸ. ೧೯೧೪ ರಿಂದಲೇ ಆಚರಿಸಲಾಗುತ್ತಿದೆ. ಶೋಭಾ ರಾವ ಅವರು ಆರಂಭಿಸಿದರು.
ಅವರ ಮಗ ಶಾಮರಾವ ಅವರು ಅದನ್ನು ಮುಂದುವರೆಸಿದರು. ಇಂದಿಗೂ ಈ ರೂಢಿ ಮುಂದುವರೆದಿದೆ. ಪ್ರತಿ ವರ್ಷ ಇಲ್ಲಿಯ ರಾಜಾರಾಮ ರಸ್ತೆಯ ಮೇಲಿರುವ ಶ್ರೀರಾಮ ಮಂದಿರದಲ್ಲಿ ಈ ಉತ್ಸವ ನೆರವೇರುತ್ತದೆ.
ಹಿಂದಿನ ತಲೆಮಾರಿನ ಕನ್ನಡದ ರಂಗರಸಿಕರು ಕೊಟ್ಟೂರಪ್ಪ ಎಂದು ಹೆಸರಾದ ಕೊಟ್ಟೂರು ಬಸವಯ್ಯನವರಂತಹ (೧೮೮೮-೧೯೭೬) ಪ್ರಭಾವಶಾಲಿಯಾದ ವ್ಯಕ್ತಿಯನ್ನು ಅದೆಂದಿಗೂ ಮರೆಯಲಾರರು.ಅವರು ಆಂಜನೇಯ ಮತ್ತು ನಾರದರ ಭಕ್ತಿ ಪಾತ್ರಗಳಲ್ಲಿ ಸರ್ವಶ್ರೇಷ್ಠರೆನ್ನಿಸಿದ್ದರು.
ಅವರು ತುಕಾರಾಮರ ಪಾತ್ರವನ್ನು ಬಲು ಸಾಮರ್ಥ್ಯದಿಂದ ಅಭಿನಯಿಸಿದ್ದರು. ಅದು ತುಂಬ ಜನಪ್ರಿಯವಾಗಿತ್ತು.
ಕನ್ನಡದ ಹೆಸರಾದ ನಟ, ಗಾಯಕ ರಾಜಕುಮಾರರು ಒಬ್ಬ ಅಸಾಮಾನ್ಯ ವ್ಯಕ್ತಿಗಳೇ ಅಹುದು. ತುಂಬ ಜನಪ್ರಿಯರು. ಸುಮಾರು ನಾಲ್ಕು ದಶಕಗಳಷ್ಟು ಕಾಲ ಅವರು ಚಲನಚಿತ್ರ ಪ್ರಿಯರಿಗೆ ಮೋಡಿ ಹಾಕಿದವರು. ದಕ್ಷಿಣ ಭಾರತದಲ್ಲೇ ದಿಗ್ಗಜರೆನ್ನಿಸಿದ ಇವರು ಸುಂದರರಾವ ನಾಡಕರ್ಣಿ ನಿರ್ದೇಶನದ ‘ಸಂತ ತುಕಾರಮ’ ಚಲನ ಚಿತ್ರದಲ್ಲಿ ಸಂತ ತುಕಾರಾಮರ ಪಾತ್ರವನ್ನು ನಿರ್ವಹಿಸಿದ್ದರು. ಇದೀಗ ಕಾಲವಶರಾದ ಚಲನಚಿತ್ರಕಾರ, ಡಿ. ವಿ. ರಾಜಾರಾಮರು ತಮ್ಮ ಕೆಮೆರಾ ತಂತ್ರಗಳಿಗಾಗಿ ಹೆಸರಾದವರು. ಅವರು ಕನ್ನಡ ಚಲನಚಿತ್ರ ರಂಗವನ್ನು ಪ್ರವೇಶಿಸಿದುದೇ ‘ಸಂತ ತುಕಾರಾಮ’ದ ಮೂಲಕ. ಈ ಚಿತ್ರವು ಒಳ್ಳೆಯ ಗಳಿಕೆಯನ್ನು ಸಂಪಾದಿಸಿತು.
ಡಾ| ರಾಜಕುಮಾರರ ಅಭಿನಯ ಶ್ರೇಷ್ಠ ಮಟ್ಟದ್ದಾಗಿತ್ತು. ಭಾರತೀಯ ಚಲನಚಿತ್ರದ ಇವರ ಅದ್ವಿತೀಯ ಕೊಡುಗೆಗಾಗಿ ಇ.ಸ. ೧೯೯೬ ರಲ್ಲಿ ಇವರನ್ನು ‘ದಾದಾ ಸಾಹೇಬ ಫಾಳ್ಕೆ ಪ್ರಶಸ್ತಿ’ಯಿಂದ ಸನ್ಮಾನಿಸಲಾಯಿತು.
ಲಾಂಗ್ಮನ್ ವಿಶ್ವ ಸಾಹಿತ್ಯದ ಮಾನವ ಶಾಸ್ತ್ರ ವಿಶ್ವಕೋಶದಿಂದ ಉದ್ಧರಣೆ
ಸಂಪಾದಕರ ಟಿಪ್ಪಣಿ:
ಬಗೆಬಗೆಯ ಕೃತಿಗಳನ್ನು ಬೇರೆ ಬೇರೆ ಕಾಲ ಹಾಗೂ ದೇಶಗಳಲ್ಲಿ ಸಾಹಿತ್ಯಕೃತಿಗಳೆಂದು ಪರಿಗಣಿಸಲಾದುದರಿಂದ ನಾವು ಅವುಗಳನ್ನು ಸೇರ್ಪಡಿಸಬೇಕೆಂದುಕೊಂಡೆವು. ಇವುಗಳಲ್ಲಿ ಕವಿತೆ, ನಾಟಕ ಮತ್ತು ಲಲಿತ ಗದ್ಯಗಳಲ್ಲದೆ ಮುಂದಿನ ಕಾಲದ ಸಾಹಿತ್ಯಕೃತಿಗೆ ತುಂಬ ಮಹತ್ವದ್ದೆನ್ನಿಸಿದ ಸಮೃದ್ಧವಾದ ಐತಿಹಾಸಿಕ, ಧಾರ್ಮಿಕ ಮತ್ತು ತತ್ವಶಾಸ್ತ್ರಗಳ ಗ್ರಂಥಗಳಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ವಿಶ್ವ
ಮಟ್ಟದಲ್ಲಿ ಹೆಸರಾದ ಇಲ್ಲವೆ ಇತ್ತೀಚೆಗಷ್ಟೆ ಮರುಶೋಧಿಸಲಾದ ಕೃತಿಗಳನ್ನುಳಿದು ಇನ್ನೇನನ್ನೂ ಸೇರ್ಪಡಿಸಲಾಗಿಲ್ಲ. ಡೇವಿಡ್ ಡ್ಯಾಮ್ರಾಸ್ಕ್ (David Damrosch)
ತುಕಾರಾಮರು ಹದಿನೇಳನೆಯ ಶತಮಾನದ ಪೂರ್ವಾರ್ಧದಲ್ಲಿ ಪಶ್ಚಿಮ ಭಾರತದ ಮಹಾರಾಷ್ಟ್ರ ಪ್ರಾಂತದ ಒಂದು ಕೃಷಿಕರ ಕುಟುಂಬದಲ್ಲಿ ಜನಿಸಿದರು. ಅವರು ಮರಾಠಿ ಭಾಷೆಯಲ್ಲಿ ಬರೆಯುತ್ತಿದ್ದರು. ತಮ್ಮ ತಪ್ಪೊಪ್ಪಿಗೆಯ ಹಲವು ಕವನಗಳ ಮೂಲಕ ಅವರು ಬಹಳಷ್ಟು ಜನ ಕವಿಗಳ ಆಶೋತ್ತರಗಳಿಗೆ ಧ್ವನಿಯನ್ನು ಒದಗಿಸಿದರು. ಅವುಗಳಲ್ಲಿ ಒಂದು ಹೀಗಿದೆ:
ನನ್ನಲ್ಲಿ ಇಲ್ಲ
ಯಾವ ವೈಯಕ್ತಿಕ ಕೌಶಲ.
ವಿಶ್ವಾತ್ಮಕನಾದ ಅವನೇ ನನ್ನಿಂದ
ಮಾತನಾಡಿಸುತ್ತಾನೆ.
ತುಕಾರಾಮರು ಇಂದಿನ ಮಧ್ಯ ಭಾರತದ ಮಹಾರಾಷ್ಟ್ರ ಪ್ರಾಂತದ ಒಂದು ಹಳ್ಳಿಯ ಒಂದು ಒಕ್ಕಲಿಗರ ಕುಟುಂಬದಲ್ಲಿ ಜನ್ಮತಳೆದರು. ಅವರು ಇಪ್ಪತ್ತನೆಯ ವಯಸ್ಸಿನವರಾಗುವ ಹೊತ್ತಿಗೆಂದರೆ ಬರ ಹಾಗೂ ಮಾರಿಬೇನೆಗಳಿಂದ ತಮ್ಮ ಹೆತ್ತವರು ಹಾಗೂ ಒಬ್ಬ ಮಡದಿಯನ್ನು ಕಳೆದುಕೊಂಡರು. ಅವರು ಈ ಜಗತ್ತನ್ನು ತ್ಯಜಿಸಿದರು. ಅವರು ಬರೆದ ತೀರ ವಯಕ್ತಿಕವಾದ ಕವನಗಳೆಲ್ಲ ಹೆಚ್ಚಾಗಿ ಮಹಾರಾಷ್ಟ್ರದ ಪಂಢರಪುರವೆಂಬ ಹಳ್ಳಿಯಲ್ಲಿ ಪೂಜಿಸಲಾಗುವ ವಿಠ್ಠಲನೆಂಬ ಹೆಸರಿನ ವಿಷ್ಣುವನ್ನು ಗೌರವಿಸಿ ಬರೆಯಲಾದವುಗಳು.
* * *
ದಿಲಿಪ ಚಿತ್ರೆ ಅವರು ಅನುವಾದಿಸಿದ ತುಕಾರಾಮರ ಈ ಕೆಳಗಿನ ಒಂಬತ್ತು ಅಭಂಗಗಳನ್ನು ವಿಶ್ವಕೋಶದಲ್ಲಿ ಸೇರ್ಪಡಿಸಲಾಗಿದೆ.
ನಾಮದೇವರು ಮತ್ತು ಪಾಂಡುರಂಗರು ಕನಸಿನಲ್ಲಿ ಬಂದು ಅಭಂಗದ ಕವಿತ್ವವನ್ನು ಮಾಡಬೇಕೆಂದು ಸ್ವಾಮಿಯವರಿಗೆ ಅಪ್ಪಣೆಯನ್ನಿತ್ತರು.
[೧]
ಪಾಂಡುರಂಗನ ಜೊತೆಗೆ ನಾಮದೇವರು | ಕನಸಿನಲಿ ಬಂದು ನನ್ನನೆಚ್ಚರಿಸಿದರು ||೧||
ಸುಮ್ಮನೆ ನಿಮಿತ್ತವನು ಹೇಳದೆ ನಿನು | ಮಾಡು ಎಂದರು ಕವಿತ್ವವನು ||ಪ||
ವಿಠ್ಠಲನು ಅಳತೆಗೋಲನು ಹಿಡಿದಿಹನು | ಎನ್ನುತ್ತ ತಟ್ಟಿ ನನ್ನನು ಎಚ್ಚರಿಸಿದರು ||೨||
ಸುಮ್ಮನೆ ನಿಮಿತ್ತವನು ಹೇಳದೆ ನಿನು | ಮಾಡು ಎಂದರು ಕವಿತ್ವವನು ||ಪ||
ನೂರುಕೋಟಿ ಸಂಖ್ಯೆಯನು ಹೇಳಿದರು | ತುಕಾ, ಉಳಿದುದನು ಪೂರ್ತಿಗೊಳಿಸೆಂದರು ||೩||
ಸುಮ್ಮನೆ ನಿಮಿತ್ತವನು ಹೇಳದೆ ನಿನು | ಮಾಡು ಎಂದರು ಕವಿತ್ವವನು ||ಪ||
ಅರ್ಥ :-೧. ನಾಮದೇವರು ಪಾಂಡುರಂಗನೊಡನೆ ನನ್ನ ಕನಸಿನಲ್ಲಿ ಬಂದು ನನ್ನನ್ನು ಎಬ್ಬಿಸಿದರು. ನೀನು ಕವಿತ್ವವನ್ನು ಮಾಡಬೇಕು, ಸುಮ್ಮನೆ ವ್ಯರ್ಥವಾಗಿ ಬಡಬಡಿಸಕೂಡದು, ಎಂದು ನುಡಿದು ಅವರು ನನಗೆ ಕವಿತೆಯನ್ನು ಮಾಡುವ ಕೆಲಸವನ್ನು ಹೇಳಿದರು. ೨. ವಿಠ್ಠಲನು ಅಳತೆಗೋಲನ್ನು ಹಿಡಿದುಕೊಂಡಿರುವನು. ನೀನು ಅಳತೆ ಸರಿಹೊಂದುವಂತೆ ಅಭಂಗಗಳನ್ನು ತಯಾರಿಸು, ಎಂದು ಬೆನ್ನು ತಟ್ಟಿ ನನ್ನನ್ನು ಎಚ್ಚರಿಸಿದರು. ೩. ನಾಮದೇವರು ಒಂದು ನೂರು ಕೋಟಿ ಅಭಂಗಗಳನ್ನು ಬರೆಯಲು ತೀರ್ಮಾನಿಸಿದ್ದರಂತೆ. ಆಗದೆ ಉಳಿದವುಗಳನ್ನು ಬರೆದು ಪೂರ್ತಿಗೊಳಿಸು, ಎಂದರೆಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.
ವಿವರಣೆ :- ತುಕಾರಾಮ ಮಹಾರಾಜರ ಕವಿತ್ವದ ಪ್ರೇರಣೆಯನ್ನು ಕುರಿತಾದ ಮಹತ್ವದ ಅಭಂಗವಿದು. ನಾಮದೇವರು ಒಂದು ನೂರು ಕೋಟಿ ಅಭಂಗಗಳನ್ನು ಬರೆಯುವೆನೆಂದು ಪ್ರತಿಜ್ಞೆ೦iiನ್ನು ಮಾಡಿದ್ದರು. ಅದು ಪೂರ್ತಿಯಾಗಲಿಲ್ಲ. ಅವರು ವಿಠ್ಠಲನೊಂದಿಗೆ ತುಕಾರಾಮರ ಕನಸಿನಲ್ಲಿ ಬಂದು, ಅದನ್ನು ಪೂರ್ತಿಗೊಳಿಸೆಂದು ಹೇಳಿ, ಅವರಿಗೆ ಪ್ರೇರಣೆಯನ್ನು ನೀಡಿದರು. ಮಾತುಗಳನ್ನು ಸುಮ್ಮನೆ ಖರ್ಚು ಮಾಡುವ ಬದಲು ಕವಿತ್ವಕ್ಕಾಗಿ ಅವನ್ನು ಬಳಸಿಕೊಳ್ಳಬೇಕೆಂದು ನಾಮದೇವರು ತುಕಾರಾಮರ ಬೆನ್ನು ತಟ್ಟಿ ಎಚ್ಚರಿಸಿದರು. ಹೀಗಾಗಿ ತುಕಾರಾಮರ ಅಭಂಗ ರಚನೆಯ ಹಿಂದೆ ನಾಮದೇವರ ಪ್ರೇರಣೆಯಿದೆ. ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾಮರ ಪರಂಪರೆಯು ಒಂದೇ ಆಗಿದೆ. ಅವರೆಲ್ಲರ ಕರ್ತೃತ್ವದಿಂದ ಭಾಗವತ ಧರ್ಮದ ಕಟ್ಟಡದ ಕೆಲಸವು ನಡೆಯಿತು. ಏಕನಾಥರು ಜ್ಞಾನೇಶ್ವರರ ಕಾರ್ಯ ಮತ್ತು ತತ್ವಜ್ಞಾನಗಳ ಇಳಿಗಾಲದಲ್ಲಿ ಜ್ಞಾನೇಶ್ವರಿಯ ಪುನರುದ್ಧಾರದ ಮೂಲಕ ಅವುಗಳ ವಿಸ್ತಾರವನ್ನು ಮಾಡಿದರು. ತುಕಾರಾಮರು ನಾಮದೇವರ ಭವಭಕ್ತಿಯ ಪ್ರಸಾರವನ್ನು ಇನ್ನಷ್ಟು ಮಾಡಿದರು. ವಾರಕರಿ ಸಂಪ್ರದಾಯದಲ್ಲಿ ಈ ಬಗೆಯ ಶ್ರದ್ಧೆಯಿದೆ. ಅದು ಇತಿಹಾಸದೊಂದಿಗೆ ಸರಿಹೊಂದುತ್ತದೆ. ’ನಾಮ್ಯಾನ ತುಕಾ ಮತ್ತು ಜ್ಞಾನ್ಯಾನ (ಜ್ಞಾನದೇವ) ಏಕಾ (ಏಕನಾಥ)’, ಎಂಬ ಸಾಂಪ್ರದಾಯಿಕವಾದ ಗಾದೆಮಾತಿನಲ್ಲಿ ಈ ಸಂಕೇತವು ಸ್ಪಷ್ಟವಾಗಿದೆ. ನಾಮದೇವ ಹಾಗೂ ತುಕಾರಾಮರ ಕವಿತ್ವದಲ್ಲಿ ಹಲವು ಸಂಗತಿಗಳ ಬಗೆಯಲ್ಲಿ ಇರುವ ಸಾಮ್ಯವನ್ನು ಕಂಡು ಈ ತಿಳುವಳಿಕೆಗೆ ಬಲ ಬರುತ್ತದೆ. ಅವರಿಬ್ಬರ ಪ್ರಾಪಂಚಿಕ ಜೀವನ, ಭಕ್ತಿಪ್ರವಣತೆ, ಸಗುಣದ ಬಗೆಗಿನ ಸೆಳೆತ, ದೇವನನ್ನು ಕುರಿತಾದ ಸಲುಗೆಯ ತಳಮಳ ಮತ್ತು ಹೃದಯವನ್ನು ತಟ್ಟುವ ಆರ್ತತೆಗಳನ್ನು ಕಂಡು, ತುಕಾರಾಮರು ನಾಮದೇವರ ಪ್ರೇರಣೆಯಿಂದಲೇ ಅವರ ಕಾರ್ಯವನ್ನು ಮುಂದುವರೆಸಿದರೆಂಬ ಸಂಗತಿಯನ್ನು ಮನಗಾಣು ವಂತಿದೆ.
ಇದೊಂದೇ ಅಭಂಗದ ಎರಡು-ಮೂರು ಮುಖ್ಯ ಸಂಗತಿಗಳನ್ನು ಗಮನಕ್ಕೆ ತಂದುಕೊಳ್ಳು ವಂತಿದೆ. ಮರಾಠಿಯ ಅಭಂಗದಲ್ಲಿ ’ಸಳ’ ಎಂಬ ಪದವನ್ನು ಬಳಸಲಾಗಿದೆ, ಹಲವರು ಅದನ್ನು ಅಭಿಮಾನ, ಸಾಮರ್ಥ್ಯ, ಎಂದು ಅರ್ಥೈಸಿದ್ದಾರೆ. ’ನೀನು ಕವಿತ್ವದ ಅಳತೆಯನ್ನು ಪೂರ್ತಿಗೊಳಿಸಬೇಕು’, ಎಂದು ಶ್ರೀವಿಠ್ಠಲನು ಒತ್ತಾಯ ಇಲ್ಲವೆ ಅಭಿಮಾನವನ್ನು ತಳೆದಿರುವನೆಂಬ ಅರ್ಥವನ್ನು ಹಲವೆಡೆಯಲ್ಲಿ ನಮೂದಿಸಲಾಗಿದೆ. ಅದರ ಬದಲು ಕಾಳುಗಳನ್ನು ಅಳೆಯುವ ಸೇರಿನಂತಹ ಒಂದು ಸಾಧನ, ಎಂಬ ಅರ್ಥವು ಹೆಚ್ಚು ಸರಿಯೆಂದು ಕಾಣುತ್ತದೆ. ’ನೀನು ಕವಿತೆಯನ್ನು ಮಾಡಿ ನಾಮದೇವನ ಪ್ರತಿಜ್ಞೆಯನ್ನು ಪೂರ್ತಿಗೊಳಿಸು. ಆ ಅಳತೆಯನ್ನು ಪೂರ್ತಿಯಾಗಿ ತುಂಬು. ವಿಠ್ಠಲನು ಅಳತೆಯ ಪಾತ್ರೆಯನ್ನು ಹಿಡಿದುಕೊಂಡು ಅಳೆತದ ಕೆಲಸವನ್ನು ಮಾಡಲು ಸಿದ್ಧನಾಗಿ ನಿಂತಂತಿದೆ’, ಎನ್ನುವ ಅರ್ಥವು ಹೆಚ್ಚು ಸೂಕ್ತವಾದುದು, ಎನ್ನಿಸುತ್ತದೆ. ಎರಡನೆಯ ಸಂಗತಿಯೆಂದರೆ, ನಾಮದೇವರು ಶತಕೋಟಿ ಅಭಂಗಗಳನ್ನು ಕಟ್ಟುವ ಪ್ರತಿಜ್ಞೆಯನ್ನು ಮಾಡಿದ್ದರೆ? ಅದು ಅಪೂರ್ಣವಾಗಿ ಉಳಿಯಲು ಕಾರಣವೇನು? ಅವರು ಎಷ್ಟು ಅಭಂಗಗಳನ್ನು ರಚಿಸಿದರು? ಪ್ರತಿಜ್ಞೆಯಿಂದ ಉಳಿದವುಗಳೆಷ್ಟು? ತುಕಾರಾಮರು ಎಷ್ಟು ಅಭಂಗಗಳನ್ನು ರಚಿಸಿ ಆ ಪ್ರತಿಜ್ಞೆಯನ್ನು ಪೂರ್ತಿಗೊಳಿಸಿದರು?-ಎನ್ನುವ ಅದೆಷ್ಟೋ ಪ್ರಶ್ನೆಗಳು ನಮ್ಮ ಮುಂದೆ ನಿಲ್ಲುತ್ತವೆ. ಒಂದೆಂದರೆ, ನೂರು ಕೋಟಿ ಅಭಂಗಗಳೆಂದರೆ ಅತಿಶಯೋಕ್ತಿಯ ಸಂಖ್ಯೆ ಅಲ್ಲವೆ? ಈಶ್ವರನ ಪೂರ್ತಿ ಕೃಪೆ ಹಾಗೂ ಮಾನವನ ಮನಸ್ಸಿನ ಸಾಮರ್ಥ್ಯಗಳನ್ನು ಇಡಿಯಾಗಿ ಗಮನಕ್ಕೆ ತಂದುಕೊಂಡರೂ ಒಂದು ನೂರು ಕೋಟಿ ಅಭಂಗಗಳು ಒಂದೆರಡು ಜನ್ಮಗಳಲ್ಲಾದರೂ ಪೂರ್ತಿಗೊಳ್ಳಲು ಸಾಧ್ಯವೆ? ಈಶ್ವರನ ಪ್ರಸಾದದ ಅದ್ಭುತವಾದ ಪವಾಡವನ್ನು ಒಪ್ಪಿಕೊಂಡರೂ ಒಂದು ನೂರು ಕೋಟಿ ಅಭಂಗಗಳನ್ನು ಹೇಗೆ ಲೆಕ್ಖ ಮಾಡುವುದು? ಅಥವಾ ಇದು ಮಾತಿನ ಒಂದು ಪದ್ಧತಿ ಎನ್ನುವುದು? ನಾಮದೇವ-ತುಕಾರಾಮರು ಬಹಳಷ್ಟು ಅಭಂಗಗಳನ್ನು ಬರೆದರು, ಎನ್ನಬೇಕು? ಇಂದು ನಾಮದೇವ-ತುಕಾರಾಮರ ಎಂಟು-ಹತ್ತು ಸಾವಿರ ಅಭಂಗಗಳು ಇರುವಾಗ ಒಂದು ನೂರು ಕೋಟಿ ಅಭಂಗಗಳ ಸಂಖ್ಯೆಯ ಒಗಟನ್ನು ಒಡೆಯುವುದು ಹೇಗೆ?
ಸಂತಚರಿತ್ರಕಾರರಾದ ಮಹಿಪತಿಬುವಾ ಇವರು ಭಕ್ತಿ಼ಲೀಲಾಮೃತದ ಮೂವತ್ತೆರಡನೆಯ ಅಧ್ಯಾಯದಲ್ಲಿ ನೂರು ಕೋಟಿ ಅಭಂಗಗಳ ಲೆಕ್ಖವನ್ನು ಕೊಡುವಾಗ ನಾಮದೇವರು ೯೪ ಕೋಟಿ, ೪೦ ಲಕ್ಷ ಅಭಂಗಗಳನ್ನು ರಚಿಸಿ, ಕೊನೆಯಲ್ಲಿ ೯ ಲಕ್ಷ ಲಳಿತದ ಅಭಂಗಗಳನ್ನು ಮಾಡಿದರೆಂದೂ, ಉಳಿದ ೫ ಕೋಟಿ, ೫೧ ಲಕ್ಷ ಅಭಂಗಗಳನ್ನು ರಚಿಸಲು ತುಕೋಬರಿಗೆ ಹೇಳಿದರೆಂದೂ ಉಲ್ಲೇಖಿಸಿರುವರು. ಸಾಂಪ್ರದಾಯಿಕವಾದ ಈ ಲೆಕ್ಖವನ್ನು ಇನ್ನಷ್ಟು ಬಿಡಿಸಲು ಸಾಧ್ಯ. ’ವೇದಾಂಚೇ ಅಭಂಗ ಕೇಲೇ ಶ್ರುತಿಪರ’ ಎಂಬ ಒಂದು ಅಭಂಗದಲ್ಲಿ ನಾಮದೇವರ ೧ ಕೋಟಿ ಅಭಂಗಗಳು ಭಕ್ತಿಪರ, ೧ ಕೋಟಿ ಜ್ಞಾನಪರ, ೧ ಕೋಟಿ ಅನುಭವಪರ, ೭೫ ಲಕ್ಷ ವೈರಾಗ್ಯಪರ, ೭೫ ಲಕ್ಷ ನಾಮಪರ, ಎಂಬುದಾಗಿ ೪.೫ ಕೋಟಿ ಅಭಂಗಗಳ ತಪಸೀಲು ಅದರಲ್ಲಿದ್ದು ೬೦ ಸಾವಿರ ಉಪದೇಶಪರ, ೬೦ ಸಾವಿರ ರೂಪವರ್ಣನೆಗಳು, ಇನ್ನುಳಿದವುಗಳು ಬೇರೆ ವಿಷಯದವುಗಳು, ಎಂದು ಒಟ್ಟು ಸುಮಾರು ೫ ಕೋಟಿ, ೭೦ ಲಕ್ಷಗಳ ಲೆಕ್ಖವನ್ನು ಕೊಡುತ್ತಾರೆ. ಹೀಗಾಗಿ ಇವೆಲ್ಲ ಅತಿಶಯೋಕ್ತಿಗಳನ್ನು ಕಡೆಗಣಿಸಿ, ನಾಮದೇವ-ತುಕರಾಮರು ಬಹಳ ಅಭಂಗಗ ಳನ್ನು ರಚಿಸಿದರೆಂದು ತಿಳಿದುಕೊಂಡರೆ ಸಾಕು. ಈ ಸಂತಶ್ರೇಷ್ಠರ ಅಭಂಗಗಳಲ್ಲಿರುವ ಶ್ರೇಷ್ಠ ಅನುಭೂತಿ, ಈಶ್ವರನ ಬಗೆಗಿನ ಪ್ರೀತಿ, ತಳಮಳ, ಸಮಾಜದ ಬಗೆಗಿನ ಆಸ್ಥೆಗಳಿಗೆ ಇರುವ ಮಹತ್ವವನ್ನು ಅರಿತುಕೊಳ್ಳಬೇಕು. ಸಂಖ್ಯೆಯ ಪಶ್ನೆಯನ್ನು ಗೌಣವೆಂದು ಬಗೆದರೂ ಪರವಾಗಿಲ್ಲ. ಭಕ್ತಮಂಡಳಿಯಲ್ಲಿ ಆತ್ಮಚರ್ಚೆಯನ್ನು ಮಾಡುವಾಗ, ವಾಲ್ಮೀಕಿಯು ಶತಕೋಟಿ ಗ್ರಂಥರಚನೆಯನ್ನು ಮಾಡಿದ ವಿಷಯವು ಮುಂದೆ ಬಂದ ಕಾರಣ ನಾಮದೇವರಿಗೆ ನೂರು ಕೋಟಿ ಅಭಂಗಗಳನ್ನು ರಚಿಸುವ ಪ್ರೇರಣೆಯು ಬಂದಿತು. ವಾಲ್ಮೀಕಿಯು ನೂರು ಕೋಟಿ ಗ್ರಂಥಗಳನ್ನು ರಚಿಸಿ ತಮ್ಮ ಆಯುಷ್ಯವನ್ನು ಸಾರ್ಥಕಗೊಳಿಸಿದರು, ತಾವು ಮಾತ್ರ ತಮ್ಮ ಬಾಳನ್ನು ವ್ಯರ್ಥವಾಗಿ ಹಾಳುಮಾಡಿಕೊಳ್ಳುತ್ತಿದ್ದೇವೆ, ಎಂಬ ಭವನೆಯ ಅರಿವಿನಿಂದ ನಾಮದೇವರು ವಿಠ್ಠಲನಿಗೆ ಮೊರೆಹೋಗುತ್ತಾರೆ. ವಿಠ್ಠಲನು ಅವರಿಗೆ ತಿಳಿಹೇಳಿದನು. ಆಯುಷ್ಯವು ಕಡಿಮೆ ಇದ್ದ ಕಾರಣ ಅವರ ಸಂಕಲ್ಪವು ಪೂರ್ತಿಗೊಳ್ಳುವುದು ಹೇಗೆ?-ಎಂಬ ಸಂದೇಹವನ್ನು ವಿಠ್ಠಲನೇ ಅವರ ಮುಂದಿಟ್ಟನು. ಅದಕ್ಕೆ ನಾಮದೇವರು, ’ಅವು ಪೂರ್ತಿಯಾಗದಿದ್ದರೆ | ನಾಲಿಗೆಯನ್ನು ಕೊಯ್ದಿರಿಸುವೆನು’, ಎಂದು ಖಡಾಖಂಡಿತವಾಗಿ ಹೇಳಿದರು. ಆಗ ನಾಮದೇವರ ಭಕ್ತಿಯ ಋಣವನ್ನು ಮನ್ನಿಸಿ ಸರಸ್ವತಿಗೇನೆ ಅವರ ನಾಲಿಗೆಯ ಮೇಲೆ ವಾಸಿಸಲು ಹೇಳಲಾಯಿತು. ಅವಳ ಕೃಪೆಯಾದ ಬಳಿಕ ಅವರ ಪ್ರತಿಜ್ಞೆಯು ಪೂರ್ತಿಯಾಗಲು ಹೆಚ್ಚು ತೊಂದರೆಯಾಗದೆಂಬ ಭರವಸೆ. ಈ ವಿಶ್ವಾಸದಿಂದಾಗಿ ಗೋಣಾಯಿ, ರಾಜಾಯಿಯೆಂಬ ಅತ್ತೆ-ಸೊಸೆ, ದಾಮಾ-ನಾಮಾರೆಂಬ ತಂದೆ-ಮಗ, ನಾರಾ, ಮ್ಹಾರಾ, ಗೋಂದಾ, ವಿಠಾರೆಂಬ ನಾಲ್ವರು ಗಂಡುಮಕ್ಕಳು, ಲಾಡಾಯಿ, ಗೋಡಾಯಿ, ಯೇಸಾಯಿ, ಸಾಕರಾಯಿರೆಂಬ ನಾಲ್ವರು ಸೊಸೆಯಂದಿರು, ಮಗಳು ನಿಂಬಾಯಿ, ಸೋದರಿ ನಾವೂಬಾಯಿ, ತಲೆಕೆಟ್ಟ ದಾಸಿಯಾದ ಜನಿ, ’ಇಷ್ಟೆಲ್ಲ ಜನರು ಅಭಂಗವನ್ನು ಆರಂಭಿಸಿದರು | ದೇವನೇ, ಪೂರ್ತಿಗೊಳಿಸಿದರೆಂದು ನಾಮದೇವನೆನ್ನುವನು’. ಅಂದರೆ ಇಷ್ಟೆಲ್ಲ ಜನರು ಸೇರಿ ಅಭಂಗದ ಪ್ರತಿಜ್ಞೆಯನ್ನು ಪೂರ್ತಿ ಮಾಡಿದರು.
[೨]
ನೆಲೆಯನಿತ್ತರೆ ಇರುವೆನು ಜೊತೆಗೆ | ಸಂತರ ಸಾಲಿನಲಿ ಕಾಲಬಳಿಗೆ ||೧||
ಮೆಚ್ಚಿದ ನೆಲೆಯನು ತ್ಯಜಿಸಿ ಬಂದಿಹೆನು | ಉದಾಸೀನ ಮಾಡಬಾರದು ಇನ್ನು ||ಪ||
ಕೊನೆಯ ಸ್ಥಳವು ನೀಚ ನನ್ನ ವೃತ್ತಿ | ಆಧಾರದಿಂದ ವಿಶ್ರಾಂತಿಯನು ಪಡೆಯುವೆನು ||೨||
ಮೆಚ್ಚಿದ ನೆಲೆಯನು ತ್ಯಜಿಸಿ ಬಂದಿಹೆನು | ಉದಾಸೀನ ಮಾಡಬಾರದು ಇನ್ನು ||ಪ||
ನಾಮದೇವರು ತುಕ್ಯಾನ ಕನಸಿನಲ್ಲಿ ಕಂಡರು | ಈ ಪ್ರಸಾದ ಹೊಟ್ಟೆಯಲಿ ಉಳಿಯಿತು ||೩||
ಮೆಚ್ಚಿದ ನೆಲೆಯನು ತ್ಯಜಿಸಿ ಬಂದಿಹೆನು | ಉದಾಸೀನ ಮಾಡಬಾರದು ಇನ್ನು ||ಪ||
ಅರ್ಥ :-೧. ಮೇಲಿನ ಅಭಂಗದಲ್ಲಿ ಹೇಳಿದಂತೆ ತುಕಾರಾಮರಿಗೆ ನಾಮದೇವರು ಹಾಗೂ ವಿಠ್ಠಲನ ಪ್ರೇರಣೆಯು ದೊರೆತ ಬಳಿಕ ತುಕಾರಾಮರು, ’ನೀವು ನನಗೆ ಆಶ್ರಯವನ್ನು ಇತ್ತರೆ ನಾನು ನಿಮ್ಮ ಜೊತೆಗೆ ಇರುವೆನು. ನಾನು ಸಂತರ ಸಾಲಿನಲ್ಲಿ ಅವರ ಪಾದಗಳ ಬಳಿ ಕುಳಿತುಕೊಳ್ಳುವೆನು. ೨. ನಿಮ್ಮ ಬಗೆಗಿನ ಪ್ರೀತಿಯಿಂದಾಗಿಯೇ ನಾನು ನನ್ನ ನೆಲೆಯನ್ನು ತೊರೆದು ಬಂದಿರುವೆನು. ಇನ್ನು ನೀವು ಉದಾಸೀನ ಮಾಡಬೇಡಿ. ೩. ನನ್ನದು ತೀರ ಕೊನೆಯ ಸ್ಥಾನವಾಗಿದ್ದು ನನ್ನ ವೃತ್ತಿಯೂ ತೀರ ಕೆಳಮಟ್ಟದ್ದು. ಆದರೆ ಇನ್ನು ನನಗೆ ನಿಮ್ಮ ಪಾದಗಳಲ್ಲಿ ವಿಶ್ರಾಂತಿಯು ಲಭಿಸಲಿದೆ. ೪. ನನಗೆ ಕನಸಿನಲ್ಲಿ ನಾಮದೇವರ ಭೇಟಿಯಾದುದರಿಂದ ನನ್ನ ಹೃದಯದಲ್ಲಿ ಈ ಕವಿತ್ವದ ಪ್ರಸಾದವು ತುಂಬಿಕೊಂಡಿದೆ’, ಎನ್ನುತ್ತಾರೆ.
[೩]
ಕವಿಯೆಂದು ನಾಚಿಕೆಯಿಲ್ಲವೆ ಈಗೇನು ಮಾಡಲಿ | ಭಕ್ತರಾಜರು ನನಗೆ ನಕ್ಕಾರು ||೧||
ಆಯ್ಕೆಯ ದಿನವೀಗ ಬಂದಿದೆ | ಸತ್ಯವಿಲ್ಲದ ರಸವು ವಿರಸವಾದೀತು ||ಪ||
ಅನುಭವವಿಲ್ಲದೆ ಪಾಪ ಮಾಡುವರ್ಯಾರು | ವ್ಯರ್ಥದ ಸಂಕಲ್ಪವು ನಾಚಿಕೆಗೇಡು ||೨||
ಆಯ್ಕೆಯ ದಿನವೀಗ ಬಂದಿದೆ | ಸತ್ಯವಿಲ್ಲದ ರಸವು ವಿರಸವಾದೀತು ||ಪ||
ತಡೆದುಕೊಳ್ಳಲಾರೆನಿನ್ನು ನನ್ನ ಜೀವ | ತನ್ನಲ್ಲಿ ಸ್ಥಿರವಿಲ್ಲ, ಎನ್ನುವನು ತುಕಾ ||೩||
ಆಯ್ಕೆಯ ದಿನವೀಗ ಬಂದಿದೆ | ಸತ್ಯವಿಲ್ಲದ ರಸವು ವಿರಸವಾದೀತು ||ಪ||
ಅರ್ಥ :- ೧. ಕವಿತ್ವವನ್ನು ಮಾಡುವುದೆಂದರೆ ನನಗೀಗ ನಾಚಿಕೆ ಎನ್ನಿಸುವುದಿಲ್ಲವೆ? ಭಕ್ತರಾಜರು ನನ್ನನ್ನು ಕಂಡು ನಕ್ಕಾರು. ೨. ಈಗ ತೀರ್ಮಾನಿಸುವ ದಿನವು ಬಂದಿದೆ. ನಿಜವಿಲ್ಲದ ರಸವು ವಿರಸವಾಗುವುದು. ೩. ಅನುಭವವಿಲ್ಲದೆ ಯಾರು ಪಾಪವನ್ನಾದರೂ ಎಸಗುವರು? ವ್ಯರ್ಥ ಸಂಕಲ್ಪವನ್ನು ಮಾಡುವುದು ನಾಚಿಕೆಗೇಡು. ೪. ನಾನಿನ್ನು ತಡೆದುಕೊಳ್ಳಲಾರೆನು. ಏಕೆಂದರೆ ಈಗ ನನ್ನ ಜೀವವೇ ತನ್ನಲ್ಲಿ ಸ್ಥಿರವಾಗಿ ಉಳಿದಿಲ್ಲ, ಎಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.
[೪]
ನಿನಗೆ ಸಂತೋಷವಾಗಲೆಂದು | ನಾನು ಹೆಣಗುತ್ತಿರುವೆನು ||೧||
ನಿನಗಿಷ್ಟವಾಗುವ ಮಾತುಗಳನು | ಕ್ಷಣ ಕ್ಷಣಕೂ ಆಡುತ್ತಿರುವೆನು ||ಪ||
ನೀನೆನಗೆ ಅಭಯವನೀಯು | ನನ್ನ ಮಾತು ನೆಲಕ್ಕುರುಳದಿರಲಿ ||೨||
ನಿನಗಿಷ್ಟವಾಗುವ ಮಾತುಗಳನು | ಕ್ಷಣ ಕ್ಷಣಕೂ ಆಡುತ್ತಿರುವೆನು ||ಪ||
ಪರಸ್ಪರರಲಿ ಸಂಭಾಷಣೆಯು | ಹೆಚ್ಚಬೇಕೆನ್ನುವನು ತುಕಾ ||೩||
ನಿನಗಿಷ್ಟವಾಗುವ ಮಾತುಗಳನು | ಕ್ಷಣ ಕ್ಷಣಕೂ ಆಡುತ್ತಿರುವೆನು ||ಪ||
ಅರ್ಥ :- ೧. ದೇವನೆ, ನೀನು ಸಂತುಷ್ಟನಾಗಬೇಕೆಂದು ಒಂದೇಸವನೆ ಯತ್ನಿಸುತ್ತಿರುವೆನು. ೨. ದೇವನೆ, ನಿನಗೆ ಇಷ್ಟವಾಗುವ ಮಾತುಗಳನ್ನು ಕ್ಷಣ ಕ್ಷಣಕ್ಕೆ ಆಡುತ್ತಿರುವೆನು. ೩. ನೀನು ನನಗೆ ಅಭಯದಾನವನ್ನು ನೀಡಬೇಕು. ನನ್ನ ಮಾತು ನೆಲದಮೇಲೆ ಬಿದ್ದಂತೆ ವ್ಯರ್ಥವಾಗಬಾರದು. ೪. ಪರಸ್ಪರರ ನಡುವೆ ಪ್ರೀತಿಯ ಸಂಭಾಷಣೆಯನ್ನು ಹೆಚ್ಚಿಸಬೇಕು, ಎಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.
[೫]
ತುದಿಮೊದಲಾಗಿ ಯಾವ ಆಸೆಯುಳಿದಿಲ್ಲ | ತುಂಬ ಕಠಿಣನೆಂದು ಕಾಣುತ್ತಿ ||೧||
ನನ್ನ ಶಕ್ತಿಯನೆಲ್ಲ ವ್ಯಯಿಸಿದೆನು | ನನ್ನಾವ ಯುಕ್ತಿಯೂ ನಡೆಯುತ್ತಿಲ್ಲ ||ಪ||
ಆಡಿದ ಮಾತು ಮುಗಿಲಲ್ಲಿ ಕಳೆಯಿತು | ನಿಂತ ಹಾಗೆಯೇ ನಿಂತಿದ್ದೇನೆ ||೨||
ನನ್ನ ಶಕ್ತಿಯನೆಲ್ಲ ವ್ಯಯಿಸಿದೆನು | ನನ್ನಾವ ಯುಕ್ತಿಯೂ ನಡೆಯುತ್ತಿಲ್ಲ ||ಪ||
ಏನೂ ಮಾಡಬೇಕೆನ್ನಿಸುತ್ತಿಲ್ಲ | ಸುಮ್ಮನೆ ಚಿತ್ತ ದಣಿದಿದೆ, ಎನ್ನುವನು ತುಕಾ ||೩||
ನನ್ನ ಶಕ್ತಿಯನೆಲ್ಲ ವ್ಯಯಿಸಿದೆನು | ನನ್ನಾವ ಯುಕ್ತಿಯೂ ನಡೆಯುತ್ತಿಲ್ಲ ||ಪ||
ಅರ್ಥ :- ೧. ದೇವನೆ, ಶುರುವಿನಿಂದ ಕೊನೆಯವರೆಗೆ ಮನಸ್ಸಿಗೆ ಯಾವುದೇ ಆಸೆಯು ಕಾಣುತ್ತಿಲ್ಲ. ನೀನು ಕಠಿಣನೂ, ಅಪ್ರಾಪ್ಯನೂ ಆಗಿ ಕಾಣುವಿ. ೨. ನನ್ನೆಲ್ಲ ಸಾಮರ್ಥ್ಯವು ಹಾಳಾಯಿತು. ನೀನದನ್ನು ನಾಶಪಡಿಸಿದೆ. ಇನ್ನು ನಿನ್ನೆದುರು ನನ್ನಾವ ಯುಕ್ತಿಯೂ ನಡೆಯುವಂತೆ ಕಾಣುತ್ತಿಲ್ಲ. ೩. ನಾನು ಮಾತನಾಡಿದುದೆಲ್ಲ ಮುಗಿಲಲ್ಲಿ ಇಲ್ಲವಾಗುತ್ತಿದೆ. ನಾನು ಮಾತ್ರ ಇದ್ದ ಹಾಗೆಯೇ ನಿನ್ನೆದುರು ನಿಂತಿದ್ದೇನೆ. ೪. ಇನ್ನು ಮತ್ತೇನನ್ನೂ ಮಾಡಬೇಕೆಂದು ಅನ್ನಿಸುತ್ತಿಲ್ಲ. ಚಿತ್ತವು ಸುಮ್ಮನೆ ದಣಿದುಕೊಂಡಿದೆ, ಎಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.
[೬]
ಕವಿತ್ವವನು ಮಾಡುವೆನೆಂದು ಯಾರಾದರೂ ಅನ್ನುತ್ತಿದ್ದರೆ | ಆ ವಾಣಿಯು ನನ್ನದಲ್ಲ ||೧||
ಅದು ನನ್ನ ಯುಕ್ತಿಯ ಮಾತಲ್ಲ | ವಿಶ್ವೇಶ್ವರನು ನನ್ನಿಂದ ಹೇಳಿಸಿದುದು ||೨||
ನಾನು ಪಾಮರ ಅರ್ಥಭೇದವನೇನು ಬಲ್ಲೆ | ಗೋವಿಂದ ನುಡಿಸುವುದನ್ನೇ ನುಡಿವೆ ||೩||
ನಾನು ಅಳೆಯಲು ಕುಳಿತವನು ಮಾತ್ರ | ನಾನೇನೂ ಅಲ್ಲ, ಅವನದೇ ಸ್ವಾಮಿಸತ್ತೆ ||೪||
ನಾನು ದೇವಸೇವಕನು ನಿಜ | ಅವನ ನಾಮಮುದ್ರೆಯನು ಧರಿಸಿರುವೆನೆನ್ನುವನು ತುಕಾ ||೫||
ಅರ್ಥ:- ೧. ನಾನು ಕವಿತೆಯನ್ನು ರಚಿಸುತ್ತೇನೆಂದು ಯಾರಾದರೂ ಅನ್ನುತ್ತಿದ್ದರೆ, ಕವಿತ್ವದ ವಾಣಿಯು ನನ್ನದಲ್ಲವೆಂಬುದು ವಸ್ತುಸ್ಥಿತಿಯಾಗಿದೆ. ೨. ಕವಿತ್ವವು ನನ್ನ ಯುಕ್ತಿಯಾಗಿರದೆ ಆ ವಿಶ್ವಂಭರನು ನನ್ನಿಂದ ಮಾತನಾಡಿಸುತ್ತಾನೆ. ೩. ಪಾಮರನಾದ ನಾನು ಶಬ್ದಗಳ ಅರ್ಥಭೇದವನ್ನೇನು ಬಲ್ಲೆನು? ಆ ಗೋವಿಂದನು ನನ್ನಿಂದ ಆಡಿಸುವುದನ್ನು ನಾನು ಆಡುತ್ತೇನಷ್ಟೆ. ೪. ನಾನು ಅಳೆಯಲೆಂದು ಕುಳಿತವನು. ಈ ಕೆಲಸದಲ್ಲಿ ನಾನು ಯಾರೂ ಅಲ್ಲ. ಎಲ್ಲ ಸತ್ತೆಯೂ ಆ ಸ್ವಾಮಿಯದೇ. ೫. ನಾನು ದೇವರ ಸೇವಕನು ನಿಜ. ಅವನ ಹೆಸರಿನ ಚಿಹ್ನೆಗಳನ್ನು ನನ್ನ ಮೈಮೇಲೆ ಧರಿಸಿದ್ದೇನಷ್ಟೆ, ಎಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.
ವಿವರಣೆ :- ತುಕೋಬರಿಗೆ ಕವಿತೆಯ ಸ್ಫೂರ್ತಿಯು ಯಾವಾಗ, ಎಲ್ಲಿ ಆಯಿತೆಂಬುದನ್ನು ಕುರಿತು ಮುಂದೆ ವಿವರಣೆಯು ಬರಲಿದೆ. (ನಾಮದೇವರು ಕನಸಿನಲಿ ಬಂದು ನನ್ನನೆಚ್ಚರಿಸಿದರು. ಅಭಂಗ-೧೩೨೦) ಮತ್ತು (ಸತ್ಯ ಅಸತ್ಯಗಳನು ಮನಗಾಣಿಸಿದರು. ಅಭಂಗ ೧೩೩೩). ಇಲ್ಲಿ ಒಂದೆರಡು ಸಂಗತಿಗಳನ್ನು ಕುರಿತು ವಿವರಿಸಬೇಕಾಗಿದೆ. ಮೊದಲನೆಯದಾಗಿ, ತಾವು ಕವಿತೆಯನ್ನು ಮಾಡುತ್ತೇವೆ, ಎಂಬ ಬಗೆಗೆ ತುಕಾರಾಮರ ನಿಲುವು ಬಲು ನಮ್ರವಾದುದು, ಅದರಂತೆಯೇ ಖಚಿತವಾದುದೂ ಕೂಡ. ತುಕೋಬನಂಥ ಭಕ್ತನು ವೇದವಾಣಿಯನ್ನು ಮರಾಠಿ ಭಾಷೆಯಲ್ಲಿ ಅಲ್ಲದೆ ಕವಿತ್ವದ ಮೂಲಕ ಹೇಳಲು ಸಾಹಸವನ್ನು ಮಾಡುವುದೆಂದರೆ ಅದೊಂದು ಅಲೌಕಿಕವಾದ ಸಂಗತಿಯೇ ಸರಿ. ಆದರೆ ಮೊದಮೊದಲು ಈ ದಿವ್ಯವಾಣಿಗೂ ವಿರೋಧವು ವ್ಯಕ್ತವಾಯಿತು. ತುಕೋಬರು ಹುಟ್ಟಿನಿಂದ ಮೇಲಿನ ವರ್ಣದವರೇನೂ ಆಗಿರಲಿಲ್ಲ. ವೇದದಲ್ಲಿರುವ ಪರಮಾರ್ಥಜ್ಞಾನವು ಸಂಸ್ಕೃತದ ಬದಲು ದೇಸಿಯ ಭಾಷೆಯಲ್ಲಿ ಬರುವುದು ಕೆಲವರಿಗೆ ಬೇಕಿರಲಿ. ಹೀಗಾಗಿ ತುಕೋಬರು ಇವರೆಲ್ಲರಿಗೆ ಉತ್ತರವನ್ನು ನೀಡಲೆಂದಾಗಲಿ ಇಲ್ಲವೆ ವಸ್ತುಸ್ಥಿತಿಯನ್ನು ನಿವೇದಿಸಲೆಂದಾಗಲಿ, ತಮ್ಮ ಕವಿತ್ವದ ವೈಶಿಷ್ಟಗಳನ್ನು ಕುರಿತು ನಡುನಡುವೆ ಹೇಳುವಂತೆ ಕಾಣುತ್ತದೆ.
ಅವರ ಕವಿತ್ವದ ವೈಶಿಷ್ಟ್ಯವು ಈ ಅಭಂಗದಲ್ಲಿ ಬಂದಿದೆ. ಕವಿತ್ವದ ವಾಣಿಯು ತಮ್ಮದಾಗಿರದೆ ವಿಶ್ವಂಭರನಾಗಿದೆ, ಈಶ್ವರನು ತಮ್ಮಿಂದ ನುಡಿಸಿದುದಾಗಿದೆ, ಎಂದಿದ್ದಾರೆ. ತಾವು ನಿಮಿತ್ತ ಮಾತ್ರರು. ಒಡೆಯನ ಸರಕನ್ನು ಅಳೆಯುವವರು ಮಾತ್ರ. ತಾವು ಸುಮ್ಮನೆ ಇರುವವರು, ಅವನ ಸತ್ತೆಯೇ ನಿಜವಾದುದು. ಇಂಥ ಅವರ ಭಾವನೆಯು ಅಲಲ್ಲಿ ವ್ಯಕ್ತಗೊಳ್ಳುತ್ತದೆ. ’ಕೂಲಿಯಾಳಿನ ಕೈಲಿ ಅಳತೆಯ ಪಾತ್ರೆ | ನಾನಿಲ್ಲಿ ಸುಮ್ಮನೆ, ಅವನ ಸತ್ತೆ ನಿಜ’, ’ನನ್ನ ಮಾತಿಗೆ ಅದಾವ ಅರ್ಥವೂ ಇರಲಿಲ್ಲ | ನನ್ನ ಮಾತಲ್ಲ, ವಿಠ್ಠಲನದು’, ’ನನ್ನಿಂದ ಮಾತನಾಡಿಸುವನು | ಭೂಮಿಯನು ಧರಿಸುವವನು’, ’ನನ್ನ ಬಲದಿಂದ ಮಾತನಾಡುತ್ತಿಲ್ಲ | ಕೃಪಾವಂತನಾದ ಆ ಸಖನ ವಾಣಿಯದು’, ’ಕಲಿಸುವ ಒಡೆಯನೇ ಬೇರೆ’, ’ಆ ವಿಶ್ವಂಭರನೇ ಮಾತನಾಡಹಚ್ಚುತ್ತಾನೆ’, ’ದೇವನು ನನ್ನಿಂದ ಮಾತಾಡಿಸುವನೆನ್ನುವನು ತುಕಾ’, ’ಸಾಕ್ಷಾತ್ಕಾರದ ವಾಣಿಯನು ನುಡಿಯುವೆನು | ನಾರಯಣನಲ್ಲಿ ಬೆರೆಯಿಸಿ’, ಎನ್ನುವ ಹಲವಾರು ವಚನಗಳ ಮೂಲಕ ತುಕೋಬರು ಈ ವಾಣಿಯು ತಮ್ಮದಾಗಿರದೆ ಅದು ವಿಠ್ಠಲನದು, ವಿಶ್ವಂಭರನದು ಎಂದು ಮತ್ತೆ ಮತ್ತೆ ಹೇಳಿದ್ದಾರೆ. ಹೀಗಾಗಿ ತುಕೋಬರ ವಾಣಿ ಹಾಗೂ ಕವಿತ್ವದ ತೇಜಸ್ಸು ದಿವ್ಯವಾದುದು, ಅಲೌಕಿಕವಾದುದು ಹಾಗೂ ಆತ್ಮೀಯತೆಯದು. ಕವಿತ್ವದ ಶಬ್ದಗಳೆಂದರೆ ಟಂಕಸಾಲೆಯ ನಾಣ್ಯಗಳಲ್ಲ, ಎಂದು ಅವರು ಒಂದು ಅಭಂಗದಲ್ಲಿ ಹೇಳಿದ್ದಾರೆ. ದೇವರು ತಮಗೆ ಪ್ರೇರಣೆಯನ್ನು ಇತ್ತುದರಿಂದಲೇ ತಮ್ಮ ವಾಣಿಯು ಇಷ್ಟೊಂದು ದಿವ್ಯವೂ, ರಸವತ್ತಾದುದೂ ಆಯಿತೆಂದು ಅವರು ಅಭಿಪ್ರಾಯಪಡುತ್ತಾರೆ. ಇದೇ ಅಭಂಗದಲ್ಲಿ ಇಂಥ ತೀವ್ರತೆಯನ್ನು ವರ್ಣಿಸುವಾಗ ಅವರು. ’ದೇವನು ಬಲವಂತವನು ಮಾಡಿದನು’, ಎನ್ನುತ್ತಾರೆ.
ಸಾರಾಂಶವೆಂದರೆ, ತಾವು ಪಾಮರರು, ತಮಗೆ ಸಾದಾ ಶಬ್ದಗಳ ಅರ್ಥ ಕೂಡ ತಿಳಿಯದು, ಆದರೆ, ಗೋವಿಂದನೇ ಮಾತನಾಡಿಸುವವನಾದ ಕಾರಣ ತಮ್ಮಿಂದ ಈ ಕವಿತೆಯೆಂಬುದು ತಯಾರಾಗುತ್ತಿದೆ. ನಿಜ ಹೇಳಬೇಕೆಂದರೆ ತಾವು ಈಶ್ವರನ ನಿಷ್ಠಾವಂತ ಸೇವಕ ಮಾತ್ರ. ಅವನ ನಾಮಮುದ್ರೆಯು ತಮ್ಮ ಕಾವ್ಯಕ್ಕಿರುವ ಕಾರಣಾದು ಪ್ರಾಸಾದಿಕವೂ, ಪ್ರಸಾದಪೂರ್ಣವೂ ಆಗಿದೆ. ಈ ಅಭಂಗದ ’ನಾಮದ ಮುದ್ರೆ’ ಎಂಬ ಪದದ ಶ್ಲೇಷೆಯನ್ನೂ ಗಮನಿಸಬೇಕು. ತುಕಾರಾಮರಿಗೆ ನಾಮದೇವರ ಪರಂಪರೆಯಿಂದ ಕವಿತ್ವದ ಕೊಡುಗೆಯು ಲಭಿಸಿದೆ. ನಾಮದೇವರು ತಮಗೆ ಸ್ಫೂರ್ತಿಯನ್ನಿತರೆಂದು ಅವರೇ ಸಾಕ್ಷ್ಯ ನುಡಿದಿದ್ದಾರೆ. ಹೀಗಾಗಿ ’ನಾಮದ ಮುದ್ರೆ’ಯನ್ನು ’ನಾಮದೇವರಿತ್ತ ಮುದ್ರೆ’, ಅಂದರೆ ನಾಮದೇವರು ಮನ್ನಣೆಯನ್ನಿತ್ತರೆಂದು ಕೂಡ ಅರ್ಥೈಸಬಹುದಾಗಿದೆ.
[೭]
ಕೌಶಲದಿಂದ ಶಬ್ದಗಳನು ಜೋಡಿಸಿದರೂ | ಕವಿತ್ವದ ಮನ್ನಣೆ ದೊರೆಯದು ||೧||
ಸತ್ಯದ ಅನುಭವವು ನಿಜದಲ್ಲಿ ಗಮನಾರ್ಹ | ಅನುಭವದಿಂದ ಗುಣವು ಸವಿ ಪಡೆವುದು ||ಪ||
ಬೆಂಕಿಯಲಿ ಹುಸಿ ಒಡವೆ ತಡೆಯದು | ಒರೆಗೆ ಹಚ್ಚಲು ಕೀಳುಧಾತು ಹೊರಬರುವುದು ||೨||
ಸತ್ಯದ ಅನುಭವವು ನಿಜದಲ್ಲಿ ಗಮನಾರ್ಹ | ಅನುಭವದಿಂದ ಗುಣವು ಸವಿ ಪಡೆವುದು ||ಪ||
ಇಲ್ಲಿ ಮಾತನ್ನು ಬೆಳೆಸಿ, ಬಿಡಿಸಿ ಹೇಳಲೇಬೇಕಿಲ್ಲ | ಎನ್ನುವನು ತುಕಾ ||೩||
ಸತ್ಯದ ಅನುಭವವು ನಿಜದಲ್ಲಿ ಗಮನಾರ್ಹ | ಅನುಭವದಿಂದ ಗುಣವು ಸವಿ ಪಡೆವುದು ||ಪ||
ಅರ್ಥ:-೧. ಬಲು ಕೌಶಲದಿಂದ ಶಬ್ದಗಳನ್ನು ಜೋಡಿಸಿಯಾರಾದರೂ ಕವಿತ್ವವನ್ನು ಮಾಡಿದರೆ ಅದಕ್ಕೆ ಯಾವ ಮನ್ನಣೆಯೂ ಸಿಕ್ಕಲಾರದು. ೨. ಸತ್ಯತ್ವದ ಅನುಭವವನ್ನು ಪಡೆದವನು ಸತ್ಯತ್ವದಿಂದಲೇ ಇನ್ನೊಬ್ಬರ ಅಂತಃಕರಣವನ್ನು ತಟ್ಟುವನು. ಅವನ ವಾಣಿಗೆ ಅನುಭವದಿಂದಾಗಿಯೇ ಗುಣಗಳ ಸವಿಯು ಒದಗುವುದು. ೩. ಕೀಳು ಲೋಹದ ಒಡವೆಗೆ ಬಂಗಾರದ ಗಿಲೀಟು ಮಾಡಿಸಿ ಪ್ರಯೋಜನವೇನು? ಬೆಂಕಿಯೆದುರು ಅದರ ಆಟ ನಡೆಯದು. ಅದನ್ನು ಒರೆಗೆ ಹಚ್ಚಿದರೆ ಒಳಗಿನ ಕೀಳುಲೋಹವು ತೆರೆದುಕೊಳ್ಳುವುದು. ೪. ಸತ್ಯತ್ವದ ಅನುಭವವನ್ನು ಪಡೆದವನು ಅದನ್ನು ಶಬ್ದಗಳ ಮೂಲಕ ವಿವರಿಸಿ ಹೇಳಬೇಕಿಲ್ಲ, ಎಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.
[೮]
ಅಪ್ಪ ಮಡಿದನು ತಿಳಿಯಲಿಲ್ಲ | ಸಂಸಾರದ ಚಿಂತೆಯಿರಲಿಲ್ಲ ||೧||
ವಿಠ್ಠಲನೆ, ನಿನ್ನ ನನ್ನ ರಾಜ್ಯ | ಬೇರೆಯವರಿಗೆ ಕೆಲಸವಿಲ್ಲ ||ಪ||
ಮಡದಿ ಮಡಿದಳು ಒಳ್ಳೆಯದಾಯಿತು | ದೇವನೆ ಮಾಯೆಯನು ಬಿಡಿಸಿದೆ ||೨||
ವಿಠ್ಠಲನೆ, ನಿನ್ನ ನನ್ನ ರಾಜ್ಯ | ಬೇರೆಯವರಿಗೆ ಕೆಲಸವಿಲ್ಲ ||ಪ||
ಮಗನು ಮಡಿದನು ಒಳ್ಳೆಯದಾಯಿತು | ದೇವನು ಮಾಯಾರಹಿತನನ್ನಾಗಿ ಮಾಡಿದನು ||೩||
ವಿಠ್ಠಲನೆ, ನಿನ್ನ ನನ್ನ ರಾಜ್ಯ | ಬೇರೆಯವರಿಗೆ ಕೆಲಸವಿಲ್ಲ ||ಪ||
ಕಣ್ಣೆದುರು ನನ್ನಮ್ಮ ಮಡಿದಳು | ಚಿಂತೆ ದೂರಾಯಿತೆನ್ನುವನು ತುಕಾ ||೪||
ವಿಠ್ಠಲನೆ, ನಿನ್ನ ನನ್ನ ರಾಜ್ಯ | ಬೇರೆಯವರಿಗೆ ಕೆಲಸವಿಲ್ಲ ||ಪ||
ಅರ್ಥ :- ೧. ಅಪ್ಪ ಮಡಿದನು ತಿಳಿಯಲಿಲ್ಲ. ಸಂಸಾರದ ಚಿಂತೆಯಿರಲಿಲ್ಲ. ೨. ವಿಠ್ಠಲನೆ, ಇನ್ನು ನಿನ್ನ, ನನ್ನ ರಾಜ್ಯವಿದ್ದು ಅದರಲ್ಲಿ ಬೇರೆಯವರಿಗೆ ಕೆಲಸವಿಲ್ಲ. ೩. ದೇವನೆ, ಮಡದಿ ಮಡಿದಳು. ಒಳ್ಳೆಯದಾಯಿತು. ೪. ಮಗನು ಮಡಿದನು. ಒಳ್ಳೆಯದಾಯಿತು. ದೇವನು ನನ್ನನ್ನು ಈ ಪಾಶದಿಂದಲೂ ಬಿಡುಗಡೆಗೊಳಿಸಿದನು. ೫. ನನ್ನ ಕಣ್ಣ್ನೆದುರೇ ನನ್ನಮ್ಮ ಮಡಿದಳು. ಚಿಂತೆ ದೂರಾಯಿತು, ಎಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.
[೯]
ಸಂತರು, ’ನಿಮಗೆ ವೈರಾಗ್ಯ ಹೇಗೆ ಬಂದಿತು?’, ಎಂದು ಸ್ವಾಮಿಗಳನ್ನು ಕೇಳಿದಾಗ ಅವರು ಹೇಳಿದ ಉತ್ತರದ ಅಭಂಗ
ಶೂದ್ರ ಕುಲದಲಿ ಜನ್ಮ, ವೃತ್ತಿಯಲಿದ್ದೆನು | ಇವನು ಮೊದಲಿನಿಂದ ಕುಲದೇವನು ||೧||
ಹೇಳಬಾರದಾದರೂ ಮಾತನು ಪಾಲಿಸಿದೆನು | ನೀವು ಸಂತರು ಪ್ರಶ್ನೆ ಕೇಳಿದಿರೆಂದು ||೨||
ಸಂಸಾರದ ದುಃಖದಿಂದ ತುಂಬ ನೊಂದೆನು | ತಾಯಿ ತಂದೆಯರೂ ಮಡಿದರು ||೩||
ಬರದಿ ಸಿರಿ ಕರಗಿ ಮಾನ ಹೋಯಿತು | ಒಬ್ಬ ಮಡದಿ ಅನ್ನವಿಲ್ಲದೆ ಮಡಿದಳು ||೪||
ನಾಚಿಕೆಯಾಗಿ ದುಃಖದಿಂದ ಜೀವಕೆ ಬೇಸತ್ತೆ | ವ್ಯಾಪಾರದಿ ನಷ್ಟ ಬಂದಿತು ||೫||
ದೇವಾಲಯವು ಪಾಳು ಬಿದ್ದಿತ್ತು | ಅದನ್ನು ಕಟ್ಟಿಸುವ ಯೋಚನೆ ಬಂದಿತು ||೬||
ಏಕಾದಶಿಯಂದು ಕೀರ್ತನೆ ಮಾಡಹತ್ತಿದೆ | ಮೊದಲು ಅಭ್ಯಾಸದತ್ತ ಗಮನವಿರಲಿಲ್ಲ ||೭||
ಕೆಲ ಸಂತರ ಉತ್ತರಗಳನು ಉರುಹೊಡೆದೆ | ಮನದಿ ಗೌರವ, ನಂಬಿಕೆಯನಿರಿಸಿದೆ ||೮||
ಹಾಡುವವರ ಹಿಂದೆ ನಿಂತು ಪಲ್ಲವಿ ಹಾಡುತಿದ್ದೆನು | ಭಾವ, ಚಿತ್ತವ ಶುದ್ಧಗೊಳಿಸಿ ||೯||
ಸಂತರ ಪಾದತೀರ್ಥವನು ಸೇವಿಸಿದೆನು | ಮನದಲಿ ನಾಚಿಕೆಯನು ಬರಗೊಡಲಿಲ್ಲ ||೧೦||
ಆದಷ್ಟು ಪರೋಪಕಾರವನು ಮಾಡಿದೆನು | ಅದಕಾಗಿ ದೇಹವನು ದುಡಿಸಿದೆನು ||೧೧||
ನಮ್ಮವರ ಮಾತುಗಳನು ಆಲಿಸಲಿಲ್ಲ ನಾನು | ಇಡಿಯ ಪ್ರಪಂಚಕ್ಕೆ ಬೇಸತ್ತೆನು ||೧೨||
ಸತ್ಯಾಸತ್ಯಗಳಿಗೆ ಮನವನೇ ಸಾಕ್ಷಿಯಾಗಿರಿಸಿದೆನು | ಬಹುಮತವ ಒಪ್ಪಲಿಲ್ಲ ನಾನು ||೧೩||
ಕನಸಿನಲಿ ಗುರೂಪದೇಶವ ಒಪ್ಪಿಕೊಂಡೆನು | ನಾಮದಿ ದೃಢ ನಂಬಿಕೆಯನಿರಿಸಿದೆನು ||೧೪||
ಮುಂದೆ ಕವಿತೆಯ ಸ್ಫೂರ್ತಿ ಮೂಡಿತು | ಚಿತ್ತದಿ ವಿಠೋಬನ ಪಾದವ ಹಿಡಿದೆನು ||೧೫||
ನಿಷೇಧಗಳ ಆಘಾತ ನನ್ನ ಮೇಲಾಯಿತು | ಅದರಿಂದ ನನ್ನ ಮನ ನೊಂದಿತು ||೧೬||
ವಹಿ ಮುಳುಗಿದಾಗ ಧರಣಿ ಕುಳಿತೆನು | ನಾರಾಯಣನು ಸಮಾಧಾನಗೊಳಿಸಿದನು ||೧೭||
ಹಲವು ಸಂಗತಿಗಳಿವೆ. ವಿಸ್ತಾರದಿಂದ ಹೇಳಿದರೆ | ತಡವಾಗುವುದು, ಸಾಕಿನ್ನು ||೧೮||
ಈಗಿದ್ದುದು ಇದ್ದ ಹಾಗೆಯೇ ಕಾಣುತ್ತಿದೆ | ಮುಂದಿನ ಅವಸ್ಥೆಯನು ದೇವನೇ ಬಲ್ಲ ||೧೯||
ನಾರಾಯಣನು ಭಕ್ತನನು ಕಡೆಗಣಿಸನು | ಅವನು ಇಂಥ ಕೃಪಾಳು ಎಂದರಿತೆನು ||೨೦||
ಪಾಂಡುರಂಗನೇ ನನ್ನೆಲ್ಲ ಬಂಡವಾಳ | ಅವನೇ ನನ್ನಿಂದ ಹೇಳಿಸಿದನೆನ್ನುವನು ತುಕಾ ||೨೧||
ಅರ್ಥ :- ೧. ನಾನು ಶೂದ್ರ ಜಾತಿಯವನಿದ್ದು ವ್ಯಾಪಾರವು ನನ್ನ ವೃತ್ತಿಯಾಗಿತ್ತು. ನನ್ನ ಕುಲದಲ್ಲಿ ಮೊದಲಿನಿಂದಲೂ ಶ್ರೀವಿಠ್ಠಲನು ಪೂಜ್ಯನಾದ ದೇವನೆಂದು ಮನ್ನಣೆಯನ್ನು ಪಡೆದಿದ್ದನು. ೨. ನಿಜವೆಂದರೆ ಈ ಸಂಗತಿಯು ಹೇಳುವಂಥದಲ್ಲ. ಆದರೆ ನೀವು ಸಂತರು ಕೇಳಿದಿರೆಂದು ಹೇಳುತ್ತಿದ್ದೇನೆ. ೩. ಸಂಸಾರದ ದುಃಖದಿಂದ ತುಂಬ ನೊಂದುಕೊಂಡೆನು. ಕೊನೆಗೆ ನನ್ನ ತಾಯಿತಂದೆ ತೀರಿಕೊಂಡರು. ೪. ಬರದಿಂದ ಸಂಪತ್ತು ಹಾಳಾಯಿತು. ಗೌರವವು ಸಿಕ್ಕದಂತಾಯ್ತು. ಒಬ್ಬ ಮಡದಿಯು ಅನ್ನವಿಲ್ಲದೆ ಬಳಲಿ ಮಡಿದಳು. ೫. ಈ ದುಃಖದಿಂದ ತತ್ತರಿಸಿದೆನು. ನನಗೆ ತುಂಬ ನಾಚಿಕೆ ಎನ್ನಿಸತೊಡಗಿತು. ವ್ಯಾಪಾರದಲ್ಲೂ ನಷ್ಟವನ್ನು ಅನುಭವಿಸಹತ್ತಿದೆ. ೬. ಆಗ ಪಾಳುಬಿದ್ದ ದೇವರ ಗುಡಿಯ ಜೀರ್ಣೋದ್ಧಾರವನ್ನು ಮಾಡಬೇಕೆಂಬ ಆಸೆ ಮೂಡಿತು. ೭. ಮೊದಲ ಬಾರಿಗೆ ಏಕಾದಶಿಯ ದಿನದಂದು ಕೀರ್ತನೆಯನ್ನು ಮಾಡಲು ಆರಂಭಿಸಿದೆನು. ಆದರೆ ನಾನು ಅದನ್ನು ಅಭ್ಯಸಿಸಿರಲಿಲ್ಲ. ಅದರತ್ತ ಗಮನವಿರಲಿಲ್ಲ. ೮. ಹೀಗಾಗಿ ಗೌರವದಿಂದ ಮನದಲ್ಲಿ ನಂಬಿಕೆಯನ್ನಿರಿಸಿಕೊಂಡು ಕೆಲವು ಸಂತರ ಕೀರ್ತನೆಗಳ ಅವತರಣಿಕೆಗಳನ್ನು ಬಾಯಿಪಾಠ ಆಡಿಕೊಂಡೆನು. ೯. ಕೀರ್ತನೆಯ ಕಾಲಕೆ ದೇವರ ಗುಣಗಾನವನ್ನು ಮಾಡುವವರ ಬೆನ್ನುಹಿಂದೆ ನಿಂತುಕೊಂಡು ಧ್ರುಪದಗಳನ್ನು (ಪಲ್ಲವಿ) ಭಾವಶುದ್ಧ ಚಿತ್ತದಿಂದ ಅನ್ನುತ್ತಿದ್ದೆನು. ೧೦. ಸಂತರ ಪಾದತೀರ್ಥವನ್ನು ಸೇವಿಸುತ್ತಿದ್ದೆನು. ಅದರ ಬಗೆಗೆ ಎಳ್ಳಷ್ಟೂ ನಾಚಿಕೊಳ್ಳುತ್ತಿರಲಿಲ್ಲ. ೧೧. ಇನ್ನೊಬ್ಬರಿಗಾಗಿ ನನ್ನಿಂದಾದಷ್ಟು ಉಪಕಾರವನ್ನು ಮಾಡುತ್ತಿದ್ದೆನು. ಅದಕ್ಕಾಗಿ ನನ್ನ ದೇಹವನ್ನು ದುಡಿಯಲು ಹಚ್ಚುತ್ತಿದ್ದೆನು. ೧೨. ನನ್ನ ಬಳಗದವರ ಮಾತನ್ನು ನಿಜವೆಂದು ನಂಬದೆ ನಡೆದುಕೊಂಡೆನು. ನನಗೆ ಪ್ರಪಂಚದ ಬಗೆಗೆ ಎಲ್ಲಿಲ್ಲದ ಜುಗುಪ್ಸೆ ಬಂದಿತ್ತು. ೧೩. ನಿಜಸುಳ್ಳುಗಳ ಬಗೆಗೆ ನನ್ನ ಮನವನ್ನೇ ಸಾಕ್ಷಿಯೆಂದು ಒಪ್ಪಿಕೊಂಡೆನು. ಈ ಬಗೆಗೆ ನಾನೆಂದಿಗೂ ಬಹುಮತವನ್ನು ಒಪ್ಪಿಕೊಳ್ಳಲಿಲ್ಲ. ೧೪. ಗುರುವು ಕನಸಿನಲ್ಲಿ ಬಂದು ಮಾಡಿದ ಉಪದೇಶವನ್ನು ಸ್ವೀಕರಿಸಿ ಶ್ರೀಹರಿಯ ನಾಮವನ್ನು ದೃಢವಾಗಿ ನಂಬಿದೆನು. ೧೫. ಮುಂದೆ ನನಗೆ ಕವಿತೆಯನ್ನು ಮಾಡುವ ಸ್ಫೂರ್ತಿ ಬಂದಿತು. ನನ್ನ ಹೃದಯದಲ್ಲಿ ವಿಠ್ಠಲನ ಪಾದಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡೆನು. ೧೬. ಆಮೇಲೆ ಕೆಲವು ಜನರು ನನ್ನನ್ನು ನಿಷೇಧಿಸಿ ನನ್ನ ಮೇಲೆ ಆಘಾತವನ್ನು ಮಾಡಿದರು. ಅದರಿಂದ ನನ್ನ ಚಿತ್ತವು ನೊಂದುಕೊಂಡಿತು. ೧೭. ನನ್ನ ಅಭಂಗಗಳ ವಹಿಗಳನ್ನು ನದಿಯ ನೀರಿನಲ್ಲಿ ಮುಳುಗಿಸಲಾಯಿತು. ಆಗ ಹದಿಮೂರು ದಿನ ಈಶ್ವರನ ಬಳಿ ಧರಣಿಯನ್ನು ಹೂಡಿದೆನು. ಆಗ ನಾರಾಯಣನು ಆ ವಹಿಗಳನ್ನು ಕಾಪಾಡಿ ನನ್ನನ್ನು ಸಮಾಧಾನಪಡಿಸಿದನು. ೧೮. ನಡೆದ ಸಂಗತಿಗಳನ್ನೆಲ್ಲ ವಿಸ್ತಾರವಾಗಿ ಹೇಳುತ್ತ ಹೋದರೆ ತಡವಾಗುವುದು. ಅಲ್ಲದೆ ಬೇಡದ ಸಂಗತಿಗಳು ಬರುವ ಸಾಧ್ಯತೆಯಿದೆ. ಆದುದರಿಂದ ಇಲ್ಲಿಗೇನೇ ನಿಲ್ಲಿಸುತ್ತೇನೆ. ೧೯. ಈಗಿರುವ ಪರಿಸ್ಥಿತಿಯು ಸ್ಪಷ್ಟವಾಗಿ ಕಾಣುತ್ತಿದೆ. ಮುಂದಿನ ಅವಸ್ಥೆ ಆ ವಿಠ್ಠಲನಿಗೇ ಗೊತ್ತು. ೨೦. ನರಾಯಣನು ನನ್ನಂತಹ ಭಕ್ತನನ್ನು ಅದೆಂದಿಗೂ ಕಡೆಗಣಿಸನು. ಅವನು ಪೂರ್ತಿ ಕೃಪಾವಂತನೆಂಬುದು ನನಗೆ ತಿಳಿದಿದೆ. ೨೧. ಪಾಂಡುರಂಗನೇ ನನ್ನ ಇಡಿಯ ಬಂಡವಾಳ. ಅವನೇ ನನ್ನಿಂದ ಈ ಮಾತುಗಳನ್ನು ಆಡಿಸಿದನು.
ತುಕೋಬರ ಗಾಥೆಯು ವಾಙ್ಮಯದ ಒಂದು ಮಹಾ ಕೃತಿಯಾಗಿದೆ. ಹೀಗಾಗಿ ಅದು ಮಾನವನ ವೈಶ್ವಿಕ ವಾಙ್ಮಯದ ವಾರಸಿನ ಒಂದು ಭಾಗವಾಗಿದೆ. ತುಕೋಬರ ಗಾಥೆಯು ಮರಾಠಿ ಸಂಸ್ಕೃತಿ ಹಾಗೂ ಮರಾಠಿ ಭಾಷೆಯ ವಿಶಿಷ್ಟವಾದ ಕಾಲದಲ್ಲಿ ನಿರ್ಮಾಣವಾಗಿದ್ದರೂ ಅದರ ಸಂದರ್ಭವು ವೈಶ್ವಿಕವೂ, ಮಾನವೀಯವೂ ಆದುದು. ತುಕೋಬರು ತಮ್ಮ ಅನುಭವಗಳನ್ನು ವೈಶ್ವಿಕ ಹಿನ್ನೆಲೆ ಇಲ್ಲವೆ ಸಾರ್ವಭೌಮವಾದ ಮಾನವೀಯ ಮಟ್ಟದಲ್ಲಿ ಪ್ರತಿಪಾದಿಸುತ್ತಾರೆ.
ದಿಲಿಪ ಚಿತ್ರೆಯವರ “ತುಕಾ ಸೇಸ್” ಪುಸ್ತಕದ ಮುನ್ನುಡಿಯಿಂದ
ಕನ್ನಡಾನುವಾದ :ವಿರೂಪಾಕ್ಷ ಕುಲಕರ್ಣಿ
ತುಕಾರಾಮರು ಇ. ಸ. ೧೬೦೯ ರಲ್ಲಿ ಜನಿಸಿ, ಇ. ಸ. ೧೬೫೦ ರಲ್ಲಿ ಯಾವ ಕುರುಹನ್ನೂ ಉಳಿಸದೆ ಕಣ್ಮರೆಯಾದರು. ಅವರ ಜೀವನದ ಬಗೆಗೆ ನಾವು ತಿಳಿದಿರುವ ಅಲ್ಪಸ್ವಲ್ಪ ಮಾಹಿತಿಯು ಅವರ ಆತ್ಮಚರಿತ್ರಪರವಾದ ಕಾವ್ಯದಿಂದ ಪುನರ್ರಚನೆಗೊಂಡು ಪಡೆದುದು. ಅವರ ಸಮಕಾಲೀನ ಕವಯಿತ್ರಿಯಾದ ಬಹಿಣಾಬಾಯಿಯ
ಕಾವ್ಯದಲ್ಲಿ ಇರುವ ಸ್ಮೃತಿರೂಪದ ಪದ್ಯಗಳು ಮತ್ತು
ಮುಂದಿನ ಕಾಲದ, ಸಂತ-ಕವಿಗಳ ಚರಿತ್ರಕಾರರಾದ ಮಹಿಪತಿಯವರ ಬರವಣಿಗೆಗಳು ಇನ್ನಿತರ ಆಕರಗಳು. ಉಳಿದ ಆಕರಗಳೆಲ್ಲ ಜನಪದಿಂದ ಬಂದವುಗಳು. ಅಂದ ಮಾತ್ರಕ್ಕೆ ಅವುಗಳನ್ನು ತಳ್ಳಿಹಾಕಬೇಕೆಂದಿಲ್ಲ. ಡಾ. ವಿ. ಎಸ್. ಬೇಂದ್ರೆಯವರಂತಹ ಆಧುನಿಕ ವಿದ್ವಾಂಸರು ತತ್ಕಾಲೀನ ಆಕರಗಳನ್ನು ಆಧರಿಸಿ ಸಂಶೋಧನೆಯನ್ನು ಕೈಕೊಂಡು, ತುಕಾರಾಮರ ಚರಿತ್ರೆಯನು ಸಿದ್ಧಪಡಿಸಿರುವರು. ಆದರೂ ಇದು ಸಾಕಷ್ಯು ಮಟ್ಟಿಗೆ ಊಹೆಯನ್ನು ಆಧರಿಸಿದುದು.
ತುಕಾರಾಮರ ಕೈಬರಹಗಳ ಬಗೆಗೂ ಇಂಥದೇ ನಿಗೂಢತೆಯಿದೆ. ತುಕಾರಾಮರ ಊರಾದ ದೇಹುವಿನಲ್ಲಿ ಇರುವ ವಿಠೋಬನ ದೇವಾಲಯದಲ್ಲಿ ಪ್ರದರ್ಶಿಸಲಾದ ಹೊತ್ತಿಗೆಯು ಅವರ ಸ್ವಂತದ ಕೈಬರಹದ್ದೆಂದು ಹೇಳಲಾಗುತ್ತದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ತುಕಾರಾಮರು ಬಲವಂತಕ್ಕೆ ಈಡಾಗಿ ಇಂದ್ರಾಯಣಿ ನದಿಯಲ್ಲಿ ಮುಳುಗಿಸಿ, ಹದಿಮೂರು ದಿನಗಳ ಉಪವಸವನ್ನು ಕೈಕೊಂಡ ಬಳಿಕ ತಾನಾಗಿಯೇ ಮೇಲೆದ್ದು ಬಂದ ಹೊತ್ತಿಗೆಯ ಒಂದು ಭಾಗವು ಇದೆಂದು ನಂಬಲಾಗಿದೆ. ಈ ಪ್ರತಿಯು ಅಷ್ಟಾಗಿ ಒಳ್ಳೆಯ ಸ್ಥಿತಿಯಲ್ಲಿಲ್ಲ. ಇದರಲ್ಲಿ ಒಟ್ಟು ಇನ್ನೂರೈವತ್ತು ಪದ್ಯಗಳಿವೆ. ಈ ಶತಮಾನದ ಶುರುವಿನಲ್ಲಿ ಈ ಪದ್ಯಗಳ ಸಂಖ್ಯೆ ಏಳು ನೂರೆಂದು ನಮೂದಿತವಾಗಿತ್ತು. ಇದರ ಒಂದು ಪ್ರತಿಯು ಇಂದಿಗೂ ಪಂಢರಪುರದಲ್ಲಿದೆ. ಹೀಗಾಗಿ ಇಲ್ಲಿಯ ಪ್ರತಿಯನ್ನು ಸಂಶೋಧನೆಗೆಂದು ದೇವಾಲಯದ ವಿಶ್ವಸ್ತರಿಂದ ಪಡೆದು ವಿದ್ವಾಂಸರು ಅದನ್ನು ಹಾಳು ಮಾಡಿರುವುದು ಸ್ಪಷ್ಟ. ಇದು ತುಕಾರಾಮರು ತಮ್ಮ ಕೈಯಿಂದಲೇ ಬರೆದುದೆಂಬ ಬಗೆಗೆ ಮಾತ್ರ ಅಂತಹ ವಾದಗಳೇನಿಲ್ಲ. ಇದು ತುಕಾರಾಮರ ಇಂದಿನ ವಂಶದವರಿಗೆ ಅವರ ಹಿರಿಯರಿಂದ ಬಂದ ಬಳುವಳಿಯಾಗಿದೆ.
ತುಕಾರಾಮರಿಗೆ ಹಲವು ಜನ ಸಮಕಾಲೀನ ಅನುಯಾಯಿಗಳಿದ್ದರು. ವಾರಕರಿ ಯಾತ್ರೆಯ ಸಂಪ್ರದಾಯದಂತೆ, ತುಕಾರಾಮರು ಸಾರ್ವಜನಿಕರೆದುರು ಹಾಡಿದಾಗಲೆಲ್ಲ ಹೈದ್ನಾಲ್ಕು ಜನ ಅನುಯಾಯಿಗಳು ಅವರಿಗೆ ಹಿಮ್ಮೇಳವನ್ನು ಒದಗಿಸುತ್ತಿದ್ದರೆಂದು ಹೇಳಲಾಗುತ್ತದೆ. ತುಕಾರಾಮರ ಸಂಪಾದಿತವಾದ ಇಂದಿನ ಕವನ ಸಂಕಲನಗಳು ಮುಖ್ಯವಾಗಿ ಅವರ ಕೈಬರಹಗಳನ್ನು ಆಧರಿಸಿದವೆಂದು ಮನ್ನಿಸಲಾಗಿದೆ. ಅವರ ಒಟ್ಟು ಪದ್ಯಗಳ ಸಂಖ್ಯೆಯು ಸುಮಾರು ಎಂಟು ಸಾವಿರವೆಂದು ವಿದ್ವಾಂಸರು ನಂಬುತ್ತಾರೆ. ಇಂದಿಗೂ ಇದನ್ನು ಕುರಿತು ಸಂಶೋಧನೆ ಸಾಗಿದೆ. ಇ. ಸ. ೧೮೭೩ರಲ್ಲಿ, “ಮುಂಬಯಿ ಸರಕಾರದ ಆಶ್ರಯದಲ್ಲಿ ಇಂದು-ಪ್ರಕಾಶ ಮುದ್ರಣಾಲಯದಲ್ಲಿ ಮುದ್ರಿತ ಹಾಗೂ ಪ್ರಕಟಿತವಾದ ತುಕಾರಾಮರ ಕಾವ್ಯ ಸಂಕಲನೆಯು ಪ್ರಮಾಣಿತವಾದುದೆಂದು ಇಂದಿಗೂ ಒಪ್ಪಿಕೊಳ್ಳಲಾಗಿದೆ. ತುಕಾರಾಮರ ದೇಹಾವಸಾನದ ಮೂರು ನೂರನೆಯ ವರ್ಷ, ಇ. ಸ. ೧೯೫೦ರಲ್ಲಿ ಇದನ್ನು ವಿಮರ್ಶಾತ್ಮಕವಾದ ಮುನ್ನುಡಿಯೊಂದಿಗೆ ಮಹಾರಾಷ್ಟ್ರ ಸರಕಾರದಿಂದ ಮತ್ತೆ ಪ್ರಕಟಿಸಲಾಯಿತು. ತರುವಾಯದಲ್ಲಿ ಕಾಲ ಕಾಲಕ್ಕೆ ಮತ್ತೆ ಮತ್ತೆ ಇದನ್ನು ಮರುಮುದ್ರಿಸಲಾಗುತ್ತದೆ. ಈ ಸಂಕಲನದಲ್ಲಿ ಸರಿಯಾಗಿ ಅನುಕ್ರಮವನ್ನು ಹೊಂದಿದ ಒಟ್ಟು ೪೬೦೭ ಪದ್ಯಗಳಿವೆ.
ಒಟ್ಟಿನಲ್ಲಿ ನಮ್ಮೆದುರಿನ ಪರಿಸ್ಥಿತಿಯು ಹೀಗಿದೆ :
(೧) ತುಕಾರಾಮರ ಕೈಬರಹದಲ್ಲಿದ್ದ ಇಡಿಯ ಒಂದು ಕಾವ್ಯ ಸಂಕಲನವು ನಮ್ಮ ಬಳಿಯಿಲ್ಲ.
(೨) ನಮ್ಮ ಬಳಿ ಕೆಲವು ಸಮಕಾಲೀನ ಸಂಕಲನೆಗಳಿದ್ದರೂ ಅವು ಒಂದಕ್ಕೊಂದು ಸರಿಹೊಂದುವುದಿಲ್ಲ.
(೩) ಮೂಲ ಪಠ್ಯದೊಂದಿಗೆ ಸರಿಹೊಂದದ ಇನ್ನು ಕೆಲವು ಪಠ್ಯಗಳು ದೊರೆಯುತ್ತಿದ್ದರೂ ಅವುಗಳಲ್ಲಿ ಇನ್ನೆಲ್ಲೂ ಕಾಣಸಿಕ್ಕದ ಕೆಲವು ಪದ್ಯಗಳು ಸೇರ್ಪಡೆಗೊಂಡುದನ್ನು ಕಾಣುತ್ತೇವೆ.
ತುಕಾರಾಮರ ಕಾವ್ಯ-ಸಂಕಲನೆಯ ಬೇರೆ ಬೇರೆ ಪಾಠಾಂತರಗಳು ಲಭ್ಯವಿದ್ದು, ಅವು ವಾರಕರಿ ಸಂಪ್ರದಾಯದ ಮೌಖಿಕ ಪರಂಪರೆಯಿಂದ ಬರೆದು ತಯಾರಿಸಲಾದವು ಇಲ್ಲವೆ ಮೂಲದ ಸಂಕಲಿತ ಪ್ರತಿಯನ್ನು ಅಥವಾ ಸಮಕಾಲೀನ “ಸಂಪಾದಿತ” ಪ್ರತಿಗಳನ್ನು ನಕಲು ಮಾಡಿ ಪಡೆದುಕೊಂಡವುಗಳಾಗಿರುತ್ತವೆ.
ಗೋಜಲಿನ ಈ ಸಮಸ್ಯೆಯನ್ನು ತಜ್ಞರಿಗೆ ಒಪ್ಪಿಸುವುದು ಒಳ್ಳೆಯದು. ಒಟ್ಟಿನಲ್ಲಿ ಗಮನಕ್ಕೆ ತೆಗೆದುಕೊಳ್ಳಬೇಕಿದ್ದ ಸಂಗತಿ ಎಂದರೆ, ತುಕಾರಾಮರ ಈಗಿರುವ ಸಂಕಲನದ ಪ್ರತಿಯೊಂದು ಆವೃತ್ತಿಯಲ್ಲಿ ತಮಗೆ ತೋಚಿದಂದಂತೆ ಆಯ್ದುಕೊಂಡ ಪದ್ಯಗಳ ಗೊಂದಲವಿದ್ದು ಅವುಗಳಲ್ಲಿ ಕೆಲವೇ ಪದ್ಯಗಳು ವಿಷಯವಸ್ತು ಹಾಗೂ ಕ್ರಮದ ದೃಷ್ಟಿಯಿಂದ ಸರಿಯಾಗಿ ಜೋಡಿಸಲಾದವುಗಳು, ಎಂಬುದು. ಈ ಸಾಂಪ್ರದಾಯಿಕ ಪಠ್ಯಗಳ ಅನಾಮಿಕರಾದ “ಸಂಪಾದಕರು” ತಮ್ಮ ತಮ್ಮ ಸಂಪ್ರದಾಯಗಳಾಚೆಗೆ ಹೋಗಿ ಅವುಗಳ ವಿಷಯ ವಸ್ತುವಿನ ಸುಸಂಗತಿಯತ್ತ ತಮ್ಮ ಗಮನವನ್ನು ಹರಿಸಿದಂತಿಲ್ಲ.
ತುಕಾರಾಮರ ಜೀವನವು ನಿಗೂಢತೆಯಿಂದ ಕವಿದಿರಲು, ಅವರ ಬರವಣಿಗೆಯನ್ನು ತನ್ನ ಮೂಲಸ್ವರೂಪದಲ್ಲಿ ಕಾದಿರಿಸದಿರಲು ಕಾರಣವೆಂದರೆ ಅವರು ಶ್ರೇಣೀಕೃತ ಸಮಾಜದ ತೀರ ಕೆಳವರ್ಗದಲ್ಲಿ ಶೂದ್ರರಾಗಿ ಜನ್ಮತಳೆದುದು. ತುಕಾರಾಮರ ಕಾಲದ ಮಹಾರಾಷ್ಟ್ರದ ಸಂಪ್ರದಾಯನಿಷ್ಠ ಬ್ರಾಹ್ಮಣರು ತಾವಲ್ಲದೆ ಉಳಿದೆಲ್ಲ ವರ್ಣದವರನ್ನು ಶೂದ್ರರೆಂದು ಪರಿಭಾವಿಸುತ್ತಿದ್ದರು. ಶಿವಾಜಿ ರಾಜನು ಮೊದಲ ಬಾರಿಗೆ ಮರಾಠಾ ರಾಜ್ಯವನ್ನು ಸ್ಥಾಪಿಸಿದನು. ಹದಿನೇಳನೆಯ ಶತಮಾನದಲ್ಲಿ ಅವನ ರಾಜ್ಯವು ಉದಯಕ್ಕೆ ಬರುತ್ತಲೇ ಮಹಾರಾಷ್ಟ್ರದ ಎರಡಂತಸ್ತಿನ ಜಾತಿವ್ಯವಸ್ಥೆಯು ಪರಿವರ್ತನೆಗೊಂಡು ರಾಜರು ಹಾಗೂ ಸರದಾರರ ಹೊಸ ವರ್ಗಗಳನ್ನು ಕ್ಶತ್ರಿಯರೆಂದು ಮನ್ನಿಸಲಾಯಿತು.
ತುಕಾರಾಮರಂಥ “ಶೂದ್ರ”ನು ಮರಾಠಿಯ ಆಡುಭಾಷೆಯಲ್ಲಿ ಧಾರ್ಮಿಕ ವಿಷಯಗಳನ್ನು ಕುರಿತು ಬರೆಯಲು ಶುರು ಮಾಡಿದ್ದರಿಂದ ಬ್ರಾಹ್ಮಣರ ಏಕಸ್ವಾಮ್ಯದಮೇಲೆ ಇಬ್ಬದಿಯಿಂದ ಆಕ್ರಮಣವಾಯಿತು. ಬ್ರಾಹ್ಮಣರು ಮಾತ್ರ “ದೇವ ಭಾಷೆಯಾದ ಸಂಸ್ಕೃತ”, ಧಾರ್ಮಿಕ ಗ್ರಂಥಗಳು ಹಾಗೂ ಪ್ರವಚನಗಳನ್ನು ಓದಲು ಕಲಿಯಬಹುದಿತ್ತು. ಹದಿಮೂರನೆಯ ಶತಮಾನದ ಸಂತ-ಕವಿ ಜ್ಞಾನದೇವರಿಂದಲೇ ಭಿನ್ನಮತದ ವಾರಕರಿ ಸಂಪ್ರದಾಯವು ತಮ್ಮ ನಾಡ ನುಡಿಯಾದ ಮರಾಠಿಯನ್ನು ಧಾರ್ಮಿಕ ಅಭಿವ್ಯಕ್ತಿಗಳಿಗಾಗಿ ಬಳಸಲು ಆರಂಭಿಸಿ ಸಂಪ್ರದಾಯನಿಷ್ಠರ ಕೆಂಗಣ್ಣುಗಳಿಗೆ ಗುರಿಯಾಗಿತ್ತು. ತುಕಾರಾಮರ ಮೊದಲ ಅಪರಾಧವೆಂದರೆ ಅವರು ಮರಾಠಿಯಲ್ಲಿ ಬರೆಯಲು ಆರಂಭಿಸಿದ್ದುದು. ಅವರ ಎರಡನೆಯ ಹಾಗೂ ಮಿತಿಯಿಲ್ಲದ ಅಪರಾಧವೆಂದರೆ ಅವರು ಬ್ರಾಹ್ಮಣರಾಗಿ ಹುಟ್ಟದೆ ಇರುವುದು. ಹೀಗಾಗಿ ಆ ಧರ್ಮ ಇಲ್ಲವೆ ಅದನ್ನು ಕುರಿತಾದ ಯಾವುದೇ ಅಭಿಪ್ರಾಯವನ್ನು ಹೊಂದುವ ಅಧಿಕಾರವು ಅವರಿಗೆ ಇರಲಿಲ್ಲ. ಬ್ರಾಹ್ಮಣರು ತುಕಾರಾಮರ ಈ ಧಾರ್ಮಿಕ ಬರವಣಿಗೆಯನ್ನು ಒಂದು ಪಾಷಂಡಿ ಕೃತ್ಯವನ್ನಾಗಿ ಮತ್ತು ಜಾತಿವ್ಯವಸ್ಥೆಯ ಉಲ್ಲಂಘನೆಯನ್ನಾಗಿ ಕಂಡರು.
ತುಕಾರಾಮರು ತಮ್ಮ ಬಾಳಿನಲ್ಲೇ ಸಂಪ್ರದಾಯನಿಷ್ಠ ಬ್ರಾಹ್ಮಣರ ಕೋಪಕ್ಕೆ ಗುರಿಯಾಗಬೇಕಾಯಿತು. ತಮ್ಮೆಲ್ಲ ಹೊತ್ತಿಗೆಗಳನ್ನು ದೇಹುವಿನ ಇಂದ್ರಾಯಣಿಯಲ್ಲಿ ಮುಳುಗಿಸುವಂತೆ ಅವರ ಮೇಲೆ ಒತ್ತಾಯವನ್ನು ಹೇರಲಾಯಿತು. “ನಿನ್ನ ದೇವರು ನಿಜವಿದ್ದರೆ ಅವನು ಮುಳುಗಿದ ಈ ಹೊತ್ತಿಗೆಗಳನ್ನು ಮೇಲಕ್ಕೆ ತಂದುಕೊಡುವ”ನೆಂದು ಅವರನ್ನು ಅವಹೇಳನೆಗೆ ಗುರಿಪಡಿಸಲಾಯಿತು. ಆಗ ತುಕಾರಾಮರು ತಮ್ಮ ಹೊತ್ತಗೆಗಳನ್ನು ತಂದುಕೊಡಬೇಕೆಂದು ದೇವರಿಗೆ ಮೊರೆಹೊಕ್ಕು ಆಮರಣ ಉಪವಾಸಕ್ಕೆ ಕುಳಿತರು. ಹದಿಮೂರು ದಿನಗಳ ಉಪವಾಸದ ತರುವಾಯ ತುಕಾರಾಮರ ಹೊತ್ತಿಗೆಗಳು ನೀರಮೇಲೆ ತೇಲಿ ಬಂದವು. ಅವುಗಳಿಗೆ ಯಾವುದೇ ಬಗೆಯ ಧಕ್ಕೆ ತಗಲಿರಲಿಲ್ಲ.
ಈ ಜಲದಿವ್ಯ ಮತ್ತು ಪವಾಡಸದೃಶವಾಗಿ ತೇಲಿಬಂದ ಅವರ ಹೊತ್ತಿಗೆಗಳು ತುಕಾರಾಮರ ಕವಿ ಹಾಗೂ ಸಂತ ಜೀವನದ ಕೇಂದ್ರಬಿಂದುಗಳೆನ್ನಿಸಿವೆ. ಈಘಟನೆಯ ತರುವಾಯ ಅವರ ವಿರೋಧಿಗಳು ಕೆಲ ಕಾಲದವರೆಗೆ ತೆಪ್ಪಗೆ ಇರಬೇಕಾಯಿತೆಂದು ಕಾಣುತ್ತದೆ.
ಇದಾದ ಕೆಲ ಸಮಯದಲ್ಲೇ ತುಕಾರಾಮರು ಮತ್ತು ಪವಾಡವೆಂಬಂತೆ ಉಳಿದುಕೊಂಡ ಅವರ ಹೊತ್ತಿಗೆಗಳು ಕಣ್ಮರೆಯಾದವು. ತುಕಾರಾಮರನ್ನು ಕೊಲೆಮಾಡಿ ಅವರ ಕೈಬರಹಗಳನ್ನು ನಾಶಪಡಿಸಿರಬಹುದೆಂದು ಕೆಲವು ಜನ ಆಧುನಿಕ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆದರೆ ತುಕಾರಾಮರು ತಮ್ಮ ಜೀವಿತದ ಅವಧಿಯಲ್ಲೇ ಅದ್ಭುತವಾದ ಜನಪ್ರಿಯತೆಯನ್ನು ಪಡೆದಿದ್ದರಲ್ಲದೆ ಅವರ ಸಮಕಾಲೀನಳಾದ ಬಹಿಣಾಬಾಯಿಯಂಥ ಭಕ್ತ-ಕವಯಿತ್ರಿಗೆ “ಪಾಂಡುರಂಗನ ಅವತಾರರು” ಎನ್ನಿಸಿದ್ದರು. ಅವರ ಭಕ್ತರ ಕಣ್ಣು ತಪ್ಪಿಸಿ ಅವರನ್ನು ಕೊಲೆಗೈಯುವುದು ಇಷ್ಟು ಹಗುರಾದ ಸಂಗತಿಯಾಗಿರಲಿಲ್ಲ. ಹೀಗಾಗಿ ಇಂಥ ಮಾತನ್ನು ಅತಿರಂಜಿತ ಮತ್ತು ಉತ್ಪ್ರೇಕ್ಷೆಯಿಂದ ಕೂಡಿದುದೆಂದು ತಳ್ಳಿ ಹಾಕದೆ ಬೇರೆ ವಿಧಿಯಿಲ್ಲ.
ತುಕಾರಾಮರು ಕಣ್ಮರೆಯಾಗುವ ಹತ್ತೊಂಬತ್ತು ವರ್ಷ ಮೊದಲು ಶಿವಾಜಿ ರಾಜನು ಜನ್ಮ ತಳೆದಿದ್ದನು. ಆಗಿನ್ನೂ ಮರಾಠಾ ರಾಜ್ಯದ ಸ್ಥಾಪನೆ ನಡೆದಿರಲಿಲ್ಲ. ದಕ್ಷಿಣದ ನಾಡಿನಲ್ಲೆಲ್ಲ ರಾಜಕೀಯ ಅಲ್ಲೋಲಕಲ್ಲೋಲ ಉಂಟಾಗಿತ್ತು. ಪರಸ್ಪರರ ಹಗೆತನದ ಸೇನೆಗಳ ಕಾದಾಟಗಳ ತುಳಿತಕ್ಕೆ ಸಿಕ್ಕು ಮಹಾರಾಷ್ಟ್ರದ ಬಡ ಕೃಷಿಕರು ನಲುಗಿದ್ದರು.
ಇ. ಸ. ೧೬೨೯ರ ಸುಮಾರಿಗೆ ಭೀಕರವಾದ ಬರ ಬಿದ್ದಿತು. ಅದರ ಜೊತೆಗೆ ಎಲ್ಲೆಡೆಗೆ ಸಾಂಕ್ರಾಮಿಕ ಬೇನೆಗಳು ಹಬ್ಬಿದವು. ತುಕಾರಾಮರ ಮೊದಲ ಹೆಂಡತಿ, ರಖಮಾ ಇವಳು ದಮ್ಮು ರೋಗಿಯಾಗಿದ್ದಳಲ್ಲದೆ ಕ್ಷಯದಿಂದಲೂ ಬಳಲುತ್ತಿದ್ದಳೆಂದು ಕಾಣುತ್ತದೆ. ರಖಮಾ ಬದುಕಿದ್ದಾಗಲೇ ಅವರು ಜಿಜಾಳನ್ನು ಮದುವೆಯಾಗಿದ್ದರು. ಅವರು ರಖಮಾಳನ್ನು ತುಂಬ ಪ್ರೀತಿಸುತ್ತಿದ್ದರು. ಬರದಲ್ಲಿ ರಖಮಾ ಹಸಿವಿನಿಂದ ತೊಳಲುತ್ತ ಸಾವನ್ನಪ್ಪಿದಾಗ ಅವರು ಅಸಹಾಯರಾಗಿ, ಹೆದರಿ ಕಂಗಾಲಾಗಿ ಅವಳ ಸಾವನ್ನು ಕಣ್ಣಾರೆ ಕಂಡರು.
ಬರಗಾಲ ಬಂದು ಸಾವಿರಾರು ಕುಟುಂಬಗಳು ಸಾವನ್ನಪ್ಪಿದ ತರುವಾಯ ಒಂದು ವರ್ಷದೊಳಗಾಗಿ ಶಿವಾಜಿ ರಾಜನು ಜನ್ಮ ತಳೆದನು. ಮಹಾರಾಷ್ಟ್ರದ ಕೃಷಿಕರ ಅವಸ್ಥೆಯು ಬಲು ಕೆಟ್ಟಿತ್ತು. ಶಿವಾಜಿಯು ರಾಜನೆಂದು ಉದಯಕ್ಕೆ ಬರಲು ಇನ್ನೂ ಕೆಲ ಕಾಲ ಬೇಕಿತ್ತು. ಅವನು ರಾಜನಾದ ಬಳಿಕವೂ ಮೊಗಲರಂತಹ ಬಲಾಢ್ಯ ವೈರಿಯೊಡನೆ ಹೋರಾಡುವಲ್ಲಿ ಅವನ ಹೆಚ್ಚಿನ ಸಮಯವು ಕಳೆದರೂ ಅವನ ಕಿರಿಗಾಲದ ಆಳ್ವಿಕೆಯು ತುಂಬ ಜನಪ್ರಿಯವಾಗಿತ್ತು. ಅವನ ಯುದ್ಧನೀತಿಯು ಹೊಂಚು ಹಾಕಿ ಏರಿಹೋಗುವ ಗೆರಿಲ್ಲಾ ಪದ್ಧತಿಯದಾಗಿತ್ತು.
ತುಕಾರಾಮರ ಸುಮಾರು ಒಂದು ನೂರು ವರ್ಷಗಳ ತರುವಾಯ ಮಹಾರಾಷ್ಟ್ರದಲ್ಲಿ ತಕ್ಕ ಮಟ್ಟಿಗಿನ ಶಾಂತಿ ನೆಲೆಸಿತು. ವಾರಕರಿ ಸಂಪ್ರದಾಯವು ಆ ಕಲದಲ್ಲಿ ಹೇಗೋ ತಾಳಿ ಬಾಳಿದರೂ ಅದು ನಿಜವಾದ ಅರ್ಥದಲ್ಲಿ ಭದ್ರವಾದುದು ರಾಜಕೀಯ ಪರಿಸ್ಥಿತಿಯು ನೆಲೆನಿಂತ ಬಳಿಕವೇ ಎನ್ನಬೇಕು. ತುಕಾರಾಮರ ಮರಿಮಗನಾದ ಗೋಪಾಲಬುವಾ ಅವರು ಈ ಪುನರುತ್ಥಾನಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದರು. ಅಲ್ಲಿಯವರೆಗೆ ಸಾಕಷ್ಟು ಜನರು ತುಕಾರಾಮರ ಅನುಯಾಯಿಗಳಾಗಿ ಸೇರ್ಪಡೆ ಹೊಂದಿದರೂ ಆ ಸಂಪ್ರದಾಯದ ಸ್ಥಿತಿಯು ಅಷ್ಟೊಂದು ಒಳ್ಳೆಯದಾಗಿರಲಿಲ್ಲ.
* * *
ತುಕಾರಾಮರ ಜೀವನ ಹಾಗೂ ಅವರ ಸನ್ನಿವೇಶಗಳನ್ನು ಸಂಕ್ಷಿಪ್ತವಾಗಿ ಗಮನಿಸಿದರೆ ಅವರ ಕಾವ್ಯದಲ್ಲಿ ಕಂಡುಬರುವ ಐಹಿಕ ಮಟ್ಟದಲ್ಲಿರುವ ಅವರ ಅನುಭವಗಳ ವೈಶ್ವಿಕತೆಯು ಬೇರೊಂದು ವಿಶ್ವದ ಆಯಾಮವನ್ನು ಪಡೆದುಕೊಂಡುದನ್ನು ಕಾಣುತ್ತೇವೆ.
ತುಕಾರಾಮರು ತಮ್ಮ ತಂದೆತಾಯಿಗಳಿಗೆ ಎರಡನೆಯ ಮಗನಾಗಿದ್ದರು. ಬೋಲ್ಹೋಬ ಮತ್ತು ಕನಕಾಯಿ ಇವರು ಇನ್ನಿಬ್ಬರು ಮಕ್ಕಳು. ಬೋಲ್ಹೋಬರು ತಮ್ಮ ಹಿರಿಯರಿಂದ ಊರಿನ “ಮಹಾಜನ” ಹುದ್ದೆಯನ್ನು ವಾರಸಾಗಿ ಪಡೆದಿದ್ದರು. ಮಹಾಜನರು ಪ್ರತಿಷ್ಠಿತ ವ್ಯಾಪಾರಿಗಳ ಮನೆತನದವರಾಗಿದ್ದು ಊರಿನ ಕೆಲವು ವರ್ಗಗಳ ವ್ಯಾಪಾರಿಗಳ ಮೇಲೆ ನಿಯಂತ್ರಣವನ್ನು ಉಳಿಸಿಕೊಂಡು ಅವರಿಂದ ತೆರಿಗೆಯನ್ನು ವಸೂಲು ಮಾಡುವುದು ಅವರ ಕೆಲಸವಾಗಿತ್ತು. ತುಕಾರಾಮರ ಕುಟುಂಬದವರು ದೇಹೂ ಊರಿನ ಇಂದ್ರಾಯಣಿ ನದಿಯ ದಂಡೆಯ ಮೇಲಿನ ಬಲು ದೊಡ್ಡ ಕ್ಷೇತ್ರದ ಫಲವತ್ತಾದ ಹೊಲದ ಒಡೆಯರಾಗಿದ್ದರು. ಈ ಮನೆತನದ ಹಲವು ತಲೆಮಾರಿನವರು ಇಲ್ಲಿ ಉಳುಮೆಯನ್ನು ಮಾಡಿ ಬಂದ ಉತ್ಪನ್ನಗಳನ್ನು ಮಾರುವ ವ್ಯಾಪಾರಿಗಳೆಂದೂ ಗುರುತಿಸಲ್ಪಟ್ಟಿದ್ದರು. ಬ್ರಾಹ್ಮಣರು ಇವರನ್ನು ಶೂದ್ರರೆಂದು ಗುರುತಿಸಿದರೂ ಈ ಮನೆತನದವರು ಸಾಂಸ್ಕೃತಿಕವಾಗಿಯಾಗಲಿ ಇಲ್ಲವೆ ಸಾಮಾಜಿಕವಾಗಿಯಾಗಲಿ ಹಿಂದುಳಿದವರಗಿರಲಿಲ್ಲ. ಇವರು ವೃತ್ತಿಯಿಂದ ವ್ಯಾಪಾರಿಗಳಾಗಿದ್ದರೂ (ವೈಶ್ಯ ವರ್ಣದವರು) ಓದು-ಬರಹಗಳನ್ನು ಬಲ್ಲವರಾಗಿದ್ದು, ತಮ್ಮ ವ್ಯಾಪಾರ-ವಹಿವಾಟುಗಳ ಹಣಕಾಸಿನ ಲೆಕ್ಖಪತ್ರಗಳನ್ನು ಸರಿಯಾಗಿ ಇಡಬಲ್ಲವರಾಗಿದ್ದರು. ತುಕಾರಾಮರು ಈ ಬಗೆಯ ತರಬೇತಿಯನ್ನು ಪಡೆದವರಾಗಿದ್ದರೆಂದು ಕಾಣುತ್ತದೆ. ಅವರ ಉಳಿದೆಲ್ಲ ಕಲಿಕೆಯು ಅವರಿಗೆ ದೊರೆತ ಬೇರೆ ಬೇರೆ ಬಗೆಯ ಮೂಲಗಳಿಂದ ಬಂದುದು. ದೇಹುವಿನಂಥ ಸಣ್ಣ ಹಳ್ಳಿಯ ಸನ್ನಿವೇಶವನ್ನು ಗಮನಿಸಲಾಗಿ, ತುಕಾರಾಮರಲ್ಲಿದ್ದ ಮಾಹಿತಿ ಹಾಗೂ ಅವರ ಕಲಿಕೆಯ ಆಳಗಳು ನಮ್ಮಲ್ಲಿ ಅಚ್ಚರಿಯನ್ನು ಉಂಟುಮಾಡುತ್ತವೆ. ತುಕಾರಾಮರ ಹೆತ್ತವರ ಬೇಗನೆಯ ಸಾವು ಮತ್ತು ಅಣ್ಣನ ವಿರಕ್ತಿಗಳಿಂದಾಗಿ ಬಲು ಚಿಕ್ಕ ವಯಸ್ಸಿನಲ್ಲಿಯೇ ಮನೆಯ ಹೊರೆಯೆಲ್ಲ ಅವರ ಮೇಲೆ ಬಂದುಬಿದ್ದಿತು. ಅವರು ಎರಡನೆಯ ಮದುವೆಯಾದುದನ್ನು ಈಗಾಗಲೆ ಹೇಳಿಯಾಗಿದೆ. ಅವರಿಗೆ ಆರು ಜನ ಮಕ್ಕಳು, ಜೊತೆಗೆ ಒಬ್ಬ ತಮ್ಮನಿದ್ದನು.
ತುಕಾರಾಮರು ಇಪ್ಪತ್ತೊಂದು ವಯಸ್ಸಿನವರಾಗುವ ಹೊತ್ತಿಗೆಂದರೆ ತಮ್ಮ ತಂದೆ, ತಾಯಿ, ಮಡದಿ, ಮಕ್ಕಳೆಂದು ಹಲವರ ಸಾವುಗಳನ್ನು ಕಂಡಿದ್ದರು. ಇ. ಸ. ೧೬೨೯ರ ಬರದಲ್ಲಿ ಆದ ಮಡದಿಯ ಸಾವಂತೂ ಅವರ ಪಾಲಿಗೆ ಬಲು ದೊಡ್ಡ ಆಘಾತವಾಗಿತ್ತು. ಅವರು ಮಾನವನ ಅವಸ್ಥೆಯ ಭಯಂಕರತೆಯನ್ನು ವ್ಯಕ್ತಪಡಿಸುವುದು ಈ ಅನುಭವಗಳನ್ನು ಆಧರಿಸಿಯೇ. ಬರದ ತರುವಾಯ ತುಕಾರಾಮರು ಮನೆಯನ್ನು ನಿಭಾಯಿಸುವತ್ತ ಉದಾಸೀನರಾದರು. ಅವರಿಗೆ ಕೃಷಿಯಲ್ಲೂ, ವ್ಯಾಪಾರದಲ್ಲೂ ಆಸ್ಥೆ ಉಳಿಯಲಿಲ್ಲ. ಮೊದಲು ಬರ ಹಾಗೂ ತರುವಾಯ ನಾವರಿಯದ ಕೆಲವು ಕಾರಣಗಳಿಂದಾಗಿ ತುಕಾರಾಮರ ಕುಟುಂಬವು ಎಲ್ಲ ಬಗೆಯ ಅಭಾವ ಮತ್ತು ಮುಂದೆ ದಿವಾಳಿಯನ್ನು ಎದುರಿಸಬೇಕಾಯಿತು. ಅವರು ತಮ್ಮ ಸಾಲಗಳನ್ನು ಹಿತಿರುಗಿಸಲಾಗದ ಕಾರಣ ಗ್ರಾಮ ಸಭೆಯು ಅವರ ಮಹಾಜನ ಹುದ್ದೆಯನ್ನು ಕಿತ್ತುಕೊಂಡಿತಲ್ಲದೆ ಅವರ ಮೇಲೆ ಕೆಲವು ನಿರ್ಬಂಧಗಳನ್ನು ಹೇರಿತು. ಅವರು ಊರಿನ ಗೌಡರ ಕೋಪಕ್ಕೂ ಗುರಿಯಾದರು.
ತುಕಾರಾಮರು ಪೂರ್ತಿಯಾಗಿ ಅಂತರ್ಮುಖರಾದರು. ಅವರು ಜನರ ಸಹವಾಸವನ್ನು ತಪ್ಪಿಸತೊಡಗಿದರು. ಅವರು ಒಂದು ಮೂಲೆಯಲ್ಲಿ ಕುಳಿತು ಚಿಂತನೆಗೆ ತೊಡಗುತ್ತಿದರು. ಮುಂದೆ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ದೀರ್ಘ ಕಾಲ ಸುತ್ತಲು ಶುರು ಮಾಡಿದರು. ಇತ್ತ ಅವರ ಮಡದಿಯು ತನ್ನನ್ನು ಮತ್ತು ಮಕ್ಕಳನ್ನು ಕಾಪಾಡಿಕೊಳ್ಳಬೇಕಾಗುತ್ತಿತ್ತು.
ದೇಹೂ ಊರಿನ ಅಂಬಿಲೆ (ಮೋರೆ) ಮನೆತನದವರು ತಲೆತಲಾಂತರಗಳಿಂದ ನಿಷ್ಠಾವಂತರಾದ ವಾರಕರಿಗಳಾಗಿದ್ದರು. ಪಂಢರಪುರದ ವಿಠೋಬನು ಅವರ ಕುಲದೇವನಾಗಿದ್ದನು. ತುಕಾರಾಮರ ಹಿಂದಿನ ತಲೆಮಾರುಗಳಲ್ಲಿ ಒಬ್ಬರು ವಿಠ್ಠಲನ ಒಂದು ದೇವಾಲಯವನ್ನು ದೇಹುವಿನ ತಮ್ಮ ನೆಲದಮೇಲೆ ಕಟ್ಟಿಸಿದ್ದರು. ತುಕಾರಾಮರ ಜೀವನದಲ್ಲಿ ನಡೆದ ಭಯಂಕರ ನೋವಿನ ಘಟನೆಗಳು ಅವರನ್ನು ಮರುಚಿಂತನೆಗೆ ತೊಡಗಿಸಿದುದಷ್ಟೇ ಅಲ್ಲದೆ ತಮ್ಮ ಮನೆತನದವರೆಲ್ಲ ಶ್ರದ್ಧೆಯನ್ನಿರಿಸಿದ ದೇವನತ್ತ ಹೊರಳುವಂತೆ ಮಾಡಿದವು. ತಮ್ಮ ಮನೆಯ ಅವಸ್ಥೆ ತುಂಬ ಬಿಕಟವಾಗಿರುವಾಗಲೂ ತುಕಾರಾಮರು ಆ ದೇವಾಲಯದ ನಿರಾಶಾಜನಕವಾದ ಜೀರ್ಣಾವಸ್ಥೆಯನ್ನು ಕಂಡು, ಮರುಗಿ ಅದರ ಪುನರುತ್ಥಾನವನ್ನು ಕೈಕೊಂಡರು.
ಈಗ ತುಕಾರಾಮರು ಹಿಂದಿನ ಸಂತಕವಿಗಳು ರಚಿಸಿದ ಭಕ್ತಿಯ ಪದಗಳನ್ನು ಹಾಡುತ್ತ ದೇವಾಲಯದಲ್ಲಿ ಇಲ್ಲವೆ ಅದರ ಪ್ರಾಕಾರದಲ್ಲಿ ಹೆಚ್ಚಿನ ಸಮಯವನ್ನು ಕಳೆಯತೊಡಗಿದರು. ಅವರು ತಮ್ಮ ಮಡದಿ ಹಾಗೂ ಊರಿನ ಸ್ನೇಹಿತರ ಕೂಟದವರು ಹೊಟ್ಟೆ ಹೊರೆದುಕೊಳ್ಳಲು ಹೇಳಿದ ಹಿತದ ಮಾತುಗಳಿಗೆ ಕಿವಿಗೊಡಲಿಲ್ಲ. ಹೀಗಾಗಿ ಅವರೆಲ್ಲ ಇದನ್ನು ತುಕಾರಾಮರ ಹುಚ್ಚು ಎಂದು ಬಗೆದರು. ಆದರೆ ದೇವರ ಬಗೆಗಿನ ಅವರ ಭಕ್ತಿ ಹಾಗೂ ಜನರ ಬಗೆಗಿನ ದಯೆಯು ಅವರಿಗೆ ನಿಧಾನವಾಗಿ ಜನರ ಮೆಚ್ಚುಗೆಯನ್ನು ಗಳಿಸಿ ಕೊಟ್ಟವು.
ಈ ಸುಮಾರಿಗೆ ಒಂದು ಸಲ ಸಂತಕವಿ ನಾಮದೇವ ಹಾಗೂ ತುಕಾರಾಮರ ದೇವನಾದ ವಿಠ್ಠಲನು ತುಕಾರಾಮರ ಕನಸಿನಲ್ಲಿ ಬಂದು ಅವರಿಗೆ ಕಾವ್ಯವನ್ನು ಬೋಧಿಸಿದನಲ್ಲದೆ ಕಾವ್ಯವನ್ನು ತಯಾರಿಸುವುದೇ ಅವರ ಜೀವನದ ಗುರಿಯಾಗಲಿದೆಯೆಂದು ಹೇಳಿದನು. ಈ ಕಾವ್ಯವೆಂದರೆ ವಿಠ್ಠಲನನ್ನು ಸ್ತುತಿಸುತ್ತ ಹಾಡಬಹುದಾದ ಭಕ್ತಿಪರವಾದ “ಅಭಂಗ”ಗಳೇ ಸರಿ. ಆ ಕನಸಿನಲ್ಲಿ “ಒಂದು ದಶಲಕ್ಷ ಅಭಂಗಗಳನ್ನು ರಚಿಸುವೆ”ನೆಂದು ಸಂತಕವಿ ನಾಮದೇವರು ವಿಠ್ಠಲನೆದುರು ಪ್ರಮಾಣ ಮಾಡಿದ ಸಂಗತಿಯ ಉಲ್ಲೇಖವು ಬರುತ್ತದೆ. ಆದರೆ ನಾಮದೇವರಿಗೆ ತಮ್ಮ ಬಾಳಿನಲ್ಲಿ ಇದನ್ನು ಈಡೇರಿಸಲಾಗಲಿಲ್ಲ. ತುಕಾರಾಮರು ಆಗ ಸಮಾಧಿ ಅವಸ್ಥೆಯಲ್ಲಿದ್ದ ಕಾರಣ ಅವರು ಈ ಹೇಳಿಕೆಯ “ವಾಸ್ತವತೆ”ಯನ್ನು ಸ್ಪಷ್ಟವಾಗಿ ಮನಗಂಡರು. ಇದರಿಂದ ಅವರ ಜೀವನವು ಮಾರ್ಪಾಟು ಹೊಂದಿತು. ಅವರು ತಮ್ಮ ನಿಜವಾದ ವೃತ್ತಿಯನ್ನು ಪಡೆದುಕೊಂಡರು.
ತುಕಾರಾಮರು ಕವಿಗಳಾಗಿದ್ದರೆನ್ನುವ ದೈವೀ ಸಾಕ್ಷಾತ್ಕಾರವು ಅವರನ್ನು ಸಮಾಧಿ ಅವಸ್ಥೆಗೆ ಕೊಂಡೊಯ್ಯಲಿಲ್ಲ. ಬದಲು, ಅವರು ಕಾತರ, ಸಂದೇಹ ಮತ್ತು ಒಳ ಅರಿವಿನ ತೀವ್ರ ಯಾತನೆಗಳಿಗೆ ಒಳಗಾದರು. ತುಕಾರಾಮರ ಪ್ರಮುಖ ವೈಶಿಷ್ಟ್ಯವೆಂದರೆ ಅವರ ಸಂಪೂರ್ಣ ವಿಶ್ವಸನೀಯತೆ ಹಾಗೂ ಸ್ವಂತಕ್ಕೆ ಹೊಣೆಗಾರನಾಗಿರುವ ಗುಣ. ಅವರು ಕಾವ್ಯದಲ್ಲಿ ಕೂಡ ಒಂದು ಸುಳ್ಳನ್ನು ಹೇಳಿದವರಲ್ಲ. ವಿಠ್ಠಲನನ್ನು ಸ್ತುತಿಸುವ ಪದ್ಯಗಳನ್ನು ರಚಿಸುವುದು ತಮ್ಮ ಬಾಳಿನ ಕಾಯಕವಾಗಿತ್ತೆಂಬ ಅರಿವು ಅವರನ್ನು ತಳಮಳ ಹಾಗೂ ಅಶಾಂತಿಗಳಿಗೆ ಒಳಪಡಿಸಿತು. ಅವರು ಮೊದಲೆಂದಿಗೂ ದೇವರ ಅನುಭವವನ್ನು ಪಡೆದಿರಲಿಲ್ಲ. ತಾವು ಕಂಡರಿಯದ ಅವನನ್ನು ಅವರು ಹೇಗೆ ವರ್ಣಿಸಬಲ್ಲವರಾಗಿದ್ದರು? ಅವರೊಬ್ಬ ಪ್ರಾಮಾಣಿಕರಾದ ವ್ಯಾಪಾರಿಗಳಾಗಿದ್ದರು. ತಾವು ಮಾರುವ ಪ್ರತಿಯೊಂದು ಸರಕಿನ ಗುಣವತ್ತೆಯನ್ನು ಖಚಿತವಾಗಿ ಬಲ್ಲವರಾಗಿದ್ದರು. ಸರಕನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಿದ ಬಳಿಕವೇ ಅದನ್ನು ಕೊಂಡುಕೊಳ್ಳುತ್ತಿದ್ದರು. ಅವರು ತಮ್ಮ ಯಾವುದೇ ವ್ಯವಹಾರದಲ್ಲಿ ಯಾರಿಗೂ, ಎಂದಿಗೂ ಮೋಸ ಮಾಡುತ್ತಿರಲಿಲ್ಲ. ಇಷ್ಟೇ ಅಲ್ಲದೆ ತಮ್ಮನ್ನು ಮೋಸ ಮಾಡಲು ಬಿಡುತ್ತಿರಲಿಲ್ಲ. ತುಕಾರಾಮರು ಮೊದಲಿನಿಂದಲೇ ಕಾವ್ಯವನ್ನು ಒಂದು ಗಂಭೀರ ವೃತ್ತಿಯನ್ನಾಗಿ ಪರಿಗಣಿಸಿದರು. ಅವರಿಗೆ ಇಡಿಯ ಕಾವ್ಯ ಹಾಗೂ ಧರ್ಮಗಳು ಅನುಭವವನ್ನು ಆಧರಿಸಿದ ಸಂಗತಿಗಳಾಗಿದ್ದವು. ಅನುಭವ ಇಲ್ಲವೆ “ಸಾಕ್ಷಾತ್ಕಾರ”ವು ತುಂಬ ನಿರ್ಣಾಯಕ ಪರೀಕ್ಷೆಯೆನ್ನಿಸಿತ್ತು. ಈ ಸುಮಾರಿಗೆ ಬರೆದ ಅವರ ಒಂದು ಪದ್ಯದಲ್ಲಿ ಅವರು “ ಅನುಭವವನ್ನು ಪಡೆಯುವರೆಗೆ ನಾನು ಹಾಡಲಾರೆ. ಎಲೆ ವಿಠ್ಠಲನೆ, ನಿನ್ನ ಅಸ್ತಿತ್ವದ ನೇರ ಅನುಭವ ನನಗಿಲ್ಲ. ನಿನ್ನನ್ನು ಕುರಿತು ಹೇಗೆ ಬರೆಯಲಿ? ”,ಎನ್ನುತ್ತಾರೆ. ಹೀಗಾಗಿ ದೇವರಿಗಾಗಿ ಇರುವ ಹಾತೊರೆತವು ತುಕಾರಾಮರ ಕಾವ್ಯಲೇಖನದ ಆರಂಭ ಕಾಲದ ಮುಖ್ಯ ವಿಷಯವಸ್ತುವಾಗಿದೆ. ತಾವು ದೇವರ ಕವಿಯಾಗಲಿರುವೆವೆಂಬ ಅರಿವು ಮೂಡುವವರೆಗೂ ಅವರು ತಾವು ಕಂಡಂತೆ ತಮ್ಮ ಹಾಗೂ ಮಾನವನ ಅವಸ್ಥೆಯನ್ನು ಕುರಿತು ನಮೂದಿಸುತ್ತಿದ್ದರು.
ಕವಿಗಳಾದ ಬಳಿಕ ತುಕಾರಾಮರು ದೀರ್ಘ ಕಾಲದ ವರೆಗೆ ಮನುಷ್ಯರಿಂದ, ಸಮಾಜದಿಂದ ದೂರಕ್ಕೆ ತೆರಳಿ ಧ್ಯಾನ ಮತ್ತು ಜ್ಞಾನಗಳ ಸಾಧನೆಗೆ ತೊಡಗುತ್ತಿದ್ದರು. ದೇಹುವಿನ ಹತ್ತಿರದಲ್ಲಿರುವ ಎರಡು ಗುಡ್ಡಗಳು ಅವರಿಗೆ ಬಲು ಪ್ರೀತಿಯ ಏಕಾಂತದ ಸ್ಥಾನಗಳಾಗಿದ್ದವು. ಮೊದಲನೆಯದು ಭಂಡಾರಾ ಗುಡ್ಡ. ಇಲ್ಲಿ ಬೌದ್ಧರ ಕಲದಿಂದಲೂ ಒಂದು ಗುಹೆಯಿದೆ. ಅವರು ಅದರಲ್ಲಿ ಕುಳಿತು ಅಭಂಗಗಳನ್ನು ರಚಿಸಿದರು. ಎರಡನೆಯದು ಭಾಮಚಂದ್ರ ಗುಡ್ಡ. ಕೆಲವು ವರ್ಷಗಳ ತರುವಾಯ ಅಲ್ಲಿ ಹದಿನೈದು ದಿನಗಳ ಕಾಲ ಧ್ಯಾನಕ್ಕೆ ಕುಳಿತು ಅವರು ಆಧ್ಯಾತ್ಮಿಕ ಅನುಭವ ಹಾಗೂ ದಿವ್ಯಾನಂದಗಳನ್ನು ಪಡೆದರು. ತುಕಾರಾಮರು ಇನ್ನೊಂದೆಡೆಗೆ ಹೇಳಿದ ಗುರುವಿನ ಉಪದೇಶದಿಂದ ಪಡೆಯಲಾಗುವ ಧ್ಯಾನಾವಸ್ಥೆಗಿಂತ ಈ ವಿಶೇಷ ಘಟನೆಯು ಭಿನ್ನವಾದುದು. ಈ ಎರಡನೆಯ ಸಂದರ್ಭದಲ್ಲಿ ತಾವು ಸ್ನಾನಕ್ಕೆಂದು ನದಿಗೆ ಹೊರಟಾಗ ಅಕಸ್ಮಾತ್ತಾಗಿ ಒಬ್ಬ ಸತ್ಪುರುಷರು ಎದುರಾಗಿ ತಮ್ಮ ತಲೆಯ ಮೇಲೆ ಕೈಯಿರಿಸಿ, “ರಾಮ ಕೃಷ್ಣ ಹರಿ”ಎಂಬ ಒಂದು ಮಂತ್ರವನ್ನು ನೀಡಿದಂತೆ ತುಕಾರಾಮರು ಕನಸು ಕಂಡರು. ತಮ್ಮ ಹೆಸರು “ಬಾಬಾಜಿ” ಎಂದಿದ್ದು, ತಾವು ರಾಘವ ಚೈತನ್ಯ ಮತ್ತು ಕೇಶವ ಚೈತನ್ಯರ ಗುರು ಪರಂಪರೆಯವರೆಂದು ಆ ಸತ್ಪುರುಷರು ಹೇಳಿದರಂತೆ. ಆ ಮಂತ್ರವು ದೊರೆಯುತ್ತಲೇ ತುಕಾರಾಮರಿಗೆ ತಮ್ಮ ಇಡಿಯ ವ್ಯಕ್ತಿತ್ವವೇ ಜೀವಂತಿಕೆಯನ್ನು ತಳೆದಂತೆ ಅನ್ನಿಸಿತಂತೆ. ಹಿಂದೆಂದಿಗೂ ತಾವು ಅರಿಯದ ಪೂರ್ಣತೆಯನ್ನು ಅನುಭವಿಸಿದರಂತೆ.
ತುಕಾರಾಮರೇ ಖುದ್ದಾಗಿ ತಮ್ಮೀ ಅನುಭವಗಳನ್ನು ತಮ್ಮ ಅಭಂಗಗಳಲ್ಲಿ ವರ್ಣಿಸಿದ್ದಾರೆ. ಹೀಗಾಗಿ ಅವುಗಳನ್ನು ಕುರಿತು ಯಾವುದೇ ಬಗೆಯ ಅಸ್ಪಷ್ಟತೆಗೆ ಆಸ್ಪದವಿಲ್ಲ. ಆದರೆ ದುರದೃಷ್ಟದ ಸಂಗತಿಯೆಂದರೆ, ಈ ಘಟನೆಗಳ ಕ್ರಮವನ್ನು ಕರಾರುವಾಕ್ಕಾಗಿ ನಿರ್ಧರಿಸುವುದು ಕಷ್ಟ. ಎರಡನೆಯ ಅನುಭವವು ದೊರೆತಾಗ ತುಕಾರಾಮರು ಸುಮಾರು ಮೂವತ್ತು ವರ್ಷದವರಾಗಿರಬಹುದು. ತುಕಾರಾಮರ ಇಂದಿನ ಪ್ರಮುಖ ಚರಿತ್ರಕಾರರಾದ ದಿ. ವಿ. ಎಸ್. ಬೇಂದ್ರೆಯವರು ತುಕಾರಾಮರ ಕನಸಿನಲ್ಲಿ ‘ಬಾಬಾಜಿ”ಯವರು ನೀಡಿದ ಗುರೂಪದೇಶ ಹಾಗೂ ಅವರ ಗುರುಪರಂಪರೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಭಕ್ತಿಯ ಬೇರುಗಳು ಜನಪದ ಧರ್ಮದಲ್ಲಿವೆಯೆಂದು ನನ್ನ ಸಂದೇಹ. ಹೀಗಾಗಿ ಬ್ರಾಹ್ಮಣರು ಮತ್ತು ಸವರ್ಣ ಹಿಂದುಗಳು ಯಾವಾಗಲೂ ಒಬ್ಬ ಭಕ್ತನನ್ನು “ಯೋಗಿ”ಯೆಂದು ಪ್ರತಿಪಾದಿಸಿ ಇಲ್ಲವೆ ಅವನಿಗೆ ಒಂದು ಬಗೆಯ ನಿಗೂಢವಾದ “ಗುರೂಪದೇಶ”ವನ್ನು ನೀಡಿ ಅವನನ್ನು “ಮೇಲ್ದರ್ಜೆಗೆ” ಏರಿಸುತ್ತಾರೆ. ಬೇಂದ್ರೆಯವರು “ಯೋಗದ” ಮತ್ತು ಸೂಕ್ತನಾದ ಒಬ್ಬ ಗುರುವಿನ “ಮಾಂತ್ರಿಕ” ಗುರೂಪದೇಶಗಳ ವಿಧಿಗಳ ಮೂಲಕ ತುಕಾರಾಮರ “ಸಂಸ್ಕೃತಕರಣ”ಕ್ಕಾಗಿ ಯತ್ನಿಸುತ್ತಿರುವರೆಂಬುದು ನನ್ನ ಭಾವನೆ. ಸ್ವಾಭಾವಿಕವಾದ ಮತ್ತು ಸ್ವಂತಿಕೆಯಿಂದ ತಯಾರಾದ ಒಬ್ಬ ಭತ್ತನನಿಗೆ ವಿಶ್ವಾಸಾರ್ಹತೆಯನ್ನು ಒದಗಿಸುವ ಯತ್ನವೆನ್ನಿಸುತ್ತದೆ. ಆದರೆ ನನಗೆ ಈ ಕಥೆಗಳ ಅರ್ಥ ಕಾಣುವುದು ತೀರ ವಿರುದ್ಧವಾಗಿ : “ಶೂದ್ರ”ನಿಗೆ “ಕನಸಿನಲ್ಲಿ” ಇಲ್ಲವೆ ಸಮಾಧಿಯಲ್ಲಿ ಮಾತ್ರ ಒಬ್ಬ ಗುರುವು ಕಾಣಲು ಸಾಧ್ಯ, ಎಂಬುದು.
ಈಗ ತುಕಾರಾಮರ ಜೀವನದ ಕೊನೆಯ ಮತ್ತು ನೇತ್ರದೀಪಕವಾದ ದಶಕವು ಶುರುವಾಗಿತ್ತು. ಆಗ ಅವರ ವಯಸ್ಸು ಕೇವಲ ಮೂವತ್ತು. ಅವರು ಕಳೆದ ಹತ್ತು ವರ್ಷಗಳಿಂದ ಕಾವ್ಯವನ್ನು ಬರೆಯುತ್ತಿದ್ದರು. ತುಕಾರಾಮರು ತಮ್ಮ ಗತ ಜೀವನ ಮತ್ತು ದೇವನನ್ನು ಅರಸುವಲ್ಲಿಯ ತಮ್ಮ ಅಳಲನ್ನು ಕುರಿತು ಬಲು ಪ್ರಾಮಾಣಿಕತೆಯಿಂದ ಬರೆದಿರುವರು. ಇತ್ತೀಚೆಗೆ ಪಡೆದ ಆಧ್ಯಾತ್ಮಿಕ ಜ್ಞಾನೋದಯದಿಂದಾಗಿ ಅವರ ಕಾವ್ಯವು ಭಾವಗೀತೆಯ ಐಂದ್ರಜಾಲಿಕ ಗುಣವತ್ತೆಯನ್ನು ಹೊಂದಿತ್ತು. ಅವರ ಗೀತೆಗಳು ದೂರ ದೂರದ ಜನರನ್ನು ತಮ್ಮತ್ತ ಸೆಳೆದುಕೊಳ್ಳತೊಡಗಿದವು. ಯುವ ವಯಸ್ಸಿನ ಕವಯಿತ್ರಿ, ಬಹಿಣಾಬಾಯಿಯು ತುಕಾರಾಮರ ಮನೆಯ ಹತ್ತಿರದ ವಿಠ್ಠಲನ ದೇವಾಲಯದಲ್ಲಿ ನಡೆವ ಅವರ ಭಕ್ತಿ ಕೀರ್ತನೆಗಳನ್ನು ಆಲಿಸಲೆಂದೇ ದೂರದ ಕೊಲ್ಹಾಪುರದಿಂದ ದೇಹುವಿಗೆ ಬಂದಳು. ಇದನ್ನು ಕುರಿತಾದ ಬಹಿಣಾಬಾಯಿಯ ಬರವಣಿಗೆಯು, ತುಕಾರಾಮರು ಕಣ್ಮರೆಯಾಗುವ ಕೆಲವೇ ಕಾಲದ ಮೊದಲಿನದಾಗಿದೆ. ಇದರಿಂದಾಗಿ ಮಹಾರಾಷ್ಟ್ರದ ತುಂಬೆಲ್ಲ ತುಕಾರಾಮರ ಸಮಕಾಲೀನರ ಮೇಲೆ ಅವರ ಅದೆಂತಹ ಅದ್ಭುತವಾದ ಪ್ರಭಾವವು ಇದ್ದಿತೆನ್ನುವುದರ ಕಲ್ಪನೆ ನಮಗೆ ಬರುತ್ತದೆ. ತುಕಾರಾಮರ ಜಲದಿವ್ಯವು ಬಹಿಣಾಬಾಯಿಯ ದೇಹುವಿನ ಭೇಟಿಯ ಮೊದಲು ನಡೆದಿತ್ತು. ಹದಿಮೂರು ದಿನಗಳ ತರುವಾಯ ನದಿಯ ನೀರಿನ ಮೇಲೆ ಪವಾಡಸದೃಶವಾಗಿ ತೇಲಿಬಂದ ಹೊತ್ತಿಗೆಗಳ ಘಟನೆಯು, ತುಕಾರಾಮರು ಬದುಕಿರುವಾಗಲೇ ಅವರ ಜೀವನಕ್ಕೆ ಒಂದು ಆಖ್ಯಾಯಿಕೆಯ ಮಟ್ಟವನ್ನು ದೊರಕಿಸಿ ಕೊಡುವಲ್ಲಿ ಮುಖ್ಯವಾಗಿತ್ತು. ಬಹಿಣಾಬಾಯಿಯು ತಮ್ಮ ಅಭಂಗಗಳನ್ನು ಹಾಡುವ ತುಕಾರಾಮರನ್ನು “ಪಾಂಡುರಂಗನ ಅವತಾರ”ರೆಂದು ವರ್ಣಿಸಿದ್ದಾಳೆ. “ತುಕಾರಾಮರು ಬರೆದುದೆಲ್ಲವೂ ದೇವರೇ ಬರೆದುದು”, ಎನ್ನುತ್ತಾಳೆ, ಅವಳು.
ತುಕಾರಾಮರು ತಮ್ಮ ನಲವತ್ತೊಂದನೆಯ ವಯಸ್ಸಿಗೆ ಕಣ್ಮರೆಯಾದರು. ವಿಠ್ಠಲನೇ ಅವರನ್ನು “ಬೆಳಕಿನ ರಥದಲ್ಲಿ” ಕುಳ್ಳಿರಿಸಿಕೊಂಡು ಸ್ವರ್ಗಕ್ಕೆ ಕರೆದೊಯ್ದನೆಂದು ವಾರಕರಿಗಳು ನಂಬುತ್ತಾರೆ. ತುಕಾರಾಮರು ದೇಹುವಿನ ಇಂದ್ರಾಯಣಿಯ ದಡದಲ್ಲಿ ಭಾವಪರವಶರಾದ ಶ್ರೋತೃಗಳೆದುರು ತಮ್ಮ ಅಭಂಗಗಳನ್ನು ಹಾಡುತ್ತಿರುವಗಲೇ ತೆಳ್ಳನೆಯ ಹವೆಯಲ್ಲಿ ತೇಲುತ್ತ ಕಣ್ಮರೆಯಾದರೆಂದು ಕೆಲವರು ನಂಬುತ್ತಾರೆ. ಅವರ ವೈರಿಗಳು ಅವರನ್ನು ಕೊಲೆಗೈದರೆಂದು ಇನ್ನು ಕೆಲವರು ನಂಬುತ್ತಾರೆ. ತಮ್ಮ ಹೊತ್ತಿಗೆಗಳನ್ನು ಮುಳುಗಿಸಿದ ಇಂದ್ರಾಯಣಿಗೆ ಹಾರಿ ಅವರು ಪ್ರಾಣವನ್ನು ತ್ಯಜಿಸಿದರೆಂದು ಮತ್ತೆ ಕೆಲವರು ನಂಬುತ್ತಾರೆ. ತುಕಾರಾಮರ ನಿರೋಪದ ಅಭಂಗಗಳನ್ನು ಗಮನಿಸಿದರೆ, ಅವರು ತಮ್ಮ ಊರಿನ ಹತ್ತಿರದ ಸ್ನೇಹಿತರು ಮತ್ತು ಭಕ್ತರಿಂದ ಸೂಕ್ತವಾದ ರೀತಿಯಲ್ಲಿ ಬೀಳ್ಕೊಂಡು ಹಿಂತಿರುಗಿ ಬಾರದಿರುವ ಉದ್ದೇಶದಿಂದ, ಯಾರಿಗೂ ಗೊತ್ತಿಲ್ಲದ ಒಂದು ಗುರಿಯತ್ತ ಹೊರಟರೆಂದು ಊಹಿಸಬಹುದಾಗಿದೆ. ಅವರು ತಮ್ಮನ್ನು ಬೀಳ್ಕೊಡಲು ಕೆಲವು ಅಂತರ ನಡೆದುಕೊಂಡು ಬಂದವರಿಗೆ ಹಿಂತಿರುಗಿ ಮನೆಗೆ ಹೋಗಲು ಹೇಳಿದ್ದಾರೆ. ತಾವು “ಕಾಯಮ್ಮಾಗಿ ಸ್ವಂತದ ಮನೆಗೆ ಹೋಗುತ್ತಿರುವ” ಕಾರಣ ಉಳಿದವರು ತಮ್ಮನ್ನು ಮತ್ತೆ ಕಾಣಲು ಸಾಧ್ಯವಿಲ್ಲೆಂದು ಅವರು ತಮ್ಮ ಜೊತೆಗೆ ಬಂದವರಿಗೆ ಹೇಳುತ್ತಾರೆ. ಅಂದಿನಿಂದ “ಈ ಜಗತ್ತಿನಲ್ಲಿ ತುಕಾರಾಮನ ಬಗೆಗಿನ ಮಾತು” ಮಾತ್ರ ಉಳಿದೀತೆಂದು ಅವರಿಗೆ ಹೇಳುತ್ತಾರೆ.
ಸ್ವಲ್ಪದರಲ್ಲಿ ಹೇಳುವುದಾದರೆ, ತುಕಾರಾಮರ ಅಭಂಗಗಳಿಂದಲೇ ಮೇಲೆದ್ದು ಬರುವ ಅವರ ಜೀವನ ಚರಿತ್ರೆಯಾಗಿದೆ. ಇದರಿದ ಕಂಡುಬರುವ ಸಂಗತಿ ಎಂದರೆ, ತುಕಾರಾಮರು ತೀರ ಸಾಮಾನ್ಯ ಮೂಲದಿಂದ ಬಂದು, ಸಮಾನ್ಯರ ಪಾಲಿಗೆ ಬರುವ ಪಾಡುಗಳನ್ನೆಲ್ಲ ಪಟ್ಟು, ತಮ್ಮ ಪಾಲಿಗೆ ಬಂದ ಅನುಭವಗಳನ್ನೆಲ್ಲ ಅಭಂಗಗಳಲ್ಲಿ ವಿವರವಾಗಿ ನಮೂದಿಸುತ್ತ, ಆತ್ಮಶೋಧನೆಯ ಅಸಾಮಾನ್ಯವಾದ ಯಾತ್ರೆಯಲ್ಲಿ ಮುಂದಕ್ಕೆ ಸಾಗಿದರೆಂಬುದು. ಅವರ ಕಾವ್ಯವು ಮಾನವನ ಇತಿಹಾಸದಲ್ಲಿರುವ ಒಂದು ಅಪೂರ್ವದ ದಸ್ತೈವಜು ಎನ್ನಿಸಿದ್ದು, ಅದನ್ನುಮಾನವನ ಸತ್ಯವೆನ್ನಿಸಿದ ಇರುವಿಕೆ ಮತ್ತು ಕಾವ್ಯವನ್ನು ಭಾಷೆಯ ಇರುವಿಕೆಯಾಗಿ ಹಾಗೂ ಇರುವಿಕೆಯ ಭಾಷೆಯಾಗಿ ವ್ಯಾಖ್ಯಾನಿಸುವ ಮೂಲಭೂತ ಸಮಸ್ಯೆಗಳ ಕೇಂದ್ರದಲ್ಲಿ ನಿರ್ದುಷ್ಟವಾಗಿ ಇರಿಸಲಾಗಿದೆ.
“ತುಕಾರಾಮ ಗಾಥಾ”ದ ಆಂಗ್ಲಾನುವಾದವಾದ “ದ ಕಲೆಕ್ಟೆಡ್ ತುಕಾರಾಮ್”ವನ್ನು ಮೊದಲಿಗೆ ಹಾಗೂ ಬಹುಮಟ್ಟಿಗೆ ಪೂರ್ತಿಯಾಗಿ ಮಾಡಿದವರೆಂದರೆ ಜೆ. ನೆಲ್ಸನ್ ಫ್ರೇಸರ್ ಮತ್ತು ಕೆ. ಬಿ. ಮರಾಠೆಯವರು. ಇದನ್ನು ಕ್ರಿಶ್ಚಿಯನ್ ಲಿಟರೇಚರ್ ಸೋಸೈಟಿ, ಮದ್ರಾಸ್ ಅವರು (ಇ. ಸ. ೧೯೦೯-೧೯೧೫) ಪ್ರಕಟಿಸಿದರು. ತುಕಾರಾಮರ ಆಯ್ದ ಪದ್ಯಗಳ ಯುರೋಪಿನ ಭಾಷೆಯ ಇನ್ನೊಂದು ಹೆಸರಾದ ಅನುವಾದವೆಂದರೆ, G. A. Deleury - ``Toukaram : Psaumes du perlerin'' (Gallimard; Paris, 1956). ಫ್ರೇಸರ್ ಮತ್ತು ಮರಾಠೆಯವರ ಅನುವಾದವು ಒಟ್ಟಿನಲ್ಲಿ ೩೭೨೧ ಅಭಂಗಗಳನ್ನು ಒಳಗೊಂಡಿದೆ. ಜಸ್ಟಿನ್ ಈ. ಆಬೊಟ್ ಅವರ ೧೧ ಸಂಪುಟಗಳ ದಾಖಲೆಯ ಸರಣಿಯಾದ “ಪೋಯೆಟ್-ಸೇಂಟ್ಸ್ ಆಫ್ ಮಹಾರಾಷ್ಟ್ರ” (ಸ್ಕಾಟಿಶ್ ಮಿಶನ್ ಇಂಡಸ್ಟ್ರೀಸ್; ಪೂನಾ, ೧೯೨೬) ಮತ್ತು ನಿಕೋಲ್ ಮ್ಯಾಕ್ನಿಕಾಲ್ ಅವರ “ಸಾಮ್ಸ್ ಆಫ್ ಮರಾಠಾ ಸೇಂಟ್ಸ್” (ಕ್ರಿಶ್ಚಿಯನ್ ಲಿಟರೇಚರ್ ಸೋಸೈಟಿ; ಕಲಕತ್ತ, ೧೯೧೯)ಗಳಲ್ಲಿ ಇನ್ನು ಕೆಲವಿವೆ. ಫ್ರೇಸರ್ ಮತ್ತು ಆಬೊಟ್ ಇವರಿಬ್ಬರೂ ಗದ್ಯಾನುವಾದವನ್ನು ಮಾಡಿದ್ದು ಮ್ಯಾಕ್ನಿಕಾಲ್ ಅವರು ಮೂಲದ ಪ್ರವಾಹಿಯಾದ ಜಾನಪದ ಶೈಲಿಗೆ ಅಪರಿಚಿತವಾದ ಮತ್ತು ಹೊರೆಯಾದ ಕಾವ್ಯಾನುವಾದವನ್ನು ಮಾಡಿದ್ದಾರೆ. ಡೆಲ್ಯೂರ್ ಅವರ ಫ್ರೆಂಚ್ ಭಾಷೆಯ ೧೦೧ ಅನುವಾದಿತ ಕವನಗಳು ಮಾತ್ರ ತುಕಾರಾಮರ ಮೂಲ ಕೃತಿಯ ಕಾವ್ಯದ ಹತ್ತಿರಕ್ಕೆ ಹೋಗುವ ಯುರೋಪಿನ ಯತ್ನವಾಗಿದೆ, ಎನ್ನಬಹುದು. ಆಂಗ್ಲ-ಮರಾಠಿಯ ಪ್ರಸಿದ್ಧರಾದ ಕವಿ, ಅರುಣ ಕೋಲ್ಹಟಕರರು ತುಕಾರಾಮರ ಒಂಬತ್ತು ಕವನಗಳ ಅನುವಾದಗಳನ್ನು ಪ್ರಕಟಿಸಿರುವರು (Poetry India; Bombay. 1966). ತುಕಾರಾಮರನ್ನು ಕುರಿತಾದ ನನ್ನ ಈ ಮೊದಲಿನ ಅನುವಾದಗಳು Fakir, Delas, Modern Poetry in Translation, Asian Digest of Literatureಗಳಲ್ಲಿ ಪ್ರಕಟಗೊಂಡಿವೆ.
ತುಕಾರಾಮರ ಕವಿಯ ಉನ್ನತ ಸ್ಥಾನ ಮತ್ತು ಮರಾಠಿ ಭಾಷೆ ಮತ್ತು ಸಾಹಿತ್ಯಗಳ ಮೇಲಿನ ಅವರ ವಿಸ್ತೃತವಾದ ಪ್ರಭಾವವನ್ನು ಗಮನಿಸಿದರೆ ಈ ಪುಸ್ತಕಗಳ ಪಟ್ಟಿಯು ಏನೇನೂ ಸಾಲದು. ಅವರು ಮಧ್ಯ ಕಾಲದ ಮರಾಠಿ ಸಾಹಿತ್ಯ ಪರಂಪರೆ ಹಾಗೂ ಆಧುನಿಕ ಮರಾಠಿ ಸಾಹಿತ್ಯದ ನಡುವಿನ ಮಾರ್ಪಾಟಿನ ಮಹತ್ವದ ಕೊಂಡಿಯಾಗಿದ್ದಾರೆ. ಅವರ (ಸುಮಾರು ೫೦೦೦) ಅಭಂಗಗಳು ಇಡಿಯ ಮರಾಠಿ ಸಂಸ್ಕೃತಿಯನ್ನು ಆಮೂಲಾಗ್ರವಾಗಿ ವ್ಯಾಪಿಸಿವೆ. ಮುಂದಿನ ಅದೆಷ್ಟೋ ಅನುವಾದಕರ ಪೀಳಿಗೆಗಳನ್ನು ಸೃಜನಶೀಲವಾಗಿ ತೊಡಗಿಸಬಹುದಾದ ಬಹುಆಯಾಮಗಳ ಬೃಹತ್ ಕೆಲಸವು ತುಕಾರಾಮರಿಂದ ನಡೆದಿದೆ. ಹೀಗಾಗಿ ತುಕಾರಾಮರು ಇತಿಹಾಸದ ಒಂದು ಕಾಲಾವಧಿಗೆ ಮಿತಿಗೊಂಡ ಕವಿಯಾಗುವ ಬದಲು ಅವರು ಹೆಚ್ಚು ಭವಿಷ್ಯ ಕಾಲಕ್ಕೆ ಸಂಬಂಧಪಟ್ಟವರಾಗಿದ್ದಾರೆ.
ತುಕಾರಾಮರ ಅನುವಾದಕರು ಬೇರೆ ಬೇರೆ ವರ್ಗದವರಾಗಿದ್ದಾರೆ. ಫ್ರೇಸರ್ ಮತ್ತು ಆಬೊಟ್ ಅವರು ತುಕಾರಾಮರನ್ನು ಗದ್ಯದಲ್ಲಿ ಅನುವಾದಿಸಿದ್ದಾರೆ. ಅದೊಂದು ಸ್ವಂಸ್ಫೂರ್ತಿಯ ನೃತ್ಯ ಪ್ರದರ್ಶನವಾಗುವ ಬದಲು ಉದ್ದೇಶಪೂರಿತ ಕಾಲ್ನಡಿಗೆಯಂತಾಗಿದೆ. ಮ್ಯಾಕ್ನಿಕಾಲ್ ಅವರು ಆ ಕಾಲ್ನಡಿಗೆಯನ್ನು ಒಂದು ಸೈನಿಕರ ಕವಾಯತಾಗಿ ಮಾರ್ಪಡಿಸಿರುವರು. ಡೆಲ್ಯೂರಿ ಮತ್ತು ಕೋಲ್ಹಟಕರರು ಮಾತ್ರ ನೃತ್ಯದ ಚೇತನದೊಂದಿಗೆ ಅದನ್ನು ಸಮೀಪಿಸುತ್ತಾರೆ. ಡೆಲ್ಯೂರಿಯವರು ಮೂಲದ ಭಾವಗೀತೆಯ ಸೂಕ್ಷ್ಮ ವ್ಯತ್ಯಾಸ ಮತ್ತು ಭಾವನೆಯ ತೀವ್ರತೆಗಳ ಮೇಲೆ ಹೆಚ್ಚು ನೆಲೆಸುತ್ತಾರೆ. ಕೋಲ್ಹಟಕರರು ತುಕಾರಾಮರ ನುಡಿಗಟ್ಟುಗಳ ನಾಟಕೀಯ, ಶೀಘ್ರ, ಅಕಸ್ಮಾತ್, ಭೀತಿದಾಯಕ ಮತ್ತು ಹುದುಗಿದ ಅಂಶಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ಇದು ಮೂಲ ಪಠ್ಯದ ಶ್ರೇಣಿ, ಆಳ ಮತ್ತು ಸಂಕೀರ್ಣತೆಗಳ ಇಡಿಯ ವ್ಯಾಪ್ತಿಯನ್ನು ತೋರಿಸಲು ಏನೇನೂ ಸಾಲದು. ತುಕಾರಾಮರು ಕಾವ್ಯದ ಅನುವಾದಕರಿಗೆ ಸವಾಲು ಒಡ್ಡುತ್ತಾರೆ. ಮೂಲ ಪಠ್ಯದ ಸಾದಾ ಮತ್ತು ನಯವಾದ ಮೇಲ್ಮೈ ರಚನೆಯ ಅಡಿಯಲ್ಲಿ ಇರುವ ಶ್ರೀಮಂತವೂ, ತುಂಬ ಸಂಕೀರ್ಣವೂ ಆದ ರಚನೆಯನ್ನು ಅನುವಾದದ (ಗುರಿ) ಪಠ್ಯವು ಹೇಗಾದರೂ ಮಾಡಿ ಸೂಚಿಸಬೇಕು. ಇದು ನೋವನ್ನು ಉಲ್ಬಣಿಸುತ್ತ ಬಾಳಿಡಿ ನಡೆಯುವ ಒಂದು ಯೋಜನೆ ಎನ್ನಿಸಿದೆ. ತುಕಾರಾಮರನ್ನು ಅನುಕೂಲದ ಪ್ರಚಲಿತ ಭಾಷೆಯ ಮೂಲಕ ನಾಟಕದ ಒಂದು ಪಾತ್ರವನ್ನಾಗಿ ಶೋಭಿಸುವಂತೆ ಅಭಿನಯಿಸುವುದು ಹಗುರ. ಕಾವ್ಯದ ಸಂಸ್ಕೃತಿಯು ಅನುವಾದದ ಸಂಸ್ಕೃತಿಗಿಂತ ಹೆಚ್ಚು ಪೂರ್ವಗ್ರಹ ಮತ್ತು ಪಕ್ಷಪಾತದಿಂದ ಕೂಡಿದುದು. ಈ ಅಂಶವನ್ನು ಇಲ್ಲಿ ಇನ್ನಷ್ಟು ವಿಸ್ತರಿಸುವಲ್ಲಿ ಹಿಂಜರಿಕೆಯಾಗುತ್ತಿದೆ, ಆದರೆ ಹೋಗಹೋಗುತ್ತ ಖಂಡಿತ ಇದನ್ನು ಮಾಡಲೇ ಬೇಕು.
ಅನುವಾದದ ಸಮಸ್ಯೆಗಳನ್ನು ಉಪಕರಣಗಳ ಸಮಸ್ಯೆಗಳೊಂದಿಗೆ ಹೋಲಿಸಬಹುದಾಗಿದೆ. ಸೂಕ್ಷ್ಮದರ್ಶಕದ ಮೂಲಕವೇ ನೋಡಬಹುದಾದದ್ದನ್ನು ಬರಿಗಣ್ಣಿನಿಂದ ನೋಡಲಾಗದು. ಆದರೆ ಒಂದು ರೇಡಿಯೋ ಟೆಲೆಸ್ಕೋಪು ಅದೃಶ್ಯವಾದುದನ್ನು ದೃಶ್ಯವಾಗಿಸಬಲ್ಲುದು. ಒಂದು ಎಲೆಕ್ಟ್ರಾನ್ ಮೈಕ್ರೋಸ್ಕೋಪನ್ನು ಕಣ್ಣಿನ ನೋಟದಾಚೆಯದನ್ನು “ನೋಡು”ವಂತೆ ವಿನ್ಯಾಸಗೊಳಿಸಿರುತ್ತಾರೆ.
ಮೂಲದ ವಿಶಿಷ್ಟವಾದ ಪಠ್ಯದ ಮೇಲ್ಮೈ ರಚನೆಯ ಕೆಳಬದಿಗೆ ಇರುವುದನ್ನು ಓದಬಲ್ಲ ಯಾವುದೇ ಸಾಧನವನ್ನು ತಯಾರಿಸಲು ಆಗಿಲ್ಲ. ಗುರಿಯ ಪಠ್ಯವು ಮೂಲದ ಪಠ್ಯದ ಮಾದರಿಯನ್ನು ತಯಾರಿಸುವ ಒಂದು ಯತ್ನವಾದರೆ ಮೂಲದ ಪಠ್ಯವು ಅಷ್ಟೇ ಪೂಜ್ಯವೆನ್ನಿಸುವುದರಿಂದ ಅದರ ಅನುವಾದವು ಅಸಾಧ್ಯವೆನ್ನಿಸುತ್ತದೆ.
ಅನುವಾದಕನು ಮೂಲ ಪಠ್ಯದ ಸ್ವರೂಪವನ್ನು ಗುರುತಿಸುವ ಇಲ್ಲವೆ ಗ್ರಹಿಸುವವರೆಗೆ ಅದರ ಒಂದು ಅನುವಾದಕ್ಕೆ ಕೈ ಹಾಕಲಾರನು. ಕಾವ್ಯವು ಸೂಕ್ಷ್ಮವಾಗಿ, ತೊಡಕುಗಳಿಂದ ಕೂಡಿ ಮತ್ತು ಕ್ರಿಯಾಶಕ್ತವಾಗಿ ಕೆಲಸ ಮಾಡುತ್ತದೆ. ಅವುಗಳ ಮೂಲ ಅಸ್ತಿತ್ವವು ವಿಶಿಷ್ಟವಾದ ಶ್ರೋತೃಗಳನ್ನಾಗಲಿ ಇಲ್ಲವೆ ಮುಂಬರಬಹುದಾದ ಅನುವಾದಕರನ್ನಾಗಲಿ ಅವಲಂಬಿಸಿರುವುದಿಲ್ಲ. ಯಾವುದೇ ಅನುವಾದವದರೂ ತನ್ನ ಭಾಷೆ ಇಲ್ಲವೆ ಕಾಲದ ಆಕಾಶದಲ್ಲಿ ಸ್ವಯಮಾಧಿಪತ್ಯದಿಂದ ಕೆಲಸ ಮಾಡುತ್ತ ಮೂಲ ಪಠ್ಯದ ಯೋಚನೆಯನ್ನು ತೆಗೆದು ಹಾಕಲಾರದು.
ಪ್ರತಿಯೊಂದು ಅನುವಾದದಲ್ಲೂ ಒಂದು ಬಗೆಯ ಪರಕೀಯತೆ ಇರುತ್ತದೆ. ಕಾವ್ಯದ ಬಗೆಗಂತೂ ಈ ಮಾತು ಇನ್ನಷ್ಟು ನಿಜ. ಅನುವಾದಗೊಂಡ ಒಂದು ಕವನವು ಹೆಚ್ಚೆಂದರೆ ಗುರಿ ಭಾಷೆಯ ಉಳಿದ ಅನುವಾದಗಳಿಗಿಂತ ಹೆಚ್ಚು ಹತ್ತಿರದ ಪರಕೀಯ, ಅಷ್ಟೆ. ಪರಕೀಯನು ತನ್ನ ಹಳೆಯ ಶಬ್ದೋಚ್ಚಾರಗಳು, ನುಡಿಗಟ್ಟುಗಳ ವಿಚಿತ್ರವಾದ ತಿರುವುಗಳು, ಪರಕೀಯ ಸಂದರ್ಭಗಳು ಮತ್ತು ತನ್ನ ಮನೆಯ ವಿರಹದ ಮುಖಭಾವವನ್ನು ಕೂಡ ಬೇಕೆಂದೇ ಉಳಿಸಿಕೊಳ್ಳುತ್ತಾನೆ. ಕಾವ್ಯವು ಹುಟ್ಟಿ, ಜೀವಂತವಾಗಿದ್ದು ಬೇರೆಡೆಯಲ್ಲಿ ಒದೆತವನ್ನೂ ಕೊಡುತ್ತಿರುವುದು ಒಳ್ಳೆಯ ಸಂತೋಷದ ಲಕ್ಷಣಗಳು ಎನ್ನಬೇಕು. ಬೇರೆ ತೆರನಾದ ಮನಸ್ಸುಗಳು ಇದ್ದೇ ಇರುವುದು ಒಂದು ವಾಸ್ತವ. ಕೆಲವು ಮಡಿವಂತ ವಿಮರ್ಶಕರು ಅವುಗಳನ್ನು ಕಂಡು ಶೋಕಿಸುವಷ್ಟು ಸಲ ಅದನ್ನೊಂದು ಹಬ್ಬವಾಗಿ ಆಚರಿಸುವುದೂ ಅಷ್ಟೇ ಆವಶ್ಯಕ.
ತುಕಾರಾಮರ ಕಾಲದ ಮಹಾರಾಷ್ಟ್ರದ ಧರ್ಮಾಚರಣೆಯು ಜನಸಮುದಾಯ, ವರ್ಗ ಹಾಗೂ ಜಾತಿಗಳನ್ನು ಪರಸ್ಪರರಿಂದ ಬೇರ್ಪಡಿಸಿತ್ತು. ಬ್ರಾಹ್ಮಣ ಧರ್ಮವು ಒಂದು ಬದಿಗಾದರೆ ಸಾಮಾನ್ಯರ ಜನಪದ-ಧರ್ಮವು ಇನ್ನೊಂದು ಬದಿಗಿತ್ತು. ಭಕ್ತಿಯು ಇವೆರಡು ಅತಿರೇಕಗಳ ಮಧ್ಯದಲ್ಲಿತ್ತು. ಭಕ್ತರ ಸಮುದಾಯವು ಬಲು ಪ್ರಜಾಸತ್ತಾಕ ಪದ್ಧತಿಯದಾಗಿತ್ತು. ಈ ಭಕ್ತ ಸಮುದಾಯವು ಒಂದೇ ಬಗೆಯ ಜೀವನ ವಿಧಾನವನ್ನು ಹಂಚಿಕೊಳ್ಳುತ್ತ,ಇಡಿಯ ಜೀವನವನ್ನು ಆಳವಾದ ದಯೆಯಿಂದ ಕಾಣುತ್ತಿತ್ತು. ಜೈನ ಮತ್ತು ಬೌದ್ಧರ ಕೊಡುಗೆಗಳು ಮಾಹಾರಾಷ್ಟ್ರದಿಂದ ಪೂರ್ತಿಯಾಗಿ ಕಣ್ಮರೆಯಾಗಿರಲಿಲ್ಲ. ಅವರ ಕೊಡುಗೆಯು ಭಕ್ತಿರೂಪದಿಂದ ಅವತರಿಸಿತ್ತು. ತುಕಾರಾಮರು ಬ್ರಾಹ್ಮಣತೆಯುಳ್ಳ ಹಿಂದುತ್ವದ ಭ್ರಷ್ಟ ಅವಸ್ಥೆ, ಧರ್ಮದ ಹೆಸರಿನಲ್ಲಿ ಇರುವ ಮತಾಂಧತೆ ಮತ್ತು ಅಂಧಶ್ರದ್ಧೆ, ಲಾಭಬಡಕತನ ಮತ್ತು ಸ್ಯೈರಾಚಾರಗಳನ್ನು ಕುರಿತು ತೀಕ್ಷಣವಾಗಿ ಮಾಡಿದ ಅವರ ಕಟು ಟೀಕೆಗಳು, ಅವರ ವೈಶ್ವಿಕ ಮಾನವೀಯ ಕಾಳಜಿಗಳಿಗೆ ಸಾಕ್ಷಿಯಾಗಿವೆ. ಯಾವುದೇ ಬಗೆಯ ಮೂಢನಂಬಿಕೆ ಮತ್ತು ಮೂಢಾಚಾರಗಳನ್ನು ಕಂಡು ನಿಜವಾದ ವಾಸ್ತವವಾದಿಯಾದ ಅವರು ಹೇಸಿಕೊಳ್ಳುತ್ತಿದ್ದರು. ಅವರು ಭಾಷೆಯ ಸ್ವಭಾವವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅದನ್ನು ಮಾಟ ಮಾಡಲು, ದಾರಿ ತಪ್ಪಿಸಲು, ತಿರಿಚಲು ಹೇಗೆ ಬಳಸಿಕೊಳ್ಳಬಹುದು, ಎಂಬುದನ್ನು ಕೂಡ ಚೆನ್ನಾಗಿ ಅರಿತಿದ್ದರು. ಅವರು ದೇವಮಾನವರು ಮತ್ತು ಗುರುಗಳ ಬಗೆಗೂ ಆರೋಗ್ಯಕರವಾದ ಸಂದೇಹವನ್ನು ತಳೆದಿದ್ದರು. ತನ್ನ ಆಧ್ಯಾತ್ಮಿಕ ಮೋಕ್ಷಕ್ಕಾಗಿ ಪ್ರತಿಯೊಬ್ಬ ಮನುಷ್ಯನು ತಾನೇ ಅಂತಿಮ ಹೊಣೆಗಾರನೆಂದು ಅವರು ಭಾವಿಸುತ್ತಿದ್ದರು. ಅವರು ಪಲಾಯನವಾದಿಗಳಾಗಿರಲಿಲ್ಲ. ಅವರ ಅಧ್ಯಾತ್ಮವಾದವು ವಾಸ್ತವತೆಯನ್ನು ನಿರಾಕರಿಸುವಂಥದಾಗಿರಲಿಲ್ಲ. ಬದಲು ಅದನ್ನು ಜೀವನದ ಮೂಲ ವಾಸ್ತವವೆಂದು ಇಡಿಯಾಗಿ ಮನ್ನಿಸಿ ಅದಕ್ಕೆ ಉತ್ಸ್ಫೂರ್ತವಾಗಿ ಸ್ಪಂದಿಸುತ್ತಿದ್ದರು. ತುಕಾರಾಮರ ಕಠೋರ ವ್ಯಾವಹಾರಿಕ ಬುದ್ಧಿಯು ಅವರ ಅಧ್ಯಾತ್ಮಕ್ಕೆ ವಿರೋಧಿಯಾಗಿರಲಿಲ್ಲ. ಅವು ಒಅಂದನ್ನೊಂದು ಬಲಪಡಿಸುತ್ತಿದ್ದವು.
ಭಾರತೀಯ ಭಕ್ತಿ ಸಾಹಿತ್ಯವು ತನ್ನ ಕಾಲದ ಸಾಮಾಜಿಕ ಪರಿಸ್ಥಿತಿಯ ಬಗೆಗೆ ಯಾವುದೇ ಬಗೆಯ ಕಾಳಜಿಯನ್ನು ತೋರುವುದಿಲ್ಲ, ಎನ್ನುವ ಸಾಮಾನ್ಯ ನಿಯಮಕ್ಕೆ ಮರಾಠಿಯ ಸಂತ-ಕವಿಗಳು ಅಪವಾದವೆನ್ನಿಸಿದ್ದಾರೆ. ಮರಾಠಿಯ “ಸಂತರು” ಅಭಿಜನರ ಆಧ್ಯಾತ್ಮಿಕ ಜ್ಞಾನ ಮತ್ತು ಶ್ರೇಣೀಕೃತ ಜಾತಿವ್ಯವಸ್ಥೆಯಲ್ಲಿ ಅಡಕವಾಗಿರುವ ಏಕಸ್ವಾಮ್ಯವನ್ನು ಪ್ರಕಟವಾಗಿ ಮತ್ತು ಧ್ವನಿತವಾಗಿ ಪ್ರಶ್ನಿಸಿದರು. ಅವರು ವೈಶ್ವಿಕ ಪ್ರೀತಿ ಮತ್ತು ದಯೆಗಳನ್ನು ಉಪದೇಶಿಸಿದರು. ಅವರು ತಮ್ಮ ಸ್ಥಾನಿಕ ಭಾಷೆಯಾದ ಮರಾಠಿಯನ್ನು ಧರ್ಮಗ್ರಂಥ ಹಾಗೂ ಅವುಗಳ ಪಾಂಡಿತ್ಯಪೂರ್ಣವಾದ ಟೀಕೆಗಳ ಭಾಷೆಯಾದ ಸಂಸ್ಕೃತಕ್ಕಿಂತ ಹೆಚ್ಚು ನಂಬುತ್ತಿದ್ದರು. ಅವರು ಭಾಷೆಯನ್ನು ಒಂದು ಬಗೆಯ ಹಂಚಿಕೊಂಡ ಧರ್ಮವನ್ನಾಗಿಯೂ, ಧರ್ಮವನ್ನು ಒಂದು ಹಂಚಿಕೊಂಡ ಭಾಷೆಯನ್ನಾಗಿಯೂ ಮಾಡಿಕೊಂಡಿದ್ದರು. ಮುಗಲರ ವಿರುದ್ಧ ಮರಾಠರನ್ನು ಯಾವೊಂದು ಧಾರ್ಮಿಕ ತತ್ವಪ್ರಣಾಲಿಯ ಮೇಲೆ ಅಲ್ಲ, ಪ್ರಾದೇಶಿಕ, ಸಾಂಸ್ಕೃತಿಕ ಅನನ್ಯತೆಯ ಆಧರದ ಮೇಲೆ ಒಂದುಗೂಡಿಸಲು ನೆರವಾದವರು ಅವರೇ. ಅವರ ಆ ಸಂಪ್ರದಾಯದ ವಾರಸು ಆಧುನಿಕ ಕಾಲದಲ್ಲಿ ಜೋತಿಬಾ ಫುಲೆ, ವಿಠ್ಠಲರಾಮಜಿ ಶಿಂದೆ, ಛತ್ರಪತಿ ಶಾಹು, ಸಯಾಜಿರಾವ ಗಾಯಕವಾಡ ಮತ್ತು ಬಿ. ಆರ್. ಅಂಬೇಡಕರರಂತಹ ಶ್ರೇಷ್ಠ ಸಮಾಜ ಸುಧಾರಕರು ಮತ್ತು ಕ್ರಿಯಾಸಕ್ತರ ಮೂಲಕ ಮುಂದುವರೆದಿದೆ. ಭಕ್ತಿ ಕಾವ್ಯದ ಆದ್ಯಂತಗಳಲ್ಲಿ ಆಶ್ಚರ್ಯಕರವಾದ ಆಳ, ಹರಹು, ಮತ್ತು ಸರಣಿಗಳಿವೆ. ಅದು ವಿರಕ್ತ, ಗೂಢ ಮತ್ತು ಆಧ್ಯಾತ್ಮಿಕವಾದುದು. ಅದು ಇಂದ್ರಿಯ ಗೋಚರ, ಭಾವಗೀತಾತ್ಮಕ, ಆಳವಾದ ಭಾವನಾತ್ಮಕ, ಭಕ್ತಿಪರವಾದುದು. ಅದು ಜಾನಪದ, ಹಾಸ್ಯಯುಕ್ತ, ಅಸಂಗತವಾದುದು. ಅದು ಕಲ್ಪಕ, ಸಂಶೋಧನಾತ್ಮಕ, ಪ್ರಯೋಗಶೀಲವಾದುದು. ಅದು ತೀವ್ರ, ಕೋಪಿಷ್ಟ, ಸಂವೇದನಶೀಲ ಮತ್ತು ಪ್ರತ್ಭಟನೆಯಿಂದ ತುಂಬಿದುದು. ತುಕಾರಾಮರ ೪೦೦೦ಕ್ಕಿಂತಲೂ ಹೆಚ್ಚಿನ ಅಭಂಗಗಳು ಅಖಂಡವಾದ ಮೌಖಿಕ ಪರಂಪರೆಯ ಮೂಲಕ ನಮಗೆ ದೊರೆತಿವೆ. ಮೇಲಿನ ಎಲ್ಲ ವಿಶೇಷಣಗಳು ಸರಿ ಹೊಂದುವಂತಹ ಹಲವಾರು ಅಭಂಗಗಳಿವೆ.
ಮರಾಠಿ ಸಂತರ ಪರಂಪರೆಯು ಕವಿಯ ಪಾತ್ರವನ್ನು ತನ್ನದೇ ಆದ ವಿಶಿಷ್ಟವಾದ ರೀತಿಯಲ್ಲಿ ಕಲ್ಪಿಸಿಕೊಳ್ಳುತದೆ. ಇದಕ್ಕೆ ಅಳವಾದ ಜನಾಂಗೀಯ-ಕಾವ್ಯದ ಮಹತ್ವವಿದೆಯೆಂದು ನನಗೆ ಖಚಿತವಾಗಿ ಅನ್ನಿಸುತ್ತದೆ. ಭಕ್ತಿಯು ವೈಶ್ವಿಕ ಸಹಚರ ಭಾವದ ಅಡಿಪಾಯದ ಮೇಲೆ ನಿಂತಿದೆ. ಇದರ ಮೂಲ ಸಿದ್ಧಾಂತವೆಂದರೆ ಹಂಚಿಕೊಳ್ಳುವುದು. ದೈವವು ಭಕ್ತನಿಗಾಗಿ ಯಾವುದೇ ಬಗೆಯ ಮತಾಂಧತೆಯ ಪ್ರತಿನಿಧಿಯಲ್ಲ. ಬದಲು ಅದು ಅವನಿಗೆ ವೈಶ್ವಿಕ ಮಮತೆಯ ಸಮಾನ ಗುರಿ ಇಲ್ಲವೆ ಸಮಾನವಾದ ಆಧ್ಯಾತ್ಮಿಕ ಕೇಂದ್ರಬಿಂದುವಾಗಿರುತ್ತದೆ. ಕಾವ್ಯವೆಂದರೆ ಇದೇ ಸಹಚಾರಿತ್ವದ ಇನ್ನೊಂದು ಅಭಿವ್ಯಕ್ತಿ, ಅಷ್ಟೆ. ತುಕಾರಾಮರು ಏಕಾಂತದಲ್ಲಿ ಕುಳಿತು ತಮ್ಮ ಅಭಂಗಗಳನ್ನು ಬರೆದಿರಬಹುದು. ಆದರೆ ಅವರು ಅವುಗಳನ್ನು ವಿಠ್ಠಲನ ದೇವಾಲಯದಲ್ಲಿ ಶ್ರೋತೃಗಳೆದುರು ಹಾಡಿ ತೋರಿಸುತ್ತಿದ್ದರು. ಅಲ್ಲಿ ಅವರ ಅಭಂಗಗಳನ್ನು ಆಲಿಸಲು ನೂರಾರು ಜನ ಸೇರುತ್ತಿದ್ದರು. ತುಕಾರಾಮರು ತಲ್ಲೀನರಾಗಿ ಅಭಂಗಗಳನ್ನು ಹಾಡುವಾಗ ಅಲ್ಲಿ ನೆರೆದ ಜನರು ಮೈಮರೆತು ತಾಲಬದ್ಧವಾಗಿ ಕುಣಿಯುತ್ತಿದ್ದರೆಂದು ಬಹಿಣಾಬಾಯಿಯು ವರ್ಣಿಸಿದ್ದಾಳೆ.
ಇದು ಜ್ಞಾನೇಶ್ವರರ ಕಾಲದಿಂದ (೧೨೭೫-೧೨೯೬) ನಡೆದುಬಂದ ಸಂಪ್ರದಾಯ. ಅವರು ಮರಾಠಿ ಕಾವ್ಯದ ಪ್ರಣೇತರು ಮತ್ತು ವಿಠೋಬ ಪಂಥದ ಸಂಸ್ಥಾಪಕರು. ನಾಮದೇವರು (೧೨೭೦-೧೩೫೦) ತುಕಾರಾಮರ ಅಗ್ರಗಾಮಿಗಳು. ಅವರೆಲ್ಲರ ಶ್ರೋತೃಗಳು ಹೆಂಗಳೆಯರು ಮತ್ತು ಕೆಳಜಾತಿಯವರನ್ನು ಹಿಡಿದು ಸಾಮಾನ್ಯ ಹಳ್ಳಿಗರಾಗಿದ್ದರು. ಅವರು ತಮ್ಮ ಭಾಷೆಯ ಉನ್ನತಿಯಿಂದಾಗಿ ರೋಮಾಂಚಿತರಾಗುತ್ತಿದ್ದರು, ಅದರ ಆಳದಿಂದ ಹೃದಯದಲ್ಲಿ ಪ್ರಭಾವಿತರಾಗುತ್ತಿದ್ದರು.
ಪಾಲ್ ವ್ಯಾಲೆರಿಯವರು ಗದ್ಯ ಮತ್ತು ಪದ್ಯಗಳ ನಡುವಿನ ವ್ಯತ್ಯಾಸವನ್ನು ಕಾಲ್ನಡಿಗೆ ಮತ್ತು ನೃತ್ಯಗಳ ನಡುವಿನ ವ್ಯತ್ಯಾಸವೆಂದು ವರ್ಣಿಸುತ್ತಾರೆ. ತುಕಾರಾಮರ ಗಮಕವು ಅವರ ಶ್ರೋತೃಗಳಿಗೆ ಶೂನ್ಯವನ್ನು ಅವಕಾಶವಾಗಿ ಪರಿವರ್ತಿಸುವ ಮತ್ತು ಇಂದ್ರಿಯ ಗ್ರಾಹ್ಯವಾದ ಸಮಯವನ್ನು ಒಳಗೊಂಡ ಒಂದು ಶುದ್ಧ ನೃತ್ಯವಾಗಿ ಕಂಡಿರಬೇಕು.
ಜೀವನವು ತನ್ನೆಲ್ಲ ಸಂಗತಿಗಳೊಂದಿಗೆ ಆ ಕಾವ್ಯದ ವಿಷಯ ವಸ್ತುವಾಗಿತ್ತು. ತಾವು ಕಾವ್ಯದ ಒಂದು ಮಾಧ್ಯಮ ಮಾತ್ರರೆಂದು ತುಕಾರಾಮರು ಬಗೆಯುತ್ತಿದ್ದರು. ಅವರು, “ದೆವರು ನನ್ನ ಮೂಲಕ ಮಾತಾಡುತ್ತಾನೆ”, ಎನ್ನುತ್ತಿದ್ದರು. ಅವರು ಈ ಮಾತನ್ನು ಬಲು ನಮ್ರತೆಯಿಂದ ಹೇಳುತ್ತಿದ್ದರು; ದೇವಮಾನವನ ಸೊಕ್ಕಿನ ಅಟ್ಟಹಾಸದಿಂದಲ್ಲ; ಆತ್ಮತೃಪ್ತನಾದ ಆಸ್ಥಾನ ಕವಿಯ ಅಹಂಕಾರದಿಂದಲ್ಲ.
ಮರಾಠಿಯ “ಸಂತ” ಪದ್ದಕ್ಕೆ ಹತ್ತಿರವಾದ ಕಾರಣ ಅವರನ್ನು ಸುಮಾರಾಗಿ “ಸೇಂಟ್” ಎಂದು ಕರೆಯುತ್ತಿರುವಂತಿದೆ. ಮರಾಠಿಯ ಈ ಪದವು ಸಂಸ್ಕೃತದ “ಸತ್” ಪದದಿಂದ ಬಂದುದು. ಅದು ‘ಇರವು’ ಮತ್ತು ‘ಅರಿವ’ನ್ನು ನಿರ್ದೇಶಿಸುತ್ತದೆ. ಅದು ಶುದ್ಧತೆ ಮತ್ತು ದೈವೀ ಚೇತನ, ಜಾಣ್ಮೆ ಮತ್ತು ಸೂಕ್ಷ್ಮ ವಿವೇಚನೆ, ಬಂಧನಗಳಿಂದ ಬಿಡುಗಡೆ, ಗುಣವತ್ತೆ ಮತ್ತು ಸತ್ಯನಿಷ್ಠೆಗಳನ್ನು ಸೂಚಿಸುತ್ತದೆ. ಕ್ರಿಸ್ಚಿಯನ್ನರ “ಸೇಂಟ್” ಪದದ ಪರಿಕಲ್ಪನೆಯು ಇದಕ್ಕಿಂತ ತುಸು ಭಿನ್ನವಾದರೂ ಇವೆರಡರಲ್ಲಿ ಸಾಕಷ್ಟು ಸಾಮ್ಯವಿದೆ.
ಮರಾಠಿಯಲ್ಲಿ ಸಂತ-ಕವಿ ಬೆಸೆತವು ಕಾವ್ಯಕ್ಕೆ ಒಂದು ಅನನ್ಯತೆಯ ದೃಷ್ಟಿಯನ್ನು ಒಡಗಿಸಿದೆ. ಈ ದೃಷ್ಟಿಯಲ್ಲಿ, ಕಾವ್ಯ ಮತ್ತು ಕವಿಯ ಶೀಲ ಸ್ವಭಾವದ ಪ್ರಾಮಾಣಿಕತೆ ಮತ್ತು ಆಧ್ಯಾತ್ಮಿಕ ಹಿರಿಮೆಗಳು ಅತ್ಯಗತ್ಯದ ಸಂಗತಿಗಳು.
ತುಕಾರಾಮರು ಮೂಲತಃ ತಮ್ಮನ್ನು ಒಬ್ಬ ಕವಿಯಾಗಿ ಕಾಣುತ್ತಿದ್ದರು. ತಾವು ಕವಿಯೆಂಬುದನ್ನು, ಕವಿಯ ಹೊಣೆ, ಕವಿಯ ತೊಂದರೆಗಳನ್ನು ಕುರಿತು ಅವರು ಪ್ರಕಟವಾಗಿ ಬರೆದಿರುವರು. ಅವರು ಕೆಲವು ಪ್ರಕಾರದ ಕವಿಗಳು ಮತ್ತು ಕಾವ್ಯವನ್ನು ಕುರಿತು ಟೀಕಿಸಿರುವರು. ಕಾವ್ಯದಲ್ಲಿ ಇರುವಿಕೆಯ ಭಾಷೆಯು, ಭಾಷೆಯ ಇರುವಿಕೆಯೊಂದಿಗೆ ಒಂದಾಗುತ್ತದೆ ಎಂಬ ಬಗೆಗೆ ಅವರು ಹೆಯ್ಡೆಗ್ಗರರೊಂದಿಗೆ ಒಮ್ಮತವನ್ನು ಹೊಂದುತ್ತಿದ್ದರೆಂಬುದು ನಿಜ. ಕಾವ್ಯವೆಂದರೆ ಅವರಿಗೆ ಮಾನವನ ಪರಿಸ್ಥಿತಿಯ ಒಟ್ಟು ಬೆತ್ತಲೆತನದ ಕರಾರುವಾಕ್ಕಾದ ವರ್ಣನೆ, ಎನ್ನಿಸಿತ್ತು. ಅದು ಅವರಿಗೆ ಖಂಡಿತ ಒಂದು ದುರ್ಬಲವಾದ ಮನರಂಜನೆಯಾಗಿರಲಿಲ್ಲ; ಅದೊಂದು ಒಡವೆಯೂ ಆಗಿರಲಿಲ್ಲ. ಭಾಷೆಯು ದೇವರ ಕೊಡುಗೆಯಾಗಿದ್ದು ನಿಸ್ವಾರ್ಥ ಭಕ್ತಿಯಿಂದ, ಕಾವ್ಯದ ಮೂಲಕ, ಅದನ್ನು ಅದರ ಮೂಲಕ್ಕೆ ಹಿಂತಿರುಗಿ ಒಪ್ಪಿಸಬೆಕಿತ್ತು.
ಇದೊಂದು ಕ್ಲೀಷೆಯಾಗಿ ತೋರಬಹುದು. ಆದರೆ ಬಾಹ್ಯ ಜಗತ್ತನ್ನು ಅದರ ಆಧ್ಯಾತ್ಮಿಕ ಸದೃಶ ವಸ್ತುವಾಗಿ ಪರಿವರ್ತಿಸುವಲ್ಲಿ ತುಕಾರಾಮರ ಪ್ರತಿಭೆಯಿದೆ. ಅವರ ಕಾವ್ಯದ ಪಠ್ಯದಲ್ಲಿ, ಇಡಿಯ ಜಗತ್ತು ಒಂದು ಬಗೆಯ ಕ್ರಿಯಾಶೀಲವಾದ ರೂಪಕ ಅಲಂಕಾರವಾಗಿತ್ತು. ಅವರ ಕವನಗಳ ಮೇಲ್ಮೈಯಲ್ಲಿ ತೋರಿಕೆಯ ಸಾದಾತನವಿದೆ. ಅದರ ಕೆಳಬದಿಯಲ್ಲಿ ಮಾತ್ರ ತುಂಬ ಸಂಕೀರ್ಣವಾದ ರಚನೆಯಿದ್ದು ಅವೆರಡರ ನಡುವಿನ ಕರ್ಷಣವನ್ನು ಬಲು ಸೂಕ್ಷ್ಮವಾಗಿ ಸೂಚಿಸಲಾಗುತ್ತದೆ.
ಪ್ರತಿಯೊಂದು ಅಭಂಗದ ಹೆಸರಾದ “ಕಾವ್ಯ ಲಾಂಛನ”ವಾದ “ತುಕಾ ಅನ್ನುವನು” ಎಂಬುದು ಒಂದು ಆಳವಾದ ರಚನೆಯ ಬಾಗಿಲನ್ನು ತೆರೆಯುತ್ತದೆ. ತುಕಾರಾಮರ ಅಭಂಗಗಳ ಮುಕ್ತಾಯದ ಹಂತದಲಿ ಬರುವ ಸೂತ್ರರೂಪದ, ಚತುರೋಕ್ತಿ, ವಿಡಂಬನೆ, ಕಟಕಿ, ವಕ್ರತೆ, ಅಸಂಗತ, ಬೆಚ್ಚಿಸುವ ಅಥವಾ ಆಧ್ಯಾತ್ಮಿಕತೆಗಳಿಂದ ಕೂಡಿದ ಮಾತುಗಳು ಹಲವು ಸಲ ಇಡಿಯ ಕವನಕ್ಕೆ ತಿರುವುಮುರುವಾದ ಚಲನೆಯನ್ನು ಕೊಡುತ್ತವೆ. ವೃತ್ತಾಕಾರದ ಇಲ್ಲವೆ ಸುರುಳಿಯಾಕಾರದ, ತೋರಿಕೆಯ ಮತ್ತು ನಿಜವಾದ ಸಾತತ್ಯ, ದಿನ ನಿತ್ಯದ ಭಾಷೆ ಮತ್ತು ಅದು ಮುಗ್ಧತೆಯಿಂದ ಒಳಗೊಂಡ ತೊಡಕಿನ ಜಗ- ಪ್ರತಿಮೆಗಳತ್ತ ಬೆರಳು ಮಾಡಿತೋರಿಸುತ್ತವೆ.
ಹೀಗೆ, ತುಕಾರಾಮರು ದೇವರು ಮತ್ತು ಅವನ ಭಕ್ತನ ನಡುವಿನ ಸಂಬಂಧವನ್ನು ಒಡೆಯ ಹಾಗೂ ಅವನ ನಾಯಿಯ ನಡುವಿನ ಸಂಬಂಧದಂತೆ, ಹಾದರಗಿತ್ತಿ ಹಾಗೂ ಅವಳ ಹಾದರದವನ ಸಡುವಿನ ಸಂಬಂಧದಂತೆ ಕಾಣುತ್ತಾರೆ. ಅವರು ಮಾನವನನ್ನು ಅವಲಂಬಿಸದ, ಪೂರ್ತಿ ಹೊರಗಿನ ದೇವರ ಅಸ್ತಿತ್ವವನ್ನು ಪ್ರಸ್ತಾಪಿಸುವುದಿಲ್ಲ. ಭಕ್ತನೇ ದೇವನಿಗೆ ತನ್ನಂತೆ ಮನುಷ್ಯ ಪ್ರತಿಮೆಯನ್ನು ನೀಡುತ್ತಾನೆಂಬುದನ್ನು ಅವರು ಬಲ್ಲರು. ಮನುಷ್ಯನಿರ್ಮಿತವಾದ ಭಾಷೆಯಿಂದ ಸೃಷ್ಟಿಸಲಾದ, ಭಕ್ತನ ದಯೆಯನ್ನು ಅವಲಂಬಿಸಿರುವ, ನಟನೆಯ ದೇವನು ಇವನು, ಎಂಬುದನ್ನು ಅವರು ಬಲ್ಲರು.
ತುಕಾರಾಮರು ಆತ್ಮನಿಷ್ಠ ಮತ್ತು ವಸ್ತುನಿಷ್ಠತೆಗಳ ನಡುವಿನ ಗಡಿಯಿಲ್ಲದ, ವ್ಯಕ್ತಿಸಾಪೇಕ್ಷ ಮತ್ತು ವ್ಯಕ್ತಿನಿರಪೇಕ್ಷ, ಹಾಗೂ ವ್ಯಕ್ತಿನಿಷ್ಠ ಮತ್ತು ವೈಶ್ವಿಕವಾದ ದೇವರಂತಹ ಇರುವಿಕೆಯ ಅನುಭವವನ್ನು ಪಡೆಯುವಲ್ಲಿ ಆಸ್ಥೆಯನ್ನು ತಳೆದವರು. ಅವರು ತಮ್ಮ ಪ್ರಜ್ಞೆಯನ್ನು ದಿನನಿತ್ಯದ ಜಗತ್ತಿನಲ್ಲಿ ಬೇರೂರಿದ, ಆದರೆ ಮೋಸಗೊಳಿಸುವಮಟ್ಟಿಗೆ ತುದಿಮೊದಲಿಲ್ಲದ ಎಲ್ಲೆಗಳವರೆಗೆ ಚಾಚಿರುವ ಅರಿವಿನ ಒಂದು ವೈಶ್ವಿಕ ಘಟನೆಯನ್ನಾಗಿ ಕಾಣುತ್ತಾರೆ. ಅವರು, “ಅಣುರೇಣುವಿಗಿಂತ ಕಿರಿಯ, ತುಕಾ ಆಕಾಶದಷ್ಟು ಹಿರಿಯ” ಎನ್ನುತ್ತಾರೆ.
ತುಕಾರಾಮರ ಕಾವ್ಯದ ಎದ್ದು ಕಾಣುವ ಬದಿಯೆಂದರೆ, ಅದರ ಜನಾಂಗೀಯ-ಕಾವ್ಯಮೀಮಾಂಸೆ ಅಥವಾ ಅದರ ಪರಿಕಲ್ಪನೆಯ ಮರಾಠೀತನವು.
ಮಧ್ಯ ಯುಗದ ಮರಾಠಿಯ ಕಾವ್ಯವು ಎರಡು ಬೇರೆ ಬೇರೆ ದಿಕ್ಕುಗಳಲ್ಲಿ ಅಭಿವೃದ್ಧಿಯನ್ನು ಹೊಂದಿತು. ಒಂದು ಶಾಖೆಯು ಸಂಸ್ಕೃತದ ಅಭಿಜಾತ - ಧಾರ್ಮಿಕ ಮತ್ತು ಭೌತಿಕ- ಕಾವ್ಯದಿಂದಾದರೆ, ಇನ್ನೊಂದು ತುಸು ಬೇರೆ ಬಗೆಯದಾದ, ಪ್ರಾಕೃತದ ಅಭಿಜಾತ ಕಾವ್ಯದಿಂದ. ಇವೆರಡೂ ಸಂದರ್ಭಗಳಲ್ಲಿ ಇದು ಹಳೆಯ, ನೆಲೆಗೊಂಡ ಮಾದರಿ ಮತ್ತು ಸ್ಥಾನೀಯವಲ್ಲದ ಸಾಹಿತ್ಯಿಕ ಮೂಲಗಳ ಮಾದರಿಗಳನ್ನು ಅನುಸರಿಸಿತು. ತುಂಬ ಸಂಸ್ಕೃತಮಯವಾದ ಭಾಷೆಯಲ್ಲಿ ಸಂಸ್ಕೃತ ಮಾದರಿಗಳ ಅನುಕರಣೆ ಮತ್ತು ಸಂಸ್ಕೃತದ ಛಂದಶಾಸ್ತ್ರ ಮತ್ತು ಶೈಲಿಯುಕ್ತವಾದ ಸಾಧನಗಳನ್ನು ಬಳಸಿಕೊಳ್ಳುವುದು ಮರಾಠಿ ಸಾಹಿತ್ಯದ ಪ್ರವೃತ್ತಿಯ ನಿದರ್ಶಕವಾಗಿದೆ. ಈ “ಅಭಿಜನರು” ಸ್ಥಾನೀಯ ಸಂಪನ್ಮೂಲಗಳನ್ನು ಮತ್ತು ಆಡುಮರಾಠಿಯನ್ನು ಬೇಕೆಂದೇ ಅಲಕ್ಷ್ಯಕ್ಕೆ ಈಡುಮಾಡಿದರು. ಮರಾಠಿಯಲ್ಲಿ ಕಳೆದ ೭೦೦ ವರ್ಷಗಳಿಂದಲೂ ಈ ಪ್ರವೃತ್ತಿಯು ನಡೆದುಬಂದಿದ್ದರೂ ಕೆಲವೇ ಜನ ಬರಹಗಾರರು (ಅಷ್ಟೇನೂ ವಿಶೇಷವಾದ ಬುದ್ಧಿಶಕ್ತಿ ಇಲ್ಲದವರಾದರೂ) ಇಂತಹ ಅಭಿಜಾತ ಸಾಹಿತ್ಯವನ್ನು ನಿರ್ಮಿಸಿದ್ದಾರೆ.
ಮರಾಠಿ ಭಕ್ತಿ-ಕಾವ್ಯದ ಪ್ರಣೇತರಾದ ಜ್ಞಾನದೇವರಂಥವರು ಇದಕ್ಕೆ ವಿರುದ್ಧವಾದ ದಾರಿಯನ್ನು ಹಿಡಿದರು. ಅವರು ಬಲು ಬಿರುಸಾಗಿ ಅಭಿವೃದ್ಧಿ ಹೊಂದುತ್ತಿದ್ದ ಮರಾಠಿ ಭಾಷೆಯ ಸಂಪನ್ಮೂಲಗಳನ್ನು ತಮ್ಮದೇಆದ ಆದ ಹೊಸ ಸಾಹಿತ್ಯವನ್ನು ನಿರ್ಮಿಸಲು ಬಳಸಿಕೊಂಡರು. ಅವರು ಸಾಕಷ್ಟು ಮಣಿಸಬಲ್ಲ, ಜನಪದ ಹಬ್ಬಗಳಿಂದ ಆಯ್ದುಕೊಂಡು ಮರಾಠಿಯದಾದ ಒಂದು ಛಂದಸ್ಸನ್ನು ತಯಾರಿಸಿಕೊಂಡರು. ಅವರು ಆಡು ಭಾಷೆಗೆ ಸಾಹಿತ್ಯದ ರೂಪವನ್ನು ನೀಡಿದರು. ಅದಕ್ಕಾಗಿ ಸಾಮಾನ್ಯರ ದಿನಬಳಕೆಯ ಆಡುನುಡಿಯ ಪದಗಳನ್ನು ಆಯ್ದುಕೊಂಡರು. ಅದರ ಪರಿಣಾಮವೆಂದರೆ “ಅಭಿಜಾತತೆ”ಯ ಪ್ರಮಾಣೀಕೃತ ಕೃತಿಯ ಬದಲು ಸಮೃದ್ಧವಾದ ಮತ್ತು ವೈವಿಧ್ಯತೆಯ ಮೈವಳಿಕೆಯ ಕಾವ್ಯವು ಸಿದ್ಧವಾಯಿತು. ಸುಮಾರು ಜನರ ಧ್ವನಿಗಳನ್ನು ಒಳಗೊಂಡು, ಹಲವಾರು ಸ್ಥಾನೀಯ ಮತ್ತು ಪ್ರಾದೇಶಿಕ ಧ್ವನಿವೈಶಿಷ್ಟ್ಯಗಳನ್ನು ಒಳಗೊಂಡು, ಜಾನಪದದ ಉತ್ಸ್ಫೂರ್ತತೆ ಮತ್ತು ಸಂಶೋಧನೆಗಳನ್ನು ಒಳಗೊಂಡು ಶ್ರೀಮಂತವಾದ ಭಕ್ತಿಕಾವ್ಯವು ಒಂದು ಅದ್ಭುತ ಚಳುವಳಿಯಾಗಿ ರೂಪುಗೊಂಡು, ಹಿಂದೆಂದಿಗಿಂತಲೂ ಮರಾಠಿ-ಭಾಷಿಕರನ್ನು ಹೆಚ್ಚು ಹತ್ತಿರಕ್ಕೆ ತಂದಿತು. ಶ್ರೋತೃಗಳು ಕವಿ-ಗಾಯಕರೊಂದಿಗೆ ಸೇರಿ ಸಾಮೂಹಿಕವಾಗಿ ಧ್ವನಿಗೂಡಿಸಿ ಈ ಕಾವ್ಯವನ್ನು ಹಾಡುತ್ತಿದ್ದರು. ನಾಮಸಂಕೀರ್ತನೆಗಳು ವಾಗ್ಮಿತೆ, ನಾಟಕ, ಏಕವ್ಯಕ್ತಿ ಕಲಾಪ್ರದರ್ಶನ ಮತ್ತು ಸಮೂಹ ಗಾಯನ ಮತ್ತು ಸಂಗೀತಗಳೆಂದರೆ ಈ ಚಳುವಳಿಯು ಹುಟ್ಟುಹಾಕಿದ ಕಲೆಯ ಹೊಸ ಮಾದರಿಗಳು. ಭಜನೆಯು, ನಿಗ್ರಹದಿಂದ ಆಯ್ದ ಈ ಕಾವ್ಯದ ಕೆಲವು ಸಾಲುಗಳ ಮುಖ್ಯ ಅಂಶಗಳಿಗೆ ಒತ್ತು ಕೊಡುತ್ತ ಕೈಕೊಳ್ಳುವ ಸಾಮೂಹಿಕ ಕಾವ್ಯಗಾಯನದ ಹೊಸ ಮಾದರಿಯಾಯಿತು. ಇದೊಂದು ಹೊಸ ಬಗೆಯ ಪ್ರಜಾಸತ್ತಾತ್ಮಕ ಸಾಹಿತ್ಯಿಕ ವ್ಯವಹಾರವಾಗಿ, ಇದರಲ್ಲಿ ಒಬ್ಬ ಕವಿಯ ಕೃತಿಯನ್ನು ಸಾಮೂಹಿಕವಾಗಿ ಅರಿತುಕೊಳ್ಳುವಲ್ಲಿ ಅಶಿಕ್ಷಿತರು ಕೂಡ ಸಾಹಿತ್ಯಿಕ ಪಠ್ಯದ ತಿರುಳಿನತ್ತ ಸೆಳೆಯಲ್ಪಡುತ್ತಾರೆ. ಜ್ಞಾನದೇವ ಮತ್ತು ನಾಮದೇವರು ಜನಪ್ರಿಯ ಮರಾಠಿ ಕಾವ್ಯದ ಹೊಸ ನೆಲೆಗಟ್ಟನ್ನು ತಯಾರಿಸಿದ ಮೂರು ನೂರು ವರ್ಷಗಳ ತರುವಾಯ ಇಂಥ ತೆರೆದ ಕೊನೆಗಳುಳ್ಳ, ನೆಲಮಟ್ಟದ ದೇಶೀವಾದವು ತುಕಾರಾಮರಲ್ಲಿ ತನ್ನ ಪೂರ್ತಿ ಅಭಿವ್ಯಕ್ತಿಯನ್ನು ಪಡೆಯಿತು.
ಇಡಿಯ ಭಕ್ತಿ ಕಾವ್ಯವು ಮರಾಠಿಯ ವಾಗ್ಮಿಗಳಲ್ಲಿ ಜಗತ್ತಿನ ಪ್ರತಿಮೆಯನ್ನು ಅದೆಷ್ಟು ಆಳವಾಗಿ ರೂಪಿಸಿದೆ ಎಂದರೆ, ಸಂದೇಹವಹಿಸದ ಆಧುನಿಕರೂ ಕೂಡ ಅದರ ಸರ್ವವ್ಯಾಪಿಯಾದ ಪಡಿಯಚ್ಚಿನಿಂದ ತಪ್ಪಿಸಿಕೊಳ್ಳಲಾರರು. ಆದರೆ ತುಕಾರಾಮರು ಭಕ್ತಿಗೇನೇ ಅಸ್ತಿತ್ವದ ಹೊಸ ಆಯಾಮಗಳನ್ನು ನೀಡಿದರು. ಇದರಲ್ಲಿ, ತಮ್ಮ ಕಾಲಕ್ಕಿಂತ ಎರಡು ನೂರು ವರ್ಷಗಳಷ್ಟು ಮೊದಲೇ ಅವರು ಆಧುನಿಕ ಮನುಷ್ಯನ ಆಧ್ಯಾತ್ಮಿಕ ಯಾತನೆಗಳನ್ನು ನಿರೀಕ್ಷಿದ್ದರು. ಮನುಷ್ಯನು ಎದುರಿಸುವ ಮತ್ತು ಹೆದರಿಕೆಯಿಂದ ನಿಗ್ರಹಿಸುವ ತೀವ್ರತಮವಾದ ಆಘಾತಗಳಿಂದಾದ ನೋವುಗಳಿಂದ ಸ್ಪಷ್ಟವಾಗಿ ಬಿಡುಗಡೆಯನ್ನು ಕಂಡುಕೊಳ್ಳಲು ಹವಣಿಸುವಂತಹ ಒಂದು ಬಗೆಯ ವ್ಯಕಿಗತವಾದ, ತಪ್ಪೊಪ್ಪಿಗೆಯ ಕಾವ್ಯವನ್ನು ಕೂಡ ಅವರು ನಿರೀಕ್ಷಿಸಿದ್ದರು. ತುಕಾರಾಮರ ಕಾವ್ಯವು ನೋವು ಮತ್ತು ದಿಗ್ಭ್ರಮೆ, ಭಯ ಮತ್ತು ಕಾತರ, ಉಲ್ಬಣ ಮತ್ತು ನಿರಾಶೆ, ಬೇಸರ ಮತ್ತು ಅರ್ಥಹೀನತೆಗಳಂತಹ ಆಧುನಿಕ ಸ್ವಪ್ರಜ್ಞೆಯ ಲಕ್ಷಣಗಳುಳ್ಳ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ತುಕಾರಾಮರ ಕಾವ್ಯವು ಯಾವಾಗಲೂ ತಿಳಿದುಕೊಳ್ಳಲು ತೋರಿಕೆಗೆ ಹಗುರವೂ, ರಚನೆಯಲ್ಲಿ ಸಾದಾತನದ್ದೂ ಆಗಿರುತ್ತದೆ. ಆದರೆ ಅದರಲ್ಲಿ ಹಲವು ಬಚ್ಚಿಟ್ಟ ಉರುಳುಗಳು ಇರುತ್ತವೆ. ಅದರಲ್ಲಿ ಕಂಡುಹಿಡಿಯಲು ಕಷ್ಟಕರವಾದ ಆಳವಾದ ವ್ಯಂಗ್ಯವೂ ಇದೆ. ಅದರಲ್ಲಿ ಭಯಂಕರವಾದ ವಿರೋಧಾಭಾಸ ಮತ್ತು ಕಾಡು ಕಪ್ಪು ಹಾಸ್ಯಗಳೂ ಇವೆ. ಹಲವು ಸಲ ತುಕಾರಾಮರು ಸ್ವತಃ ವಿರೋಧಾಭಾಸಗಳಿಂದ ಕೂಡಿರುತ್ತಾರೆ. ಅವರು ವಿಗ್ರಹಪೂಜಕರು. ಅವರು ಇಂದ್ರಿಯ ಗೋಚರ ವಿರಾಗಿಗಳು, ತೀವ್ರವಾದ ಪ್ರೀತಿಯಿಂದಾಗಿ ತಮ್ಮ ದೇವರನ್ನೇ ನಾಶಪಡಿಸಲು ಹಿಂಜರಿಯದ ತೀವ್ರತೆಯುಳ್ಳ ಭಕ್ತರು. ತಮ್ಮ ಭಾವನೆಗಳ ಒಡೆಯರು ತಾವೆಂಬುದನ್ನು ಮತ್ತು ತಮ್ಮ ಕಾವ್ಯಗಳ ಅರ್ಥವನ್ನು ಬಲ್ಲವರೆಂಬುದನ್ನು ಅರಿತವರು. ಇದು ಒಬ್ಬ ಹಿರಿಯ ಕುಶಲ ಕಾರ್ಮಿಕನ ಆತ್ಮವಿಶ್ವಾಸ ಮಾತ್ರವಲ್ಲ; ಅದಕ್ಕಿಂತಲೂ ಅದೆಷ್ಟೋ ಹೆಚ್ಚಿನದು. ಮನುಷ್ಯನು ತನ್ನ ಆಧ್ಯಾತ್ಮಿಕ ಗುರಿಯಷ್ಟೇ ತನ್ನ ಭೌತಿಕ ವ್ಯವಹಾರಗಳಿಗೂ ಹೊಣೆಗಾರನಾಗಿರುವನು. ಅವರು ಆತ್ಮನಿಶ್ಚಯವನ್ನೇ ಸ್ವಾತಂತ್ರ್ಯವೆಂದು ಬಗೆಯುತ್ತಾರೆ. ಅವರು ಇರವು ಮತ್ತು ಆಯ್ಕೆಗಳ ನಡುವಿನ ಸಂಬಂಧವನ್ನು ಕಾಣುತ್ತಾರೆ. ಅವರ ನಂಬಿಗೆಯು ಅವರ ಪ್ರಜ್ಞಾಪೂರ್ವಕವಾದ ಆಯ್ಕೆಯಾಗಿದ್ದು ಅದಕ್ಕಾಗಿ ಬೆಲೆಯನ್ನು ತೆರಲು ಅವರು ಸಿದ್ಧರಿದ್ದರು.
ಹೀಗಾಗಿ ತುಕಾರಾಮರು ಮಹಾರಾಷ್ಟ್ರದ ಕೇವಲ ಒಬ್ಬ ಬಲು ದೊಡ್ಡ ಕೊನೆಯ ಭಕ್ತ ಕವಿಯಾಗಿರದೆ ಮನಸ್ಸಿನ ಹದ ಮತ್ತು ವಿಷಯವಸ್ತುವಿನ ಆಯ್ಕೆ, ತಂತ್ರ ಮತ್ತು ದೃಷ್ಟಿಗಳಲ್ಲಿ ಅವರು ನಿಜವಾಗಿಯೂ ಆಧುನಿಕ ಮರಾಠಿಯ ಕವಿಯಾಗಿರುವರು. ಅವರು ಮಧ್ಯಯುಗದ ಮತ್ತು ಆಧುನಿಕ ಮರಾಠಿ ಕಾವ್ಯದ ನಡುವಿನ ನಿಜವಾದ ಕೊಂಡಿಯಾಗಿದ್ದಾರೆ.
ಮರಾಠಿಯಲ್ಲಿ ತುಕಾರಾಮರ ಉನ್ನತ ನಿಲುವು ಆಂಗ್ಲ ಭಾಷೆಯ ಶೆಕ್ಸಪೀಯರ ಮತ್ತು ಜರ್ಮನ್ ಭಾಷೆಯ ಗೋಯೆಥೆ ಅವರೊಂದಿಗೆ ಹೋಲಿಸಬಹುದಾದುದು. ಅವರನ್ನು ಮರಾಠಿ ಭಾಷೆಯ ಪ್ರತಿಭೆ ಮತ್ತು ಅದರ ವೈಶಿಷ್ಟ್ಯಪೂರ್ಣವಾದ ಸಾಹಿತ್ಯಿಕ ಸಂಸ್ಕೃತಿಯನ್ನು ಪ್ರತಿಫಲಿಸುವಂತಹ ಸಾರಸರ್ವಸ್ವದ ಕವಿ ಎನ್ನಬಹುದು. ಆಗಿನಿಂದ ಮರಾಠಿಯ ಸಹಿತ್ಯಿಕ ಸಂಸ್ಕೃತಿಯನ್ನು ಇಷ್ಟೊಂದು ಆಳವಾಗಿ ಮತ್ತು ವಿಸ್ತೃತವಾಗಿ ತನ್ನ ಪ್ರಭಾವಕ್ಕೆ ಒಳಪಡಿಸಿದ ಬೇರೊಬ್ಬ ಮರಾಠಿಯ ಬರಹಗಾರಾನಾಗಿಲ್ಲ. ತುಕಾರಾಮರ ಕಾವ್ಯವು ಮರಾಠಿ ಭಾಷೆಯನ್ನು ರೂಪುಗೊಳಿಸಿದ್ದಾರೆ. ಇಂದು ಸುಮಾರು ಏಳು ಕೋಟಿ ಜನರು ಈ ಭಾಷೆಯನ್ನ ಆಡುತ್ತಾರೆ. ಹೀಗಾಗಿ ಇದು ಬರಿ ಸಾಹಿತ್ಯಿಕ ಭಾಷೆಯಲ್ಲ. ಅವರ ಪ್ರಭಾವವನ್ನು ಕಿಂಗ್ ಜೇಮ್ಸ್ ಇವರ ಬೈಬಲ್ದ ಅನುವಾದದಿಂದ ಆಂಗ್ಲ ಭಾಷೆಯನ್ನು ಆಡುವವರ ಮೇಲಾದ ಪ್ರಭಾವದೊಡನೆ ಹೋಲಿಸಬಹುದು. ಇದಲ್ಲದೆ, ಲಕ್ಷಾವಧಿಯ ಅಶಿಕ್ಷಿತ ಜನರು ಕೂಡ ತಮ್ಮ ಪ್ರಾರ್ಥನೆಗಳನ್ನು ಮಾಡಲು ಇಲ್ಲವೆ ದೇವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ತುಕಾರಾಮರ ಅಭಂಗಗಳನ್ನು ಬಳಸುತ್ತಾರೆ.
ತುಕಾರಾಮರು ಗ್ರಾಮಾಂತರಗಳ ಜನರ ಆಡು ಮರಾಠಿಯನ್ನು ಬಳಸುವರೇ ಹೊರತು ಅಭಿಜನರ ಭಾಷೆಯನ್ನಲ್ಲ. ಅವರ ಭಾಷೆಯು ಬ್ರಾಹ್ಮಣ ಪುರೋಹಿತರದಲ್ಲ. ಇದು ಸಾಮಾನ್ಯ ಕೃಷಿಕರು, ವ್ಯಾಪಾರಿಗಳು, ದಿನಗೂಲಿಯವರು, ಹಾಗೂ ಸಾಮಾನ್ಯ ಗೃಹಿಣಿಯರ ಭಾಷೆಯಾಗಿದೆ. ಬೇರೆ ಬೇರೆ ಮೂಲಗಳಿಂದ ಮತ್ತು ಸಂದರ್ಭಗಳಿಂದ ಪಡೆದ, ವಿಶೇಷವಾದ ಮಾಹಿತಿ ಮತ್ತು ಒಳನೋಟಗಳಿಂದ ಕೂಡಿದವುಗಳಾದರೂ ಅವರ ನುಡಿಗಟ್ಟುಗಳು ಮತ್ತು ಪ್ರತಿಮೆಗಳು ಜನರ ದಿನನಿತ್ಯದ ಅನುಭವಗಳಿಂದ ರೂಪುಗೊಂಡವುಗಳು. ತುಕಾರಾಮರು ಜಾನಪದವನ್ನು ವೈಶ್ವಿಕತೆಯ ಸ್ಪರ್ಸವುಳ್ಳ ಅಭಿಜಾತವನ್ನಾಗಿ ಮಾರ್ಪಡಿಸುತ್ತಾರೆ. ಒಂದೇ ಕಾಲಕ್ಕೆ ಭೌತಿಕ ಮತ್ತು ಆಧಿಭೌತಿಕ ಅವಸ್ಥೆಯಲ್ಲಿರುವ ಅವರು ಈ ಭೌತಿಕ ಭಾಷೆಯ ಮೂಲಕ ಆಧ್ಯಾತ್ಮಿಕ ಜೀವನವನ್ನು ಪ್ರಕಟಪಡಿಸುವ ಹೋಲಿಕೆಯನ್ನು ಸೃಷ್ಟಿಸಲು ಸಮರ್ಥರಾಗುತ್ತಾರೆ. ಈ ರೀತಿಯಾಗಿ, ಮಹಾನ್ ಕಾವ್ಯದ ಬೇರುಗಳು ಸಾಮಾನ್ಯ ಆಡುಭಾಷೆಯ ಸಮೀಪದಲ್ಲಿರುತ್ತವೆ, ಎಂಬುದನ್ನು ಅವರು ಸಿದ್ಧಪಡಿಸುತ್ತಾರೆ. ಇಷ್ಟಾಗಿಯೂ ಅವರ ಕಾವ್ಯವು ಎಲ್ಲಕ್ಕೂ ಹೆಚ್ಚಿನ ಶೈಲಿಯುಕ್ತವಾದ ವಿಶ್ಲೇಷಣೆಯ ಕುತರ್ಕಕ್ಕೆ ಕೂಡ ತನ್ನ ಬೆಸುಗೆಯಿಲ್ಲದ ಪಾರಂಗತತೆಯ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಅವರು ಅದೆಂತಹ ಹಿರಿಮೆಯ ಕಲಾವಿದರೆಂದರೆ, ಅವರ ನಕ್ಷೆಗಾರಿಕೆಯು ದುಂದುಗಾರ ಮೂಲಪ್ರೇರಣೆಯಾದ ಪ್ರತಿಭೆಯ ಅಭೇದ್ಯವಾದ ಭಾಗವಾಗಿರುವಂತೆ ಕಾಣುತ್ತದೆ.
ತುಕಾರಾಮರ ಸಮೃದ್ಧವಾದ ಉತ್ಪಾದಕ ಸಾಮರ್ಥ್ಯವು ಅಸಂಖ್ಯವಾದ ಮಗ್ಗಲುಗಳಲ್ಲಿ ಬಿಡಿಸಿ ತೋರಿಸಲಾದ ಹೆಚ್ಚುಕಡಿಮೆ, ಒಂದೇ ಒಂದು ಆಧ್ಯಾತ್ಮಿಕ ಆತ್ಮಚರಿತ್ರೆಯನ್ನು ಹೊಂದಿರುತ್ತದೆ. ಸಾಮಾನ್ಯವಾದ ವಿಷಯವಸ್ತುವಿನ ಎಳೆಗಳು ಮತ್ತು ಮರುಕಳಿಸುವ ಮುಖ್ಯೋದ್ದೇಶಗಳು ಅವರ ಇಡಿಯ ಕಾರ್ಯವನ್ನು ಸಾವಯವನ್ನಾಗಿ ಮಾಡಿರುವುದನ್ನು ಗಮನಿಸಿದರೆ ಅದು ಯಾವುದೇ ಬಗೆಯ ವರ್ಗೀಕರಣವನ್ನು ನಿರಾಕರಿಸುವುದನ್ನು ಅರಿಯಬಹುದು. ಕೊನೆಯಲ್ಲಿ ನಾವು ಆಲಿಸುವುದು ಶೀಘ್ರ, ತೀವ್ರ, ಮಾನವೀಯ ಮತ್ತು ಖಾಸಗಿ ಹಾಗೂ ಸಾರ್ವಜನಿಕ ಎಲ್ಲೆಗಳನ್ನು ಅಳಿಸಿಹಾಕುವ, ಅನನ್ಯವಾದ ಮತ್ತು ದೋಷರಹಿತವಾದ ಒಂದೇ ಧ್ವನಿಯನ್ನು. ತುಕಾರಾಮರು ಕೈಯೆಟುಕಿನ ಕವಿಗಳು, ಆದರೂ ಬಲು ಕಠಿಣರು. ಅವರು ನಿಮ್ಮ ಮೇಲೆ ಬೆಳೆಯುತ್ತಿರುತ್ತಾರೆ.
ನಾನು ತುಕಾರಾಮರ ಅಭಂಗಗಳನ್ನು ಅನುವಾದಿಸಲು ಮೊದಲ ಬಾರಿಗೆ ಯತ್ನಿಸಿದ್ದು ೧೯೫೬ರಲ್ಲಿ, ಅಂದರೆ ಸುಮಾರು ನಲವತ್ತು ವರ್ಷಗಳ ಕೆಳಗೆ. ಅದು ವಿಠ್ಠಲನ ವಿಗ್ರಹವನ್ನು ಸ್ತುತಿಸುವ ಒಂದು ಹೆಸರಾದ ಅಭಂಗವಾಗಿದೆ. ‘ಸುಂದರ ತೇ ಧ್ಯಾನ ಉಭಾ ವಿಟೇವರಿ” ಎಂಬುದು. ಅದಾವುದೋ ಕಾರಣಕ್ಕಾಗಿ ಅದು ಆಗ ನನಗೆ ರೇನರ್ ಮಾರಿಯಾ ರಿಲ್ಕೆ ಅವರ ``Archaic Torso of Apollo'' ದ ಜೊತೆಗೆ ಇದರ ಹೋಲಿಕೆ ಕಂಡಿತು. ವಿಠ್ಠಲ ಮತ್ತು ಅಪೋಲೊರ ನಡುವಿನ ವ್ಯತ್ಯಾಸವು ಕಲಾತ್ಮಕವಾದ ಎರಡು ಸಂಸ್ಕೃತಿಗಳ ನಡುವಿನ ವ್ಯತ್ಯಾಸವನ್ನು ವರ್ಣಿಸುತ್ತದೆ, ಎಂದುಕೊಂಡಿದ್ದೆ. ಆಗ ನಾನು ಬರಿ ಹದಿನೆಂಟರವನಿದ್ದೆ. ಹೀಗಾಗಿ ನನ್ನ ಈ ಅಪಕ್ವ ಮತ್ತು ಒರಟು ಹೋಲಿಕೆಗಾಗಿ ನನ್ನನ್ನು ಕ್ಶಮಿಸಬೇಕು. ಆದರೆ ಈ ಹೋಲಿಕೆಯು ನನ್ನ ಮನದಲ್ಲಿ ಉಳಿದುಕೊಂಡಿತು. ರಿಲ್ಕ್ರ ಕವಿತೆಯ ಮೂಲಕ ನೀತ್ಶೆ ಅವರ ಕೃತಿಯಾದ, ``Birth of Tragedy from the Spirit of Music'' ಕ್ಕೆ ಹಿಂತಿರುಗಿದೆ. ಇಲ್ಲಿ ನೀತ್ಶೆ ಅವರು ಮೊದಲ ಬಾರಿಗೆ, ಡಯೋನಿಸಿಸ್ ಮತ್ತು ಅಪೋಲೊ ಅವರ ನಡುವಿನ ವಿರೋಧವನ್ನು ಹಾಗೂ ಆಟಿಕ್ ಟ್ರ್ಯಾಜೆಡಿಯ ದುರಂತದ ವಿರೋಧದ ಮಸೂದೆಯನ್ನು ಪ್ರಸ್ತಾಪಿಸಿದರು. ವಾರಕರಿ ಭಕ್ತ ಕವಿಗಳಿಗಾಗಿ ಇರುವ ವಿಠ್ಠಲನ ರಹಸ್ಯಮಯವಾದ ಅರ್ಥವನ್ನು ಕಂಡುಕೊಳ್ಳಲೆಂದು ನಾನು ಆ ವಿಗ್ರಹದ ಪ್ರತಿಮಾಶಿಲ್ಪವನ್ನು ಅವಲೋಕಿಸಲು ಶುರು ಮಾಡಿದೆ. ವಿಠ್ಠಲನ ಅನನ್ಯವಾದ ನಿಲುವಿನತ್ತ ಗಮನ ಹರಿಸುವುದು ಸರಿಯಾದ ಸಂಗತಿಯಾಗಿತ್ತು.
ನಾನು ಇಲ್ಲಿ ಇದನ್ನು ಸ್ಮರಿಸಿಕೊಳ್ಳಲು ಕಾರಣವೇನೆಂದರೆ, ಅದೇ ಅಭಂಗವನ್ನು ಕಾಲ ಕಾಲಕ್ಕೆ ಅನುವಾದಿಸುತ್ತಲಿದ್ದೆ. ನನ್ನ ಈವರೆಗಿನ ಕೊನೆಯ ಅನುವಾದವು ಕಳೆದ ವರ್ಷದ್ದು. ಈ ಪ್ರತಿಯೊಂದು ಅನುವಾದವು ಒಂದೇ ಪಠ್ಯದಿಂದ ಬಂದುದು ಮತ್ತು ಅದರತ್ತಲೇ ಮುಖಮಾಡಿದುದು. ಇದೇ ಅನುವಾದಕನು ಅವೆಲ್ಲವನ್ನು ಯತ್ನಿಸಿದವನು. ಆದರೆ ಒಂದು ಇನ್ನೊಂದಕ್ಕಿಂತ ಹೆಚ್ಚು ಸೂಕ್ತ ಇಲ್ಲವೆ ಸಮಂಜಸವಾದುದೆಂದು ಯಾರಾದರೂ ಹೇಳಬಲ್ಲರೆ? ಈ ಅನುವಾದಗಳು ಮೂಲದ ಪಠ್ಯದಿಂದ ಸ್ವತಂತ್ರವಾಗಿ ಇರಬಲ್ಲುವೆ? ಅವು ಒಂದರಿಂದ ಇನ್ನೊಂದು ಸ್ವತಂತ್ರವಾಗಿ ಇರಬಲ್ಲುವೆ? ಅಥವಾ ಅವು ತುಕಾರಾಮರ ಕಾವ್ಯ ಸಂಕಲನದ ಮೂಲ ಪಠ್ಯದ ಹೊರತಾಗಿ ಈಗ ಬೇರೆ ಬೇರೆ ಭಾಷೆಗಳಲ್ಲಿ ಇನ್ನೂ ಬಹಳಷ್ಟು ಸಂಗತಿಗಳನ್ನು ಒಳಗೊಳ್ಳುತ್ತ ಬೆಳೆಯುತ್ತಿರುವ ಅವರ ವಿಶಾಲವಾದ ಸಾಹಿತ್ಯಕ್ಕೆ ಸೇರಿದವುಗಳೆ? ಒಂದು ಸಿದ್ಧಾಂತವೆಂಬುದು ಇರಲು ಸಾಧ್ಯವಿದ್ದರೆ, ಇವು ಸಾಹಿತ್ಯ-ಸಿದ್ಧಾಂತ ಹಾಗೂ ಸಾಹಿತ್ಯದ ಅನುವಾದ-ಸಿದ್ಧಾಂತದ ಮೂಲ ಸಮಸ್ಯೆಗಳು.
ಈ ಸಂದರ್ಭದಲ್ಲಿ ನಾನು ನವೆಂಬರ ೧೯೮೮ರಲ್ಲಿ ಹೆಡೆಲ್ಬರ್ಗ್ ವಿಶ್ವವಿದ್ಯಾಲಯದ ದಕ್ಷಿಣ ಏಶಿಯ ಸಂಸ್ಥೆಯಲ್ಲಿ ನೀಡಿದ “ಅಜ್ಞೇಯ ಸ್ಮೃತಿ ಉಪನ್ಯಾಸ”ದ ಭಾಗವನ್ನು ವಿಸ್ತಾರದಿಂದ ಇಲ್ಲಿ ನಿರೂಪಿಸಬಯಸುತ್ತೇನೆ. ನನ್ನ ವಿಷಯವು ಒಬ್ಬ ಅನುವಾದಕ, ಅದರಲ್ಲೂ ವಿಷೇಷವಾಗಿ ಇಂದಿನ ಯುರೋಪಿನ ಭಾಷೆಯಲ್ಲಿ ತುಕಾರಾಮರ ಅನುವಾದಕನಾದ ನನ್ನ ಜೀವನವನ್ನು ಕುರಿತಾಗಿತ್ತು.
ಕಳೆದ ನಾಲ್ಕು ದಶಕಗಳಿಂದ ತುಕಾರಾಮರ ಅನುವಾದವು ಬಹುಮಟ್ಟಿಗೆ ಎರಡು ಭಿನ್ನ ನಾಗರಿಕತೆಗಳ ಎರಡು ಭಾಷಿಕ ಸಂಸ್ಕೃತಿಗಳ ನಡುವಿನ ನಿರ್ಜನ ಪ್ರದೇಶದ ಜನರು ಮಾತ್ರ ಅರ್ಥಮಾಡಿಕೊಳ್ಳಬಲ್ಲ ಸಮಸ್ಯೆಗಗಳೊಂದಿಗೆ ಜೀವಿಸಲು ನನಗೆ ನೆರವಾಗಿದೆ.
ನಾನು ಈ ಮೊದಲೇ ಹೇಳಿದಂತೆ, ತುಕಾರಾಮರ ಸಂಕಲನೆಗಳ ಸಾಂಪ್ರದಾಯಿಕ ಆವೃತ್ತಿಗಳನ್ನು ಮುಂದಿನ ತಲೆಮಾರಿನ ಭಕ್ತರಿಂದ ಮೌಖಿಕವಾಗಿ ರಕ್ಷಿಸಲಾದ ಮತ್ತು ಬಿತ್ತರಿಸಲಾದ ಅಭಂಗಗಳಿಂದ ಸಂಕಲಿಸಲಾಗಿದೆ. ಅವುಗಳಲ್ಲಿ ಕೆಲವು ಇದಕ್ಕೂ ಹಳೆಯ ಅಭಂಗಗಳ ನಕಲುಗಳು. ಆದರೆ ತುಕಾರಾಮರ ಕೈಬರಹದವೆಂದು ನಂಬಲಾದ, ದೇಹುವಿನ ದೇವಾಲಯದಲ್ಲಿದ್ದ, ಸಂತ ವಂಶದ ಆಸ್ತಿಯಾಗಿ ಉಳಿದಿರುವ, ಪ್ರತಿಯ ೨೫೦ ಅಭಂಗಗಳು ನಮಗೆ ಲಭ್ಯ. ಈ ಕೈಬರಹದ ಪ್ರತಿಯು ನಿಧಾನವಾಗಿ ತೆರವಾಗುತ್ತಿರುವ ಬಗೆಗೆ ಹೇಳಿಯಾಗಿದೆ. ಹೀಗಾಗಿ ತುಕಾರಾಮರ ಕೃತಿಗಳ ಸಂಕಲನದ ವಿಧಿವತ್ತಾದ ಪ್ರತಿಯು ಅಸ್ತಿತ್ವದಲ್ಲಿಲ್ಲ. ವಿಷ್ಣು ಪರಶುರಾಮ ಶಾಸ್ತ್ರಿ ಪಂಡಿತರಿಂದ ೧೮೭೩ರಲ್ಲಿ ಶಂಕರ ಪಾಂಡುರಂಗ ಪಂಡಿತರ ನೆರವಿನಿಂದ ತಾಳೆ ನೋಡಿ, ವಿಮರ್ಶಾತ್ಮಕವಾಗಿ ಸಂಪಾದಿಸಲಾದ “ತುಕಾರಾಮಬುವಾಚ್ಯಾ ಅಭಂಗಾಂಚೀ ಗಾಥಾ”ವು ಅಧಿಕೃತವಾದ ಪ್ರತಿಗೆ ಸಮೀಪದ್ದಾದ ಮತ್ತು ನಮ್ಮ ಬಳಿಯಿರುವ ಪ್ರತಿಯಾಗಿದೆ. ಗಮನಾರ್ಹವಾದ ಸಂಗತಿಯೆಂದರೆ, ಪಂಡಿತರು ತಾಳೆ ನೋಡಿದ, ವಿಮರ್ಶಾತ್ಮಕವಾದ ಆವೃತ್ತಿಗಾಗಿ ಬಳಸಿಕೊಂಡ ನಾಲ್ಕು ಪ್ರತಿಗಳಲ್ಲಿ “ತುಕಾರಾಮರ ಕುಟುಂಬದಿಂದ ಪಡೆದ ಮತ್ತು ಅವರ ವಂಶದವರ ವಾರಸು ಸ್ಥಿರಾಸ್ತಿಯಾಗಿ ಮುಂದುವರೆಯುವ ದೇಹುವಿನ ಕೈಬರಹದ ಪ್ರತಿಯು” ಒಂದು. ಆದರೆ ಸಂಪಾದಕರ ಹೇಳಿಕೆಯಂತೆ, “ಇದು ತುಕಾರಾಮರ ಹಿರಿಯ ಮಗನಾದ ಮಹಾದೇವಬುವಾರ ಕೈಬರಹದಲ್ಲಿದ್ದು ಸುಮಾರು ಎರಡು ನೂರು ವರ್ಷಗಳಿಗಿಂತ ಹಳೆಯದಾಗಿ ತೋರುತ್ತದೆ ”. ಏನಿದ್ದರೂ, ತುಕಾರಾಮರ ವಂಶದವರಾದ, ಇಂದಿನ ಎಲ್ಲರಿಗಿಂತಲೂ ಹೆಚ್ಚು ಮುಪ್ಪಿನವರಾದ, ಶ್ರೀ ಶ್ರೀಧರಬುವಾ ಮೋರೆ (ದೇಹೂಕರ) ಅವರು, ದೇಹುವಿನಲ್ಲಿದ್ದ ಕೈಬರಹದ ಪ್ರತಿಯು ತುಕಾರಾಮರ ಕೈಯಿಂದಲೇ ಬರೆದುದಾಗಿದ್ದು, ಅದನ್ನು “ಭಿಜಕೀ ವಹಿ” ಅಥವಾ “ತೊಯ್ದ ಪುಸ್ತಕ” ಎಂದು ಗುರುತಿಸಲಾಗುತ್ತದೆಂದು ನನಗೆ ಹೇಳಿದರು.
ದೇಹುವಿನಲ್ಲಿದ್ದ ಕೈಬರಹವು ತುಕಾರಾಮರ ಕೈಯಿಂದ ಬರೆದುದಾಗಿರಲಿ ಇಲ್ಲವೆ ಇಲ್ಲದಿರಲಿ, ಅದರ ಪ್ರಾಚೀನತೆಯು ಮಾತ್ರ ಪ್ರಶ್ನಾತೀತವಾದುದು. ತುಕಾರಾಮರ ವಂಶದವರು ಇದನ್ನು ತಮ್ಮ ಹೆಮ್ಮೆಯ ಆಸ್ತಿಯಾಗಿ ಕಾಪಾಡಿಕೊಂಡು ಬಂದಿದ್ದಾರೆ. ಪಂಡಿತರು ವೀಕ್ಷಿಸಿದ ಉಳಿದ ಮೂರು ಪ್ರತಿಗಳೆಂದರೆ, ತ್ರಿಂಬಕ ಕಾಸಾರ ಅವರ ತಳೇಗಾವದ ಕೈಬರಹ, ಪಂಢರಪುರದ ಕೈಬರಹ, ಮತ್ತು ಗಂಗಾಧರ ಮಾವಳ ಅವರ ಕಡುಸಾ ಕೈಬರಹದ ಪ್ರತಿ. ಸಂಪಾದಕರು ಅದೆಷ್ಟೇ ಎಚ್ಚರ ವಹಿಸಿದ್ದರೂ, ಉತ್ತಮವೂ, ವಿಶ್ವಾಸಾರ್ಹವೂ ಆದ ಈ ಆವೃತ್ತಿಯಲ್ಲಿ, ಕಣ್ಣು ತಪ್ಪಿಸಿ ಕೆಲವು ಪ್ರಕ್ಷಿಪ್ತ ದೋಷಗಳು ಸೇರಿಕೊಂಡಿರಲು ಸಾಕು. ನಾನು ಹೊತ್ತು ಹೊತ್ತಿಗೆ ಜೋಗ, ಸಾಖರೆ ಮತ್ತು ನೇವೂರಗಾವಕರ ಅವರಂತಹ ಬೇರೆ ಆವೃತ್ತಿಗಳನ್ನು ಪರಿಶೀಲಿಸಿದ್ದರೂ, ನಾನು ಮುಖ್ಯವಾಗಿ ಪರಿಶೀಲಿಸಿದ್ದು ಇದೇ ಮೂಲ ಪಠ್ಯವನ್ನು.
ತುಕಾರಾಮರ ಬೇರೆ ಬೇರೆ ಆವೃತ್ತಿಗಳ ಕಾವ್ಯ ಸಂಕಲನಗಳನ್ನು ಓದಿದಾಗೆಲ್ಲ ನನಗೆ ಹೊಳೆದ ಸಂಗತಿಯೆಂದರೆ ಆಯಾ ಪಠ್ಯಗಳ ಏರುಪೇರುಗಳಾಗಿರದೆ, ಅಭಂಗಗಳ ಹಲವು ಬಗೆಯ ಕ್ರಮವಾರುಗಳು ಕಂಡುಬಂದುದು. ನಿರೂಪಣೆ ಅಥವಾ ವಸ್ತುವಿನ ಸಂಬಂಧಗಳಿಂದ ಇಲ್ಲವೆ ಸ್ಪಷ್ಟವಾಗಿ ವ್ಯಕ್ತಪಡಿಸಲಾದ ವಿಷಯ ಮತ್ತು ಪ್ರಕರಣಗಳಿಂದ ಜೋಡಿಸಲ್ಪಟ್ಟ ಅಭಂಗಗಳ ಹಲವು ಬಗೆಯ ಗುಂಪುಗಳಿದ್ದರೂ, ತುಕಾರಾಮರ ಕೃತಿಗಳ ಕಾಲಾನುಕ್ರಮದ ಬಗೆಗೆ ಯಾವುದೇ ಬಗೆಯ ಸುಳಿವಿಲ್ಲ. ಅವು ಸಿಕ್ಕಾಬಟ್ಟೆಯ ಸರಣಿಯಲ್ಲಿ ಕಾಣಿಸಿಕೊಳ್ಳುತ್ತವೆ. ಬಹಳ ಸಲ ಪ್ರತಿಯೊಂದು ಕವನಕ್ಕೆ ಶೀರ್ಷಿಕೆ ಇಲ್ಲದೆ ಅವು ಅವ್ಯವಸ್ಥಿತವಾದ ಕಾವ್ಯ ಸಂಕಲನೆಗಳಾಗಿ ಕಾಣಿಸಿಕೊಳ್ಳುತ್ತವೆ. ಸ್ವಲ್ಪದರಲ್ಲಿ ಹೇಳುವುದಾದರೆ, “ಗಾಥಾ”ದ ಮುಖ್ಯ ಕೊರತೆಯೆಂದರೆ, ವಸ್ತು ಇಲ್ಲವೆ ಕಾಲಾನುಕ್ರಮದ ಸುಸಂಗತವಾದ ಒಂದು ಕ್ರಮ ಅಥವಾ ಒಂದು ಸಂಪಾದಕೀಯ ಯೋಜನೆಯು ಇಲ್ಲದಿರುವುದು. ಇಡಿಯ “ಗಾಥಾ”ವು ಮುಖ್ಯವಾಗಿ ಒಂದು ಆತ್ಮಚರಿತ್ರಾತ್ಮಕವಾದ ಕೃತಿಯಾಗಿದ್ದು, ಅಲ್ಲಲ್ಲಿ ಬರುವ ನಿರೂಪಣೆಯ ಕವನಗಳು, ಪ್ರಕರಣಗಳ ಕವನಗಳು, ವಿಶಿಷ್ಟವಾದ ವಸ್ತುಗಳನ್ನು ಕುರಿತಾದ ಕವನಗಳು, ಗೀತೆಗಳು, ಪತ್ರರೂಪದ ಕಾವ್ಯಗಳು, ಸೂಕ್ತಿಯ ಪದಗಳು, ಪ್ರಾರ್ಥನೆಗಳು, ಬಗೆ ಬಗೆಯ ವ್ಯಕ್ತಿಗಳು, ರೂಪಕ ಕಥೆಗಳನ್ನು ಬಳಸಿಕೊಂಡ ಕಾವ್ಯ ಮತ್ತು ಇನ್ನೂ ಹಲವು ಬಗೆಯ ಕಾವ್ಯಗಳಿಂದಾಗಿ ಅದನ್ನು ಇಡಿಯಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟದ್ದು.
ನನಗಂತೂ “ತುಕಾರಾಮಾಚೀ ಗಾಥಾ”ವನ್ನು ಪವಿತ್ರವಾಗಿ ಗ್ರಹಿಸುವುದು ಅಗತ್ಯದ್ದಾಗಿ ಕಾಣುತ್ತದೆ. ನಾನು ಇದನ್ನು ಒಂದು ಆತ್ಮಚರಿತ್ರೆಯಾಗಿ ಭಾವಿಸುವುದರಿಂದ ನನ್ನೆದುರಿನ ೪೦೦೦ ಅಭಂಗಗಳಿಗೆ ಕಾಲಾನುಕ್ರಮವನ್ನು ನೀಡಲಾರೆನಾದರೂ, ತುಕಾರಾಮರ ವ್ಯಕ್ತಿತ್ವ ಹಾಗೂ ಅವರ ಕಾವ್ಯವು ಬೇರೆ ಬೇರೆ ಮಾರ್ಪಾಟುಗಳ ಮೂಲಕ ಹಾಯ್ದು ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾಗಿ ನಡೆದ ಅವರ ಬೆಳವಣಿಗೆಯೊಂದಿಗೆ ಇಲ್ಲಿಯ ಹೆಚ್ಚಿನ ಕವನಗಳು ಹೊಂದಿದ ನಂಟನ್ನು ತೋರಿಸಲು ನನಗೆ ಸಾಧ್ಯವಾದೀತು. ಈ ಪುಸ್ತಕವು ತುಕಾರಾಮರನ್ನು ಒಬ್ಬ ಇಡಿಯ ವ್ಯಕ್ತಿಯಾಗಿ ಅವರ ಕೆಲವು ಗುಣವಿಶೇಷಗಳೊಡನೆ ಅರಿತುಕೊಳ್ಳಲು ಯತ್ನಿಸುತ್ತದೆ: ಇದು ಒಬ್ಬ ಕವಿ ಮತ್ತು ಅವರ ಕಾವ್ಯಗಳ ಮಗ್ಗಲುಗಳನ್ನು ಹೊಂದಿರುವ ತುಕಾರಾಮರಿಗೆ ಒಂದು ಮುನ್ನುಡಿಯಾಗಿದೆ. ನನ್ನ ಮರಾಠಿಯ ಪುಸ್ತಕ, “ಪುನ್ಹಾ ತುಕಾರಾಮ”ದಲ್ಲೂ ಇಂಥದೇ ಯತ್ನವನ್ನು ಮಾಡಿರುವೆನು. ಅದರಲ್ಲಿ ತುಕಾರಾಮರ ಮೂಲದ ಅಭಂಗಗಳ ಇಂಥದೇ ಅಯ್ಕೆಯನ್ನು ಒಂದು ಮುನ್ನುಡಿ, ಒಂದು ಬಗೆಯ ಓಟದ ನಿರೂಪಣೆ ಮತ್ತು ಒಂದು ಹಿನ್ನುಡಿಯೊಂದಿಗೆ ನೀಡಿದ್ದೇನೆ. ಆದರೆ ಮರಾಠಿಯ ಪುಸ್ತಕವನ್ನು ಒಳಗಿನವರಿಗಾಗಿ ಉದ್ದೇಶಿಸಿದ್ದು ಅವರು ಉಳಿದ ಸಂಗತಿಗಳಂತೆಯೇ ಮರಾಠಿ ಸಂಸ್ಕೃತಿಯ ವಿಮರ್ಶಕರೆಂದು ಬಗೆಯಲಾಗಿದೆ. ಈಗಿನ ಪುಸ್ತಕದಲ್ಲಿ ನನ್ನ ದ್ವಿಭಾಷಾತನವು ಬೇರೆಯದೇ ಆದ ಮಟ್ಟದಲ್ಲಿ ಕೆಲಸವನ್ನು ಮಾಡುತ್ತಿದೆ. ಇವೆರಡೂ ಸಂಗತಿಗಳನ್ನು ಪರಸ್ಪರರಿಂದ ಕೈಬಿಡಲಾಗದೆನ್ನುವುದೂ ಅಷ್ಟೇ ನಿಜ. ನನ್ನ ಇಂಗ್ಲಿಷ್ ಓದುಗರು ಮರಾಠಿಯ ಸಾಹಿತ್ಯ ಕೃತಿಗಳ ಪರಿಚಯವನ್ನು ಹೊಂದಿರಲಿಕ್ಕಿಲ್ಲವೆಂದು ಬಗೆದು ಅವರಿಗೆ ಮರಾಠಿಯ ಸರ್ವಶ್ರೇಷ್ಠರಾದ ಕವಿಗಳನ್ನು ಪರಿಚಯಿಸಲು ಯತ್ನಿಸಿದ್ದೇನೆ. ಈ ಭಾಷೆಯನ್ನು ಅರಿತಿರುವ ಒಂದು ಬಲು ದೊಡ್ಡ ಲಾಭವೆಂದರೆ, ತುಕಾರಾಮರ ಕೃತಿಗಳನ್ನು ನೇರವಾಗಿ ಓದಿಕೊಳ್ಳಬಹುದೆಂಬುದು.
ನನ್ನೀ ಆಂಗ್ಲ ಪುಸ್ತಕವನ್ನು ಹತ್ತು ವಿಭಾಗಗಳನ್ನಾಗಿ ಮಾಡಿದ್ದೇನೆ.
೧. ಕವಿಯಾಗಿರುವುದು
೨. ಒಬ್ಬ ಮನುಷ್ಯನಾಗಿರುವುದು
೩. ಒಬ್ಬ ಭಕ್ತನಾಗಿರಿವುದು
೪. ಅಲ್ಲೋಲ ಕಲೋಲದಲ್ಲಿ ಇರಿವುದು
೫. ಸಂತನಾಗಿರುವುದು
೬. ಒಬ್ಬ ಋಷಿಯಾಗಿರುವುದು
೭. ದೇಶ - ಕಾಲದಲ್ಲಿ ಇರುವುದು
೮. ಪೂಜ್ಯರಾಗಿರುವುದು
೯. ನಿರುಪಾಧಿಕವಾಗಿರುವುದು
೧೦. ಇರುವಿಕೆಗೆ ಬೀಳ್ಕೊಡುಗೆ
ಈ ಹತ್ತು ಬದಿಗಳು ಅಥವಾ ಆಯಾಮಗಳು ತುಕಾರಾಮರ ವ್ಯಕ್ತಿತ್ವದ ಇಡಿಯ ಇರುವಿಕೆಯ ಅಭೇದ್ಯವಾದ ಭಾಗಗಳಾಗಿವೆ. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಒಂದು ಇನ್ನೊಂದಕ್ಕಿಂತ ಹೆಚ್ಚು ಮಹತ್ವದ್ದಲ್ಲ. ಈ ಸಂಗತಿಗಳನ್ನು ಮಾನಸಿಕ ಇಲ್ಲವೆ ಕಾಲಾನುಕ್ರಮದಲ್ಲಿ ಸಾಲಾಗಿ ಇಲ್ಲವೆ ಅನುಕ್ರಮವಾಗಿ ಕಾಣುವಂತಿಲ್ಲ. ತುಕಾರಾಮರ ಕಾವ್ಯವು ಬಹಳಷ್ಟು ಮಟ್ಟಿಗೆ ಆತ್ಮಚರಿತ್ರಪರ ಇಲ್ಲವೆ ವ್ಯಕ್ತಿಗತವಾದದ್ದು. ಅದನ್ನು ಈ ಸಂಗತಿಗಳಿಗೆ ತಕ್ಕ ಹಾಗೆ ವಿಭಾಗಿಸಿದರೆ ಅವುಗಳನ್ನು ಸೂಕ್ತವಾಗಿ ಗ್ರಹಿಸಲು ಸಾಧ್ಯ.
ಈ ವಿನ್ಯಾಸದಂತೆ ಗ್ರಹಿಸಲಾಗಿ ತುಕಾರಾಮರ ಬದಿಗಳು ಅವರ ಆಂತರಿಕ ಆವಶ್ಯಕತೆಗಳಾಗಿರುವಂತೆಯೇ ಅವು ಅವರ ಸಾಮರ್ಥ್ಯವೂ ಆಗಿದೆ. ಅವು ಅವರ ಸಂವೇದನಶೀಲತೆಯನ್ನು ತೋರಿಸುತ್ತವೆ. ಅವು ಅವರ ನೈತಿಕತೆಯನ್ನು ತೋರಿಸುತ್ತವೆ. ಅವು ಇಡಿಯ ಪ್ರಪಂಚ - ದೃಷ್ಟಿಯನ್ನು ಒಳಗೊಂಡಿವೆ. ಈ ಹತ್ತು ಸಂಗತಿಗಳು ತುಕಾರಾಮರ ಅರಿವಿನ ವಿಶ್ವವನ್ನು ವ್ಯಾಪಿಸುತ್ತವೆ.
ತುಕಾರಾಮರ ಜೀವನ ಮತ್ತುಅವರ ಕಾವ್ಯದ ಈ ಹತ್ತು ಬದಿಗಳು ನನ್ನರಿವಿಗೆ ಬರುತ್ತಲೇ ನನ್ನೀ ಪುಸ್ತಕದ ಕವನಗಳು ತಮ್ಮನ್ನು ತಾವೇ ಆಯ್ದುಕೊಂಡವು. ಕೆಲವು ಹೆಸರಾದ ಅಭಂಗಗಳನ್ನು ಈ ಸಂಕಲನದಲ್ಲಿ ಸೇರ್ಪಡಿಸದಿರಲು ನಾನು ನನ್ನ ಮೇಲೆ ಹಾಕಿಕೊಂಡ ನಿರ್ಬಂಧವೇ ಕಾರಣ. ಈವರೆಗೆ ತುಕಾರಾಮರ ೧೨೦೦ ಅಭಂಗಗಳನ್ನು ಅನುವಾದಕ್ಕಾಗಿ ಅಂತಿಮಗೊಳಿಸಿದ್ದೇನೆ. ಈ ಪುಸ್ತಕಕ್ಕಾಗಿ ಕವನಗಳನ್ನು ಆಯ್ದುಕೊಳ್ಳುವಾಗ ತುಕಾರಾಮರ ಕಾವ್ಯದ ಮೂಲಕ ಅವರ ಸ್ವಂತದ ಚಿತ್ರಣವನ್ನು ಕೈಕೊಳ್ಳಬೇಕೆನ್ನುವುದು, ನನಗೆ ದಾರಿ ತೋರುವ ಸಂಗತಿಯಾಗಿತ್ತು. ಅವರ ಮಹಾಸಾಗರದಂತಹ ಕಾರ್ಯದತ್ತ ನೋಡಲು ಇನ್ನೂ ಹಲವಾರು ದಾರಿಗಳಿವೆ. ಅವುಗಳಲ್ಲಿ ನನ್ನದು ಒಂದು, ಅಷ್ತೆ.
ತುಕಾರಾಮರು ಜ್ಞಾನೇಶ್ವರರಿಂದ ಶುರುವಾದ ಮರಾಠಿ ಸಾಹಿತ್ಯದ ಶ್ರೇಷ್ಠ ಸಂಪ್ರದಾಯದ ಒಂದು ಭಾಗ. ವಿಶಾಲಾರ್ಥದಲ್ಲಿ ಹೇಳುವುದಾದರೆ ಇದು ಅಖಿಲ ಭಾರತೀಯ ಮಟ್ಟದ ಭಕ್ತಿ ಸಂಪ್ರದಾಯದ ಒಂದು ಭಾಗವು. ಇದು ಮಹಾರಾಸ್ಟ್ರದಲ್ಲಿ ಪಂಢರಪುರದಲ್ಲಿ ಇರುವ ದೇವನಾದ ವಿಠೋಬನ ಭಕ್ತಿ ಸಂಪ್ರದಾಯದ ಸ್ವರೂಪವನ್ನು ಅಂಗೀಕರಿಸಿತು. ವಾರಕರಿಗಳು ಅವನನ್ನು ಆರಾಧಿಸುತ್ತಾರೆ. ಅವರು ಮಹಾರಾಷ್ಟ್ರ ಹಾಗೂ ಸುತ್ತಲ ನಾಡುಗಳಿಂದ ಪಂಢರಪುರಕ್ಕೆ ಯಾತ್ರೆಗೆಂದು ಹೋಗುತ್ತಾರೆ. ಜ್ಞಾನದೇವರು ತಮ್ಮ “ಜ್ಞಾನದೇವಿ” ಅಥವಾ “ಭಾವಾರ್ಥದೀಪಿಕಾ” (ಈಗ ಜ್ಞಾನೇಶ್ವರಿ” ಎಂದು ಹೆಸರಾದುದು), “ಅನುಭವಾಮೃತ” ಮತ್ತು “ಚಾಂಗದೇವ ಪಾಸಷ್ಟಿ”ಯಲ್ಲದೆ ಪದ್ಯರೂಪದ ಪ್ರಾರ್ಥನೆಗಳು, ಸ್ತೋತ್ರಗಳನ್ನು ನೀಡಿ ವಾರಕರಿ ಚಳುವಳಿಗೆ ಅದರದೇ ಆದ ಪವಿತ್ರ ಗ್ರಂಥಗಳನ್ನು ಒದಗಿಸಿದ್ದಾರೆ. ಅವರ ಸಮಕಾಲೀನರಲ್ಲಿ ಮರಾಠಿಯ ಇನ್ನೊಬ್ಬ ಶ್ರೇಷ್ಠ ಕವಿ ಹಾಗೂ ಸಂತರಾದ ನಾಮದೇವರು ಮತ್ತು ಶ್ರೇಷ್ಠ ಕವಿಗಳ ಹಾಗೂ ಕವಯಿತ್ರಿಯರ ಆಕಾಶಗಂಗೆಯಂತಹ ವಿಶಾಲವಾದ ಸಮುದಾಯವೇ ಇದ್ದಿತು. ವಿಠೋಬನ ಈ ಭಕ್ತಕವಿಗಳು ತಮ್ಮ ರಚನೆಗಳನ್ನು ಪಂಢರಪುರದ ತಮ್ಮ ನಿತ್ಯದ ಯಾತ್ರೆಯ ಕಾಲಕ್ಕೆ ಹಾಡುತ್ತಿದ್ದರು. ಹದಿನಾರನೆಯ ಶತಮಾನದಲ್ಲಿ ವಾರಕರಿ ಸಂಪ್ರದಾಯವು ತನ್ನ ಇನ್ನೊಬ್ಬ ಶೇಷ್ಠ ಕವಿಗೆ ಜನ್ಮ ನೀಡಿತು. ಅವರ ತರುವಾಯ ಹದಿನೇಳನೆಯ ಶತಮಾನದಲ್ಲಿ ತುಕಾರಾಮರು ಬಂದರು.
ತುಕಾರಾಮರ ಕಿರಿವಯಸ್ಸಿನ ಸಮಕಾಲೀನಳಾದ ಬಹಿಣಾಬಾಯಿ ಶಿರೂರಕರ ಇವಳು ಭಕ್ತಿ ಸಂಪ್ರದಾಯವನ್ನು ವರ್ಣಿಸಲು ದೇಗುಲದ ರೂಪಕವನ್ನು ಬಳಸಿದ್ದಾಳೆ. ಜ್ಞಾನದೇವರು ಅಡಿಪಾಯವನ್ನು ಇರಿಸಿದರು; ನಾಮದೇವರು ಅದರ ಗೋಡೆಗಳನ್ನು ಕಟ್ಟಿದರು; ಏಕನಾಥರು ಅದರ ನಟ್ಟನಡುವಿನ ಕಂಬವನ್ನು ನಿಲ್ಲಿಸಿದರು; ತುಕಾರಾಮರು ಅದರ ಗೋಪುರದ ಕಳಸವಾದರು; ಎಂದೆನ್ನುತ್ತಾಳೆ. ಬಹಿಣಾಬಾಯಿಯು ವಾರಕರಿ ಸಂಪ್ರದಾಯವನ್ನು ಆ ನಾಲ್ವರು ಮಹಾನ್ ಕವಿಗಳು ಮತ್ತು ಅವರ ಹಲವು ಜನ ಬುದ್ಧಿವಂತರಾದ ಅನುಯಾಯಿಗಳು ಕೂಡಿ ಕಟ್ಟಿದ ಒಂದು ಅತ್ಯುತ್ಕೃಷ್ಟವಾದ ವಾಸ್ತುವನ್ನಾಗಿ ಕಾಣುತ್ತಾಳೆ. ಒಂದು ಸಮಾನ ಸಂಪ್ರದಾಯದ ಪ್ರತಿಭೆಯು ಮಾತ್ರ ಹುಟ್ಟುಹಾಕಲು ಸಾಧ್ಯವಿದ್ದ ಬೇರೆ ಬೇರೆ ವ್ಯಕ್ತಿಗಳು ಬೇರೆ ಬೇರೆ ಶತಮಾನಗಳಲ್ಲಿ ತಯಾರಿಸಿದ ಬಿಡಿ ಭಾಗಗಳನ್ನು ಸೇರ್ಪಡಿಸಿ ಇಡಿಯಾಗಿ ತಯಾರಿಸಿದ ಒಂದು ಸಾಮೂಹಿಕ ಕಲಕೃತಿಯೆಂದು ಇದನ್ನು ಅವಳು ಸರಿಯಾಗಿಯೇ ಗುರುತಿಸುತ್ತಾಳೆ.
ಮರಾಠಿ ವಾರಕರಿ ಕವಿಗಳ ಸಾಧನೆಯು ಮಹಾರಾಷ್ಟ್ರದ್ದೇ ಆದ ಇನ್ನೊಂದು ಉದಾಹರಣೆಯೊಂದಿಗೆ ಸಮಾಂತರವಾದುದು, ಎಂದು ಭಾವಿಸುತ್ತೇನೆ. ಅಜಂತೆಯ ಭಿತ್ತಿ ಚಿತ್ರಗಳು ಮತ್ತು ಎಲ್ಲೋರಾದ ವಾಸ್ತು-ಶಿಲ್ಪಗಳು ಇದೇ ಬಗೆಯಾಗಿ ಸಾತತ್ಯದಿಂದ ಒಂದುಗೂಡಿಸಿ ತಯಾರಿಸಲಾದ ಅತ್ಯುತ್ಕೃಷ್ಟವಾದ ಸಮೂಹಿಕ ಕಲೆಯನ್ನು ಒಳಗೊಂಡಿವೆ. ಇವು ವ್ಯಕ್ತಿಗತವಾದ ಕರ್ತೃತ್ವಕ್ಕೆ ಹೆಚಿನ ಒತ್ತು ಕೊಡದ ಸೃಜನಶೀಲ ಸಂಸ್ಕೃತಿಯಿಂದ ಸಮೂಹಿಕವಾಗಿ ತಯಾರಿಸಲಾದವುಗಳು. ಇದು ಸೃಜನಶೀಲವಾದ ಸ್ಫೂರ್ತಿಯುಳ್ಳ, ಕಲ್ಪಕತೆ ಮತ್ತು ಸಾಮರ್ಥ್ಯವನ್ನು ಹೊಂದಿದ ಒಂದು ಸಮೂಹವಾಗಿದ್ದು ಇದು ಹಲವು ತಲೆಮಾರುಗಳವರೆಗೆ ಇಂಥ ಕೆಲಸವನ್ನು ತಡೆದುಕೊಳ್ಳಬಲ್ಲುದು.
ರಹಸ್ಯವು ಭಕ್ತಿಯ ಮನೋಧರ್ಮವಾಗಿ ಕಾಣುತ್ತದೆ.
ಭಕ್ತಿಯ ಬೇರುಗಳು ಅಭಿಜಾತ ಹಿಂದೂ ತತ್ವಶಾಸ್ತ್ರಕ್ಕಿಂತಲೂ ಹೆಚ್ಚಾಗಿ ಜಾನಪದ ಸಂಸ್ಕೃತಿಯಲ್ಲಿವೆ. ವಾರಕರಿಗಳನ್ನು ಕುರಿತು ಹೇಳುವುದಾದರೆ ಜ್ಞಾನದೇವರೊಬ್ಬರೇ ಅವರ ತತ್ವಜ್ಞಾನಿಗಳಗಿದ್ದರು. ಜ್ಞಾನದೇವರು
ವಿಧಿಯುಕ್ತವಾಗಿ ದೀಕ್ಷಾಬದ್ಧರಾಗಿ ಶೈವ,ನಾಥ ಪಂಥದಲ್ಲಿ ಪ್ರವೇಶ ಪಡೆದ ಸದಸರಾಗಿದ್ದರು. ಅವರು ವಿಠೋಬ ಪಂಥಕ್ಕೆ ಸೇರಿದುದು ಮತ್ತು ಅದಕ್ಕೆ ಕಾಶ್ಮೀರದ ಶೈವಾಗಮಗಳ ಆಚಾರ್ಯರ ಉಪದೇಶಗಳನ್ನಾಧರಿಸಿದ ತತ್ವಶಾಸ್ತ್ರವನ್ನು ನೀಡಿದುದು ಒಂದು ಹೊಸ ವಿಧಾನವಾಗಿತ್ತು. ಜ್ಞಾನದೇವರ ಮನಸ್ಸು ಅಭಿನವಗುಪ್ತರಷ್ಟೇ ಉಜ್ವಲವೂ, ಮೂಲಗಾಮಿಯೂ ಆಗಿತ್ತು. ಧಾರ್ಮಿಕ ತತ್ವಶಾಸ್ತ್ರದ ತಮ್ಮ ಬೀಜರೂಪದ ಕೃತಿಯಾದ “ಅನುಭವಾಮೃತ”ದಲ್ಲಿ, ಜ್ಞಾನೇಶ್ವರರು ಭಕ್ತಿಯನ್ನು ಚಿದ್ವಿಲಾಸವೆಂದು ಇಲ್ಲವೆ “ಸೃಜನಶೀಲ ಪ್ರಜ್ಞೆಯ ಉತ್ಸ್ಫೂರ್ತವಾದ ಆಟ”ವೆಂದು ವರ್ಣಿಸಿದ್ದಾರೆ. ತುಕಾರಾಮರು ತಮ್ಮ ಜಗತ್ತಿನ ದೃಷ್ಟಿಕೋನದ ಬಗೆಗೆ ಜ್ಞಾನೇಶ್ವರರ ವಾರಸನ್ನು ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಾರೆ. ಆದರೆ, ತುಕಾರಾಮರು ಬಲು ಕಷ್ಟಕರವಾದ ಯಾತನೆಗಳು ಮತ್ತು ಸಂಕಟಗಳಿಂದ ಕೂಡಿದ ಬಾಳಿಡಿಯ ಶೋಧನೆಯ ತರುವಾಯವೇ ಜೀವನ್ಮುಕ್ತ ಸಮಾಧಿಯ ಅವಸ್ಥೆಯನ್ನು ತಲುಪಿದರು.
ವಾರಕರಿ ಕಾವ್ಯಮೀಮಾಂಸೆ ಹಾಗೂ ಕಾವ್ಯವ್ಯವಹಾರದ ಸಂಪ್ರದಾಯದ ಹಿರಿದಾದ ಸಂದರ್ಭದ ಹೊರತಾಗಿ ಬೇರಾವ ಮರಾಠಿ ಓದುಗನು ತುಕಾರಾಮರ ಕಾವ್ಯವನ್ನು ಓದಲಾರನು. ಓದುಗರು ತುಕಾರಮರ ಅನುವಾದದಿಂದ ಪ್ರತಿಫಲವನ್ನು ಪಡೆದರೆ ಅವರು ವಾರಕರಿ ಕಾವ್ಯದ ಸಂಪ್ರದಾಯವನ್ನು ಇನ್ನಷ್ಟು ಆಳವಾಗಿ ಅಭ್ಯಸಿಸಬೇಕು. ಅವರಿಗೆ ನಿರಾಶೆಯಾಗದು. ತಾವು ಓದಲು ಆರಂಭಿಸಿದ ತುಕಾರಾಮರ ಒಂದೇ ಕೃತಿಯಲ್ಲಿ ಅವರು ಇದಕ್ಕೂ ಹೆಚ್ಚಿನ ಅನುರಣನವನ್ನು ಅನುಭವಿಸುವರು.
ಇಷ್ಟೊಂದು ವರ್ಷಗಳ ಕಾಲ ನಾನು ತುಕಾರಾಮರೊಡನೆ ಏನು ಮಾಡುತ್ತಿದ್ದೇನೆ, ಎಂದು ಕೇಳಿಕೊಳ್ಳಬಹುದು. ಅದಕ್ಕೆ ಮುಚ್ಚುಮರೆಯಿಲ್ಲದ ನನ್ನ ಉತ್ತರವು ಹೀಗಿದೆ.
ಬಲು ಹಿಂದಿನಿಂದಲೂ ನಾನು ತುಕಾರಾಮರ ಬೃಹತ್ ಹೊತ್ತಿಗೆಯನ್ನು ಮತ್ತೆ ಮತ್ತೆ ತಿರುವಿ ಹಾಕಿದ್ದೇನೆ. ಅದರ ಪ್ರಧಾನೋದ್ದೇಶಗಳನ್ನು ಗುರಿತು ಹಾಕೊಕೊಂಡಿದ್ದೇನೆ. ಅದರ ವಸ್ತುವಿನ ಬಹಳಷ್ಟು ಸಲ ಅದೃಶ್ಯವಾದ, ಆದರೆ ಯಾವಾಗಲೂ ಮನಸ್ಸಿಗೆ ಹಿತಕರವಾದ ಮುಖ್ಯ ಎಳೆಯನ್ನು ಅನುಸರಿಸಿದ್ದೇನೆ. ಪ್ರತಿ ಸಲ ಹೊಸದಾದುದನ್ನು ಕಂಡುಕೊಂಡಿದ್ದೇನೆ. ನಾನು ಹಿಂದಕ್ಕೆ ಗಮನಿಸದಿದ್ದ ಒಂದಿಲ್ಲೊಂದು ಅಭಂಗವು ನನ್ನ ಮುಖದೆದುರೇ ಸ್ಫೋಟಿಸಿದೆ. ತುಕಾರಾಮರ ಅದ್ವಿತೀಯವಾದ ಅಧಿಕಾರವು ನನ್ನನ್ನು ಮತ್ತೆ ಮತ್ತೆ ದಿಙ್ಮೂಢನನ್ನಾಗಿ ಮಾಡಿದೆ.
ಹೀಗಾಗಿ ನಾನು ನನ್ನ ಮೂಲದ ಪಠ್ಯವನ್ನು ಇಡಿಯಾಗಿ ಮತ್ತು ನಾಚಿಕೆ ಪಟ್ಟುಕೊಳ್ಳದ ಗೌರವದ ಭಾವನೆಯಿಂದ ಕಾಣುತ್ತೇನೆ. ಇವು ನನ್ನ ಈಗಿನ ಆಯ್ಕೆಯ ಹಾಗೂ ಅನುವಾದಗಳ ಅರ್ಪಣೆಯ ತಳಹದಿಗಳಾಗಿವೆ. ಈ ಪುಸ್ತಕವನ್ನು ಓದುವವನಿಗೆ ಯಾವುದೇ ಆಕರ ಇಲ್ಲವೆ ಮೂಲ-ಪಠ್ಯದ ಆವಶ್ಯಕತೆಯಿಲ್ಲ. ಇವು ಇಪ್ಪತ್ತನೆಯ ಶತಮಾನದ ಒಬ್ಬ ಕವಿಯು ಬರೆದ ಇಂಗ್ಲಿಷ್ ಭಾಷೆಯ ಸಾದಾ ಕವಿತೆಗಳು. ಅವನು ತುಕಾರಾಮರ ನಂಟನೇನೂ ಅಲ್ಲ. ತುಕಾರಾಮರು ಖುದ್ದಾಗಿ ಇಂಗ್ಲಿಷದಲ್ಲಿ ಯಾವುದೇ ಕವನವನ್ನು ಬರೆದಿಲ್ಲ. ಕವಿತೆಗಳ ಅನುವಾದಗಳೆಂದರೆ ಕಳೆದುಹೋದ ಕವಿಗಳು ಹಾಗೂ ಅವರ ಕಾವ್ಯಗಳನ್ನು ಕುರಿತು ಕಟ್ಟಿದ ಊಹೆಗಳೇ ಸರಿ. ಅವುಗಳನ್ನು ಕವಲುಗೋಲು ಇಲ್ಲವೆ ಅವೈಜ್ಞಾನಿಕವಾದ ಉಪಕರಣಗಳಿಂದ ಮಾಡಲಾಗುತ್ತದೆ. ಆದರೆ ಅವುಗಳ ಯೋಗ್ಯತೆಗೆ ತಕ್ಕ ಅವುಗಳ ಅಸ್ತಿತ್ವವನ್ನು ಅಲ್ಲಗಳೆಯಲಾಗದು, ನಿರಾಕರಿಸಲಾಗದು.
ಪುಣೆ ದಿಲಿಪ ಚಿತ್ರೆ
ಜುಲೈ ೧೯೯೧
ಸಂತ ತುಕಾರಾಮರ ಸಂಕ್ಷಿಪ್ತ ಚರಿತ್ರೆ
ಸಂತ ತುಕಾರಾಮರ ಸಂಕ್ಷಿಪ್ತ ಚರಿತ್ರೆ
- ಹರಿಭಕ್ತ ಪರಾಯಣ (ಹ. ಭ. ಪ.) ಶ್ರೀಧರ ದೇಹೂಕರ
ಕನ್ನಡಾನುವಾದ: ವಿರೂಪಾಕ್ಷ ಕುಲಕರ್ಣಿ
೧೦೯೮/೧೧-ಬಿ, ಪಾರ್ಥ ಹೆರಿಟೇಜ,
ಮಾಡೆಲ್ ಕಾಲನಿ, ಪುಣೆ - ೧೬.
ದೂರವಾಣಿ : ೦೨೦-೨೫೬೫೯೦೬೩
“ಯೇ ತು ಧರ್ಮ್ಯಾಮೃತಮಿದಮ್" - ಗೀತೆ, ೧೨.೨೦
“ತೇ ಹೇ ಗೋಷ್ಟೀ ರಮ್ಯ| ಅಮೃತಧಾರಾಧರ್ಮ್ಯ| ಕರಿತೀ ಪ್ರತೀತಿ ಗಮ್ಯ| ಐಕೋನಿ ಜೇ||"- eನದೇವಿ, ೧೨.೨೩೦
ದೇವರ ಚರಿತ್ರೆಯನ್ನು ಪರಮಾಮೃತ ಎಂದೂ ಭಕ್ತನ ಚರಿತ್ರೆಯನ್ನು ಧರ್ಮ್ಯಾಮೃತ ಎಂದೂ ಅನ್ನಲಾಗಿದೆ. ಸಂತರು ದೇವರ ಚರಿತ್ರೆಗಳನ್ನು ಹಾಡಿ ಹೊಗಳಿ ಹೇಳಿರುವರು. ಆದರೆ ಸಂತರ ಚರಿತ್ರೆಗಳನ್ನು ಕುರಿತು ಹೇಳುವುದು ನಮಗೆ ಬಲು ಕಷ್ಟದ್ದು. ಇದಕ್ಕೆ ಕಾರಣವೆಂದರೆ, ಸಂತರು ತಾವಿದ್ದ ಹಾಗೆ ಕಾಣರು, ಕಾಣುವಂತೆ ಇರರು. ಇದಲ್ಲದೆ ನಮ್ಮ ಶಬ್ದಸೃಷ್ಟಿಗೆ ತನ್ನದೇ ಆದ ಒಂದು ಮಿತಿಯಿದೆ.
ಆಮುತೇ ಕರಾವಯಾ ಗೋಠೀ| ತೇ ಝಾಲೀಚ ನಾಹೀ ವಾಗ್ಸೃಷ್ಟಿ | ಆಮ್ಹಾಲಾಗೀ ದಿಠೀ| ತೇ ದಿಠೀಚ ನೋಹೇ || (ಅಮೃತಾನುಭವ)
ನೀವು ಅವರನ್ನು , ನೀವ್ಯಾರು? ಎಲ್ಲಿಯವರು? ಎಲ್ಲಿಂದ ಬಂದಿರಿ? ಎಲ್ಲಿಗೆ ಹೋಗಲಿರುವಿರಿ? ನಿಮ್ಮ ಹೆಸರೇನು? ನಿಮ್ಮ ರೂಪ ಎಂಥದು? - ಎಂದು ಕೇಳಿದಿರಾದರೆ ಅವರು, ಏನೂ ಇಲ್ಲ - ಅಂದಾರು.
ಕಾಂಹೀಚ ಮೀ ನವ್ಹೇ ಕೋಣಿಯೇ ಗಾಂವೀಚಾ | ಯೇಕಟು ಠಾಯೀಚ್ಯಾ ಠಾಯೀ ಏಕು ||೧||
ನಾಹೀ ಜಾತ ಕೋಠೇ ಯೇತ ಫಿರೋನಿಯಾ | ಅವಘೇಚಿ ವಾಯಾವೀಣ ಬೋಲಿ ||೨||
ತುಕಾ ಮ್ಹಣೇ ನಾವ ರೂಪ ನಾಹೀ ಆಮ್ಹಾ | ವೇಗಳಾ ತ್ಯಾ ಕರ್ಮಾ ಅಕರ್ಮಾಶೀ ||೩||
ಪರಿಸ್ಥಿತಿಯು ಹೀಗಿರುವಲ್ಲಿ , ನಾವು ಸಂತಶ್ರೇಷ್ಠರಾದ ಶ್ರೀ ತುಕಾರಾಮ ಮಹಾರಾಜರ ಮಹಾನ್ ಚರಿತ್ರೆಯ ಕೊಂಚ ಭಾಗವನ್ನು ನೀಡಲು ಯತ್ನಿಸಲಿರುವೆವು.
ಹುಟ್ಟು ಮತ್ತು ಪೂರ್ವಜರು
ಧನ್ಯ ದೇಹುಗಾವ ಪುಣ್ಯಭೂಮೀ ಠಾವ | ತೇಥೇ ನಾಂದೇ ದೇವ ಪಾಂಡುರಂಗ ||೧||
ಸಂತ ತುಕಾರಾಮರ ಜನ್ಮಭೂಮಿ, ಕರ್ಮಭೂಮಿ ಎನ್ನಿಸಿದ ದೇಹೂ ಊರು ಒಂದು ಪುಣ್ಯಭೂಮಿ. ದೇಹೂ ಊರಿಗೆ ಧನ್ಯತ್ವ , ಪುಣ್ಯತ್ವಗಳು ಒದಗಿದುದು ಅಲ್ಲಿ ನೆಲೆಸಿದ ಪಾಂಡುರಂಗ ದೇವತೆಯಿಂದಾಗಿ. ಇದೊಂದು ಜಾಗೃತ ಸ್ಥಾನ.
ಇಂದ್ರಾಯಣಿ ಹೊಳೆಯ ಅಂದದ ದಡದಲ್ಲಿ ಪಾಂಡುರಂಗ ದೇವನ ದೇವಾಲಯವಿದೆ. ಮರದಡಿಯ ಕಟ್ಟೆಯ ಮೇಲೆ ಗರುಡನು ಕೈ ಜೋಡಿಸಿ ನಿಂತಿರುವನು. ಬಾಗಿಲಲ್ಲಿ ವಿಘ್ನರಾಜ. ಹೊರಬದಿಗೆ ಭೈರವ ಮತ್ತು ಹನುಮಂತರು. ದಕ್ಷಿಣಕ್ಕೆ ಈಶ್ವರನ ದೇಗುಲ. ಪಕ್ಕದಲ್ಲಿಯೇ ಬಲ್ಲಾಳ ವನ. ಅಲ್ಲಿ ಸಿದ್ಧೇಶ್ವರನ ಅಷ್ಠಾನವಿದೆ. ಕ್ಷೇತ್ರವಾಸಿಗಳು ಧನ್ಯರಾಗಿದ್ದರು. ಅವರೆಲ್ಲ ಸುದೈವಿಗಳು. ಮಾತಿನಿಂದ ದೇವರ ನಾಮವನ್ನು ಘೋಷಿಸು ತ್ತಿರುವರು. ಸಂತ ತುಕಾರಾಮರ ಕಾಲದ ದೇಹೂ ಊರಿನ ಬಣ್ಣನೆ ಇದು.
ಸಂತ ತುಕಾರಾಮರಿಗಿಂತ ಸುಮಾರು ೩೦೦ ವರ್ಷಗಳಷ್ಟು ಹಿಂದೆ ಅವರ ಪೂರ್ವಜರಾದ ವಿಶ್ವಂಭರ(ಪ್ಪ )ಬಾಬಾ ಇವರು ದೇಹೂ ಊರಿನಲ್ಲಿ ವಾಸಿಸುತ್ತಿದ್ದರು. ಈ ಮನೆತನದ ಕುಲದೇವರೆಂದರೆ ವಿಠೋಬಾ. ವಿಶ್ವಂಭರಬಾಬಾರ ತಂದೆಯ ಕಾಲದಿಂದಲೇ ಅವರಲ್ಲಿ ಆಷಾಢ-ಕಾರ್ತಿಕಗಳ ವಾರಿ ನಡೆದುಕೊಂಡು ಬಂದಿತ್ತು. ಪಂಢರಪುರಕ್ಕೆ ಕಾಲ್ನಡಿಗೆಯಲ್ಲಿ , ಗುಂಪಾಗಿ ವರ್ಷಕ್ಕೆ ಎರಡು ಸಲ ಯಾತ್ರೆಗೆ ಹೋಗಿ ಬರುವುದು ವಾರಿ ಪದ್ಧತಿಯ ವಿಶೇಷ. ವಿಶ್ವಂಭರಬಾಬಾರ ತಾಯಿ ವಾರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ವಿಶ್ವಂಭರಬಾಬಾರ ಸೇವೆಯಿಂದ ಮೆಚ್ಚಿದ ದೇವನು ಪಂಢರಪುರದಿಂದ ಓಡೋಡುತ್ತ ದೇಹೂಕ್ಕೆ ಬಂದನು. ಪುಂಡಲಿಕನ ಅನನ್ಯ ಸೇವೆಯಿಂದಾಗಿ ದೇವನು ಇದೇ ರೀತಿ ವೈಕುಂಠದಿಂದ ಪಂಢರಪುರಕ್ಕೆ ಓಡೋಡಿ ಬಂದಿದ್ದನು.
ಪುಂಡಲಿಕಾಚೇ ನಿಕಟ ಸೇವೇ | ಕೈಸಾ ಧಾವೇ ಬರಾಡೀ ||೧||
ಮೂಳ ಪುರುಷ ವಿಶ್ವಂಭರ | ವಿಠ್ಠಲಾಚಾ ಭಕ್ತ ಥೋರ ||೧||
ತ್ಯಾಚೇ ಭಕ್ತೀನೇ ಪಂಢರೀ | ಸಾಂಡೂನೀ ಆಲೇ ದೇಹೂ ಹರೀ ||೨||
ದೇವನು ಆಷಾಢ ಶುದ್ಧ ೧೦ನೆಯ ದಿನದಂದು ವಿಶ್ವಂಭರಬಾಬಾರ ಕನಸಿನಲ್ಲಿ ಕಂಡು ತಾನು ನಿಮ್ಮೂರಿಗೆ ಬಂದಿರುವೆನೆಂದು ಹೇಳಿ ................ ನಿದ್ರಿಸ್ತನಾದನು. ವಿಶ್ವಂಭರಬಾಬಾರು ಮುಂಜಾವಿನಲ್ಲಿ ಊರವರ ಜೊತೆಗೆ ಅಲ್ಲಿಗೆ ಹೋದರು. ಅಲ್ಲಿ ಅವರಿಗೆ ಶ್ರೀ ವಿಠ್ಠಲ, ರಖುಮಾಯಿಯ ಸ್ವಯಂಭೂ ವಿಗ್ರಹಗಳು ದೊರೆತವು. ಬಾಬಾರು ಆ ವಿಗ್ರಹಗಳನ್ನು ತಮ್ಮ ವಾಡೆಯ ದೇವರ ಮನೆಯಲ್ಲಿ ತಂದು ಸ್ಥಾಪಿಸಿದರು. ಸುತ್ತಲ ಹತ್ತು ಹರದಾರಿಗಳ ಊರವರು ದೇವರ ದರ್ಶನಕ್ಕಾಗಿ ಬರತೊಡಗಿದರು. ಪ್ರತಿವರ್ಷ ದೇವರ ಉತ್ಸವ ಜರುಗಹತ್ತಿತು. ಈ ಮಹೋತ್ಸವದ ವೆಚ್ಚಕ್ಕಾಗಿ ಇನಾಮಿನ ಹೊಲ ದೊರಕಿತು. ಶುದ್ಧ ಏಕಾದಶಿಯಂದು ವಾರಿ ಸೇರತೊಡಗಿತು. ವಿಶ್ವಂಭರಬಾಬಾರು ತೀರಿಕೊಂಡ ಬಳಿಕ ಅವರ ಮಕ್ಕಳಾದ ಹರಿ ಮತ್ತು ಮುಕುಂದರು ದೇವರ ಸೇವೆಯನ್ನು ಬಿಟ್ಟು ಮೊದಲಿನ ಕ್ಷಾತ್ರವೃತ್ತಿಯತ್ತ ಹೊರಳಿದರು. ತಮ್ಮ ಕುಟುಂಬದವರೊಂದಿಗೆ ರಾಜರ ಆಶ್ರಯಕ್ಕೆ ಹೋದರು. ಸೇನೆಯಲ್ಲಿ ಅವರಿಗೆ ತಕ್ಕ ಹುದ್ದೆಗಳು ದೊರೆತವು. ಆದರೆ ಅವರ ಈ ಕೃತ್ಯ ತಾಯಿ ಆಮಾಬಾಯಿಗೆ ಇಷ್ಟವಾಗಲಿಲ್ಲ. ದೇವನಿಗೂ ಅದು ಇಷ್ಟವಾಗಲಿಲ್ಲ. ದೇವನು ಆಮಾಬಾಯಿಯ ಕನಸಿನಲ್ಲಿ ಕಾಣಿಸಿಕೊಂಡು, ನಾನು ನಿಮಗಾಗಿ ಪಂಢರಪುರವನ್ನು ತೊರೆದು ದೇಹೂಕ್ಕೆ ಬಂದೆ. ಆದರೆ ನೀವು ಮಾತ್ರ ನನ್ನನ್ನು ತೊರೆದು ರಾಜನ ಆಶ್ರಯಕ್ಕೆ ಹೋದಿರಿ. ಇದು ಒಳ್ಳೆಯದಲ್ಲ. ಹಿಂತಿರುಗಿ ದೇಹೂಕ್ಕೆ ನಡೆಯಿರಿ, ಎಂದನು. ಆಮಾಬಾಯಿ ಈ ಸಂಗತಿಯನ್ನು ತನ್ನ ಮಕ್ಕಳಿಗೆ ಹೇಳಿದಳು. ದೇಹೂ ಊರಿಗೆ ಹಿಂತಿರುಗುವ ಬಗೆಗೆ ಪರಿಪರಿಯಾಗಿ ಹೇಳಿದಳು. ಆದರೆ ಆ ಮಕ್ಕಳು ಅವಳ ಹೇಳಿಕೆಯನ್ನು ಕಡೆಗಣಿಸಿದರು. ಮುಂದೆ ಕೆಲವೇ ದಿನಗಳಲ್ಲಿ ಆ ರಾಜ್ಯ ಪರಸತ್ತೆಯ ದಾಳಿಗೆ ಈಡಾಯಿತು. ಸೋದರರಿಬ್ಬರೂ ರಣರಂಗದಲ್ಲಿ ಹಗೆಗಳೊಡನೆ ಕಾದುತ್ತ ವೀರಮರಣವನ್ನು ಅಪ್ಪಿದರು. ಮುಕುಂದನ ಮಡದಿಯು ಸತಿ ಹೋದಳು. ಹರಿಯ ಹೆಂಡತಿ ಬಸುರಿಯಾಗಿದ್ದಳು. ಅವಳನ್ನು ಕರೆದುಕೊಂಡು ಆಮಾಬಾಯಿ ದೇಹೂಕ್ಕೆ ಹಿಂತಿರುಗಿ ಬಂದಳು. ಸೊಸೆಯನ್ನು ಬಾಣಂತಿತನಕ್ಕಾಗಿ ಅವಳ ತವರಿಗೆ ಕಳಿಸಿದಳು. ತಾನು ದೇವರ ಸೇವೆಗೆ ತೊಡಗಿದಳು. ಹರಿಯ ಹೆಂಡತಿ ಗಂಡು ಮಗುವನ್ನು ಹೆತ್ತಳು. ಮಗುವಿಗೆ ವಿಠ್ಠಲ ಎಂದು ಹೆಸರಿಡಲಾಯಿತು. ವಿಠ್ಠಲನ ಮಗ ಕಾನ್ಹೋಬಾ ಹಾಗೂ ಕಾನ್ಹೋಬಾನ ಮಗನೆಂದರೆ ಬೋಲ್ಹೋಬಾ ಈತ. ಬೋಲ್ಹೋಬರಿಗೆ ಮೂವರು ಗಂಡು ಮಕ್ಕಳು. ಹಿರಿಯವ ಸಾವಜಿ, ನಡುವಿನವ ತುಕಾರಾಮ ಮತ್ತು ಕಿರಿಯವ ಕಾನ್ಹೋಬರಾಯ.
ಶ್ರೀ ತುಕಾರಾಮರು ಹುಟ್ಟಿ ಬಂದ ಕುಲ ಪವಿತ್ರವಾದುದು.
ಪವಿತ್ರ ತೇ ಕುಳ ಪಾವನ ತೋ ದೇಶ | ಜೇಥೇ ಹರೀಚೇ ದಾಸ ಜನ್ಮ ಘೇತೀ ||೧||
ಅದು ಕ್ಷತ್ರಿಯರ ಕುಲವಾಗಿತ್ತು. ಪೂರ್ವಜರು ಶತ್ರುಗಳೊಡನೆ ಕಾದಾಡುವಾಗ ರಣರಂಗದಲ್ಲಿ ದೇಹವಿಟ್ಟವರು. ಸುಸಂಸ್ಕೃತವಾದ ಮನೆತನ. ಧಾರ್ಮಿಕತೆಯಿಂದ ಕೂಡಿದುದು. ಮನೆಯಲ್ಲಿ ಹಲವು ತಲೆಮಾರುಗ ಳಿಂದ ಶ್ರೀ ವಿಠ್ಠಲನ ಉಪಾಸನೆ ಸಾಗುತ್ತ ಬಂದಿತ್ತು. ಪಂಢರಿಯ ವಾರಿ ಸಾಗಿತ್ತು. ಮಹಾಜನ ಪದದ ಉಂಬಳಿ ಯಿತ್ತು. ಹೊಲಗದ್ದೆ , ವಾಡೆಗಳಿದ್ದವು. ಸಾಹುಕಾರ ವೃತ್ತಿ ವ್ಯಾಪಾರ ವಹಿವಾಟುಗಳಿದ್ದವು. ಎರಡು ವಾಡೆಗಳಿದ್ದವು. ಒಂದು ವಾಸಕ್ಕಾಗಿ, ಇನ್ನೊಂದು ಮಾರುಕಟ್ಟೆಯ ಮಹಾಜನ ಪದದ ವಹಿವಾಟಿಗಾಗಿ. ಊರಲ್ಲಿ ಒಳ್ಳೆಯ ಮರ್ಯಾದೆ-ಮನ್ನಣೆಗಳಿದ್ದವು. ಸುತ್ತಲ ನಾಡಿನಲ್ಲೆಲ್ಲ ಪ್ರತಿಷ್ಠೆಯಿತ್ತು. ಅವರು ಬೇಸಾಯವನ್ನು ಕೈಕೊಂಡ ಕಾರಣ ಒಕ್ಕಲಿಗ, ಬೇಸಾಯಗಾರ ಎನ್ನಿಸಿದ್ದರು. ಅವರ ವ್ಯಾಪಾರ-ವಹಿವಾಟುಗಳಿಂದಾಗಿ ಅವರನ್ನು (ವಾಣೀ) ವ್ಯಾಪಾರಿಗಳು ಎಂದೆನ್ನಲಾಗುತ್ತಿತ್ತು. ಸಂತ ತುಕಾರಾಮರು ಇವೆರಡನ್ನೂ ಕಡೆಗಣಿಸಿದರೆಂದು ಅವರನ್ನು ಗೋಸಾವಿ ಎಂದು ಕರೆಯಲಾಯಿತು.
ಗೋಸಾವಿ ಎನ್ನುವುದು ಈ ಕುಲದ ಅಡ್ಡ ಹೆಸರೇನೂ ಅಲ್ಲ. ಇವರ ಅಡ್ಡ ಹೆಸರು, ಮೋರೇ. ಗೋಸಾವಿ ಒಂದು ಪದವಿ ಅಷ್ಟೆ . (ಇಂದ್ರಿಯಾಚೇ ಧನೀ ಆಮ್ಹೀ ಗೋಸಾವೀ - ಇಂದ್ರಿಯದ ಒಡೆಯರಾದುದರಿಂದ ನಾವು ಗೋಸಾವಿಗಳು) (ಭಗವತ್) ಗೀತೆಯ ಕಾಲಕ್ಕೆ ವೈಶ್ಯರನ್ನು ಶೂದ್ರರೆಂದು ಪರಿಗಣಿಸುವ ಪರಿಪಾಠ ಬಂದಿತು.
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇಪಿ ಯಾಂತಿ - ಪರಾಂ ಗತಿಮ್ || - ಗೀತೆ, ೯.೩೨
ಸಂತ ಜ್ನಾನದೇವರ ಕಾಲದಲ್ಲಿ ಕ್ಷತ್ರಿಯರನ್ನು ಕೂಡ ಶೂದ್ರರೆಂದು ಪರಿಗಣಿಸಲು ಶುರುವಾಯಿತು.
ತೈಸೇ ಕ್ಷತ್ರೀ ವೈಶ್ಯ ಸ್ತ್ರಿಯಾ | ಕಾ ಶೂದ್ರ ಅಂತ್ಯಜಾದಿ ಇಯಾ || - eನೇದೇವೀ, ೯.೪೬೦
ಎರಡೇ ಎರಡು ವರ್ಣಗಳು ಉಳಿದುಕೊಂಡಿದ್ದವು. ಬ್ರಾಹ್ಮಣ ಮತ್ತು ಶೂದ್ರ. ಹೀಗಾಗಿ ರನ್ನು ಶೂದ್ರ ಎಂದೆನ್ನಲಾಗುತ್ತಿತ್ತು.
ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಸ್ಥಿತಿಗಳು
ಆ ಕಾಲಕ್ಕೆ ದಕ್ಷಿಣ ಭಾರತದಲ್ಲಿ ಮುಸಲ್ಮಾನರ ಆಳ್ವಿಕೆ ಇತ್ತು. ಗೋವೆಯಲ್ಲಿ ಪೋರ್ತುಗೀಜರಿದ್ದರು. ವಿಜಾಪೂರದ ಆದಿಲಶಾಹಿ, ಅಹಮ್ಮದನಗರದ ನಿಜಾಮಶಾಹಿ, ಗೋವಳಕೊಂಡದ ಕುತುಬಶಾಹಿಗಳು ತಮ್ಮ ತಮ್ಮಲ್ಲಿ ಕಾದಾಡುತ್ತಿದ್ದವು. ಊರುಗಳು ಸುಟ್ಟು ಬೂದಿಯಾಗುತ್ತಿದ್ದವು. ಸುಲಿಗೆ ಸಾಗಿತ್ತು. ರಾಜರುಗಳು ವಿಲಾಸಗಳಲ್ಲಿ ಮೈಮರೆತಿದ್ದರು. ಅವರು ಪ್ರಜೆಗಳನ್ನು ಪೀಡಿಸುತ್ತಿದ್ದರು. ಬ್ರಾಹ್ಮಣರು ತಮ್ಮ ಆಚಾರಗಳನ್ನು ತೊರೆದಿದ್ದರು. ಕ್ಷತ್ರಿಯರು ವೈಶ್ಯರನ್ನು ತೊಂದರೆಗೀಡು ಮಾಡುತ್ತಿದ್ದರು. ಬಲವಂತದ ಮತಾಂತರ ಸಾಗಿತ್ತು."
ಮಹಾರಾಜರು ಹೀಗೆಂದರು :
ಸಾಂಡಿಲೇ ಆಚಾರ | ದ್ವಿಜ ಚಾಹಾಡ ಝಾಲೇ ಚೋರ ||
ರಾಜಾ ಪ್ರಜಾ ಪಿಡೀ | ಕ್ಷತ್ರೀ ವೈಶ್ಯ ಯಾಶೀ ನಾಡೀ ||
ವೈಶ್ಯ ಹಾಗೂ ಶೂದ್ರರ ನಡುವಣ ಸಂಬಂಧಗಳನ್ನು ಕುರಿತಂತೂ ಹೇಳಲೇಬೇಕಿಲ್ಲ. ಧರ್ಮ ಲೋಪ ಹೊಂದಿತ್ತು. ಅಧರ್ಮ ಸೊಕ್ಕೇರಿತ್ತು.
ಐಸೇ ಅಧರ್ಮಾಚೇ ಬಳ | ಧರ್ಮ ಲೋಪಲಾ ಸಕಳ ||೧||
ಜನರು ಅಧರ್ಮವನ್ನೇ ಧರ್ಮ ಎಂದೆನ್ನತೊಡಗಿದರು. ಸಂತರಿಗೆ ಮರ್ಯಾದೆ ಸಲ್ಲದಂತಾಯಿತು.
ಸಂತಾನಾಹೀ ಮಾನ | ದೇವ ಮಾನೀ ಮುಸಲ್ಮಾನ ||೧||
ಹಲವರು ದೇವತೆಗಳನ್ನು ಹಿಂಬಾಲಿಸುತ್ತ ಸಮಾಜ ಹರಕು ಮುರುಕಾಗಿತ್ತು. ಧರ್ಮದ ಬಗೆಗೆ ಆಕರ್ಷಣೆ ಎನ್ನುವುದು ಉಳಿದಿರಲಿಲ್ಲ. ಅಜ್ನಾನದ ಕತ್ತಲು ಕವಿದಿತ್ತು. ಜನ ಬೆಳಕು ಬೀರುವ ಸೂರ್ಯನಿಗಾಗಿ ಕಾದಿದ್ದರು. ಅವಸ್ಥೆ ಹೀಗಿರುವಾಗ ಚಿತ್ ಸೂರ್ಯನೊಬ್ಬನು ದೇಹೂ ಊರಿನಲ್ಲಿ ಉದಯಿಸಿದನು.
ಸಂತಗೃಹೀ ಮೇಳೀ | ಜಗತ್ ಅಂಧ್ಯಾ ಗಿಳೀ | ಪೈಲ ಉದಯಾಚಳೀ | ಭಾನು ತುಕಾ ||೩|| (ರಾಮೇಶ್ವರ ಭಟ್ಟ ಅಭಂಗ)
ದೊಡ್ಡ ಭಕ್ತರಾದ ಬೋಲ್ಹೋಬಾ ಹಾಗೂ ಮಾತೆ ಕನಕಾಯಿ ಇವರ ಹೊಟ್ಟೆಯಲ್ಲಿ ಶಕೆ ೧೫೩೦ರಲ್ಲಿ ಸಂತ ತುಕಾರಾಮರ ಜನ್ಮವಾಯಿತು. ಸಿರಿವಂತರ ಮನೆತನ. ಹೀಗಾಗಿ ಅವರ ಬಾಲ್ಯವೆಲ್ಲ ಅಕ್ಕರೆ ಹಾಗೂ ಆಟಪಾಟಗಳಲ್ಲಿ ಕಳೆಯಿತು. ಪಂತೋಜಿಯಿಂದ ಪ್ರಾಥಮಿಕ ಶಿಕ್ಷಣ. ಅವರು ಕೈಯಲ್ಲಿ ಕಲ್ಲು- ಪಾಟಿಯನ್ನು ಹಿಡಿದುಕೊಂಡು ಮಕ್ಕಳ ಕೈ ಹಿಡಿದು ಅವರಿಗೆ ಓದು-ಬರಹಗಳನ್ನು ಕಲಿಸುತ್ತಿದ್ದರು.
ಅರ್ಭಕಾಚೇ ಸಾಠೀ | ಪಂತೇ ಹಾತೇ ಧರಿಲೀ ಪಾಟೀ ||೧||
ಮಕ್ಕಳು ಕಲ್ಲು ಹರಳುಗಳಿಂದ ಅಕ್ಷರಗಳನ್ನು ರಚಿಸುತ್ತಿದ್ದರು.
ಓನಾಮ್ಯಾಚ್ಯಾ ಕಾಳೇ | ಖಡೇ ಮಾಂಡಿಯೇಲೇ ಬಾಳೇ ||೧||
ತಂದೆ ಬೋಲ್ಹೋಬಾರಿಂದ ತುಕಾರಾಮರಿಗೆ ವ್ಯವಹಾರ ಮತ್ತು ಪರಮಾರ್ಥಗಳ ಶಿಕ್ಷಣ ದೊರಕಿತು. ಹಿರಿಯ ಮಗ ಸಾವಜೀ ಇವನು ವಾಣಿಜ್ಯೋದ್ಯಮಗಳತ್ತ ಗಮನ ಹರಿಸಲು ನಿರಾಕರಿಸಿದ್ದರಿಂದ ತಂದೆಯು ತುಕಾರಾಮರಿಗೆ ವೃತ್ತಿ , ವ್ಯಾಪಾರ ಹಾಗೂ ಸಾಹುಕಾರಿಕೆಗಳತ್ತ ಗಮನ ನೀಡಲು ಹೇಳಿದರು. ಮಾರುಕಟ್ಟೆಯ ಪೇಟೆಯಲ್ಲಿದ್ದ ಮಹಾಜನಪದದ ವಾಡೆಯಲ್ಲಿ ತಂದೆಯ ಕೈಕೆಳಗೆ ದುಡಿಯುತ್ತ ತುಕಾರಾಮರಿಗೆ ವ್ಯಾಪಾರ ವಹಿವಾಟಿನ ಅರಿವು ಆಗತೊಡಗಿತು. ೧೩ನೆಯ ವಯಸ್ಸಿನವರಾದಾಗಲೆ ಸಂಸಾರ ಅವರ ಕೊರಳಿಗೆ ಬಂದು ಬಿದ್ದಿತು. ತುಕಾರಾಮರು ಬಲು ಬೇಗ ವ್ಯವಹಾರಗಳನ್ನು ತಾವೇ ನೋಡಿಕೊಳ್ಳಹತ್ತಿದರು. ಅವರು ವ್ಯಾಪಾರೋದ್ಯಮ ಹಾಗೂ ಸಾಹುಕಾರಿಕೆಗಳಲ್ಲಿ ಚೆನ್ನಾಗಿ ನೆಲೆಯೂರಿದರು. ಜನ ಅವರನ್ನು ಮೆಚ್ಚಿಕೊಳ್ಳಹತ್ತಿದರು. ತುಕಾರಾಮರು ತಮ್ಮ ಮನೆಯ ಶುದ್ಧ ಸಾತ್ವಿಕವಾದ ಆಚರಣೆಯನ್ನು ಪೇಟೆಯ ತಮ್ಮ ಮನೆ- ವ್ಯಾಪಾರಗಳಲ್ಲೂ ತಂದರು. ಮೂರೂ ಜನ ಸೋದರರ ಮದುವೆಗಳು ನೆರವೇರಿದವು. ತುಕಾರಾಮರ ಮೊದಲ ಹೆಂಡತಿಗೆ ದಮ್ಮಿನ ತೊಂದರೆಯಿತ್ತು. ಹೀಗಾಗಿ ಅವರು ಪುಣೆಯ ಹೆಸರಾದ ಸಾಹುಕಾರ ಅಪ್ಪಾಜೀ ಗುಳವೇ ಅವರ ಮಗಳಾದ ಸೌ. ಜಿಜಾಬಾಯಿ ಅಲಿಯಾಸ ಆವಲಿ ಇವರನ್ನು ಮದುವೆಯಾದರು. ಒಂದು ಸಿರಿವಂತ ಮನೆತನದ ಮದುವೆ ಇನ್ನೊಂದು ಸಿರಿವಂತ ಮನೆತದೊಡನೆ ನಡೆದಂತಾಯಿತು. ಐಹಿಕ ಸಂಪತ್ತು ತನ್ನ ಪರಮೋಚ್ಚ ಬಿಂದುವಿನಲ್ಲಿತ್ತು. ಮನೆ ಕಾಳು-ಕಡಿಗಳಿಂದ ತುಂಬಿತ್ತು. ಪ್ರೀತಿಯನ್ನು ಮಳೆಗರೆಯುವ ತಾಯಿತಂದೆಗಳು, ಸಜ್ಜನರಾದ ಸೋದರರು, ಆರೋಗ್ಯದಿಂದ ತುಂಬಿದ ಮೈಕಟ್ಟು ಯಾವುದೇ ಬಗೆಯ ಕೊರತೆಗಳಿರಲಿಲ್ಲ.
ಮಾತಾ ಪಿತಾ ಬಂಧು ಸಜ್ಜನ | ಘರೀ ಉದಂಡ ಧನ ಧಾನ್ಯ |
ಶರಿರೀ ಆರೋಗ್ಯ ಲೋಕಾತ ಮಾನ | ಏಕಹಿ ಉಣೇ ಅಸೇನಾ ||೧|| - (ಮಹಿಪತಿಬಾಬಾ ಚರಿತ್ರೆ)
ಸುಖ-ಸಮಾಧಾನ, ಐಶ್ವರ್ಯಗಳ ಈ ದಿನಗಳು ಯಾವಾಗ ಕಳೆದವೋ, ಎಲ್ಲಿ ಹೋದವೋ-ಎಂಬುದು ಎಳ್ಳಷ್ಟೂ ಕೂಡ ಗಮನಕ್ಕೆ ಬರಲಿಲ್ಲ. ಯಾ ನಂತರ ಸುಖಾಪುಢೇ ಯೇತಸೇ ದುಃಖ | (ಸುಖದ ತರುವಾಯ ದುಃಖ) ಎಂಬ ಬಗೆಯಲ್ಲಿ ಮುಂದಿನ ಕಾಲ ಶುರುವಾಗಿತ್ತು.
ಮಮತೆಯ ಹೆತ್ತವರ ವಿಯೋಗ
ಕರ್ತೃತ್ವವಂತರಾದ ತಂದೆ ಬೋಲ್ಹೋಬಾ ಇವರು ತುಕೋಬಾ ಹದಿನೇಳು ವಯಸ್ಸಿನವರಾದಾಗ ತೀರಿಕೊಂಡರು. ತುಕೋಬಾರನ್ನು ದೇವರ ಸೇವೆ ಮತ್ತು ಮಹಾಜನಪದಗಳ (ಮಿರಾಶೀ) ಒಡೆಯರನ್ನಾಗಿ ಮಾಡಿದವರು ಇವರೇ.
ಬಾಪ ಕರೋ ಜೋಡೀ ಲೇಕರಾಚೇ ಓಢೀ | ಆಪಲೀ ಕರವಂಡೀ ವಾಳವೋನೀ ||೧||
ಏಕಾಏಕೀ ಕೇಲಾ ಮಿರಾಶೀಚಾ ಧನೀ | ಕಡೀಯೇ ವಾಹುನಿ ಭಾರ ಖಾಂದೀ ||೨||
ಮಿರಾಶೀ-ಮಹಾಜನಪದ ಮತ್ತು ದೇವರ ಸೇವೆ. ಸಂಸಾರದ ತಾಪತ್ರಯಗಳ ಬಿಸಿ ತಟ್ಟದಂತೆ ನೋಡಿಕೊಳ್ಳುವ ಹೆತ್ತ ತಂದೆಯ ಆಸರೆಯೇ ಇಲ್ಲದಂತಾಯಿತು.
ಬಾಪ ಮೇಲಾ ನ ಕಳತಾ | ನವ್ಹತೀ ಸಂಸಾರಾಚೀ ಚಿಂತಾ ||೧||
(ನ ಕಳತಾ ಎಂದರೆ ನಾನಿಲ್ಲದಾಗ ಒಂಟಿಯಾಗಿ) ತುಕಾರಾಮರಿಗೆ ಸಹಿಸಲಾಗದ ದುಃಖವಾಯಿತು. ಈ ದುಃಖ ಇಳಿಮುಖ ಆಗುವಾಗ ಮರುವರ್ಷವೇ ಪ್ರೀತಿಯ ತಾಯಿ ಕನಕಾಯೀ ಅವರು ತುಕಾರಾಮರ ಕಣ್ಣೆದುರೇ ತೀರಿಕೊಂಡರು.
ಮಾತಾ ಮೇಲೀ ಮಜ ದೇಖತಾ ||೪||
ದುಃಖದ ಒಂದು ಬೆಟ್ಟವೇ ತುಕಾರಾಮರ ತಲೆಯ ಮೇಲೆ ಕುಸಿದಂತಾಯಿತು. ಅಮ್ಮನು ತುಕಾರಾಮರಿಗಾಗಿ ಏನೆಲ್ಲವನ್ನು ಮಾಡಿದ್ದಳು.
ಕಾಯ ನಾಹೀ ಮಾತಾ ಗೌರವೀತ ಬಾಳಾ | ಕಾಯ ನಾಹೀ ಲಳಾ ಪಾಳೀತ ತೀ ||೧||
ಕಾಯ ನಾಹೀ ತ್ಯಾಚೀ ಕರೀತೇ ಸೇವಾ | ಕಾಯ ನಾಹೀ ಜೀವಾ ಗೋಮಟೇತೇ ||೨||
ಅಮಂಗಳಪಣೇ ಕಂಟಾಳಾ ನ ಧರೀ | ಉಚಲೋನಿ ಕರೀ ಧರೀ ಕಂಠೀ ||೩||
ಮುಂದೆ, ಹಿರಿಯಣ್ಣ ಸಾವಜಿಯ ಹೆಂಡತಿ ತನ್ನ ೧೮ ನೆಯ ವರ್ಷದಲ್ಲಿ ಸಾವನ್ನಪ್ಪಿದಳು. ಸಾವಜಿಯ ಗಮನ ಮೊದಲೇ ಸಂಸಾರದತ್ತ ಇರಲಿಲ್ಲ. ಅದರಲ್ಲಿ ಹೆಂಡತಿಯ ಈ ಸಾವು ಬೇರೆ. ಮನೆಮಾರುಗಳನ್ನೆಲ್ಲ ತೊರೆದು ಅವರು ತೀರ್ಥಯಾತ್ರೆಗೆಂದು ಹೋದವರು ಹಿಂತಿರುಗಿ ಬರಲೇ ಇಲ್ಲ. ಕುಟುಂಬದ ನಾಲ್ಕು ಜನ ಅಗಲಿದರು. ಯಾವುದೇ ಕೊರತೆಯಿಲ್ಲದ ಆ ಸಂಸಾರದಲ್ಲಿ ಈಗ ಒಂದೊಂದಾಗಿ ಕೊರತೆ ಕಂಡುಬರಹತ್ತಿತು. ತುಕಾರಾಮರು ಧೈರ್ಯಗೆಡಲಿಲ್ಲ. ಉದಾಸೀನತೆಯನ್ನು ಮೆಟ್ಟಿ ತಮ್ಮ ೨೦ ನೆಯ ವಯಸ್ಸಿನಲ್ಲೇ ಸಂಸಾರವನ್ನು ನೀಟಾಗಿ ಸಾಗಿಸುವ ಹಂಬಲವನ್ನು ಇರಿಸಿಕೊಂಡರು. ಆದರೆ ಅಯ್ಯೋ ! ಇಪ್ಪತ್ತೊಂದನೆಯ ವರ್ಷದವರಾದಾಗ ಒಂದು ಘೋರವಾದ ಕಾಲವು ಬಂದೊದಗಿತು. ದಕ್ಷಿಣದಲ್ಲೆಲ್ಲ ಬರ ಬಿದ್ದಿತು. ಅದೊಂದು ಬಲು ಭೀಕರವಾದ ಬರವಾಗಿತ್ತು. ಇ. ಸ. ೧೬೨೯ ನೆಯ ವರ್ಷ (ಶಕೆ ೧೫೫೦-೫೧) ತಡವಾಗಿ ಮಳೆ ಬಂದಿತು. ಮುಂದೆ ಹೆಚ್ಚಿನ ಮಳೆಗಾಲದಿಂದಾಗಿ ಬೆಳೆಗಳೆಲ್ಲ ನಾಶ ಹೊಂದಿದವು. ಆದರೂ ಜನ ಆಸೆ ಹಿಡಿದುಕೊಂಡಿದ್ದರು. ೧೬೩೦ ನೆಯ ಇಸವಿಯಲ್ಲಿ ಮಳೆ ಬೀಳಲೇ ಇಲ್ಲ. ಎಲ್ಲೆಡೆ ಹಾಹಾಕಾರ ಉಂಟಾಯಿತು. ಕಾಳು ಕಡಿಗಳ ಬೆಲೆ ದುಬಾರಿಯಾದವು. ಮೇವಿಲ್ಲದೆ ಸಾವಿರಾರು ದನಕರುಗಳು ಜೀವ ಬಿಟ್ಟವು. ಹೊಟ್ಟೆಗಿಲ್ಲದೆ ನೂರಾರು ಜನ ಸಾವನ್ನಪ್ಪಿದರು. ಹಣವಂತ ಕುಟುಂಬಗಳು ಮಣ್ಣುಪಾಲಾದವು. ಈಗಲೂ ದುರ್ದೆಶೆ ಮುಗಿದಿರಲಿಲ್ಲ. ೧೬೩೧ ರಲ್ಲಿ ಈ ದೈವೀ ಪ್ರಕೋಪವು ತನ್ನ ಚರಮ ಸೀಮೆಯನ್ನು ತಲುಪಿತು. ಅತಿವೃಷ್ಟಿಯಿಂದಾಗಿ ಬೆಳೆಗಳು ಹಾಳಾದವು. ನೆರೆಹಾವಳಿಯಿಂದ ಮೇರೆಮೀರಿದ ನಷ್ಟ ಸಂಭವಿಸಿತು. ಬರಗಾಲ ಹಾಗೂ ದೈವೀ ಪ್ರಕೋಪಗಳು ಮೂರು ವರ್ಷಗಳ ಕಾಲ ಸಾಗಿದವು. ಮಹೀಪತಿಬಾಬಾ ಇವರು ಈ ಬರವನ್ನು ಕುರಿತು ಹೀಗೆಂದಿದ್ದಾರೆ :
ತೀ ಪುಢೇ ಬರಗ ಪಡಲೇ ಕಠೀಣ | ದೋ ಪಾಯಲ್ಯಾಚೀ ಝಾಲೀ ಧಾರಣ |
ಪರ್ಜನ್ಯ ನಿಃಶೇಷ ಗೇಲಾ ತೇಣೇ | ಚಾರ್ಯಾವೀಣ ಬೈಲ ಮೇಲೇ ||೧||
ಮುಂದೆ ಬರಗಾಲ ಇನ್ನಷ್ಟು ಭೀಕರವಾಯಿತು.
ಮಹಾಕಾಳ ಪಡೀಲಾ ಪೂರ್ಣ | ಜಾಹಾಲೀ ಧಾರಣ ಶೇರಾಚೀ |
ತೇ ಹೀ ನ ಮಿಳೇ ಕೋಣಾ ಪ್ರತೀ | ಪ್ರಾಣೀ ಮೃತ್ಯೂಸದನೀ ಜಾತೀ ||೧||
ಪಾಯಲಿಯಷ್ಟು (ಅಳತೆ) ರತ್ನಗಳಿಗೆ ಒಂದು ಪಾಯಲಿ ಧಾನ್ಯ ದೊರಕದಂತಾಯಿತು.
- ದುಷ್ಕಾಳೇ ಆಟಿಲೇ ದ್ರವ್ಯ ನೇಲಾ ಮಾನ |
ಈ ಬರದಿಂದಾಗಿ ತುಕಾರಾಮರ ಪ್ರಪಂಚ ತುಂಬ ನಷ್ಟಕ್ಕೀಡಾಯಿತು. ದನಕರುಗಳು ಸಾವಿಗೀಡಾದವು. ಸಾಹುಕಾರಿಕೆ ಮುಳುಗಿತು. ವ್ಯಾಪಾರ ವಹಿವಾಟು ನಿಂತಿತು. ಜನರಲ್ಲಿರುವ ಮಾನ ಮರ್ಯಾದೆ ಇಲ್ಲವಾಯಿತು. ಮೊದಲ ಹೆಂಡತಿ ರಖುಮಾಬಾಯಿ ಹಾಗೂ ಒಬ್ಬನೇ ಒಬ್ಬ ಅಕ್ಕರೆಯ ಮಗ ಸಂತೋಬಾ ಬರಗಾಲಕ್ಕೆ ಬಲಿಯಾದರು. ಸಾಹುಕಾರ ಹಾಗೂ ವ್ಯಾಪಾರಿಗಳಿಗೆ ಬರಗಾಲವೆಂದರೆ ಒಂದು ಹೊನ್ನಾವಕಾಶ. ಕೃತಕವಾದ ಕೊರತೆಯನ್ನು ಹುಟ್ಟು ಹಾಕಿ ನೂರಾರು ರೂಪಾಯಿಗಳ ಲಾಭವನ್ನೆತ್ತುತ್ತಾರೆ. ಇಂದಿಗೂ ಅಂಥ ಹಲವರನ್ನು ಕಾಣುತ್ತೇವೆ. ಆದರೆ ತುಕಾರಾಮರು ಬರಗಾಲದಲ್ಲೂ ಜನರಿಂದ ಬಲವಂತದಿಂದ ವಸೂಲು ಮಾಡುವವರಾಗಿರಲಿಲ್ಲ. ಬದಲು ತಮ್ಮ ದುರ್ದೆಸೆ, ಆಪತ್ತು ಹಾಗೂ ದುಃಖಗಳನ್ನು ಬದಿಗೊತ್ತಿ ಅವರು ಬರಗಾಲದ ಬವಣೆಗೀಡಾದ ಜನರಿಗೆ ಕೊಡುಗೈಯಿಂದ ನೆರವಾದರು.
ಸಹಜ ಸರಲೇ ಹೋತೇ ಕಾಹೀ | ದ್ರವ್ಯ ಥೋಡೇಬಹು ತೇಹೀ | ....... ದಿಲೇ ದ್ವಿಜಾ ಯಾಚಕಾ ||೪||
ಕೆಲಮಟ್ಟಿಗಿನ ಸಂಪತ್ತು ಸಹಜವಾಗಿಯೇ ಮುಗಿದುಬಿಟ್ಟಿತ್ತು. ಉಳಿದುದನ್ನು ಬ್ರಾಹ್ಮಣರು, ಬಿಕ್ಕೆ ಬೇಡುವವರು, ಅಗತ್ಯವಿದ್ದವರಿಗೆಲ್ಲ ಕೈ ಸಡಿಲು ಬಿಟ್ಟು ಕೊಡಲಾಯಿತು. (ಹೀಗಾಗಿ ತುಕಾರಾಮರು ದಿವಾಳಿಯಾಗಿದ್ದರೆಂಬ ಮಾತನ್ನು ಅಕ್ಷರಶಃ ಅರ್ಥೈಸಕೂಡದು.)
ಸಂಸಾರಾಚ್ಯಾ ನಾವೇ ಘಾಲೋನಿಯಾ ಶೂನ್ಯ | ವಾಢತಾ ಹಾ ಪುಣ್ಯಧರ್ಮ ಕೇಲಾ ||೯||
ಹೆತ್ತವರು, ಮಗ, ಮಡದಿಯಂತಹ ಮನೆಯವರ ಸಾವು, ಬರಗಾಲದಿಂದಾಗಿ ಪ್ರಪಂಚಕ್ಕೆ ಬಂದೊದಗಿದ ವಿಪತ್ತು , ಜನರಲ್ಲಾದ ದುರ್ದೆಸೆ, ನೆಂಟರಿಷ್ಟರಿಂದ ನಡೆದ ಟೀಕೆ ಟಿಪ್ಪಣಿಗಳು. ತುಕಾರಾಮರು ಇವೆಲ್ಲವುಗಳನ್ನು ಧೈರ್ಯವಾಗಿ ಎದುರಿಸಿದರು. ಅವರು ದುರ್ದೆಸೆ ಹಾಗೂ ಆಪತ್ತುಗಳಿಗೆ ಮುಖಾಮುಖಿಯಾದರು. ಓಟ ಕೀಳಲಿಲ್ಲ. ಅವರು ಪಲಾಯನವಾದಿಗಳಾಗಿರಲಿಲ್ಲ. ಅವರಿಗೆ ಸಂಸಾರವನ್ನು ಗೆದ್ದುಕೊಳ್ಳುವುದಿತ್ತು. ಈ ರಣರಂಗದಿಂದ ಕಾಲ್ತೆಗೆಯಬೇಕಿರಲಿಲ್ಲ , ಹಿಂಜರಿಯಬೇಕಿರಲಿಲ್ಲ. ಈ ಸಾರದಿಂದ ಸಾರವನ್ನು ಹೊರತರುವುದಿತ್ತು. ಬರ, ದೈವಿ ಆಪತ್ತುಗಳಿಂದಾಗಿ ಮಾನವನ ದೇಹ, ದೇಹ ಸಂಬಂಗಳಾದ ತಾಯಿ, ತಂದೆ, ಮಗ ಹಾಗೂ ಸಂಪತ್ತಿನ ಮೌಲ್ಯಮಾಪನ ನಡೆದಿತ್ತು. ಅಶಾಶ್ವತೆ ಮನದಟ್ಟಾಗಿತ್ತು. ಅವರು ಶಾಶ್ವತವಾದ ಮೌಲ್ಯಗಳನ್ನು ಶೋಸತೊಡಗಿದರು. ಉದ್ವೇಗದಿಂದ ಪಾರಾಗುವುದು ಹೇಗೆ? ಆಚೆಯ ದಡವನ್ನು ತಲುಪುವುದು ಹೇಗೆ? - ಎಂಬುದನ್ನು ಕುರಿತು ಯೋಚಿಸತೊಡಗಿದರು.
ವಿಚಾರಲೇ ಆ ಆಪುಲೇ ಮಾನಸೀ | ವಾಚೋ ಯೇಥೇ ಕೈಸೀ ಕೋಣ್ಯಾಪರೀ ||೧||
ಅವರು ಸತ್ಯವನ್ನು ಕಂಡುಕೊಳ್ಳಲೆಂದು ಹೊರಟರು. ಈ ನಿರ್ಧಾರದಿಂದಲೇ ಭಾಮನಾಥರ ಬೆಟ್ಟವನ್ನೇರಿ ಹೋದರು. ಚಿರಂತನವಾದ ಸತ್ಯದ ಸಾಕ್ಷಾತ್ಕಾರ ನಡೆದರೆ ಮಾತ್ರ ಹಿಂತಿರುಗಿ ಬರುವುದು, ಇಲ್ಲವಾದರೆ ಇಲ್ಲ. ಅದು ಅವರ ಕೊನೆಯಂಚಿನ ತೀರ್ಮಾನವಾಗಿತ್ತು. ತುಕಾರಾಮರ ಮೈಮೇಲೆಲ್ಲ ಇರುವೆಗಳು, ಚೇಳುಗಳು, ಹಾವುಗಳು ಓಡಾಡಿದವು. ಅಷ್ಟೇ ಅಲ್ಲದೆ ಕಚ್ಚಿ ಪೀಡಿಸುತ್ತಿದ್ದವು. ಹುಲಿ ಮೇಲೆರಗಿ ಬಂದಿತು. ಆದರೂ ಮಹಾರಾಜರ ನಿರ್ಧಾರ ಕಿಂಚಿತ್ತೂ ಕದಲಲಿಲ್ಲ. ಹದಿನೈದನೆಯ ದಿನ ಅವರಿಗೆ ಸತ್ಯದ ಸಾಕ್ಷಾತ್ಕಾರವಾಯಿತು.
ಭಾಮಗಿರೀ ಪಾಠಾರೀ ವಸ್ತೀ ಜಾಣ ಕೇಲೀ | ವೃತ್ತೀ ಸ್ಥಿರಾವಲೀ ಪರಬ್ರಹ್ಮೀ ||೧||
ಸರ್ಪ ವಿಂಚೂ ವ್ಯಾಘ್ರ ಅಂಗಾಶೀ ಝೋಂಬಲೇ | ಪಿಡೂ ಜೇ ಲಾಗಲೇ ಸಕಳೀಕ ||೨||
ಪಂಢರಾ ದಿವಸಾಮಾಜೀ ಸಾಕ್ಷಾತ್ಕಾರ ಝಾಲಾ | ವಿಠೋಬಾ ಭೇಟಲಾ ನಿರಾಕಾರ ||೩||
ನಿರಾಕಾರನಾದ ಪರಮಾತ್ಮ ಭೆಟ್ಟಿಯಾದನು. ದೇವನು ಭಕ್ತನನ್ನು ‘ಚಿರಂಜೀವ ಭವ’ ಎಂದು ಆಶೀರ್ವದಿಸಿದನು, ಭರವಸೆಯನ್ನಿತ್ತನು.
ತವ ಸಾಹ್ಯ ಝಾಲಾ ಹೃದಯ ನಿವಾಸೀ | ಬುದ್ಧಿ ದಿಲೀ ಐಶೀ ನಾಶ ನಾಹೀ ||೨||
ತುಕಾರಾಮರು ಮನೆಬಿಟ್ಟು ಹೋದಾಗಿನಿಂದ ಅವರ ತಮ್ಮ ಕಾನ್ಹೋಬಾ ಇವರು ಅಣ್ಣನನ್ನು ಹುಡುಕಲೆಂದು ದೇಹೂ ಊರಿನ ಸುತ್ತಲ ಕಾಡುಮೇಡು, ಬೆಟ್ಟ ಕಣಿವೆಗಳಲ್ಲಿ ಅಲೆಯುತ್ತಿದ್ದರು. ಹುಡುಕುತ್ತ ಹುಡುಕುತ್ತ ಅವರು ಭಾವನಾಥ ಬೆಟ್ಟದ ಮೇಲಿನ ಗುಹೆಗೆ ಬಂದು ತಲುಪಿದರು. ಅಲ್ಲಿಯ ನೋಟವನ್ನು ಕಂಡು ಅವರು ನಿಬ್ಬೆರಗಾದರು. ತುಕೋಬಾರಾಯರ ಮೈಮೇಲೆ ಕಟ್ಟಿರುವೆಗಳು, ಹಾವುಗಳು, ಚೇಳುಗಳು ಅಂಟಿಕೊಂಡಿವೆ. ಹುಲಿಯು ಬಂದೆರಗಿದೆ. ಪರಮಾತ್ಮ ಪ್ರಕಟನಾಗಿದ್ದಾನೆ. ಬಂಗಾರದ ದಿನ ಅದಾಗಿತ್ತು. ಕಾನ್ಹೋಬರು ಸಂತೋಷದಿಂದ ನಲಿದಾಡಿದರು. ಹುಟ್ಟು ಸಾರ್ಥಕವಾಯಿತು. ಒಡಹುಟ್ಟಿದವರು ಭೆಟ್ಟಿಯಾದರು. ದೇವನು ತುಕೋಬಾರಾಯರಿಗೆ ಭೆಟ್ಟಿಯಾದ ಸ್ಥಳದ ಪಾವಿತ್ರ್ಯ ಹಾಗೂ ಸ್ಮೃತಿ ಅಖಂಡವಾಗಿ ಉಳಿಯಲೆಂದು ಕಾನ್ಹೋಬಾರು ಅಲ್ಲಿ ಕೆಲವು ಕಲ್ಲುಗಳನ್ನು ರಚಿಸಿಟ್ಟರು. ಸೋದರರಿಬ್ಬರೂ ಪವಿತ್ರವಾದ ಆ ಭೂಮಿಯನ್ನು ವಂದಿಸಿ, ಹೊರಟು ಇಂದ್ರಾಯಣಿ ಹೊಳೆಯ ಸಂಗಮಕ್ಕೆ ಬಂದರು. ಸಂಗಮದಲ್ಲಿ ಮಿಂದು ಹದಿನೈದು ದಿನಗಳ ಉಪವಾಸದ ಪಾರಣೆಯನ್ನು ಮಾಡಿದರು. ತುಕಾರಾಮರು ಕಾನ್ಹೋಬರ ಕೈಲಿ ಸಾಲಪತ್ರಗಳನ್ನು ತರಿಸಿಕೊಂಡರು. ಜನರಿಂದ ಬರಬೇಕಿದ್ದ ದುಡ್ಡಿನ ಮೊತ್ತಗಳನ್ನು ನಮೂದಿಸಲಾದ ಪತ್ರಗಳವು. ಅವುಗಳಲ್ಲಿ ಪಾಲು ಮಾಡಿ ಅರ್ಧದಷ್ಟನ್ನು ಕಾನ್ಹೋಬರಿಗಿತ್ತು. ತಮ್ಮ ಪಾಲಿನವುಗಳನ್ನು ಮಹಾರಾಜರು ಇಂದ್ರಾಯಣಿಯ ಮಡುವಿನಲ್ಲಿ ಮುಳುಗಿಸಿಬಿಟ್ಟರು. ಈ ಸಾಹುಕಾರ ಬರಗಾಲದ ತರುವಾಯದಲ್ಲಿ ಸಾಲಗಾರರಿಂದ ತನಗೆ ಸಲ್ಲಬೇಕಿದ್ದ ಹಣವನ್ನು ವಸೂಲು ಮಾಡಿ ತನ್ನ ಸಂಸಾರವನ್ನು ಗಟ್ಟಿಗೊಳಿಸಿಕೊಳ್ಳುವ ಬದಲು ಸಾಲಪತ್ರಗಳನ್ನು ಗಂಗಾರ್ಪಣೆ ಮಾಡಿ ಸಾಲಿಗರನ್ನು ಸಾಲಗಳಿಂದ ಬಿಡುಗಡೆ ಮಾಡಿದನು. ಅಲ್ಲದೆ ತಾನು ಸಾಹುಕಾರಿಕೆಯತ್ತ ಬೆನ್ನು ತಿರುವಿದುದನ್ನು ತೋರಿಸಿಕೊಟ್ಟನು. ಇದನ್ನೇ ನಿಜವಾದ ಸಮಾಜವಾದ ಎಂದೆನ್ನುವುದು !
ದೇವಾಚೇ ದೇಊಳ ಹೋತೇ ಜೇ ಭಂಗಲೇ | ಚಿತ್ತೀ ತೇ ಆಲೇ ಕರಾವೇ ತೇ ||೧||
ಸಾಲಪತ್ರಗಳನ್ನು ಇಂದ್ರಾಯಣಿಯ ಮಡುವಿನಲ್ಲಿ ಮುಳುಗಿಸಿ ತಾವು ಸಾಹುಕಾರಿಕೆಯತ್ತ ಬೆನ್ನು ತಿರುಗಿಸಿದುದನ್ನು ಅದ್ಭುತವಾದ ಬಗೆಯಲ್ಲಿ ತೋರಿಸಿದ ಹಾಗೆಯೇ ತುಕಾರಾಮರು ಬರಗಾಲದ ತರುವಾಯ ಒಡೆದ ಸಂಸಾರವನ್ನು ಕಟ್ಟುವ ಬದಲು ದೇವರ ಒಡೆದು ಬಿದ್ದ ದೇವಾಲಯವನ್ನು ಜೀರ್ಣೋದ್ಧಾರಗೊಳಿಸುವ ಮೂಲಕ ತಾವು ಪರಮಾರ್ಥದತ್ತ ಮೋರೆ ಮಾಡಿದವರೆಂಬುದನ್ನು ಜಗಜ್ಜಾಹೀರು ಪಡಿಸಿದರು. ತಂದೆ ಬೋಲ್ಹೋಬಾ ಇವರ ಕಾಲದಲ್ಲಿ ಬೆಳೆಯುತ್ತಿದ್ದ ಯಾತ್ರೆಗೆ ದೇವರ ಮನೆ ಸಾಲದಂತಾಗಿ ಅವರು ದೇವರಿಗಾಗಿ ಇಂದ್ರಾಯಣಿಯ ರಮ್ಯವಾದ ದಡದ ಮೇಲೆ ಒಂದು ದೇವಾಲಯವನ್ನು ಕಟ್ಟಿಸಿ ಮನೆಯ ಗರ್ಭಗುಡಿಯ ದೇವರನ್ನು ತಂದು ಇಲ್ಲಿ ಪ್ರತಿಷ್ಠಾಪಿಸಿದ್ದರು. ತುಕೋಬಾರಾಯರ ಕಾಲಕ್ಕೆ ದೇವಾಲಯ ಬಿರುಕು ಬಿಟ್ಟಿತ್ತು. ಹೀಗಾಗಿ ಅವರು ಬರಗಾಲದ ತರುವಾಯ ಎಲ್ಲಕ್ಕೂ ಮೊದಲು ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದರು.
ಶ್ರೀ ಮೂರ್ತೀಚೇ ಹೋತೇ ದೇವಾಲಯ ಭಂಗಲೇ | ಪಾಹಾತಾ ಸುರಲೇ ಚಿತ್ತೀ ಐಸೇ ||೧||
ಮ್ಹಣೇ ಹೇ ದೇವಾಲಯ ಕರಾವಯಾಚೇ ಆತಾ | ಕರಾವಯಾ ಕಥಾ ಜಾಗರಣ ||೨||
ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದುದು ಪುಣ್ಯ ಪ್ರಾಪ್ತಿಗಾಗಿಯಲ್ಲ ; ಭಜನೆ, ಕೀರ್ತನೆ, ಕಥೆ, ಜಾಗರಣೆಗಳಿಗಾಗಿ. ಹರಿಜಾಗರಣೆ, ಶ್ರವಣ, ಕೀರ್ತನೆ, ಮನನ, ಸಹಜ ಸಾಕ್ಷಾತ್ಕಾರ ಹಾಗೂ ತರುವಾಯದಲ್ಲಿ ಪಾಂಡುರಂಗನ ಕೃಪೆ. ದೇವಾಲಯದಿಂದಾಗಿ ಇವೆಲ್ಲ ಸಂಗತಿಗಳು ಸಹಜವಾಗಿ ಸಾಧ್ಯವಾದವು.
ಕಾಹೀ ಪಾಠ ಕೇಲೀ ಸಂತಾಂಚೀ ಉತ್ತರೇ | ವಿಶ್ವಾಸೇ ಆದರೇ ಕರೋನಿಯಾ ||೧||
ಕೀರ್ತನೆಯನ್ನು ಮಾಡಲು ನಿಂತುಕೊಳ್ಳಲೆಂದು ದೇವಾಲಯವನ್ನು ಕಟ್ಟಿಸಲಾಯಿತು. ಕೀರ್ತನೆಗಾಗಿ ಆವಶ್ಯಕವಿದ್ದ ಬಾಯಿಪಾಠಗಳಿಗಾಗಿ ತುಕಾರಾಮರು ದಿನಾಲು ಭಂಡಾರಾ ಗುಡ್ಡದ ಏಕಾಂತದಲ್ಲಿ ಕುಳಿತು ಅಧ್ಯಯನವನ್ನು ಕೈಕೊಂಡರು. ಮುಂಜಾವಿನಲ್ಲೆದ್ದು ಸ್ನಾನ ಮಾಡಿ ಕುಲ ದೇವತೆಯಾದ ಶ್ರೀ ರಖುಮಾಯಿಯನ್ನು ತಮ್ಮ ಕೈಯಿಂದಲೇ ಪೂಜಿಸಿ ಭಂಡಾರಾ ಗುಡ್ಡದತ್ತ ತೆರಳುವುದು ಅವರ ವಾಡಿಕೆಯಾಗಿತ್ತು.
ಕೀರ್ತನ ಸಂಪೂರ್ಣ ಯಾವಯಾಸೀ ಹಾತಾ | ಅಭ್ಯಾಸ ಕರಿತಾ ಝಾಲಾ ತುಕಾ ||೫||
ಅಭ್ಯಾಸ ತುಕಯಾ ಕರೀತಸೇ ಐಸಾ | ಸರಿತಾಸೀ ಜೈಸಾ ಪಾತ್ರ ಸಿಂಧು ||೬||
ತೈಸೇ ಜೇ ಐಕೇ ತೇ ರಾಹೇ ಅಂತರೀ | ಗ್ರಂಥ ಯಾಹೀವರೀ ವಾಚೀಯೇಲೇ ||೭||
ತುಕಾರಾಮರು ಜ್ನಾನದೇವರ ಜ್ನಾನದೇವೀ, ಅಮೃತಾನುಭವ, ಏಕನಾಥರ ಭಗವದ್ಗೀತೆಯನ್ನು ಕುರಿತಾದ ಟೀಕೆ, ಭಾವಾರ್ಥ ರಾಮಾಯಣ, ಸ್ವಾತ್ಮಾನುಭವ, ನಾಮದೇವರಾಯರ ಅಭಂಗಗಳು, ಕಬೀರನ ಪದಗಳನ್ನು ಪರಿಶೀಲಿಸಿದರು. ಅವರು ಜ್ನಾನದೇವ, ನಾಥ, ನಾಮದೇವರಾಯ ಹಾಗೂ ಕಬೀರರಂತಹ ಭಕ್ತಿಮಾರ್ಗದ ಶ್ರೇಷ್ಠ ಸಂತರ ಕೆಲವು ವಚನಗಳನ್ನು ಬಾಯಿಪಾಠ ಮಾಡಿಕೊಂಡರು.
ಕರೂ ತೈಸೇ ಪಾಠಾಂತರ | ಕರುಣಾಕಾರ ಭಾಷಣ ||೧||
ಜಿಹೀ ಕೇಲಾ ಮೂರ್ತಿಮಂತ | ಐಸಾ ಸಂತಪ್ರಸಾದ ||೨||
ಅವರು ನಿರ್ಗುಣ, ನಿರಾಕಾರನಾದ ಪರಮಾತ್ಮನನ್ನು ಸಗುಣ, ಸಾಕಾರಗೊಳಿಸಿದ, ಅಮೂರ್ತವನ್ನು ಮೂರ್ತಗೊಳಿಸಿದ ಈ ಸಂತರ ಪ್ರಸಾದವನ್ನು ಸೇವಿಸಿದರು. ತುಕಾರಾಮರು ಪುರಾಣಗಳನ್ನು ಅವಲೋಕಿಸಿದರು, ಶಾಸ್ತ್ರಗಳನ್ನು ಅನ್ವೇಷಿಸಿದರು.
ಪಾಹಿಲೀ ಪುರಾಣೇ | ಧಾಂಡೋಳಿಲೀ ದರುಷಣೇ ||೧||
ಪುರಾಣೀಚಾ ಇತಿಹಾಸ | ಗೋಡ ರಸ ಸೇವಿಲಾ ||೧||
ತುಕಾರಾಮರಿಗೆ ಈ ಏಕಾಂತವಾಸ ತುಂಬ ಇಷ್ಟವಾಯಿತು. ಇಂಥ ಏಕಾಂತದಲ್ಲೂ ನೆಂಟರಿಷ್ಟರು ಅವರ ಜೊತೆಗಿದ್ದರು. ಆದರೆ ಅವರು ಬೇರೆ ತೆರನಾದ ಸಂಗಡಿಗರು. ಯಾರವರು? ಮರಗಳು, ಬಳ್ಳಿಗಳು ! ಕಾಡು ಪ್ರಾಣಿಗಳು ! ಪಕ್ಷಿರಾಜರು ಇಂಪಾಗಿ ಉಲಿಯುತ್ತಿದ್ದರು. ಅವೆಲ್ಲ ದೇವರನ್ನು ಪ್ರಾರ್ಥಿಸುತ್ತಿದ್ದವು.
ವೃಕ್ಷವಲ್ಲೀ ಆಮ್ಹಾ ಸೋಯರೇ ವನಚರೇ | ಪಕ್ಷೀಯೇ ಸುಸ್ವರೇ ಆಳವಿತೀ ||೧||
ಯೇಣೇ ಸುಖೇ ರುಚೇ ಏಕಾಂತಾಚಾ ವಾಸ | ನಾಹೀ ಗುಣ ದೋಷ ಅಂಗಾ ಯೇತ ||೨||
ಆಕಾಶ ಮಂಡಪ ಪೃಥಿವೀ ಆಸನ | ರಮೇ ತೇಥೇ ಮನ ಕ್ರೀಡಾ ಕರೂ ||೩||
ತುಕಾರಾಮರ ಮಡದಿ ಸೌ. ಜಿಜಾಬಾಯಿ ದಿನಾಲು ಮನೆಗೆಲಸಗಳನ್ನು ಪೂರೈಸಿ, ಅಡಿಗೆ ಮಾಡಿಟ್ಟು ಮಹಾರಾಜರ ಊಟವನ್ನು ತೆಗೆದುಕೊಂಡು ಭಂಡಾರಾ ಗುಡ್ಡಕ್ಕೆ ಹೋಗುತ್ತಿದ್ದರು. ಮಹಾರಾಜರಿಗೆ ಉಣಬಡಿಸಿದ ತರುವಾಯ ತಾವು ಉಣ್ಣುತ್ತಿದ್ದರು. ತುಕಾರಾಮರು ಪರಮಾರ್ಥದ ಸಾಧನೆಯಲ್ಲಿ ಮೈಮರೆತಾಗ, ವಿದೇಹ ಸ್ಥಿತಿಯಲ್ಲಿ ಇರುವಾಗ ಸೌ. ಜಿಜಾಬಾಯಿಯವರು ಅವರ ಬಗೆಗೆ ಎಲ್ಲ ಬಗೆಯ ಎಚ್ಚರಿಕೆಯನ್ನು ವಹಿಸುತ್ತಿದ್ದರು. ತುಕಾರಾಮರ ಪರಮಾರ್ಥದಲ್ಲಿ ಜಿಜಾಬಾಯಿಯವರದು ಬಲು ದೊಡ್ಡ ಪಾಲು. ದೇಹದ ದುಡಿಮೆಯಿಂದ ಪರೋಪಕಾರ, ಸಂತರ ವಚನಗಳ ಪಾಠ-ಪಾಠಾಂತರಗಳ ಅಧ್ಯಯನ, ವಿಠ್ಠಲನ ಸಾಧನೆ ಒಂದೇ ಸವನೆ ಸಾಗಿರುವಾಗ ಶ್ರೀ ಪಂಢರೀರಾಯರು ಜೊತೆಗೆ ನಾಮದೇವರಾಯರನ್ನು ಕರೆದುಕೊಂಡು ಮಹಾರಾಜರ ಕನಸಿನಲ್ಲಿ ಬಂದರು. ಅವರು ಶ್ರೀ ತುಕಾರಾಮ ತುಕಾರಾಮರನ್ನು ಎಚ್ಚರಗೊಳಿಸಿ ಜಗತ್ತಿನ ಉದ್ಧಾರಕ್ಕಾಗಿ ಕವಿತ್ವವನ್ನು ಮಾಡಲು ಹೇಳಿದರು.
ನಾಮದೇವೇ ಕೇಲೇ ಸ್ವಪ್ನಾಮಾಜೀ ಜಾಗೇ | ಸವೇ ಪಾಂಡುರಂಗೇ ಯೇಉನಿಯಾ ||೧||
ಸಾಂಗಿತಲೇ ಕಾಮ ಕರಾವೇ ಕವಿತ್ವ | ವಾಉಗೇ ನಿಮಿತ್ಯ ಬೋಲೋ ನಕೋ || ಪ ||
ಮಾಪ ಟಾಕೀ ಸಳ ಧರಿಲೀ ವಿಠ್ಠಲೇ | ಥಾಪಟೋನಿ ಕೇಲೇ ಸಾವಧಾನ ||೨||
ಪ್ರಮಾಣಾಚೀ ಸಂಖ್ಯಾ ಸಾಂಗೇ ಶತ ಕೋಟೀ | ಉರಲೇ ಶೇವಟೀ ಲಾವೀ ತುಕಾ ||೩||
ದ್ಯಾಲ ಠಾವ ತರಿ ರಾಹೇನ ಸಂಗತೀ | ಸಂತಾಂಚೇ ಪಂಗತೀ ಪಾಯಾಂಪಾಶೀ ||೧||
ಆವಡೀಚಾ ಠಾವ ಆಲೋಸೇ ಟಾಕೂನ | ಆತಾ ಉದಾಸೀನ ನ ಧರಾವೇ || ಪ ||
ಸೇವಟೀಲ ಸ್ಥಳ ನಿಚ ಮಾಝೀ ವೃತ್ತಿ | ಆಧಾರೇ ವಿಶ್ರಾಂತೀ ಪಾವಈನ ||೨||
ನಾಮದೇವಾಪಾಯೀ ತುಕ್ಯಾ ಸ್ವಪ್ನೀ ಭೇಟೀ | ಪ್ರಸಾದ ಹಾ ಪೋಟೀ ರಾಹಿಲಾಸೇ ||೩||
ತುಕಾರಾಮರ ಸ್ವಂತದ ಉದ್ಧಾರವಾಗಿತ್ತು. ಇನ್ನು ಅವರಿಗೆ ಲೋಕೋದ್ಧಾರವನ್ನು ಮಾಡುವುದಿತ್ತು. ತಮಗೆ ದೊರೆತ ಪ್ರಸಾದವನ್ನು ಜನರಿಗೆ ಹಂಚುವುದಿತ್ತು. ಅವರು ಪರಮಾತ್ಮನ ಸಂದೇಶವನ್ನು , ವಾರ್ತೆಯನ್ನು ಮನೆ ಮನೆಗೆ ತಲುಪಿಸುವವರಿದ್ದರು.
ತುಕಾ ಮ್ಹಣೇ ಮಜ ಧಾಡಿಲೇ ನಿರೋಪಾ | ಮಾರಗ ಹಾ ಸೋಪಾ ಸುಖರೂಪ |
ಮಹಾರಾಜರಲ್ಲಿ ಕವಿತ್ವ ಸುರಿಸಿತು.
ಯಾವರ ಝಾಲೀ ಕವಿತ್ವಾಚೀ ಸೂರ್ತಿ | ಪಾಯ ಧರಿಲೇ ಚಿತ್ತೀ ವಿಠೋಬಾಚೇ |
- ಹೀಗೆ ತುಕಾರಾಮರ ಬಾಯಿಯಿಂದ ಅಭಂಗ ಗಂಗೆ ಹರಿಯತೊಡಗಿದಳು. ಭಾಗ್ಯವಂತರಾದ ಶ್ರೋತೃಗಳು ಆಲಿಸತೊಡಗಿದರು.
ಬೋಲಾವೇ ಮ್ಹಣೂನ ಬೋಲತೋ ಉಪಾಯ | ಪ್ರವಾಹೇಚಿ ಜಾಯೇ ಗಂಗಾಜಳ ||೧||
ಭಾಗ್ಯ ಯೋಗೇ ಕೋಣಾ ಘಡೇಲ ಶ್ರವಣ | ಕೈಚೇ ತೇಥೇ ಜನ ಅಕಾರೀ ||೨||
ತುಕಾರಾಮರ ಅಭಂಗದ ಮೂಲಕ ಶ್ರುತಿ ಶಾಸ್ತ್ರಗಳ ಮತಿತಾರ್ಥವು ಮಹಾಕಾವ್ಯದ ಫಲವಾಗಿ ಹೊರ-ಹೊಮ್ಮತೊಡಗಿತು. ಶ್ರೀ ತುಕಾರಾಮ ಮಹಾರಾಜರು ಆಳಂದಿಯಲ್ಲಿ ಶ್ರೀ ಜ್ನಾನದೇವರ ಮಹಾದ್ವಾರದಲ್ಲಿ ಕೀರ್ತನೆಯನ್ನು ಮಾಡುತ್ತಿರುವಾಗ ಅವರ ಈ ಪ್ರಾಸಾದಿಕವಾದ ಅಭಂಗವಾಣಿಯು ಮಹಾಪಂಡಿತ ರಾಮೇಶ್ವರ ಭಟ್ಟಜೀ ಅವರ ಕಿವಿಯ ಮೇಲೆ ಅಪ್ಪಳಿಸಿತು. ಅವರಿಗೆ ಬಲು ದೊಡ್ಡ ಆಘಾತವಾಯಿತು. ಹೀ ಗೀತಾಚೀ ಕಿ ಮೂರ್ತಿಮಂತ, ಕಿ ನೇಣೋ ಶ್ರೀಮತ್ ಭಾಗವತ || - ಪ್ರತ್ಯಕ್ಷವಾದ ಈ ವೇದವಾಣಿಯೇ ತುಕೋಬಾನ ಬಾಯಿಂದ ಪ್ರಾಕೃತ ನುಡಿಯಲ್ಲಿ ಹೊರಬರಬೇಕೆ !
ತುಕಯಾಚೇ ಕವಿತ್ವ ಐಕೂನ ಕಾನೀ | ಅರ್ಥ ಶೋಧೂನಿ ಪಾಹತಾ ಮನೀ |
ಮ್ಹಣೇ ಪ್ರತ್ಯಕ್ಷ ಹೇ ವೇದವಾಣೀ | ತ್ಯಾಚೇ ಮುಖೇ ಕಾನೀ ನ ಐಕಾವೀ ||
ತರೀ ಯಾಸೀ ನಿಷೇಧಾವೇ | ಸರ್ವಥಾ ಭಯ ನ ಧರಾವೇ ||
ರಾಮೇಶ್ವರಶಾಸ್ತ್ರಿಗಳು ನಿಷೇಸಿದರು. ಅವರು ನೀವು ಶೂದ್ರರೇ? ನಿಮ್ಮ ಅಭಂಗವಾಣಿಯಿಂದ ವೇದಾರ್ಥ ಪ್ರಕಟಗೊಳ್ಳುತ್ತಿದೆ. ಅದು ನಿಮ್ಮ ಅಕಾರವಲ್ಲ. ನಿಮ್ಮ ಬಾಯಿಯಿಂದ ಅದನ್ನು ಕೇಳುವುದು ಅಧರ್ಮ. ನಿಮಗೆ ಈ ಉಪದ್ವ್ಯಾಪವನ್ನು ಹೇಳಿದವರಾರು?" ಎಂದರು. ಅದಕ್ಕೆ ತುಕಾರಾಮರು, ಇದು ನನ್ನ ವಾಣಿಯಲ್ಲ, ದೇವವಾಣಿ" ಎಂದು ಉತ್ತರಿಸಿದರು.
ಕರಿತೋ ಕವಿತ್ವ ಮ್ಹಣಾಲ ಹೇ ಕೋಣೀ | ನವ್ಹೇ ಮಾಝೀ ವಾಣೀ ಪದರೀಚಿ ||೧||
ಮಾಝಿಯೇ ಯುಕ್ತೀಚಾ ನವ್ಹೇ ಹಾ ಪ್ರಕಾರ | ಮಜ ವಿಶ್ವಂಭರ ಬೋಲವಿತೋ ||೨||
ನೇಣೇ ಅರ್ಥ ಕಾಹೀ ನವ್ಹತೀ ಮಾಝೇ ಬೋಲ | ವಿನವಿತೋ ಕೋಪಾಲ ಸಂತ ಝಣೀ ||೧||
ನವ್ಹತೀ ಮಾಝೇ ಬೋಲ, ಬೋಲೇ ಪಾಂಡುರಂಗ | ಅಸೇ ಅಂಗ ಸಂಗ ವ್ಯಾಪುನಿಯಾ ||೨||
ನಾಮದೇವರಾಯ ಮತ್ತು ಪಂಢರಿರಾಯರು ಕನಸಿನಲ್ಲಿ ಬಂದು ಕವಿತ್ವವನ್ನು ಮಾಡೆಂದು ಅಪ್ಪಣೆ ಮಾಡಿದರು.
ವಿಪ್ರ ಮ್ಹಣೇ ಆe ಕಾರಣ | ಶ್ರೀಚೀ ಕೈಸೇ ಜಾಣೇಲ ಜನ |
ಯಾಲಾಗೀ ಕವಿತ್ವ ಬುಡವೂನ | ಟಾಕೀ ನೇಊನ ಉದಕಾತ ||೧||
ತೇಥೇ ಸಾಕ್ಷಾತ್ ನಾರಾಯಣ | ಆಪೇ ರಕ್ಷೀಲ ಜರೀ ಆಪಣ |
ತರೀ ಸಹಜಚಿ ವೇದಾಹೂನ | ಮಾನ್ಯ ಹೋಈಲ ಸರ್ವಾಶೀ ||೧೬||
ನಿಮ್ಮ ಕವಿತ್ವವನ್ನು ಮುಳುಗಿಸಿ ಬಿಡಿ. ಅದು ದೇವವಾಣಿಯಾಗಿದ್ದರೆ ದೇವನು ಅದನ್ನು ನೀರಲ್ಲಿಯೂ
ಕಾಪಾಡುವನು. ರಾಮೇಶ್ವರ ಶಾಸ್ತ್ರಿಗಳು ಊರಿನ ಗೌಡನಿಗೆ ತುಕೋಬಾನ ಈ ಅಧರ್ಮದ ಬಗೆಗೆ ತಿಳಿಸಿದರು. ಗೌಡ ಕೆರಳಿದನು. ಜನ ರೊಚ್ಚಿಗೆದ್ದರು.
ಕೋಪಲಾ ಪಾಟೀಲ ಗಾವೀಚೇ ಹೇ ಲೋಕ ||೧||
ಕಾಯ ಖಾವೇ ಆತಾ ಕೋಣೀಕಡೇ ಜಾವೇ | ಗಾವಾತ ರಾಹಾವೇ ಕೋಣ್ಯಾ ಬಳೇ ||೨||
ತುಕಾರಾಮರು ಅಭಂಗದ ಕೈಬರಹದ ಪುಸ್ತಕಗಳನ್ನೆಲ್ಲ ತೆಗೆದುಕೊಂಡು, ಕಲ್ಲು ಕಟ್ಟಿ ಇಂದ್ರಾಯಣಿಯ ಮಡುವಿನಲ್ಲಿ ತಮ್ಮ ಕೈಯಿಂದಲೇ ಮುಳುಗಿಸಿದರು. ಹಿಂದೆ ಸಾಲಪತ್ರ, ಪ್ರಪಂಚಗಳನ್ನು ಮುಳುಗಿಸಿದ್ದರು. ಇಂದು ಅಭಂಗದ ಪುಸ್ತಕ-ಪರಮಾರ್ಥಗಳನ್ನು ಮುಳುಗಿಸಿಬಿಟ್ಟರು.
ಬುಡವಿಲ್ಯಾ ವಹ್ಯಾ ಬೈಸಿಲೋ ಧರಣೆ ||
ತುಕಾರಾಮರಿಗೆ ತುಂಬ ದುಃಖವಾಯಿತು. ಜನರು ನಿಂದಿಸತೊಡಗಿದರು. ಎಂಥ ದೃಷ್ಟಾಂತ, ಎಂಥ ಪ್ರಸಾದ ! ಎಲ್ಲ ಬೂಟಾಟಿಕೆ. ಎಂಥ ದೇವ, ಎಂಥ ಧರ್ಮ ! ತುಕಾರಾಮರು ಮಹಾದ್ವಾರದೆದುರಿನ ಬಂಡೆಯ ಮೇಲೆ ಧರಣಿ ಕುಳಿತರು. ಪ್ರಾಣವನ್ನು ಪಣಕ್ಕೊಡ್ಡಿದರು. ನಿರ್ವಾಣಕ್ಕೆ ಸಿದ್ಧರಾದರು. ಹದಿಮೂರು ದಿನಗಳು ಕಳೆದವು. ದೇವನಂತೂ ಪ್ರಸನ್ನನಾಗಲೊಲ್ಲ.
ತೇರಾ ದಿವಸ ಝಾಲೇ ನಿಶ್ಚಕ್ರ ಕರಿತಾ | ನ ಪವಸೀ ಅನಂತಾ ಮಾಯಬಾಪಾ ||
ತುಜವರೀ ಆತಾ ಪ್ರಾಣ ಮೀ ತ್ಯಜೀನ | ಹತ್ಯಾ ಮೀ ಘಾಲೀನ ಪಾಂಡುರಂಗಾ ||
ತುಕಾ ಮ್ಹಣೇ ಆತಾ ಮಾಂಡಿಲೇ ನಿರ್ವಾಣ | ಪ್ರಾಣ ಹಾ ಸಾಂಡೀನ ತುಜ ವರೀ ||
ತುಕಾರಾಮರನ್ನು ನಿಷೇಸಿದ ರಾಮೇಶ್ವರ ಶಾಸ್ತ್ರಿಗಳು ಇತ್ತ ಆಳಂದಿಯಿಂದ ಹೊರಟು ನಾಗಝರಿಯ ಉಗಮದ ಹತ್ತಿರದಲ್ಲಿರುವ ಪಂಚವಟಿಗೆ ಬಂದರು. ಅವರು ಸ್ನಾನಕ್ಕೆಂದು ಅಲ್ಲಿಯ ಸರೋವರದಲ್ಲಿ ಇಳಿದರು. ಅವರ ಸ್ನಾನ ನಡೆದಾಗ ಆ ಸರೋವರದ ನೀರನ್ನು ಒಯ್ಯಲು ಅಲ್ಲಿಗೊಬ್ಬ ಪವಿತ್ರನಾದ ಸಿದ್ಧ ಫಕೀರನು ಬಂದನು. ಯಾರು ನೀವು? ಎಲ್ಲಿಂದ ಬಂದಿರಿ?" ಎಂದು ಕೇಳಿದನು. ಅವನನ್ನು ಕಂಡವರೇ ಶಾಸ್ತ್ರಿಗಳು ಕಿವಿಗೆ ಬೆರಳುಗಳನ್ನು ತುರುಕಿಕೊಂಡು ನೀರಿನಲ್ಲಿ ಮುಳುಗಿದರು (ಯವನರ ಭಾಷೆಯನ್ನು ಕೇಳಬಾರದೆಂದು.) ಅವರ ಈ ಕೃತ್ಯದಿಂದ ಆ ಸಿದ್ಧನಿಗೆ ಕೋಪ ಬಂದು ಅವರಿಗೆ ಶಾಪವಿತ್ತನು. ರಾಮೇಶ್ವರ ಶಾಸ್ತ್ರಿಗಳು ನೀರಿನಿಂದ ಹೊರಬರುತ್ತಲೇ ಅವರ ಮೈಯೆಲ್ಲ ಉರಿತವನ್ನು ಅನುಭವಿಸಹತ್ತಿತು. ಅವರು ಮೈಗೆ ಒದ್ದೆ ಬಟ್ಟೆಯನ್ನು ಸುತ್ತಿಕೊಂಡು ಶಾಪದಿಂದ ಬಿಡುಗಡೆ ಹೊಂದಲೆಂದು ತಮ್ಮ ಶಿಷ್ಯರೊಡನೆ ಆಳಂದಿಗೆ ಹಿಂತಿರುಗಿದರು. ಆಳಂದಿಗೆ ಬಂದು ಅಜಾನ ವೃಕ್ಷದಡಿ ಅನುಷ್ಠಾನಕ್ಕೆ ಕುಳಿತರು.
ಇದಾದಾಗ ಇತ್ತ ಹದಿಮೂರನೆಯ ದಿನ ರಾತ್ರಿ ಹೊತ್ತು ಭಗವಂತನು ಸಗುಣನಾಗಿ ಮಗುವಿನ ರೂಪವನ್ನು ಧರಿಸಿ ಶ್ರೀ ತುಕೋಬಾರನ್ನು ಭೆಟ್ಟಿಯಾದನು. ಅವನು ಅವರಿಗೆ, ನಿಮ್ಮ ಕೈಬರಹದ ಪುಸ್ತಕಗಳನ್ನು ಹದಿಮೂರು ಹಗಲಿರುಳು ನೀರಲ್ಲಿ ನಿಂತು ಕಾಪಾಡಿರುವೆನು. ನಾಳೆ ಅವು ನೀರ ಮೇಲೆದ್ದು ತೇಲಿ ಬರಲಿವೆ" ಎಂದನು. ದೇಹೂ ಊರಿನ ಭಾವಿಕರೆಲ್ಲರಿಗೂ ಇದೇ ಬಗೆಯ ದೃಷ್ಟಾಂತವಾಯಿತು. ಅದರಂತೆ ಭಕ್ತರೆಲ್ಲ ಇಂದ್ರಾಯಣಿಯ ಮಡುವಿನ ಬಳಿಗೆ ಹೋದರು. ಅವರ ಕಣ್ಣೆದುರೇ ಆ ಹೊತ್ತಿಗೆಗಳೆಲ್ಲ ನೀರ ಮೇಲೆ ತೇಲಾಡಹತ್ತಿದವು. ಈಜುಗಾರರು ನೀರಿಗೆ ಧುಮುಕಿ ಅವುಗಳನ್ನು ಈಚೆಯ ದಡಕ್ಕೆ ತಂದರು. ಒಂದು ನೀರ ಹನಿ ಕೂಡ ಅವುಗಳನ್ನು ಸ್ಪರ್ಶಿಸಿರಲಿಲ್ಲ. ಎಲ್ಲರೂ ಜಯಜಯಕಾರವನ್ನು ಮಾಡಿದರು. ದೇವನಿಗೆ ತೊಂದರೆ ಕೊಟ್ಟುದಕ್ಕಾಗಿ ತುಕಾರಾಮ ಮಹಾರಾಜರಿಗೆ ತುಂಬ ದುಃಖವಾಯಿತು.
ಥೋರ ಅನ್ಯಾಯ ಝಾಲಾ | ತುಝಾ ಅಂತ ಮ್ಯಾ ಪಾಹಿಲಾ |
ಜನಾಚಿಯಾ ಬೋಲಾಸಾಠೀ | ಚಿತ್ತ ಕ್ಷೆಭವಿಲೇ ||೧||
ಉದಕೀ ರಾಖೀಲೇ ಕಾಗದ | ಚುಕವಿಲಾ ಜನವಾದ |
ತುಕಾ ಮ್ಹಣೇ ಬ್ರೀದ | ಸಾಚೇ ಕೇಲೇ ಆಪುಲೇ ||
ಅತ್ತ ಆಳಂದಿಯಲ್ಲಿ ಜ್ನಾನದೇವ ಮಹಾರಾಜರು ರಾಮೇಶ್ವರ ಶಾಸ್ತ್ರಿಗಳಿಗೆ, ನೀವು ತುಕೋಬರನ್ನು ಹೀಯಾಳಿಸಿದುದರ ಫಲವಿದು. ಈಗ ಇದಕ್ಕಿರುವುದು ಒಂದೇ ಒಂದು ಉಪಾಯ. ಅದೆಂದರೆ, ದೇಹೂಕ್ಕೆ ಹೋಗಿ ಶ್ರೀ ತುಕೋಬಾರನ್ನು ಕಾಣುವುದು" ಎಂದು ಹೇಳಿದರು. ರಾಮೇಶ್ವರ ಶಾಸ್ತ್ರಿಗಳು ದೇಹೂದತ್ತ ಹೊರಟುದು ತುಕೋಬಾರಿಗೆ ತಿಳಿಯಿತು. ಅವರು ತಮ್ಮ ಶಿಷ್ಯನ ಕೈಲಿ ಒಂದು ಅಭಂಗವನ್ನು ಶಾಸ್ತ್ರಿಗಳಿಗಾಗಿ ಆಳಂದಿಗೆ ಕಳಿಸಿಕೊಟ್ಟರು. ಅದನ್ನೋದುತ್ತಲೇ ರಾಮೇಶ್ವರ ಶಾಸ್ತ್ರಿಗಳ ಮೈಯುರಿತ ಇಲ್ಲವಾಯಿತು.
ಚಿತ್ತ ಶುದ್ಧ ತರೋ ಶತ್ರು ಮಿತ್ರ ಹೋತೀ | ವ್ಯಾಘ್ರ ಹೇ ನ ಖಾತೀ ಸರ್ಪ ತಯಾ ||
ದುಃಖ ತೇ ದೇಈಲ ಸರ್ವ ಸುಖಫಳ | ಹೋತೀಲ ಶಿತಳ ಅಗ್ನಿಜ್ವಾಳಾ ||
ರಾಮೇಶ್ವರ ಭಟ್ಟರು ಈ ಕುರಿತು ತಮ್ಮ ಅನುಭವವನ್ನು ಹೀಗೆ ಹೇಳಿದ್ದಾರೆ ಃ
ಕಾಹೀ ದ್ವೇಷ ತ್ಯಾಚಾ ಕರಿತಾ ಅಂತರೀ | ವ್ಯಥಾ ಹೇ ಶರೀರೀ ಬಹೂ ಝಾಲೀ ||
ಮ್ಹಣೇ ರಾಮೇಶ್ವರ ತ್ಯಾಚ್ಯಾ ಸಮಾಗಮೇ | ಝಾಲೇ ಹೇ ಆರಾಮ ದೇಹ ಮಾಝೇ ||
ರಾಮೇಶ್ವರ ಭಟ್ಟರು ತುಕಾರಾಮರ ದರ್ಶನ ಪಡೆಯಲೆಂದು ದೇಹೂಕ್ಕೆ ಬಂದು ಕಥೆ, ಕೀರ್ತನೆಗಳನ್ನು ಕೇಳಲೆಂದು ಅಲ್ಲಿಯೇ ಉಳಿದರು. ರಾಮೇಶ್ವರ ಭಟ್ಟರನ್ನು ಶಾಪಮುಕ್ತರನ್ನಾಗಿ ಮಾಡಿದ ವಾರ್ತೆ ಅನಗಡ ಫಕೀರ ಶಾಹನಿಗೆ ತಿಳಿದು ಅವನಿಗೆ ಕೆಡಕೆನ್ನಿಸಿತು. ಅವನು ತುಕಾರಾಮರನ್ನು ಪೀಡಿಸಲೆಂದು ದೇಹೂಕ್ಕೆ ಬಂದನು. ತುಕಾರಾಮರ ಮನೆಗೆ ಹೋದನು. ಒಂದು ಪಾತ್ರೆ ತುಂಬ ಭಿಕ್ಷೆ ಕೇಳಿದನು. ತುಕಾರಾಮರ ಮಗಳು ಅವನ ಪಾತ್ರೆಗೆ ಒಂದು ಚಿಮ್ಮಟಿ ಹಿಟ್ಟು ಹಾಕುತ್ತಲೇ ಅದು ತುಂಬಿ ಹೊರಚೆಲ್ಲಿತು. ಆ ಸಿದ್ಧನ ಸಾಮರ್ಥ್ಯವು
ತುಕಾರಾಮರ ಬಾಗಿಲಲ್ಲಿ ನಾಶಹೊಂದಿತು. ಅನಗಡ ಶಾಹರು ಭಕ್ತಿ ಭಾವದಿಂದ ತುಕಾರಾಮ ತುಕಾರಾಮರನ್ನು ಕಂಡರು. ಭಜನೆ, ಕೀರ್ತನೆಗಳನ್ನು ಕಿವಿಯಿಂದ ಕೇಳಲೆಂದು ಅವರ ಬಳಿಯೇ ಉಳಿದರು. ದಾರ್ಶನಿಕ ಜ್ನಾನ, ಪಾಂಡಿತ್ಯ, ಋದ್ಧಿ ಮತ್ತು ಸಿದ್ಧಿಗಳು ಹರಿಭಕ್ತಿಗೆ ಶರಣು ಬಂದವು, ಇರಲಿ. ಹೊತ್ತಿಗೆಗಳು ತೇಲಿ ಉಳಿದು ಬಂದ ವಾರ್ತೆ ದೇಶ ದೇಶಗಳಲ್ಲೆಲ್ಲ ಹಬ್ಬಿತು. ಹೊತ್ತಿಗೆಗಳು ಉಳಿದುದರಿಂದ ಲೋಕಾಪವಾದ ತಪ್ಪಿತು. ಅಭಂಗವಾಣಿ ಅವಿನಾಶಿ ಎನ್ನಿಸಿತು. ಪರಮಾತ್ಮನ ಸಗುಣ ದರ್ಶನ ಆಯಿತು. ತುಕಾರಾಮರ ಕಥೆ ಕೀರ್ತನೆಯ ದಾರಿ ಸರಾಗವಾಯಿತು.
ಸಂತ ತುಕಾರಾಮರು ಮತ್ತು ಇಬ್ಬರು ಸಂನ್ಯಾಸಿಗಳು
ಅವಘಾ ಝಾಲಾ ರಾಮರಾಮ | ಕೋಣೀ ಕರ್ಮ ಆಚರೇನ ||೧||
ತುಕಾರಾಮರು ಹೊಸ ಬಿರುಸು ಹಾಗೂ ಉತ್ಸಾಹಗಳಿಂದ ಕೀರ್ತನೆಗಳನ್ನು ಆರಂಭಿಸಿದರು. ಲೋಕೋದ್ಧಾರ ಹಾಗೂ ಜನಜಾಗೃತಿಗಳಿಗಾಗಿ ತುಕಾರಾಮರ ಸಾಧನವೆಂದರೆ ಭಜನೆ, ಕೀರ್ತನೆ.
ತುಕಾ ಮ್ಹಣೇ ಕೇಲೀ ಸಾಧನಾ ಗಾಳಣೀ | ಸುಲಭ ಕೀರ್ತನೀ ಹೋಊನೀ ಠೇಲಾ ||೪||
ಗೋಕುಲದವರು ಭಗವಾನ ಶ್ರೀಕೃಷ್ಣನ ಹುಟ್ಟಿನಿಂದ ಮಥುರೆಯ ಪ್ರೇಮಸುಖವನ್ನು ಕೂಡ ಹೇರಳವಾಗಿ ಪಡೆದುಕೊಂಡರು. ತುಕಾರಾಮರು ಹುಟ್ಟಿದುದು ದೇಹೂ ಊರಲ್ಲಿ. ಆದರೆ ಲೋಹಗಾವದ ಜನ ಕೂಡ ಭಕ್ತಿ ಪ್ರೇಮದ ಸುಖವನ್ನು ಹೇರಳವಾಗಿ ಪಡೆದರು. ಲೋಹಗಾವವು ತುಕಾರಾಮರ ಅಜ್ಜನ ಊರು.
ತುಕಾರಾಮ ರಾಜರ ಕೀರ್ತನೆಗಳು ಯಾವಾಗಲೂ ಲೋಹಗಾವದಲ್ಲಿ ಕೂಡ ಜರುಗುತ್ತಿದ್ದವು. ಒಂದು ಸಲ ಸನ್ಯಾಸಿಗಳಿಬ್ಬರು ಮಹಾರಾಜರ ಕೀರ್ತನೆಗೆ ಬಂದು ಕುಳಿತರು. ಅವರು ಹೆಂಗಸು-ಗಂಡಸರೆಲ್ಲ ಮೈಮರೆತು ಕೀರ್ತನೆಯನ್ನು ಆಲಿಸುತ್ತಿರುವುದನ್ನು ಕಂಡರು. ಹಿರಿ ಕಿರಿಯರು, ಬ್ರಾಹ್ಮಣರು, ಶೂದ್ರರೆಲ್ಲ ಪರಸ್ಪರರ ಪಾದಗಳಿಗೆ ತಲೆ ಬಾಗುತ್ತಿದ್ದಾರೆ. ಭೇದಭಾವ ಅಳಿಸಿಹೋಗಿದೆ. ಈ ನೋಟವನ್ನು ಕಂಡು ಅವರು ತುಕೋಬಾರನ್ನು ಜರಿದು, ಬ್ರಾಹ್ಮಣರನ್ನು ಹೀಯಾಳಿಸಿದರು. ನೀವು ಕರ್ಮಭ್ರಷ್ಟರಾದಿರಿ. ಕರ್ಮ ಮಾರ್ಗವನ್ನು ಬಿಟ್ಟು ರಾಮರಾಮ ಎನ್ನುತ್ತ ಕುಳಿತಿರುವಿರಿ. ಅವರು ಅಲ್ಲಿಂದ ಎದ್ದು ಹೊರಟರು. ತಮ್ಮ ಬಗಲಲ್ಲಿಯ ಕೃಷ್ಣಾಜಿನವನ್ನು ಸರಿಪಡಿಸಿಕೊಳ್ಳುತ್ತ ದೂರು ನೀಡಲೆಂದು, ನ್ಯಾಯ ಪಡೆಯಲೆಂದು ದಾದೋಜೀ ಕೊಂಡದೇವರ ಬಳಿಗೆ ಬಂದರು.
ಕಾಖೇ ಕಡಾಸನ ಆಡ ಪಡೇ | ಖಡಬಡ ಖಡಬಡ ಹುಸಕಲೇ ||೧||
ದಾದ ಕರಾ ದಾದ ಕರಾ | ಫಜೀತ ಖೋರಾ ಲಾಜ ನಾಹೀ ||೨||
ಅವಘಾ ಝಾಲಾ ರಾಮರಾಮ | ಕೋಣೀ ಕರ್ಮ ಆಚರೇನ ||೩||
ಅವರು ಹೀಗೆಂದು ದೂರಿಕೊಂಡರು : ಲೋಹಗಾವದ ಬ್ರಾಹ್ಮಣರು ಬ್ರಹ್ಮಕರ್ಮವನ್ನು ತೊರೆದು ಬಿಟ್ಟಿದ್ದಾರೆ. ಅವರು ಶೂದ್ರನ ಪಾದಗಳಿಗೆ ಶರಣು ಹೋಗಿರುವರು. ಬರಿ ರಾಮರಾಮ ಎನ್ನುತ್ತ ಕುಳಿತಿರುತ್ತಾರೆ. ಅಧರ್ಮ ತಲೆಯೆತ್ತಿದೆ. ಹೀಗಾಗಿ ನೀವಿದನ್ನು ಸದೆಬಡೆಯಬೇಕು." ದಾದೋಜಿ ತಮ್ಮ ಸೈನಿಕರನ್ನು ಕಳಿಸಿ ಬ್ರಾಹ್ಮಣರಿಗೆ ೧೦೦ ರೂಪಾಯಿಗಳ ದಂಡವನ್ನು ವಿಸಿದರು. ತುಕೋಬಾ ಹಾಗೂ ಲೋಹಗಾವದ ಜನರನ್ನು ಕರೆ ಕಳುಹಿಸಿದರು. ತುಕಾರಾಮರು ಲೋಹಗಾವದ ಜನರೊಡನೆ ಪುಣೆಯ ಸಂಗಮದ ಬಳಿಗೆ ಬಂದರು. ಅಲ್ಲಿ ಕೀರ್ತನೆಯನ್ನು ಆರಂಭಿಸಿದರು. ತುಕೋಬಾರು ಬಂದುದು ತಿಳಿಯುತ್ತಲೇ ಇಡಿಯ ಪುಣ್ಯನಗರಿ ಪುಣೆಯೇ ತುಕಾರಾಮರ ದರ್ಶನ ಹಾಗೂ ಕೀರ್ತನೆಗಾಗಿ ಅಲ್ಲಿಗೆ ಬಂದು ನೆರೆಯಿತು. ದಾದೋಜೀ ಕೂಡ ಹೊರಟರು. ಅವರು ಬಂದು ತುಕಾರಾಮರ ಕೀರ್ತನೆಯನ್ನು ಕೇಳುತ್ತ ಕುಳಿತರು. ಸನ್ಯಾಸಿಗಳಿಬ್ಬರೂ ಕೂಡ ಕುಳಿತಿದ್ದರು. ಅವರಿಗೆ ತುಕೋಬಾರು ಪರಮಾತ್ಮನ ಸ್ವರೂಪರಾಗಿ ಕಾಣತೊಡಗಿದರು. ಅವರು ತುಂಬ ಪ್ರಭಾವಕ್ಕೊಳಗಾಗಿ ತುಕಾರಾಮರ ಪಾದಗಳಿಗೆ ಎರಗಿದರು. ದಾದೋಜಿಯವರು ಅವರನ್ನು ಆ ಕೃತ್ಯಕ್ಕಾಗಿ ವಿವರಣೆ ಕೇಳಿದರು. ಅವರು, “ಬ್ರಾಹ್ಮಣರು ಶೂದ್ರರ ಪಾದಗಳಿಗೆ ತಲೆಬಾಗುತ್ತಾರೆ; ಅದರಿಂದ ಅಧರ್ಮ ಉಂಟಾಗುತ್ತದೆಂದು ದೂರುವಿರಿ. ಈಗ ನೋಡಿದರೆ ನೀವೇ ತುಕಾರಾಮರ ಕಾಲಿಗೆ ಬೀಳುವುದೆಂದರೇನು?" ಎಂದು ಕೇಳಿದರು. ಅದಕ್ಕೆ ಅವರಿಬ್ಬರೂ, ಕೀರ್ತನೆಯಲ್ಲಿ , ತುಕೋಬಾರಲ್ಲಿ ನಮಗೆ ನಾರಾಯಣನೇ ಕಾಣುತ್ತಿರುವನು" ಎಂದು ಉತ್ತರಿಸಿದರು. ದಾದೋಜೀ ತಾವೇ ಮುಂದಾಗಿ ತುಕಾರಾಮರನ್ನು ಸತ್ಕರಿಸಿದ ತರುವಾಯ ಸನ್ಯಾಸಿಗಳನ್ನು ನಗರದಿಂದ ಹೊರಹಾಕಿಸಿದರು.
ಧರಣಿ ಕುಳಿತವ
ಬೀಡ ಪರಗಣೆಯ ದೇಶಪಾಂಡೆ ತನ್ನ ಇಳಿವಯಸ್ಸಿನಲ್ಲಿ ತಾನು ಪಂಡಿತನಾಗಬೇಕೆಂದು ಬಯಸಿದನು. ಈ ವಯಸ್ಸಿನಲ್ಲಿ ಬಾಯಿಪಾಠ, ಅಧ್ಯಯನಗಳಿಂದ ಪಂಡಿತನಾಗುವುದು ಬಲು ಕಷ್ಟದ್ದು. ಹೀಗಾಗಿ ಅವನು ಆಳಂದಿಯಲ್ಲಿ ಜ್ನಾನೇಶ್ವರರೆದುರು ಧರಣಿ ಕುಳಿತನು. ಜ್ನಾನದೇವರು ಅವನಿಗೆ, ನೋಡಪ್ಪ , ನೀನು ದೇಹೂವಿನಲ್ಲಿ ಶ್ರೀ ತುಕೋಬಾರಲ್ಲಿಗೆ ಹೋಗು. ಸಧ್ಯಕ್ಕೆ ಕೋರ್ಟು ಅಲ್ಲಿದೆ" ಎಂದರು. ಆ ಬಗೆಯಾಗಿ ಅವನು ದೇಹೂಕ್ಕೆ ಬಂದನು. ಆ ಕಾಲಕ್ಕೆ ತುಕಾರಾಮ ಮಹಾರಾಜರು ಮೂವತ್ತೊಂದು ಅಭಂಗಗಳನ್ನು ಮಾಡಿದರು. ದೇವನನ್ನು ಮೊರೆ ಹೋಗುವ ಅಭಂಗಗಳು ಏಳು ಹಾಗೂ ಉಪದೇಶದ ಅಭಂಗಗಳು ಹನ್ನೊಂದು. ಈ ಅಭಂಗಗಳ ಗುಂಪುಗಳಲ್ಲಿ ತುಕಾರಾಮರ ಬೋಧನೆ, ವಿಚಾರ ಸರಣಿ, ಉಪದೇಶದ ವಿಧಾನ ಹಾಗೂ ತತ್ವ ವಿಚಾರಗಳು ಸೂಕ್ತವಾಗಿ ಕಂಡುಬರುತ್ತವೆ. ತುಕೋಬಾರು ಮೊದಲು ದೇವರನ್ನು ಮೊರೆ ಹೊಕ್ಕರು. ದೇವರೇ ಮನಸ್ಸಿನಲ್ಲಿದ್ದುನ್ನು ವ್ಯಕ್ತಪಡಿಸದೆಯೂ ನೀವದನ್ನು ಗುರುತಿಸಬಲ್ಲಿರಿ. ಹೀಗಾಗಿ ಅಭಯದಾನವನ್ನಿತ್ತು
ಹಟಹಿಡಿದವನನ್ನು ಸಮಾಧಾನಪಡಿಸಿ ನಿಮ್ಮ ಮಾನವನ್ನು ಕಾಯ್ದುಕೊಳ್ಳಿ.
ನ ಸಾಂಗತಾ ಕಳೇ ಅಂತರೀಚೇ ಗುಜ | ಆತಾ ತುಝೀ ಲಾಜ ತುಜ ದೇವಾ ||೧||
ಆಳೀಕರ ತ್ಯಾಂಚೇ ಕರೀ ಸಮಾಧಾನ | ಅಭಯಾಚೇ ದಾನ ದೇಉನೀ ||೨||
ಧರಣಿಯವನಿಗೆ ಉಪದೇಶ
ಧರ್ಮಗ್ರಂಥ, ಪರಾಯಣದ ಪುಸ್ತಕಗಳನ್ನು ಓದುತ್ತ ಕೂಡುವ ಗೋಜಿಗೆ ಇನ್ನು ಹೋಗಬೇಡ. ಈಗಿಂದೀಗ ನೀನು ಮಾಡಬೇಕಿದ್ದುದು ಒಂದೇ ಒಂದು ಸಂಗತಿ. ದೇವನಿಗಾಗಿ ದೇವನನ್ನು ಪ್ರಾರ್ಥಿಸು. ಮುಪ್ಪು ಬಂದಾಗಿದೆ. ಇನ್ನೆಷ್ಟು ತಡ ಮಾಡುವಿ?
ದೇವಾಚಿಯೇ ಚಾಡೇ ಆಳವಾವೇ ದೇವಾ | ವೋಸ ದೇಹಭಾವ ಪಾಡೋನಿಯಾ ||೧||
ನೀನು ನಿನ್ನ ಮನಸ್ಸಿಗೆ ಗೋವಿಂದನ ಹವ್ಯಾಸವನ್ನು ಅಂಟಿಸಿಕೋ. ಅಂದರೆ ನೀನೇ ಗೋವಿಂದನಾಗುವೆ.
ಗೋವಿಂದ ಗೋವಿಂದ | ಮನಾ ಲಾಗಲಿಯಾ ಛಂದ ||
ಮಗ ಗೋವಿಂದ ತೇ ಕಾಯಾ | ಭೇದ ನಾಹೀ ದೇವಾ ತಯಾ ||೧||
ಸುಖವಾಗಿ ಅನ್ನವನುಣ್ಣು ಹಾಗೂ ಪರಮಾತ್ಮನನ್ನು ಕುರಿತು ಚಿಂತಿಸು. ಹರಿಕಥೆಯೇ ಮಾತೆ ಎನ್ನಿಸಿದೆ. ಅಲ್ಲದೆ ಸುಖದ ಸಮಾಯಾಗಿದೆ; ದಣಿದವನಿಗೆ ನೆರಳು, ವಿಶ್ರಾಂತಿಯ ಸ್ಥಾನವಾಗಿದೆ.
ಸುಖಾಚೀ ಸಮಾ ಹರೀಕಥಾ ಮಾಉಲೀ | ವಿಶ್ರಾಂತಿ ಸಾಉಲೀ ಶಿಣಲಯಾಂಚೀ ||೧||
ಉಳಿದವರು ಉಪವಾಸ ಮಾಡಬೇಕು. ವಿಠ್ಠಲನ ದಾಸನು ಚಿಂತೆಯನ್ನು ಬಿಸುಟಿ ಬಿಡಬೇಕು. ನಮ್ಮ ಮೈಯಲ್ಲಿ ಎಲ್ಲ ಸಾಮರ್ಥ್ಯ ಬಂದಿದೆ. ತುಕಾರಾಮರು ಧರಣಿ ಹಿಡಿದವನಿಗೆ ಈ ಉಪದೇಶವನ್ನು ಮಾಡಿದರು. ಆದರೆ ಅವನು ಮೂರ್ಖತನದಿಂದ ಏನು ಮಾಡಿದನು?
ದೇವಾಚೇ ಉಚಿತ ಏಕಾದಶ ಅಭಂಗ | ಮಹಾಫಳ ತ್ಯಾಗ ಕರೋನೀ ಗೇಲಾ ||
ಛತ್ರಪತಿ ಶಿವಾಜಿ ಮತ್ತು ಸಂತ ತುಕಾರಾಮರು
ಶ್ರೀ ತುಕಾರಾಮರ ಕೀರ್ತಿಯು ಶಿವಾಜಿ ರಾಜರನ್ನು ತಲುಪಿತು. ಅವರು ದೀವಟಿಗೆ, ಛತ್ರದ ಕುದುರೆ ಹಾಗೂ ವಜ್ರ-ವೈಡೂರ್ಯಗಳನ್ನು ತುಕಾರಾಮರಿಗೆ ಕಳಿಸಿಕೊಟ್ಟರು. ಅವರು ದೇವರಿಗೆ ಹೀಗೆಂದರು,
ನಾವಡೇ ಜೇ ಚಿತ್ತಾ | ತೇ ತೂ ಹೋಶೀ ಪುರವಿತಾ ||೧||
ದೀವಟಿಗೆ, ಛತ್ರ, ಕುದುರೆಗಳು ನನಗೇನೂ ಲಾಭ ತರುವ ಸಂಗತಿಗಳಲ್ಲ. ದೇವನೇ, ನೀನೇಕೆ ನನ್ನನ್ನು ಇವುಗಳಲ್ಲಿ ತೊಡಗಿಸುವೆ? ತುಕಾರಾಮರ ಈ ನಿರಪೇಕ್ಷತೆಯನ್ನರಿತು ಶಿವಾಜಿ ರಾಜರಿಗೆ ಬೆರಗಾಯಿತು. ಅವರು ತಾವಾಗಿಯೇ ಬಟ್ಟೆಬರೆ, ಆಭೂಷಣಗಳು, ಅಲಂಕಾರ, ನಾಣ್ಯಗಳನ್ನು ತೆಗೆದುಕೊಂಡು ಸೇವಕರೊಡನೆ ಲೋಹಗಾವಕ್ಕೆ ಆಗಮಿಸಿದರು. ಆ ರಾಜದ್ರವ್ಯವನ್ನು ಕಂಡು ತುಕೋಬಾರು ಹೀಗೆಂದರು,
ಕಾಯ ದಿಲಾ ಠೇವಾ | ಆಮ್ಹಾ ವಿಠ್ಠಲಚಿ ಹ್ವಾವಾ ||೧||
ತುಮ್ಹೀ ಕಳಲೇ ತೀ ಉದಾರ | ಸಾಠೀ ಪರಿಸಾಚೀ ಗಾರ ||೨||
ತುಕಾ ಮ್ಹಣೇ ಧನ | ಆಮ್ಹಾ ಗೋಮಾಂಸಾ ಸಮಾನ ||೩||
ಒಂದು ಇರುವೆಯಾಗಲಿ, ಒಬ್ಬ ರಾಜನಾಗಲಿ ನಮಗೆ ಒಂದೇ. ಹಾಗೆಯೇ ಮಣ್ಣು , ಹೊನ್ನು ನಮಗೆ ಒಂದೇ ಆಗಿವೆ.
ಮುಂಗೀ ಆಣಿ ರಾವ | ಆಮ್ಹಾ ಸಮಾನಚಿ ಜೀವ ||೧||
ಸೋನೇ ಆಣಿ ಮಾತೀ | ಆಮ್ಹಾ ಸಮಾನಚಿ ಚಿತ್ತೀ ||೨||
ನಾವು ಈ ಸಂಗತಿಗಳಿಂದ ಸುಖಿಯಾಗಲಾರೆವು. ನೀವು ದೇವರ ಹೆಸರನ್ನು ಉಚ್ಚರಿಸಿ. ಶ್ರೀಹರಿಯ ಸೇವಕರೆನ್ನಿಸಿ.
ಆಮ್ಹೀ ತೇಣೇ ಸುಖೀ | ಮ್ಹಣಾ ವಿಠ್ಠಲ ವಿಠ್ಠಲ ಮುಖೀ ||೧||
ಮ್ಹಣವಾ ಹರಿಚೇ ದಾಸ | ತುಕಾ ಮ್ಹಣೇ ಮಜ ಹೇ ಆಸ ||೨||
ತುಕಾರಾಮರ ಉಪದೇಶದಿಂದ ಪ್ರಭಾವಿತರಾದ ರಾಜರು ರಾಜ್ಯವನ್ನು ಬಿಟ್ಟು ತುಕೋಬಾರ ಭಜನೆ ಕೀರ್ತನೆಗಳನ್ನು ಆಲಿಸತೊಡಗಿದರು. ಆಗ ತುಕೋಬಾರು ಅವರಿಗೆ ಹಾಗೂ ಸೇವಕರಿಗೆ ಕ್ಷಾತ್ರಧರ್ಮವನ್ನು ಹೇಳಿದರು.
ಆಮ್ಹೀ ಜಗಾಲಾ ಉಪದೇಶ ಕರಾವಾ | ಆಪಣ ಕ್ಷಾತ್ರಧರ್ಮ ಸಾಂಭಾಳಾವಾ ||
ಭಾಂಡಣ ಪಡಲೇ ಅಸತಾ ಸೇವಕಾನೀ ಸ್ವಾಮೀಚ್ಯಾ ಪುಢೇ ಹ್ವಾವೇ |
ಸ್ವಾಮೀಪುಢೇ ಹ್ವಾವೇ ಪಡತಾ ಭಾಂಡಣ ||
ಮದ್ದುಗುಂಡುಗಳು, ಬಾಣಗಳು ಸುರಿಯುತ್ತಿರುವಾಗ ಸೈನಿಕರು ಅದನ್ನು ಸಹಿಸಿಕೊಳ್ಳಬೇಕು. ತಮ್ಮನ್ನು ರಕ್ಷಿಸಿಕೊಳ್ಳುತ್ತ ಹಗೆಗಳನ್ನು ಸುತ್ತುಗಟ್ಟಬೇಕು, ಅವರದೆಲ್ಲವನ್ನು ಕಸಿದುಕೊಳ್ಳಬೇಕು. ಹಗೆಗಳಿಗೆ ತಮ್ಮ ಸುಳಿವು ಸಿಗದ ಹಾಗೆ ನೋಡಿಕೊಳ್ಳಬೇಕು. ಒಡೆಯನಿಗಾಗಿ ಸೇವಕರು ತಮ್ಮ ಜೀವಗಳನ್ನು ಲೆಕ್ಕಿಸತಕ್ಕದ್ದಲ್ಲ. ಇಂಥ ಸೈನಿಕರುಳ್ಳ ಸೇನೆಯನ್ನು ಹೊಂದಿದ ರಾಜನೇ ತ್ರೈಲೋಕ್ಯದಲ್ಲೆಲ್ಲ ಸಾಮರ್ಥ್ಯವಂತನೆನ್ನಿಸುವನು.
ತುಕಾರಾಮರು ಶಿವಾಜಿ ರಾಜರನ್ನು ಆಶೀರ್ವದಿಸಿ ಬೀಳ್ಕೊಟ್ಟರು. ರಾಜರು ಹಾಗೂ ಸೇವಕರು
ತುಕಾರಾಮರ ಉಪದೇಶವನ್ನು ಗಮನದಲ್ಲಿರಿಸಿಕೊಂಡರು. ಅದನ್ನು ಕೃತಿಗಿಳಿಸಿದರು. ತುಕಾರಾಮರ ಆಶೀರ್ವಾದದಿಂದ ರಾಜರು ಸಾಮರ್ಥ್ಯ ಸಂಪನ್ನರಾದ ಮಹಾರಾಜರೆನ್ನಿಸಿದರು.
ಮಾಝ್ಯಾ ವಿಠೋಬಾಚಾ ಕೈಸಾ ಪ್ರೇಮ ಭಾವ | ಆಪಣಚಿ ದೇವ ಹೋಯ ಗುರು ||೧||
ಜ್ನಾನಮಾರ್ಗದಲ್ಲಿ ಗುರುವಿನ ಹಿರಿಮೆ ದೊಡ್ಡದು. ಭಕ್ತಿ ಮಾರ್ಗದಲ್ಲಿ ಅಷ್ಟೊಂದಲ್ಲ.
ಮೇಘವೃಷ್ಟೀನೇ ಕರಾವಾ ಉಪದೇಶ |
ಎನ್ನುವ ವಿಚಾರಸರಣಿ ತುಕಾರಾಮರದು. ಮಹಾರಾಜರಿಗೆ ಅದ್ವೈತಶಾಸ್ತ್ರ ಎಳ್ಳಷ್ಟೂ ಇಷ್ಟವಾಗುತ್ತಿರಲಿಲ್ಲ.
ಅದ್ವೈತಾಚೀ ವಾಣೀ | ನಾಹೀ ಐಕತ ಮೀ ಕಾನೀ ||೧||
ಮಹಾರಾಜರ ಪ್ರೀತಿ ಹೆಚ್ಚಾಗಿ ಸಗುಣದ ಬಗೆಗೆ. ಹೀಗಾಗಿ ತುಕಾರಾಮರು ಶ್ರೀಗುರುವಿಗೆ ಶರಣು ಹೋಗಲಿಲ್ಲ.
ಅದ್ವೈತಶಾಸ್ತ್ರ ನಾವಡೇ ಯಾಸೀ | ಯಾಸ್ತವ ಶರಣ ನ ಜಾಯ ಸದ್ಗುರುಶೀ ||
ಪುಢೇ ವಾಟ ಪಡೇಲ ಐಸೀ | ಗುರು ಭಕ್ತೀಶೀ ಅವರೋಧ ||
ಏಕ ಶ್ರೇಷ್ಠ ಆಚರಲಾ ಜೈಸೇ | ಜನ ಪಾಹೋನಿ ವರ್ತತೀ ತೈಸೇ ||
ತರೀ ಆಪಣ ಧರೂನಿ ವಿಪ್ರವೇಶ | ದ್ಯಾವಾ ತುಕಯಾಸೀ ಅನುಗ್ರಹ ||
ತಮ್ಮ ಕನಸಿನಲ್ಲಿ ತುಕಾರಾಮರು ಇಂದ್ರಾಯಣಿಯಲ್ಲಿ ಮಿಂದು ದೇವಾಲಯಕ್ಕೆ ಹೋಗುತ್ತಿರುವಾಗ ಒಬ್ಬ ಬ್ರಾಹ್ಮಣನನ್ನು ಕಂಡು ಅವನನ್ನು ನಮಸ್ಕರಿಸಿರು. ಬ್ರಾಹ್ಮಣನು ಸಂತುಷ್ಟನಾಗಿ ತುಕಾರಾಮರ ತಲೆಯ ಮೇಲೆ ಕೈಯಿರಿಸಿ ರಾಮಕೃಷ್ಣ ಹರಿ’ ಮಂತ್ರವನ್ನಿತ್ತರು. ತಮ್ಮ ಪರಂಪರೆಯನ್ನು ಹೇಳಿದರು. ಘಟನೆ ನಡೆದುದು ಮಾಘ ಶುದ್ಧ ದಶಮಿ, ಗುರುವಾರದಂದು.
ಸಾಪಡವಿಲೇ ವಾಟೇ ಜಾತ ಗಂಗಾಸ್ನಾನಾ | ಮಸ್ತಕೀ ತೋ ಜಾಣಾ ಠೇವಿಲಾ ಕರ ||೨||
ರಾಘವ ಚೈತನ್ಯ ಕೇಶವ ಚೈತನ್ಯ | ಸಾಂಗಿತಲೀ ಖುಣ ಮಾಲಿಕೇಚೀ ||೪||
ಬಾಬಾಜೀ ಆಪುಲೇ ಸಾಂಗಿತಲೇ ನಾಮ | ಮಂತ್ರ ದಿಲಾ ರಾಮಕೃಷ್ಣ ಹರಿ ||೫||
ಮಾಘ ಶುದ್ಧ ದಶಮೀ ಪಾಹೋನಿ ಗುರುವಾರ | ಕೇಲಾ ಅಂಗೀಕಾರ ತುಕಾ ಮ್ಹಣೇ ||೬||
ತುಕಾರಾಮರು ತಾವಾಗಿ ಯಾರ ಬಳಿಯೂ ಮಂತ್ರಕ್ಕಾಗಿ ಯಾಚಿಸಿರಲಿಲ್ಲ. ಅವರು ಹೀಗೆನ್ನುತ್ತಾರೆ,
ನಾಹೀ ಮ್ಯಾ ವಂಚಿಲಾ ಮಾತ್ರ ಕೋಣಾಪಾಶೀ | ರಾಹಿಲೋ ಜಿವಾಶೀ ಧರೋನಿಯಾ ||೧||
ತುಕಾರಾಮರು ಹೀಗೆನ್ನುತ್ತಾರೆ ಃ ಕಿವಿಯೂದುವುದು ನನಗೆ ಗೊತ್ತಿಲ್ಲ. ಏಕಾಂತದ eನ ನನ್ನಲ್ಲಿಲ್ಲ. ಆದರೆ ಕಣ್ಣಿಂದ ದೇವನನ್ನು ಕಾಣದವನಿಗೆ ನಾವು ಅವನನ್ನು ತೋರಿಸಬಲ್ಲೆವು.
ನೇಣೋ ಫುಂಕೋ ಕಾನ | ನಾಹೀ ಏಕಾಂತೀಚೇ eನ ||೨||
ನಾಹೀ ದೇಖಿಲಾ ತೋ ಡೋಳಾ | ದೇವ ದಾಖವೂ ತೇ ಕಳಾ ||೩||
ಸಂತ ತುಕಾರಾಮ ರ ಬೋಧನೆ, ಉಪದೇಶ, ಕಲಿಸುವಿಕೆಗಳು
ಪ್ರಪಂಚ (ಸಂಸಾರ)ದಲ್ಲಿ ಪ್ರಭುವಿನ ಅಷ್ಠಾನವಿಲ್ಲದೆ, ದೇವನನ್ನು ತಮ್ಮವನನ್ನಾಗಿ ಒಪ್ಪಿಕೊಳ್ಳದೆ ಜೀವಿಗಳಿಗೆ ಸುಖ ದೊರಕದು.
ಆಪುಲಾ ತೋ ಏಕ ದೇವ ಕರೋನೀ ಘ್ಯಾವಾ | ತೇಣೇ ವಿನ ಜೀವಾ ಸುಖ ನೋಹೇ ||೨||
ನೀವು ನನ್ನ ಅನುಭವವನ್ನು ನೋಡಿ,
ಮಾಝಾ ಪಹಾ ಅನುಭವ | ಕೇಲಾ ದೇವ ಆಪುಲಾ ||೧||
ಬೋಲವಲೇ ತೇಚೀ ದ್ಯಾವೇ | ಉತ್ತರ ಹ್ವಾವೇ ತೇ ಕಾಳೀ ||೨||
ಇದು ಯಾವುದರ ಅನುಭವ ಎಂದಿರಾದರೆ -
ಹಾ ಘೇ ಮಾಝಾ ಅನುಭವ | ಭಕ್ತೀಭಾವ ಭಾಗ್ಯಾಚಾ ||೧||
ಋಣೀ ಕೇಲಾ ನಾರಾಯಣ | ನೋಹೇ ಕ್ಷಣ ವೇಗಳಾ ||೨||
ದೈವದ ಲೀಲೆಯು ತುಕಾರಾಮರ ಸಂಸಾರವನ್ನು ರಸಾತಳಕ್ಕೆ ತಳ್ಳಿತು. ದೇವರ ಲೀಲೆಯಿಂದಾಗಿ ಮಹಾರಾಜರು ಗೌರೀಶಂಕರ ಶಿಖರವನ್ನು ತಲುಪಿದರು. ದೈವ ಅನಿರ್ಬಂಧ. ಅದರ ಮೇಲಾವ ಬಂಧನವಿಲ್ಲ. ದೇವರ ಮೇಲಾವ ಬಗೆಯ ಬಂಧನ? ಅದೆಂದರೆ ಪ್ರೇಮದ್ದು.
ಪ್ರೇಮಸೂತ್ರ ದೋರೀ | ನೇತೋ ತಿಕಡೇ ಜಾತೋ ಹರೀ ||೧||
ಆ ಪ್ರಭುವಿನ ಪ್ರೇಮವು ಸ್ಮರಣೆಯಿಂದ ದೊರಕುತ್ತದೆ.
ಆಮ್ಹೀ ಘ್ಯಾವೇ ತುಝೇ ನಾಮ | ತುಮ್ಹೀ ಆಮ್ಹಾ ದ್ಯಾವೇ ಪ್ರೇಮ ||
ಸಂತರ ಊರುಗಳಲ್ಲಿ ಕೂಡ ಪ್ರೇಮ ಸಾಕಷ್ಟಿರುತ್ತದೆ.
ಸಂತಾಂಚಿಯೇ ಗಾವೀ ಪ್ರೇಮಾಚಾ ಸುಕಾಳ | ನಾಹೀ ತಳಮಳ ದುಃಖ ಲೇಶ ||೧||
ಸಂತರ ವ್ಯಾಪಾರ, ಉಪದೇಶದ ಪೇಟೆಯಲ್ಲಿ ಪ್ರೇಮಸುಖದ ಕೊಡುಕೊಳ್ಳುವಿಕೆ ಸಾಗಿರುತ್ತದೆ.
ಸಂತಾಂಚಾ ವ್ಯಾಪಾರ ಉಪದೇಶಾಚೀ ಪೇಠ | ಪ್ರೇಮ ಸುಖಾಸಾಠೀ ದೇತೀ ಘೇತೀ ||
ಉಳಿದಂತೆ ಯಾವಾಗಲೂ ಈ ಭಕ್ತಿಯ ಪ್ರೇಮಸುಖ ಎಂದರೇನು ಎಂಬುದು ಪಂಡಿತರಿಗೂ, ಜ್ನಾನಿಗಳಿಗೂ ಕೂಡ ತಿಳಿದಿರದು, ತಿಳಿಯದು.
ಭಕ್ತಿ ಪ್ರೇಮ ಸುಖ ನೇಣವೇ ಆಣಿಕಾ | ಪಂಡಿತಾ ವಾಚಕಾ eನಿಯಾಸೀ ||
ಈ ಪ್ರೇಮದಿಂದ ಸಮಾಜವನ್ನು ಕಟ್ಟಲಾಗುವುದು, ಜೋಡಿಸಲಾಗುವುದು. ಪ್ರೇಮದಲ್ಲಿ ಎಲ್ಲ ಬಗೆಯ ಭೇದಗಳು, ತಾನು-ಪರರೆಂಬ ಭಾವಗಳು ಇಲ್ಲವಾಗುತ್ತವೆ. ಪ್ರೇಮದಿಂದ ಬಾಳು ಸುಖ, ಸಮೃದ್ಧಿಗಳನ್ನು ಹೊಂದುವುದು. ಇಂಥ ಈ ದಿವ್ಯವಾದ ದೈವೀ ಪ್ರೇಮವು ಪ್ರಭುವಿನ ಸ್ಮರಣೆಯಿಂದ ದೊರಕುವುದು. ಸಂತರ ಸಾನ್ನಿಧ್ಯದಲ್ಲಿ ದೊರಕುವುದು. ಪ್ರೇಮದಿಂದ ದುಃಖವು ಸುಖದಲ್ಲಿ ರೂಪಾಂತರವನ್ನು ಹೊಂದುವುದು. ಮಾನವನ ಬಾಳು ಇಡಿಯಾಗಿ ಮಾರ್ಪಾಟು ಹೊಂದುವುದು.
ಉಪದೇಶ
ಉಪದೇಶ ತೋ ಭಲತ್ಯಾ ಹಾತೀ | ಝಾಲಾ ಕಿತೀ ಧರಾವಾ ||
ಆತಾ ತರೀ ಪುಢೇ ಹಾಚೀ ಉಪದೇಶ | ನಕಾ ಕರೂ ನಾಶ ಆಯುಷ್ಯಾಚಾ ||
ಮೋಲಾಚೇ ಆಯುಷ್ಯ ಜಾತೇ ಹಾತೋಹಾತ | ವಿಚಾರೀ ಪಾಹಾತ ಲವಲಾಹೀ ||
ಗಾತ ಜಾತೋ ತುಕಾ | ಹಾಚಿ ಉಪದೇಶ ಲೋಕಾ ||
ತುಕಾ ಮ್ಹಣೇ ಹಿತ ಹೋಯ ತೋ ವ್ಯಾಪಾರ | ಕರಾ ಕಾಯ ಫಾರ ಶಿಕವಾವೇ ||
ಆಪುಲಿಯಾ ಹಿತಾ ಜೋ ಅಸೇ ಜಾಗತಾ | ಧನ್ಯ ಮಾತಾ ಪಿತಾ ತಯಾಚಿಯೇ ||
ಕುಳೀ ಕನ್ಯಾ ಪುತ್ರ ಹೋತೀ ಜೇ ಸಾತ್ತ್ವಿಕ | ತಯಾಚಾ ಹರೀಖ ವಾಟೇ ದೇವಾ ||
ಗೀತಾ ಭಾಗವತ ಕರಿತೀ ಶ್ರವಣ | ಅಖಂಡ ಚಿಂತನ ವಿಠೋಬಾಚೇ ||
ಹಿತ ತೇ ಕರಾವೇ ದೇವಾಚೇ ಚಿಂತನ | ಕರೋನಿಯಾ ಮನ ಶುದ್ಧ ಭಾವೇ ||
ತುಕಾ ಮ್ಹಣೇ ಫಾರ | ಥೋಡಾ ತರೀ ಉಪಕಾರ ||
ಸಂತಸಂಗ
ಸಂಗ ನ ಕರಾವಾ ದುರ್ಜನಾಂಚಾ | ಕರೀ ಸಂತಾಂಚಾ ಸಾಯಾಸ ||
ಪತನ ಉದ್ಧಾರ ಸಂತಾಂಚಾ ಮಹಿಮಾ | ತ್ಯಜಾವೇ ಅಧಮಾ ಸಂತ ಸೇವೀ ||
ಜೋಡೋನಿಯಾ ಧನ ಉತ್ತಮ ವ್ಯವಹಾರೇ | ಉದಾಸ ವಿಚಾರೇ ವೇಚ ಕರೀ ||
ತುಕಾರಾಮರ ಕಲಿಸುವಿಕೆಯು ಸುವಿಚಾರ, ಸದಾಚಾರ ಹಾಗೂ ಸಮತೆಗಾಗಿ ಇದ್ದಿತು. ಅವರು ಪ್ರಾಣಿಮಾತ್ರರ ಕಲ್ಯಾಣಕ್ಕಾಗಿ ಯಾರ ದಾಕ್ಷಿಣ್ಯಕ್ಕೂ ಒಳಗಾದವರಲ್ಲ.
ನಾಹೀ ಭಿಡಭಾಡ | ತುಕಾ ಮ್ಹಣೇ ಸಾನಾಥೋರ ||
ತೀಕ್ಷ್ಣ ಉತ್ತರೇ | ಹಾತೀ ಘೇಉನಿ ಬಾಣ ಫಿರೇ ||
ತುಕಾ ಮ್ಹಣೇ ಲಾಸು ಫಾಸು ದೇಉ ಡಾವ | ಸುಖಾಚಾ ಉಪಾಯ ಪುಢೇ ಆಹೇ ||
ಸಂತ ತುಕಾರಾಮರ ಧುಪದದವರು (ಪಲ್ಲವಿಯವರು), ತಾಳದವರು,
ಅನುಯಾಯಿಗಳು ಮತ್ತು ಶಿಷ್ಯರು
ತುಕಾರಾಮರ ಮುಖ್ಯ ಧುಪದರು, ತಾಳದವರು ೧೪ ಜನರಿದ್ದರೆಂದು ಮಹೀಪತ ಬಾಬಾರವರು ಹಲವೆಡೆ ಉಲ್ಲೇಖಿಸಿರುವರು. ತುಕಾರಾಮರ ಕೀರ್ತನೆಯ ಕಾಲಕ್ಕೆ ಈ ಮುಂದಿನ ಜನರು ಧುಪದವನ್ನು (ಪಲ್ಲವಿ ಅನ್ನುವವರು) ಹೇಳುತ್ತಿದ್ದರು ಃ
೧. ಮಹಾದಾಜೀಪಂತ ಕುಲಕರ್ಣಿ, ದೇಹೂಗಾವದ ಕುಲಕರ್ಣಿ - ಇವರ ಉಲ್ಲೇಖವು ಬಹಿಣಾಬಾಯಿಯ ಗಾಥೆಯಲ್ಲೂ ಬಂದಿದೆ - ದೇವಾಲಯದ ಕಟ್ಟಡದ ಕೆಲಸದ ಮೇಲ್ವಿಚಾರಣೆ ಇವರದಾಗಿತ್ತು.
೨. ಗಂಗಾಧರಬಾಬಾ ಮವಾಳ - (ತಳೇಗಾವ), ಅಭಂಗ ಲೇಖಕರು, ಇವರು ತುಕೋಬಾರ ಸೇವೆಯನ್ನು ಆರಂಭಿಸಿದ ಉಲ್ಲೇಖ ಕಾಗದ ಪತ್ರಗಳಲ್ಲಿದೆ.
೩. ಸಂತಾಜೀ ತೇಲೀ ಜಗನಾಡೇ - (ಚಾಕಣದವರು) - ತುಕೋಬಾರ ಅಭಂಗ ಲೇಖಕರು.
೪. ತುಕಯಾ ಬಂಧು ಕಾನ್ಹೋಬಾ.
೫. ಮಾಲಜೀ ಗಾಡೇ (ಯೇಲವಾಡೀ) - ತುಕಾರಾಮರ ಅಳಿಯ.
೬. ಕೋಂಡೋಪಂತ ಲೋಹಕರೇ - ಲೋಹಗಾವ.
೭. ಗವಾರ ಶೇಟ ವಾಣೀ - ಸುದುಂಬರೇ.
೮. ಮಲ್ಹಾರಪಂತ ಕುಲಕರ್ಣಿ - ಚಿಖಲೀ.
೯. ಆಬಾಜೀಪಂತ ಲೋಹಗಾವಕರ.
೧೦. ರಾಮೇಶ್ವರಭಟ್ಟ ಬಹುಳಕರ
೧೧. ಕೋಂಡಪಾಟೀಲ, ಲೋಹಗಾವ.
೧೨. ನಾವಜೀ ಮಾಳೀ - ಲೋಹಗಾವ
೧೩. ಶಿವಬಾ ಕಾಸಾರ - ಲೋಹಗಾವ.
೧೪. ಸೋನಬಾ ಠಾಕೂರ - ಕೀರ್ತನೆಯಲ್ಲಿ ಮೃದಂಗವನ್ನು ನುಡಿಸುತ್ತಿದ್ದರು.
ತುಕಾರಾಮರ ಶಿಷ್ಯೆ ಬಹಿಣಾಬಾಯಿ. ಮಹಾರಾಜರು ಈಕೆಗೆ ಕನಸಿನಲ್ಲಿ ಉಪದೇಶ ನೀಡಿದರು. ಆಕೆ ದರ್ಶನಕ್ಕಾಗಿ ದೇಹೂಕ್ಕೆ ಬಂದರು. ಈಕೆಗೆ ಕವಿತ್ವ ಸುರಿಸಿದುದು ದೇಹೂದಲ್ಲೇ. ಬಹಿಣಾಬಾಯಿಯವರು ತುಕೋಬಾರ ಕಥೆ ಕೀರ್ತನೆಗಳನ್ನು ಪ್ರತ್ಯಕ್ಷದಲ್ಲಿ ಆಲಿಸಿದರು. ಮುಂಬಾಜಿಯಿಂದ ಈಕೆಗೆ ತುಂಬ ತೊಂದರೆಯಾಯಿತು. ಬಹಿಣಾಬಾಯಿಯವರ ಯೋಗ್ಯತೆ, ಅಕಾರಗಳು ಸುಮಾರು ತುಕೋಬಾರಷ್ಟೇ ಇದ್ದವು. ಬಹಿಣಾಬಾಯಿಯವರ ಅಭಂಗಗಳ ಗಾಥೆಯನ್ನು ಒಂದು ಸಲವಾದರೂ ಓದಿಕೊಳ್ಳಲೇಬೇಕು.
ಪ್ರಯಾಣ
ಕಾರ್ತಿಕ ವದ್ಯ ಏಕಾದಶಿಯಂದು ಆಳಂದಿಯಲ್ಲಿ ಜ್ನಾನದೇವರೆದುರು ತುಕೋಬಾರ ಕೀರ್ತನೆ
ನಡೆದಿತ್ತು. ಯಾತ್ರೆ ಅಪಾರವಾಗಿ ನೆರೆದಿತ್ತು. ಕೀರ್ತನೆಯ ಅಭಂಗ ಇದಾಗಿತ್ತು -
ಭಕ್ತೀ ತೇ ನಮನ ವೈರಾಗ್ಯ ತೋ ತ್ಯಾಗ | eನಬಹ್ಮೀ ಭೋಗ ಬ್ರಹ್ಮ ತನೂ ||೧||
ದೇಹವು ಎಂದಾದರೂ ಬ್ರಹ್ಮವಾದೀತೆ ? ಯಾರಾದರೂ ಹಾಗೆ ಮಾಡಿರುವರೆ? - ಎಂಬುದಾಗಿ ಆತ್ಮಾನಾತ್ಮ ಕುರಿತಾಗಿ ವಿಚಾರ ಮಾಡುವಂತಹ ಜ್ನಾನಿ ಶ್ರೋತೃಗಳು ತುಕೋಬಾರನ್ನು ಪ್ರಶ್ನೆ ಕೇಳಿದರು. ತುಕೋಬಾರು, ‘ನಾನು ಮಾಡಿ ತೋರಿಸುವೆ’ ಎಂದರು.
ಘೋಟವೀನ ಲಾಳ ಬ್ರಹ್ಮeನ್ಯಾಹಾತೀ | ಮುಕ್ತಾ ಆತ್ಮಸ್ಥಿತೀ ಸಾಂಡವೀನ ||
ಬ್ರಹ್ಮೀಭೂತ ಕಾಯಾ ಹೋತಸೇ ಕೀರ್ತನೀ | ಭಾಗ್ಯ ತರೀ ಋಣೀ ದೇವಾ ಐಸಾ ||
ಲೋಹಗಾವದಲ್ಲಿ ತುಕಾರಾಮರ ಕಥೆ-ಕೀರ್ತನೆ ನಡೆದ ವೇಳೆಗೆ ಪರರ ದಾಳಿ ಬಂದು ಲೋಹಗಾವನ್ನು ಸುಲಿಯಿತು. ತುಕೋಬಾರು ದೇವನನ್ನು ಮೊರೆಹೊಕ್ಕರು.
ನ ದೇಖವೇ ಡೋಳಾ ಐಸಾ ಹಾ ಆಕಾಂತ | ಪರಪೀಡೇ ಚಿತ್ತ ದುಃಖೀ ಹೋತೇ ||೧|ದೇವರು ಶೀಘ್ರವಾಗಿ ಪ್ರಸನ್ನನಾಗಲಿಲ್ಲ. ತುಕೋಬಾರು ದೇವರಿಗೆ ಹೀಗೆಂದರು ಃ
ತುಜ ಭಕ್ತಾಚೀ ಆಣ ದೇವಾ | ಜರೀ ತುಕಾ ಯೇಥೇ ಠೇವಾ ||೧||
ಮೂರನೆಯ ಸಂಗತಿ - ತುಕೋಬಾರು ಜ್ನಾನದೇವರ ಅಪಾರವಾದ ಸೇವೆಯನ್ನು ಕೈಕೊಂಡರು. ಈ ಋಣದಿಂದ ಬಿಡುಗಡೆ ಹೊಂದಲೆಂದು ಜ್ನಾನದೇವ ಮಹಾರಾಜರು ಜಿಜಾಯಿಯ ಹೊಟ್ಟೆಯಲ್ಲಿ ಹುಟ್ಟಿ ಬಂದರು. ತುಕೋಬಾರು ಇದನ್ನು ಗುರುತಿಸಿದರು. ದೇವರು ತಾವೇ ಬಂದು ಸೇವೆಗೈಯ್ಯಲು ಯತ್ನಿಸುತ್ತಿರುವುದೇನೂ ಒಳ್ಳೆಯದಲ್ಲ. ಬದಲು ತಾವೇ ಅವನಲ್ಲಿಗೆ ಹೋಗಿ ಬರಬೇಕು. ಈ ಬಗೆಗೆ ಅವರು ಎಲ್ಲರನ್ನೂ ಕೇಳಿದರು. ಎಲ್ಲರಿಗೂ, ನಾವು ವೈಕುಂಠಕ್ಕೆ ಹೋಗಲಿದ್ದೇವೆ. ನೀವೂ ನಮ್ಮ ಜೊತೆಗೆ ಬನ್ನಿ ಎಂದರು. ಯಾರೂ ಸಿದ್ಧರಾಗಲಿಲ್ಲ. ತುಕಾರಾಮರು ಎಲ್ಲರನ್ನೊಡಗೂಡಿ ಇಂದ್ರಾಯಣಿಯ ದಡಕ್ಕೆ ಬಂದರು. ಅಲ್ಲಿ ನಾಂದುರುಖೀ (ಆಲ ಮತ್ತು ಅರಳೆ ಕೂಡಿದ, ಪಾರಂಬಿಗಳುಳ್ಳ ಒಂದು ಜಾತಿಯ ಗಿಡ) ಮರದಡಿ ಕೀರ್ತನೆಯನ್ನು ಆರಂಭಿಸಿದರು ೧೪ ಜನ ತಾಳದವರು ಕ್ಷೇಮಾಲಿಂಗನವನ್ನು ಮಾಡಿದರು. ತುಕಾರಾಮರ ಮಗ ಮಹಾದೇವ ವಿಠೋಬಾ ಮುಂದೆ ಬಂದು ಮಹಾರಾಜರಿಗೆ ನಮಸ್ಕರಿಸಿದರು. ತುಕಾರಾಮರು ಅವರ ತಲೆಯ ಮೇಲೆ ಕೈಯೂರಿದರು. ಜಿಜಾಬಾಯಿಯತ್ತ ಮೆಚ್ಚುಗೆಯಿಂದ ನೋಡಿದರು. ಎಲ್ಲರಿಗೂ ಹೀಗೆಂದರು -
ಸಕಳಹೀ ಮಾಝೀ ಬೋಳವಣ ಕರಾ | ಪರತೋನಿ ಘರಾ ಜಾವೇ ತುಮ್ಹೀ ||
ವಾಢವೇಳ ಝಾಲಾ ಉಭಾ ಪಾಂಡುರಂಗಾ | ವೈಕುಂಠಾ ಶ್ರೀರಂಗ ಬೋಲಾವತೋ ||೧||
ಆಮ್ಹೀ ಜಾತೋ ತುಮ್ಹೀ ಕೃಪಾ ಅಸೋ ದ್ಯಾವೀ | ಸಕಳಾ ಸಾಂಗಾವೀ ವಿನಂತೀ ಮಾಝೀ ||
ಅಂತಃಕಾಳೀ ವಿಠೋ ಆಮ್ಹಾಸೀ ಪಾವಲಾ | ಕುಡೀಸಹಿತ ಝಾಲಾ ಗುಪ್ತ ತುಕಾ ||೨||
ಭಗವತ್ ಕಥೆ ನಡೆದಾಗಲೇ ತುಕೋಬಾ ಅದೃಶ್ಯರಾದರು. ಇದೇ ಬಗೆಯ ಉಲ್ಲೇಖವು ರಾಜ್ಯಾಭಿಷೇಕ ಶಕೆ ೨೦ರ ಸನದಿನಲ್ಲೂ ಇದೆ.
ಶಕೇ ಪಂಧರಾಶೇ ಏಕಾಹತ್ತರೀ | ವಿರೋ ನಾಮ ಸಂವತ್ಸರೀ |
ಫಾಲ್ಗುನ ವದ್ಯ ದ್ವಿತೀಯಾ ಸೋಮವಾರೀ | ಪ್ರಥಮ ಪ್ರಹರಿ ಪ್ರಯಾಣ ಕೇಲೇ ||೨||
“ತುಕೋಬಾ ಗೋಸಾವೀ ವೈಕುಂಠಾಸ ಗೇಲೇ. ಸ್ವದೇಹೀನಿಶೀ ಗೇಲೇ."
ಬಾಳೋಜೀ ತೇಲೀ ಜಗನಾಡೆ ಟಿಪ್ಪಣಿ ಹೊತ್ತಿಗೆ ಪುಟ ೨೧೬. ಸಂತಾಜಿಯ ಹೊತ್ತಿಗೆಯ ಪ್ರತಿ (ನಕಲು). ಪ್ರಯಾಣದ ಕಾಲಕ್ಕೆ ಸಂತಾಜಿ ಪ್ರತ್ಯಕ್ಷದಲ್ಲಿ ಹಾಜರಿದ್ದರು.
ತುಕಾರಾಮರು ಕಾಣೆಯಾಗುತ್ತಲೇ (ಗುಪ್ತ) ಎಲ್ಲೆಡೆಯ ಜನರು ಶೋಕಸಾಗರದಲ್ಲಿ ಮುಳುಗಿದರು. ಮಹಾರಾಜರ ಮಕ್ಕಳು, ಸೋದರರು, ಅನುಯಾಯಿಗಳು ಅಲ್ಲಿಯೇ ಕುಳಿತುಬಿಟ್ಟರು. ಪಂಚಮಿಯಂದು ಮಹಾರಾಜರ ತಾಳಗಳು, ಪತ್ರ, ಕಥಾ ಆಕಾಶಮಾರ್ಗದಿಂದ ಬಂದವು. ರಾಮೇಶ್ವರ ಶಾಸ್ತ್ರಿಗಳು ತೀರ್ಮಾನ ಹೇಳಿದರು. ತುಕೋಬಾರು ಸದೇಹ ವೈಕುಂಠಕ್ಕೆ ತೆರಳಿದರು. ಎಲ್ಲರೂ ಸ್ನಾನ ಮಾಡಿ ಮುಗಿಸಿದರು.
ತುಕಾರಾಮರ ಗಂಡುಮಕ್ಕಳು, ಸೋದರರೆಲ್ಲ ದೇವರೊಂದಿಗೆ ಜಗಳವಾಡಿದರು. ದೇವರೇ, ನೀನು ನನ್ನ ಸೋದರನನ್ನು ತಂದು ಕೊಡು. ವೈಕುಂಠಕ್ಕೆ ಕರೆದೊಯ್ಯಬೇಡ. ದೇವನು ಕಾನ್ಹೋಬನನ್ನು ಸಮಾಧಾನಪಡಿಸಿದನು.
ಸಂತ ತುಕಾರಾಮರ ತರುವಾಯ
ಸಂತ ತುಕಾರಾಮರು ದೇಹದೊಂದಿಗೆ ವೈಕುಂಠಕ್ಕೆ ಹೋದ ವಾರ್ತೆಯನ್ನು ಆಲಿಸಿ ಶಿವಾಜಿ ರಾಜರಿಗೆ ಬೆರಗಾಯಿತು. ಆಗ ಅವರು ದೇಹೂದವರಾದ ಜಾನೋಜೀ ಭೋಸಲೆಯವರ ಬಳಿ ತುಕಾರಾಮರ ಕುಟುಂಬದವರ ಬಗೆಗೆ ವಿಚಾರಿಸಿದರು. ಅಲ್ಲದೆ ತುಕಾರಾಮರ ಹಿರಿಯ ಮಗ ಮಹಾದೇವಬುವಾ ಇವರನ್ನು ಭೆಟ್ಟಿಗೆ ಕರೆದುಕೊಂಡು ಬರಲು ಅಪ್ಪಣೆಯನ್ನು ಮಾಡಿದರು. ಜಾನೋಜೀ ಭೋಸಲೆಯವರು ಮಹಾದೇವ ಬಾಬಾರನ್ನು ಜೊತೆಗೆ ಕರೆದುಕೊಂಡು ಶಿವಾಜಿ ರಾಜರಲ್ಲಿಗೆ ಹೋದರು. ಶಿವಾಜಿ ರಾಜರು ಮಹಾದೇವ ಬಾಬಾರಿಗೆ ವರ್ಷಕ್ಕೆ ಒಂದು ಖಂಡಿ ಧಾನ್ಯ ಹಾಗೂ ಸೀರೆಗಾಗಿ ಒಂದು ಹೊನ್ನದ ಸನದನ್ನು ತಯಾರಿಸಿ ಕೊಟ್ಟರು. ಸಂಭಾಜಿ ರಾಜರು ಇದೇ ಉಂಬಳಿಯನ್ನು ಮುಂದುವರೆಸಿದರು.
ತುಕಾರಾಮರ ವೈಕುಂಠಗಮನದ ತರುವಾಯ ನಾರಾಯಣರ ಜನ್ಮವಾಯಿತು. ನಾರಾಯಣರು ಜ್ನಾನದೇವರ ಅವತಾರರಾದ್ದರಿಂದ ಅಣ್ಣಂದಿರಾದ ಮಹಾದೇವಬುವಾ, ವಿಠೋಬಾರು ನಾರಾಯಣರಾಯರ ಅಪ್ಪಣೆಯಂತೆ ನಡೆದುಕೊಳ್ಳುತ್ತಿದ್ದರು. ತಾಯಿ ಬದುಕಿರುವವರೆಗೆ ಒಟ್ಟಿಗೆ ಇರುತ್ತಿದ್ದರು. ತಾಯಿಯ ಮರಣಾನಂತರ ವಿಠ್ಠಲಬುವಾ, ನಾರಾಯಣಬುವಾ ಇವರು ಅವಳ ಅಸ್ಥಿಯೊಂದಿಗೆ ಮಹಾಯಾತ್ರೆಗೆ ಹೊರಟರು. ಮಹಾದೇವಬುವಾರು ಶ್ರೀ ವಿಠ್ಠಲದೇವನ ಪೂಜೆ ಅರ್ಚನೆಗಳನ್ನು ದಿನಾಲು ನಡೆಯಿಸಿಕೊಂಡು ಹೋದರು. ಮಹಾದೇವಬಾಬಾ ಇವರು ತುಕಾರಾಮರ ಅಭಂಗಗಳನ್ನು ಬರೆದಿದ್ದಾರೆ. ನಾರಾಯಣಬಾಬಾರು ಮೊದಲಿಗೆ ಸರಂಜಾಮೀ ವೈಭವದಿಂದ ಇರತೊಡಗಿದರು. ಸಂತಾಜೀ ಪವಾರರು ಅವರ ಭೆಟ್ಟಿಗೆ ಬಂದರು. ಅವರು ನಾರಾಯಣಬಾಬಾರನ್ನು ಕ್ಕರಿಸಿದರು. ಬಾಬಾರು ಬ್ರಾಹ್ಮಣರಿಗೆ ತಮ್ಮ ಮನೆಯದೆಲ್ಲವನ್ನು ಕೊಟ್ಟುಬಿಟ್ಟರು. ತಪಸ್ಸನ್ನಾಚರಿಸಿದರು. ಕಾಡಿನಲ್ಲಿ ವಾಸವಾಗಿದ್ದರು. ವಿಠೋಬಾನ ಭವ್ಯವಾದ ಒಂದು ದೇಗುಲವನ್ನು ಕಟ್ಟಿಸಿದರು.
ತುಕಾರಾಮ ತೋ ಆಚ ಗೇಲೇ ಹೋತೇ ವೈಕುಂಠಾ |
ಬಹು ದಿವಸಾನೀ ಮಗ ವೈರಾಗ್ಯ ಝಾಲೇ ನೀಳಕಂಠಾ ||೧||
ತುಕಯಾಚಾ ನಂದನ ಮಾಗೇ ನಾರಾಯಣಬಾಬಾ |
ದರ್ಶನ ತ್ಯಾಚೇ ಘೇಉನಿ ಮ್ಹಣತೀ ಸುಸಂಗ ಲಾಭಾವಾ ||೨||
ನಿಳೋಬಾ ಗೋಸಾವೀ ಪಿಂಪಳನೇರಕರರು ಬಾಬಾ ಅವರ ದರ್ಶನಕ್ಕಾಗಿ ಬಂದರು. ಬಾಬಾರು ಅವರಿಗೆ ತುಕಾರಾಮರ ಸಂಪೂರ್ಣವಾದ ಚರಿತ್ರೆಯನ್ನು ಹೇಳಿದರು. ನಿಳೋಬಾರನ್ನು ತಮ್ಮ ಜೊತೆಗೆ ತೀರ್ಥಯಾತ್ರೆಗೆ ಕರೆದೊಯ್ದರು. ನಿಳೋಬಾರು ತುಕೋಬಾರ ಭೆಟ್ಟಿಗಾಗಿ ೪೨ ದಿನಗಳ (ನಿರ್ವಾಣ) ನಿರ್ಧಾರದಿಂದ ಕುಳಿತರು. ತುಕೋಬಾ ಭೆಟ್ಟಿಯಾದರು.
ಯೇಉನಿಯಾ ಕೃಪಾವಂತೇ | ತುಕಯಾ ಸ್ವಾಮೀ ಸದ್ಗುರುನಾಥೇ ||೧||
ಹಾತ ಠೇವಿಲಾ ಮಸ್ತಕೀ | ದೇಉನೀ ಪ್ರಸಾದ ಕೇಲೇ ಸುಖೀ ||೨||
ನಿಳೋಬರಲ್ಲಿ ಕವಿತ್ವ ಸುರಿಸಿತು. ಅವರೂ ಕೂಡ ಹಲವಾರು ಅಭಂಗಗಳನ್ನು ರಚಿಸಿದರು ನಾರಾಯಣ ಬಾಬಾರನ್ನು ಒಬ್ಬ ಶ್ರೇಷ್ಠ ತಪಸ್ವಿ ಹರಿಭಕ್ತನೆಂದು ಸನದು ಪತ್ರದಲ್ಲಿ ಉಲ್ಲೇಖಿಸಿದುದು ಕಂಡುಬರುತ್ತದೆ. ಬಾಬಾರ ದರ್ಶನಕ್ಕಾಗಿ ದೂರದೂರದಿಂದ ಸಂಚಾರಿ ಸನ್ಯಾಸಿಗಳು, ಯಾತ್ರಿಕರು ಬರತೊಡಗಿದರು. ಬಿದಿಗೆಯ (ಬೀಜ) ಮಹೋತ್ಸವ ನಡೆಯತೊಡಗಿತು. ಬಾಬಾ ಬಂದವರಿಗೆಲ್ಲ ಅನ್ನದಾನವನ್ನು ಮಾಡಬೇಕಿತ್ತು. ಅದಕ್ಕಾಗಿ ಇ.ಸ. ೧೬೯೧ ರಲ್ಲಿ ಛತ್ರಪತಿ, ರಾಜಾರಾಮ ಮಹಾರಾಜರು ನಾರಾಯಣಬಾಬಾರಿಗೆ ಯೇಲವಾಡೀ ಗ್ರಾಮವನ್ನು ಇನಾಮು ಕೊಟ್ಟರು. ಮುಂದೆ ದೇಹೂ, ಕಿನ್ಹಈ ಗ್ರಾಮಗಳನ್ನು ದೇವರ ಮಹೋತ್ಸವ, ಪೂಜೆ-ಅರ್ಚನೆ, ಅನ್ನಛತ್ರಗಳಿಗಾಗಿ ಛತ್ರಪತಿ ಇಮ್ಮಡಿ ಶಿವಾಜಿ ಹಾಗೂ ಶಾಹೂರಿಂದ ಬಾಬಾರಿಗೆ ನೀಡಲಾಯಿತು. ಶಾಹೂ ಮಹಾರಾಜರು ಹಾಗೂ ರಾಣಿ ಸಕರಾಬಾಯಿ ಇವರು ಬಾಬಾರನ್ನು ಗುರುವಿನ ಸ್ಥಾನದಲ್ಲಿ ಮನ್ನಿಸುತ್ತಿದ್ದರು. ನಾರಾಯಣರು ಆಷಾಢದ ವಾರಿಯೊಡನೆ ಶ್ರೀ ತುಕಾರಾಮರ ಪಲ್ಲಕ್ಕಿ ಉತ್ಸವವನ್ನು ಆರಂಭಿಸಿದರು. ಬಾಬಾರು ದೇವಸ್ಥಾನಕ್ಕೆ ಕೀರ್ತಿಯನ್ನು ತಂದುಕೊಟ್ಟರು. ಸಂಪ್ರದಾಯವನ್ನು ಬೆಳೆಯಿಸಿದರು. ಔರಂಗಜೇಬನು ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಾಗ ಬಾಬಾರವರು ಪಂಢರಪುರ ಹಾಗೂ ಶಿಂಗಣಾಪುರದ ಯಾತ್ರಿಕರಿಗಾಗಿರುವ ಉಪದ್ರವಗಳನ್ನು ತಡೆಹಿಡಿದರು. ಬಾಬಾರು ಶಕೆ ೧೬೪೫ ಶ್ರಾವಣ ಶುದ್ಧ ಚತುರ್ಥಿಯ ದಿನ ವೈಕುಂಠವಾಸಿಗಳಾದರು. ಮಹಾದೇವಬಾಬಾರ ಮಗ ಆಬಾಜೀಬಾಬಾ ಇವರು ನಾರಾಯಣರ ಅಸ್ಥಿಗಳನ್ನು ತೆಗೆದುಕೊಂಡು ಕಾಶಿಯತ್ರೆಗೆ ಹೋದರು.
ಆಬಾಜೀಬಾಬಾರು ಗಂಗೋದಕದ ಕಾವಡಿಯೊಡನೆ ದೇಹೂವಿಗೆ ತಿರುಗಿ ಬಂದರು. ಈ ಮಧ್ಯೆ ವಿಠ್ಠಲಬಾಬಾರ ಮಗ ಉದ್ಧವಬಾಬಾರು ಶಾಹೂ ಮಹಾರಾಜರ ಬಳಿ ಇರುತ್ತಿದ್ದರು. ಅವರು ದೇಹೂವಿಗೆ ಬಂದರು. ಅವರು ದೇವಸ್ಥಾನ ಸಂಸ್ಥಾನದ ಆಡಳಿತೆಯನ್ನು ವಶಪಡಿಸಿಕೊಂಡರು. ಅವರು ದೇವಸ್ಥಾನಗಳನ್ನು ಆಬಾಜೀಬಾಬಾರ ಕೈಗೆ ಕೊಡಲೊಲ್ಲರಾದರು. ಆಬಾಜೀಬಾಬಾ ಕೂಡ ವೈರಾಗ್ಯ ಸಂಪನ್ನರಾದ ತಪಸ್ವಿ ಹರಿಭಕ್ತಿರತರಾಗಿದ್ದರು. ಆಬಾಜೀಬಾಬಾರ ತರುವಾಯ ಅವರ ಮಗ ಮಹಾದೇವಬಾಬಾ ಕೂಡ ದೇವಸ್ಥಾನ ಸಂಸ್ಥಾನಕ್ಕಾಗಿ ಜಗಳಾಡಿದರು. ಜಗಳವು ಹಿರಿತನ ಹಾಗೂ ದೇವನಿಗಾಗಿ ಇದ್ದಿತು ; ದೇವಸ್ಥಾನಕ್ಕಾಗಿ ಇರಲಿಲ್ಲ. ಸರಕಾರವು ಹೆಚ್ಚಿನ ಗಮನ ನೀಡಲಿಲ್ಲ. ಹೀಗಾಗಿ ಮಹಾದೇವಬಾಬಾರು ದೇಹೂವನ್ನು ತೊರೆದು ದೇವನಿಗಾಗಿ, ಸಂಪ್ರದಾಯಕ್ಕಾಗಿಯೆಂದು ಪಂಢರಪುರಕ್ಕೆ ಬಂದು ನೆಲೆಸಿದರು. ಭಕ್ತರು ದೇವರ ಬಳಿಗೆ ಬರತೊಡಗಿದರು. ಅವರು ತುಕಾರಾಮರ ಅಭಂಗಗಳನ್ನು ಸಂಕಲಿಸಿ ಒಂದು ಗಾಥೆಯನ್ನು ತಯಾರಿಸಿದರು. ಅವರು ದೇಹೂ ಊರಿನವರ ಫಡ ಪರಂಪರೆಯ ಭಜನೆ, ಕೀರ್ತನೆಯ ತಂಡವನ್ನು ನಡೆಸಿದರು. ಅವರ ಮಗ ವಾಸುದೇವ ದೇಹೂಕರರು ಪಂಢರಪುರದಲ್ಲಿ ವಾರಕರಿ ಸಂಪ್ರದಾಯಕ್ಕಾಗಿ ತುಂಬ ದುಡಿದುಕೊಂಡರು. ಅವರ ಕಾಲದಲ್ಲಿಯೇ ಚಿಕ್ಕ ದೊಡ್ಡ ಹಲವು ಫಡಗಳು ಕೀರ್ತಿ ಹೊಂದಿದವು. ಹೀಗಾಗಿ ವಾರಕರಿ ಪರಂಪರೆಯು ಹೆಚ್ಚು ಹೆಚ್ಚಾಗಿ ಹಬ್ಬತೊಡಗಿತು. ಸಂಪ್ರದಾಯವು ಕರ್ನಾಟಕಕ್ಕೂ ಚಾಚಿತು. ಅವರ ಮಗ ವಾಸುದೇವಬಾಬಾರು ಫಡವನ್ನು ಕೀರ್ತಿಗೆ ತಂದರು. ತುಕೋಬಾರ ಮೊಮ್ಮಗ ಗೋಪಾಳಬುವಾ ಇವರೂ ಕೂಡ ಒಬ್ಬ ಸಾಕ್ಷಾತ್ಕಾರಿಗಳಾಗಿದ್ದರು.
ಸಂತ ತುಕಾರಾಮರ ಚರಿತ್ರೆಯನ್ನು ಬರೆದುದು ಅವರ ಮಹಾನ್ ಕಾರ್ಯವೇ ಸರಿ. ದೇಹೂ ಸಂಸ್ಥಾನವು ಮನೆತನದ ಪಲ್ಲಕ್ಕಿ ಉತ್ಸವವನ್ನು ಆಷಾಢ, ಕಾರ್ತಿಕಗಳ ಪಂಢರಪುರದ ವಾರಿಯ ಕಾಲಕ್ಕೆ ಇಂದಿಗೂ ನಡೆಯಿಸಿಕೊಂಡು ಬಂದಿದೆ. ದೇಹೂ ಊರವರು ಊರೂರುಗಳಿಗೆ ಹೋಗಿ ಕಥೆ, ಕೀರ್ತನೆಗಳನ್ನು ಮಾಡುತ್ತ ಸಂಪ್ರದಾಯವನ್ನು ಬೆಳೆಸಿದರು. ಸಂಪ್ರದಾಯ ಹಾಗೂ ಕುಲದೇವತೆಯ ಅಮೌಲ್ಯವಾದ ಸೇವೆಯನ್ನು ಕೈಕೊಂಡರು. ಇಂದಿಗೂ ಎಲ್ಲ ಜನರು,
ಅಮೃತಾಚೀ ಫಳೇ ಅಮೃತಾಚೇ ವೇಲೀ | ತೇಚೀ ಪುಢೇ ಚಾಲೀ ಬೀಜಾಚಿಹಿ ||೧||
ಎನ್ನುವ ಮಹಾರಾಜರ ವಚನವನ್ನು ಸಾರ್ಥಕಗೊಳಿಸುತ್ತಿರುವರು.
ಹ.ಭ.ಪ. ಶ್ರೀಧರ ದೇಹೂಕರ
ಸಂತ ತುಕೋಬಾರಾಯರ ಜನ್ಮಸ್ಥಾನ, ಶ್ರೀ ಕ್ಷೇತ್ರ ದೇಹೂ.
ಸಣ್ಣ ಕಥೆಗಳು
೧
ನಿನ್ನಯ ಮಹಿಮೆಯ ಹಾಡಲು ಮನದಲಿ ಸಂತಸ ಮೂಡುವುದು |
ಪ್ರೀತಿಯ ಅಪ್ಪುಗೆಯಂದದಿ ಬಾಯಿ ಚಪ್ಪರಿಸುವುದು ||೧||
ಹಕ್ಕಿಯೊಂದು ತನ್ನ ಮರಿಯೊಂದಿಗೆ ಮರದಮೇಲೆ ಕುಳಿತಿತ್ತು |
ಅಲ್ಲಿಗೆ ಬಂದ ಬೇಡನಿಗದು ಕಂಡಿತು ||ಪ||
ಹದ್ದು ಹೆದರಿ ಮುಗಿಲಿಗೆ ನೆಗೆಯಿತು |
ಬೇಡನ ಬಾಣವು ಹಕ್ಕಿಗೆ ಗುರಿ ಇಕ್ಕಿತು ||೨||
ಆಗ ಆ ಹಕ್ಕಿಗಳು ನಿನ್ನನು ನೆನೆದವು |
ಶ್ರೀಹರಿ ಧಾವಿಸಿ ಬಾರಪ್ಪ ಎಂದವು ||೩||
ಮುಗಿಲಿಗೆ ನೆಗೆದರೆ ಹದ್ದು ಹಿಡಿವುದು |
ಮರದ ಮೇಲಿದ್ದರೆ ಬಾಣ ಇರಿವುದು ||೪||
ದೇವನು ಹಕ್ಕಿಗಳ ಮೊರೆಯ ಕೇಳಿದನು |
ಹಾವಿನ ರೂಪವ ತಾ ತೊಟ್ಟುಕೊಂಡನು ||೫||
ಹಾವು ಬೇಡನ ಕಚ್ಚಿ ಕೆಳಗುರುಳಿಸಿತು |
ಹೊರಟ ಬಾಣವು ಹದ್ದನಿರಿಯಿತು ||೬||
ನಿನ್ನ ದಾಸರಿಗೆಲ್ಲ ಕೃಪಾಳು ನೀನು |
ಕಾಪಾಡುವೆ ಸಂಕಟದಿ ಅವರನು ||೭||
ತ್ರಿಭುವನದಲೂ ನಿನ್ನಯ ಕೀರ್ತಿಯನು |
ಬಣ್ಣಿಸಲಾಗದು ವೇದವಾಣಿಗೂ ತುಕಾ ಎಂದನು ||೮||
--
೨
ಕೃಪಾವಂತ ನೀ ದಯಾವಂತನು ಪಾಮರ ನಾನು |
ಏನೆಂದು ಬಣ್ಣಿಸಲಿ ನಿನ್ನಯ ಹಿರಿಮೆಯನು ||೧||
ಇನ್ನೆಲ್ಲೂ ಕಾಣಲಾಗದಂತಹ ದಯಾವಂತನು |
ಒಂದು ಅಚ್ಚರಿಯಾಗಿ ತೋರುವ ಹೃಷಿಕೇಶ ನೀನು ||ಪ||
ಕುರುಕ್ಷೇತ್ರದಿ ಹಕ್ಕಿಯೊಂದಕ್ಕೆ ಮರಿ ಹುಟ್ಟಿತು |
ಮರಿಗಾಗಿ ಅದು ಹುಲ್ಲ ಮೆತ್ತೆಯನು ಒದಗಿಸಿತು ||೨||
ಒಂದು ದಿನ ಅಲ್ಲಿ ರಣಕಂಬವನು ನೆಡಲಾಯಿತು |
ಆ ಬಯಲನು ರಣಭೂಮಿಯೆಂದು ಘೋಷಿಸಲಾಯಿತು ||೩||
ಹಿರಿದಾದ ಪಾಂಡವ ಕೌರವ ಪಡೆಗಳವು |
ಕಾಳಗಕೆಂದು ಅಲ್ಲಿಗೆ ಬಂದು ನಿಂತವು ||೪||
ಹೌಹಾರಿದ ಹಕ್ಕಿ ನಿನ್ನನು ನೆನೆಸಿತು |
ಕಾಪಾಡು ಶ್ರೀಪತಿಯೆ ನಮ್ಮನೆಂದಿತು ||೫||
ಆನೆ ಕುದುರೆಗಳು ಇಲ್ಲಿ ಓಡಾಡಲಿವೆ |
ಕಾಲಿಗೆ ಸಿಕ್ಕು ಕಲ್ಲುಗಳು ಹುಡಿಯಾಗಲಿವೆ ||೬||
ಹೇಗೆ ಬದುಕಲಿ ಇಂಥ ಕೋಲಾಹಲದಲಿ |
ಧಾವಿಸಿ ಬಾ ಶ್ರೀಹರಿಯೆ ಬಲು ಬೇಗದಲಿ ||೭||
ನನ್ನ ಮರಿಯನು ತೊರೆದು ಇನ್ನೆಲ್ಲಿಗೆ ಹೋಗಲಿ |
ಪ್ರಸನ್ನನಾಗು ಎಲೆ ಜಗನ್ನಾಥ ಲಗುಬಗೆಯಲಿ ||೮||
ಆಗ ಅನಾಥನಾಥ ನಾರಾಯಣ ನೀನು |
ಆದೆ ಬಲು ಕೃಪಾವಂತನು ||೯||
ಆನೆಯ ಕೊರಳಿಗೆ ನೇತಾಡುವ ಗಂಟೆಯೊಂದನು |
ಹಗುರಾಗಿ ಕೆಡವಿದೆ ಹಕ್ಕಿಗಳ ಮೇಲದನು ||೧೦||
ಹದಿನೆಂಟು ದಿನಗಳ ಕಾಳಗ ನಡೆಯಿತಲ್ಲಿ |
ಹಕ್ಕಿಗಳಿಗೆ ಗಾಳಿ ಬಿಸಿಲುಗಳು ಕೂಡ ತಾಕಲಿಲ್ಲ ||೧೧||
ಯುದ್ಧ ಮುಗಿದು ನಾರಾಯಣನು |
ಹಕ್ಕಿಗಳನು ಅರ್ಜುನಗೆ ತೋರಿಸಿದನು ||೧೨||
ಕಂಡೆಯ ನನ್ನ ಈ ದಾಸರನು |
ರಣರಂಗದಲೂ ಅವನ್ನು ಕಾಪಾಡಿದೆನು ||೧೩||
ಭಕ್ತರಮೇಲೆ ಮಮತೆಯುಳ್ಳವ ನೀನು |
ನೀನೆನಗೆ ತಾಯಿ ತುಕಾ ಎನ್ನುವನು ||೧೪||
બાળગોપાલ









ಸಮೀಕ್ಷೆ
"ಸಂತ ತುಕಾರಾಮರ ಚರಿತ್ರೆ"ಯ e-ಕಿರಿಪುಸ್ತಕವನ್ನು ಕುರಿತು ಶ್ರೀ ಜಯಂತ ಕೈಕಿಣಿಯವರು ಕೈಕೊಂಡ ಸಮೀಕ್ಷೆ
ತಿಳಿವಿನ ಸಿಂಚನ
ಸತ್ಯದ ಆಳವಾದ ಅನುಭೂತಿಯ ಪರಮ ನೆಲೆಯಾಗಿರುವ ಆಧ್ಯಾತ್ಮದ ಮಾರ್ಗದಲ್ಲಿ ಅಂತರಂಗ ಮತ್ತು ಬಹಿರಂಗಗಳನ್ನು ಅಭಿನ್ನವಾಗಿ ಅನುಭವಿಸಿ ದಿವ್ಯವಾದ ಬೆಳಕನ್ನು ಕಂಡು, ಕಾಣಿಸಿದ ಸಂತ ತುಕಾರಾಮರ ಬಾಳಿನ ಕಥನವನ್ನು ತಿಳಿಯಾಗಿ ಅಷ್ಟೇ ತಿಳಿವಿನಿಂದ ತಿಳಿಸುವ ಅಪರೂಪದ ಪುಸ್ತಿಕೆ ಇದು.
ಕೇವಲ ಪವಾಡಗಳ ವರ್ಣನೆ ಮಾಡಿ ಸಂತರ ಬದುಕನ್ನು ನಮ್ಮಿಂದ ದೂರ ನಿಲ್ಲಿಸುವ ಬಗೆ ಒಂದಾದರೆ, ಅವರನ್ನು ಮನುಷ್ಯ ಸಹಜ ಸಾಧ್ಯತೆಗಳಾಗಿ ಪರಿಭಾವಿಸಿ ಅವರ ವಿಕಾಸ ಪಥವನ್ನು ಮಾನವೀಯ ಕಣ್ಣುಗಳಿಂದ ನೋಡುವ ಬಗೆ ಇನ್ನೊಂದು. ಶ್ರೀಧರ ಮಹಾರಾಜ ದೇಹೂಕರ ಅವರು ರಚಿಸಿದ ತುಕಾರಾಮರ ಈ ಸಂಕ್ಷಿಪ್ತ ಚಿತ್ರ - ಎರಡನೆಯ ಬಗೆಯದು. ಕಳಕಳಿ, ಕರುಣೆ ಮತ್ತು ನಿತ್ಯ ಸಂಸಾರದ ನಟ್ಟನಡು ಅರಳಿದ ಭಕ್ತಿಯ ಕಣ್ಣುಗಳಿಂದ ತುಕಾರಾಮರನ್ನು ಮನಗಾಣುವ ಈ ಪುಟ್ಟ ಕಥನದ ಬಳ್ಳಿ ಸಂತ ತುಕಾರಾಮರ ಉಜ್ವಲ ಸಾಲುಗಳನ್ನೇ ಇಂಬಾಗಿಸಿಕೊಂಡು ಚಿಗುರುತ್ತದೆ.
ತುಕಾರಾಮರ ಕುಟುಂಬದ ಹಿರೀಕರ ಪೂರ್ವವೃತ್ತಾಂತ, ತುಕಾರಾಮರ ಕಾಲದ ಸಾಮಾಜಿಕ ಸ್ಥಿತಿಗಳ ಜತೆ ಇನ್ನೆಲ್ಲೂ ನಮಗೆ ದೊರಕದ ಅಪರೂಪದ ವಿವರಗಳು ಇಲ್ಲಿವೆ. ತುಕಾರಾಮರ ಧೃಪದ ಮೇಳದಲ್ಲಿದ್ದ ೨೫೦ ಸದಸ್ಯರ ಮಾಹಿತಿಯೂ ಇಲ್ಲಿದೆ. ಬರ ಬಂದಾಗ ಬಡಬಗ್ಗರಿಗೆ ತಾವು ಹಂಚಿದ ಸಾಲದ ಸಾಲಪತ್ರಗಳನ್ನು ಅವರು ನದಿ ನೀರಿನಲ್ಲಿ ಮುಳುಗಿಸಿದ ಕ್ಷಣ ಅವರ ಆತ್ಮ ಸಾಕ್ಷಾತ್ಕಾರದ ಪಯಣದ ಮೊದಲ ಮಜಲಾಗಿದೆ. ಶಿವಾಜಿ ಮತ್ತು ತುಕಾರಾಮರ ಮುಖಾಮುಖಿ ಅತ್ಯಂತ ಸೂಕ್ಷ್ಮ ಐತಿಹಾಸಿಕ ಕ್ಷಣವಾಗಿದೆ. ಇಂಥ ಅನೇಕ ಮನಮುಟ್ಟುವ ಸಂಗತಿಗಳ ಮೂಲಕ ಚಿತ್ರಿತವಾಗಿರುವ ಈ ಸಂತ ಕಥನಕ್ಕೆ ಪುರಾಣದ ಪ್ರಭೆಯೂ, ಇತಿಹಾಸದ ಸತ್ಯನಿಷ್ಠತೆಯೂ ಒಟ್ಟಿಗೇ ಪ್ರಾಪ್ತವಾಗಿದೆ.
ಇದನ್ನು ಪ್ರೀತಿಯಿಂದ ಕನ್ನಡಿಸಿರುವ ವಿರೂಪಾಕ್ಷ ಕುಲಕರ್ಣಿ ಅವರ ಶೈಲಿ ಮೂಲದ ಚಿತ್ರವತ್ತತೆಯನ್ನು ಇನ್ನೂ ಹೊಳೆಸುವಷ್ಟು ಪಾರದರ್ಶಕವಾಗಿದೆ, ಆಪ್ತವಾಗಿದೆ. ತಾನು-ಪರರೆಂಬ ಭಾವಗಳನ್ನು ಇಲ್ಲವಾಗಿಸುವ ದೇವೀ ಪ್ರೇಮದ ಅನುಪಮ ಆನಂದವನ್ನು ಹಂಚಿಕೊಳ್ಳುವ ಅವರ ಬರವಣಿಗೆಗೆ ವಿಶಿಷ್ಟ ಕಾಂತಿ ಇದೆ. ಜಾತಿ, ಮತ, ಧರ್ಮಗಳ ಹೆಸರಲ್ಲಿ ಹೋಳಾಗಿ, ಹಿಂಸೆ, ವಿಕೃತಿಗಳ ನರಕವಾಗಿರುವ ಇಂದಿನ ಮನುಷ್ಯ ಲೋಕಕ್ಕೆ ಅತ್ಯಂತ ಅಗತ್ಯವಿರುವ ತಿಳಿವಿನ ಅಮೃತ ಸಿಂಚನದ ಸಂತ ಕಥನವನ್ನು ಶ್ರದ್ಧೆಯಿಂದ, ಪರಿಣತಿಯಿಂದ ಕನ್ನಡಕ್ಕೆ ತಂದಿರುವ ವಿರೂಪಾಕ್ಷ ಕುಲಕರ್ಣಿ ಅವರಿಗೆ ಆಭಾರಪೂರ್ವಕ ಅಭಿನಂದನೆಗಳು. ಈ ಕಥನದ ಅಲೌಕಿಕವಾದ ಹೆಚ್ಚು ಹೆಚ್ಚು ಹೃದಯಗಳನ್ನು ತಲುಪಿ ನಿಷ್ಕಾರಣ ಪ್ರೀತಿಯ ರಾಗವನ್ನು ಪಸರಿಸಲಿ ಎಂದು ಹಾರೈಸುವೆ. ಯರವಡಾ ಜೈಲಿನಲ್ಲಿದ್ದಾಗ ಗಾಂಧಿಜಿಗಳು ತುಕಾರಾಮರ ಅಭಂಗಗಳನ್ನು ಅನುವಾದಿಸುವುದರಲ್ಲಿ ನಿರತರಾಗಿದ್ದರು ಎಂಬುದನ್ನು ನಾವಿಂದು ನೆನೆಯಲೇಬೇಕಾಗಿದೆ.
- ಜಯಂತ ಕಾಯ್ಕಿಣಿ
ಬಹಿಣಾಬಾಯಿ
ದೇಹೂ ಊರಿನಲ್ಲಿ ತುಕಾರಾಮರ ಮನೆಯ ಹತ್ತಿರದಲ್ಲಿದ್ದ ವಿಠ್ಠಲನ ದೇವಾಲಯದಲ್ಲಿ ಅವರು ದೇವರ ವಿಗ್ರಹದೆದುರು ಮಾಡುವ ತಮ್ಮ ಕಾವ್ಯದ ಭಜನೆಯನ್ನು ಆಲಿಸಲೆಂದು ಕಿರಿ ವಯಸ್ಸಿನ ಕವಯಿತ್ರಿಯಾದ ಬಹಿಣಾಬಾಯಿಯು ದೂರದ ಕೊಲ್ಲಾಪುರದಿಂದ ಬಂದಳು. ಬಹಿಣಾಬಾಯಿಯ ಈ ಸಂಗತಿ, ತುಕಾರಾಮರು ಕಣ್ಮರೆಯಾಗುವ ಕೆಲ ವರ್ಷಗಳ ಮೊದಲಿಗೆ ಸಂಬಂಧಪಟ್ಟುದಾದರೂ, ಅದರಿಂದ ನಮಗೆ ಸಮಕಾಲೀನ ಮಹಾರಾಷ್ಟ್ರದ ಮೇಲಿರುವ ತುಕಾರಾಮರ ಪವಾಡಸದೄಶವಾದ ವ್ಯಕ್ತಿತ್ವದ ಪ್ರಭಾವ ಕಂಡುಬರುತ್ತದೆ. ಈ ಮೊದಲೇ ನಮೂದಿಸಲಾದ ಜಲ-ದಿವ್ಯವು ಬಹಿಣಾಬಾಯಿಯ ದೇಹೂ-ಭೇಟಿಯ ಮುನ್ನವೇ ನಡೆದುದು. ತುಕಾರಾಮರು ತಮ್ಮ ಬಾಳಿನಲ್ಲಿ ಪಡೆದ ಪವಾಡಸದೄಶವಾದ ಮನ್ನಣೆಗೆ , ಹದಿಮೂರು ದಿನಗಳ ಕಾಲ ನದಿಯಲ್ಲಿ ಮುಳುಗಿಸಲಾದ ಅವರ ಹಸ್ತ-ಪ್ರತಿಗಳು ಒಂದು ಪವಾಡವೆಂಬಂತೆ ಮರಳಿ ದೊರೆತುದು ಖಂಡಿತ ಒಂದು ಮುಖ್ಯ ಸಂಗಾತಿಯೆನ್ನಿಸಿದೆ. ತಮ್ಮ ಭಜನೆಗಳನ್ನು ಹಾಡುವ ತುಕಾರಾಮರನ್ನು “ಪಾಂಡುರಂಗನ ಅವತಾರ”ರೆಂದು ಬಹಿಣಾಬಾಯಿಯು ಬಣ್ಣಿಸಿದ್ದಾಳೆ.
ಬಹಿಣಾಬಾಯಿಯು (೧೬೨೯-೧೭೦೦) ಮರಾಠಿಯ ಸಂತ ಕವಿಗಳಲ್ಲಿ ಗಮನಾರ್ಹಳೆನ್ನಿಸಲು ಕಾರಣ ಅವಳೊಬ್ಬಳು ಸ್ತ್ರೀಯಾಗಿರುವುದಲ್ಲ. ಅವಳಿಗಿಂತಲೂ ಬಲು ಮೊದಲೇ ಮುಕ್ತಾಬಾಯಿ ಮತ್ತು ಜನಾಬಾಯಿಯರು ಆಗಿಹೋಗಿದ್ದರು. ಅವಳು ಅದ್ವಿತೀಯಳೆನ್ನಿಸಲು ಕಾರಣವೆಂದರೆ ಅವಳೊಬ್ಬಳು ವಿವಾಹಿತಳಾದ ಬ್ರಾಹ್ಮಣ ಸ್ತ್ರೀಯಾಗಿದ್ದೂ ಭಕ್ತಿ ಮತ್ತು ವಿಶೇಷವಾಗಿ ತುಕಾರಾಮರ ಕಾವ್ಯಕ್ಕೆ ಮಾರುಹೋದವಳು. ಅವಳು ಕೊಲ್ಲಾಪುರದಲ್ಲಿರುವಾಗಲೇ ಜಯರಾಮಸ್ವಾಮಿ ಎಂಬ ಕೀರ್ತನಕಾರರಿಂದ ತುಕಾರಾಮರನ್ನು ಕುರಿತು ಕೇಳಿದ್ದಳು. ಅವರನ್ನು ಕಾಣಬೇಕೆನ್ನುವ ಎಲ್ಲಿಲ್ಲದ ಹುಚ್ಚು ಅವಳಿಗೆ. ಅವರು ತನ್ನನ್ನು ಹರಸಿದರಲ್ಲದೆ ತನ್ನ ಗುರುಗಳಾದರೆಂದು ಕನಸು ಕಂಡಳು. ಇದರಿಂದಾಗಿ ಅವಳ ಗಂಡ ಹೊಟ್ಟೇಕಿಚ್ಚಿನಿಂದ ಕೆರಳಿ ಅವಳನ್ನು ಹೊಡೆಯಹತ್ತಿದನು. ಬ್ರಾಹ್ಮಳಳಾದ ಅವಳು ವೇದವಿದ್ಯೆಯನ್ನರಿಯದ ಒಬ್ಬ ಶೂದ್ರನನ್ನು ತನ್ನ ಗುರುವನ್ನಾಗಿ ಮಾಡಿಕೊಳ್ಳುವಳೆಂದು ಅವನು ಹೆದರಿ ಕಂಗಾಲಾದನು. ಆದರೆ ಇನ್ನೊಬ್ಬ ಬ್ರಾಹ್ಮಣನು ಮನವೊಲಿಸಲಾಗಿ ಅವನು ತುಕಾರಾಮರನ್ನು ಕಾಣಲೆಂದು ಬಹಿಣಾಬಾಯಿಯೊಡನೆ ದೇಹೂಕ್ಕೆ ಹೊರಟನು. ಅಲ್ಲಿ ಅವರಿಬ್ಬರೂ ತುಕಾರಾಮರನ್ನು ಕಂಡು ಅವರ ಕೀರ್ತನೆಗಳನ್ನು ಆಲಿಸಿದರು. ದೇಹೂ ಮತ್ತು ತುಕಾರಾಮರನ್ನು ಕುರಿತಾದ, ಬಹಿಣಾಬಾಯಿಯ ಸ್ಪಷ್ಟವಾದ ಕಥನವೆಂದರೆ ಒಂದು ಕಾವ್ಯಾತ್ಮಕ ದಿನಚರಿಯೇ ಸರಿ. ಅದು ಅಹ್ವಾನಿಸುವ ವಿವರಗಳಿಂದ ಕೂಡಿದ ದೄಶ್ಯಗಳನ್ನು ಪುನರ್ಮಿಸುತ್ತದೆ. ತುಕಾರಾಮರ ಸಮಕಾಲೀನ ಕಣ್ಣುಸಾಕ್ಷಿಯ ಇದೊಂದೇ ಕಥನವು ನಮಗೆ ದೊರಕುತ್ತದೆ. ಜಸ್ಟಿನ್ ಈ. ಆಬೊಟ್ ಅವರು ಬಹಿಣಾಬಾಯಿಯ ಆತ್ಮಚರಿತ್ರೆ ಮತ್ತು ಪದ್ಯಗಳನ್ನು ಇಂಗ್ಲಿಷ್ ಗದ್ಯದಲ್ಲಿ ಅನುವಾದಿಸಿದ್ದು ಅವು ಆನ್ನೆ ಫೆಲ್ಧಾಸ್ ಅವರ ಗ್ರಾಹ್ಯವಾದ ಮುನ್ನುಡಿಯೊಂದಿಗೆ ಇತ್ತೀಚೆಗಷ್ಟೆ ಪ್ರಕಟವಾಗಿವೆ.
ಮುಂಬಾಜಿ ಗೋಸಾವಿ ತುಂಬ ದ್ವೇಷಿಸುವನು || “ ಇಲ್ಲಿಂದ ತೊಲಗಿ” ಎಂದೆನ್ನುವನು ||೧||
ಕೇಳಿ ಮನಕೆ ಬಲು ನೋವಾಗುವುದು || ಭಜನೆಯಲೇಕೆ ಈ ವಿಘ್ಹ್ನ ಎನ್ನಿಸುವುದು||೨||
ಯಾರಿಗೆ ಏನೆನ್ನದೆ ಯಾರಿಂದ ಏನನ್ನು ಕೇಳದೆಯೂ || ಈ ದ್ವೇಷವೇಕೆ ಎನ್ನಿಸುವುದು ||೩||
ಮನದಲ್ಲಿ ಚಿಂತಿಸುತ ದೇವನನು ನೆನೆದೆ || ಈ ಮಾತಿಗೆ ನೀನೇ ಸಾಕ್ಷಿ ಪಂಡುರಂಗ ||೪||
ನೀ ಬಲ್ಲೆ ಎನ್ನಂತರಂಗವನು || ಎನ್ನ ಚಿತ್ತದಿ ದ್ವೇಷಕೆಡೆಯಿಲ್ಲ ಎಂಬುದನು ||೫||
ವಿಘ್ನವ ತಂದವ ನೀನು ಪರಿಹರಿಸಿದನು || ತುಕಾರಾಮನ ತಲೆಮೇಲಿರುವೆ ನೀನು ||೬||
ಭಕ್ತನ ಅಂತರಂಗವ ಪರೀಕ್ಷಿಸುವೆ || ನಿಷ್ಠೆಯನು ಬಗೆ ಬಗೆಯಿಂದ ಗಮನಿಸುವೆ ||೭||
ದೇವನೆ ಹಲವು ಸಂಚಿತ ಕರ್ಮಗಳು || ಅವಕೆ ತಕ್ಕಂತೆ ಸುಖದುಃಖ ಬಹಿಣೆಯೆನ್ನುವಳು ||೮||
೨
ಕೊಲ್ಲಾಪುರದ ಆಕಳ ಕಥೆಯ ಹೇಳುವೆನು || ಅದು ಚೆನ್ನಾಗಿ ಹಾಲು ಕೊಡುತಿತ್ತು ||೧||
ಮುಂಬಾಜಿ ಆಕಳನು ಕೊಟ್ಟಿಗೆಯಲಿ ಕಟ್ಟಿಟ್ಟನು || ಅದನು ದೊಣ್ಣೆಯಿಂದ ಹೊಡೆಯುತ್ತಿದ್ದನು ||೨||
ತುಕೋಬ ಹುಡುಕಿಯೂ ಆಕಳು ಕಾಣದಾಗಿತ್ತು || ಅವನಿಗೆ ಬಲು ಕೆಡಕೆನಿಸಿತು ||೩||
ನಡೆದುದನು ಕಂಡು ನಿನಗೂ ಆತಂಕವಾಗಿತ್ತು || ಮೂರಿರುಳು ಆಕಳನು ಗೂಟಕ್ಕೆ ಕಟ್ಟಲಾಗಿತ್ತು ||೪||
ಹುಲ್ಲು ನೀರಿಲ್ಲದೆ ಹಲುಬುತಿತ್ತು || ಬಿಡಿಸಿಕೊಂಡು ಓಡಲು ಬಾರದಂತಾಗಿತ್ತು ||೫||
ನಿದ್ರೆ ತಿಳಿದೆದ್ದ ತುಕೋಬನ ಬೆನ್ನು || ಊದಿಕೊಂಡಿತ್ತು ಬಾವು ಇಳಿಯದಾಗಿತ್ತು ||೬||
ಅವನ ಮೈಮೇಲೆಲ್ಲ ಬಾಸುಂಡೆಗಳು || ಪರಿಪರಿಯಾಗಿ ನೆನೆಸಿಕೊಂಡನು ||೭||
ಅವನನ್ನು ಕಂಡು ಜನ ಮರುಗಿದರು || ತಾ ಕಂಡ ಕನಸನು ಹೇಳಿದನವರಿಗೆ ||೮||
ಆಕಳನು ಕಾಣದೆ ಕೊರಗುತಿದ್ದನು || “ಧಾವಿಸಿ ಬಾ ಮಾಧವನೆ, ಬಿಡಿಸದದನು ||೯||
ಒಳಗೆಲ್ಲಿ ಕಟ್ಟಿರುವರೊ ಅರಿಯೆನು || ಧಾವಿಸು ನಾರಾಯಣ ಕಾಪಾಡದನು ||೧೦||
ಆಗ ಮುಂಬಾಜಿಯ ಮನೆಗೆ ಬೆಂಕಿ ಹತ್ತಿತು || ಒಮ್ಮಿಂದೊಮ್ಮಲೆ ಮನೆ ಉರಿಯತೊಡಗಿತು ||೧೧||
ಜನ ಓಡಿ ಬಂದು ಅದನು ನಂದಿಸಿದರು || ಆಕಳು ಹಂಬಾ ಎಂದು ಕೂಗುತಿತ್ತು ||೧೨||
ಮೂರು ದಿನ ಅದನು ಹುಡುಕುತಿದ್ದರು || ಆ ಚಾಂಡಾಲ ಅದನ್ನು ಕಟ್ಟಿಹಾಕಿದ್ದನ್ನು ಕಂಡರು ||೧೩||
ಅವರು ಆಕಳನು ಬಿಡಿಸಿ ಹೊರತಂದರು || ಅದರ ಬೆನ್ನಿನ ಏಟುಗಳನು ಕಂಡರು ||೧೪||
ಅವಳು ಗಂಡನನು ಹೊರಕ್ಕೆ ಕರೆದಳು || “ಅಯ್ಯ ಬ್ರಾಹ್ಮಣ ಆಕಳನು ಕಾಪಾಡು ” ಎಂದಳು ||೧೫||
ತುಕೋಬ ಓಡಿಬಂದು ಪ್ರದಕ್ಷಿಣೆ ಹಾಕಿದನು || “ನಿನ್ನ ಧನ್ಯ ಗುಣಗಳಿಗೆ ವಂದಿಸುವೆನು ||೧೬||
ನನಗೊಂದು ಕನಸು ತೋರಿಸಿದೆ ನೀನು || ಏನೂ ಅರಿಯದೆ ನಿನ್ನನು ಮೊರೆಹೊಕ್ಕೆ ನಾನು ||೧೭||
ನಿನ್ನ ನಮ್ಮ ಆತ್ಮ ಒಂದು ಎಂಬುದರ || ಖಚಿತ ಸಾಕ್ಷಿಯನು ನೀಡಿದೆ ನೀನು ” ||೧೮||
ಎಂದು ತುಕೋಬ ನುಡಿದನು || ದುಃಖಿತಳಾದೆ ಕಂಡು ಅವನನು || ೧೯||
ಅವನಂತೆಯೆ ನಾನೂ ದುಃಖಿತಳಾದೆನು || ಎಂಬುದಕೆ ಒಳ ವಿಟ್ಠಲನೆ ಸಾಕ್ಷಿ ||೨೦||
ಜನರು ತುಕೋಬನ ಬೆನ್ನು ನೋಡಿದರು || ಆಕಳಿನ ಬೆನ್ನು ಕಂಡು ನೊಂದುಕೊಂಡರು ||೨೧||
ನಡೆದುದನು ಹೇಳಿದೆನು ಎಂದಳು ಬಹೇಣಿ || ಹರಿ ಬಲ್ಲನು ಆಕಳಿನ ನಿರ್ವಾಣ ||೨೨||
೩
ರಾಮೇಶ್ವರಭಟ್ಟರು ಈ ವೃತ್ತಾಂತವನು ಆಲಿಸಿದರು || ಕೂಡಲೆ ಅಲ್ಲಿಗೆ ಧಾವಿಸಿ ಬಂದರು ||೧||
ತುಕೋಬನ ದರ್ಶನವ ಪಡೆದರು || ಆಕಳನು ಕಣ್ಣುತುಂಬ ವೀಕ್ಷಿಸಿದರು ||೨||
ಎರಡೂ ಬೆನ್ನುಗಳು ಒಂದೇ ಬಗೆ ಎಂದರು || ಕಣ್ಣೀರಿಕ್ಕುತ ಹೀಗೆಂದು ನುಡಿದರು ||೩||
ಯಾರು ತುಕೋಬನನು ಪೂರ್ತಿ ಬಣ್ಣಿಸಬಲ್ಲರು || ಈತ ಕಲಿಯುಗದ ಪ್ರಹ್ಲಾದನೆಂದರು ||೪||
ಹೊಗಳಿಕೆಯನು ಸಾಕ್ಷಿಭಾವದಿ ಕಾಣುವನು || ಸ್ವಸುಖದಲಿ ರಮಮಾಣನಾಗುವನು ||೫||
“ತುಕೋಬನೆಂದರೆ ಪಾಂಡುರಂಗನೇ ಸರಿ ” || ಎಂದು ಜನರೆನ್ನುವರು ಎಂದಳು ಬಹಿಣೆ ||೬||
ಮಹಾತ್ಮಾ ಗಾಂಧೀ
ಬ್ರೆಲ್
ಸಂತ ತುಕಾರಾಮರ ಚರಿತ್ರೆ :
ಲೇಖಕರು : ಶ್ರೀಧರ ಮೋರೆ
ಅನುವಾದಕರು : ವಿರೂಪಾಕ್ಷ ಕುಲಕರ್ಣಿ
ಬ್ರೆಲ್ ಲಿಪ್ಯಂತರ : ಸರೋಜ ಟೋಳೆ
ಈ ಪುಸ್ತಕವು ೫೭ ಪುಟಗಳದಿದ್ದು ಆಕಾರ : ೧೧ X ೧೨ ಅಂಗುಲ.
ಈ ಕರಡನ್ನು ಡೌನ್ ಲೋಡ್ ಮಾಡಿಕೊಂಡು ನಿಮ್ಮ ಹತ್ತಿರದ ದೃಷ್ಟಿಬಾಧಿತರ ಕೇಂದ್ರದಲ್ಲಿ ಇದರ ಹಾಳೆಯ ಪ್ರತಿಯನ್ನು ಮಾಡಿಕೊಳ್ಳಬಹುದು.
------------------------------------------------------------
ಕೆಳಬದಿಯಲ್ಲಿ ಕೆಲವು ಕೇಂದ್ರಗಳ ಅಂಚೆ ವಿಳಾಸಗಳನ್ನು ಕೊಡಲಾಗಿದೆ:
1. Jagruti Blind Girls School,
Markal Road, Alandi Devachi,
Pune 412105.
Phone : 02135-232290
2. National Association for the Blind, India,
Department of Employment, 2nd floor,
11/12, Khan Abdul Gaffar Khan Road,
Worli Seaface, Mumbai 400 025.
Phone : 022-498 8134